
ರಾಮನಗರ (ನ.29): ರಾಜಕಾರಣಕ್ಕೆ ಬರುವ, ಅಧಿಕಾರ ಬೇಕೆಂಬ ಹಂಬಲ ಬಹಳ ಜನರಲ್ಲಿ ಸಾಮಾನ್ಯವಾಗಿರುತ್ತದೆ. ಆದರೆ ಜನರ ಕಷ್ಟ ಸುಖಗಳಿಗೆ ಸ್ಪಂದಿಸುವ ಮನೋಭಾವ ನಿಮ್ಮಲ್ಲಿ ಇದ್ದು, ಆತ್ಮಸಾಕ್ಷಿಗೆ ತಕ್ಕಂತೆ ಸರಿಯಾಗಿ ಕೆಲಸ ಮಾಡಿದಾಗ ಮಾತ್ರ ರಾಜಕಾರಣದಲ್ಲಿ ಉಳಿಯಲು ಸಾಧ್ಯ. ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಂಡಾಗ ಮಾತ್ರ ನಾಯಕರಾಗಲು ಸಾಧ್ಯ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು. ತಾಲೂಕಿನ ಪಾದರಹಳ್ಳಿಯಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಯುವ ಸಂಕಲ್ಪ ತರಬೇತಿ ಎರಡನೇ ದಿನದ ಶಿಬಿರದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಜನರು ನಿಮ್ಮನ್ನು ಗುರ್ತಿಸಿದಾಗ ಮಾತ್ರ ನೀವು ಉತ್ತಮ ನಾಯಕರಾಗುತ್ತೀರಿ ಎಂಬುದನ್ನು ಅರಿಯಿರಿ ಎಂದು ಸಲಹೆ ನೀಡಿದರು.
ಪಕ್ಷದಲ್ಲಿ ನೀಡುವ ಅಧ್ಯಕ್ಷಗಿರಿ ಎಂಬುದು ಮುಳ್ಳಿನ ಹಾಸಿಗೆ ಇದ್ದಂತೆ. ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಗುರುಪ್ರಸಾದ್ ನೂತನವಾಗಿ ಆಯ್ಕೆಯಾಗಿ ಒಂದು ಒಗ್ಗಟ್ಟಿನ ಸಮ್ಮಿಲನ ಮಾಡುವ ಪ್ರಯತ್ನ ಮಾಡಿರುವುದು ಶ್ಲಾಘನೀಯ. ಯುವಕರಲ್ಲಿ ಉತ್ತಮ ಮನಸ್ಥಿತಿ ಮತ್ತು ಗುರಿ ಇದ್ದಾಗ ಮಾತ್ರ ನಾಯಕತ್ವ ಬೆಳೆಸಿಕೊಳ್ಳಲು ಸಾಧ್ಯವಾಗಲಿದೆ ಎಂದು ತಿಳಿಸಿದರು. ಯುವ ಕಾಂಗ್ರೆಸ್ ಪದಾಧಿಕಾರಿಗಳಿಗೆ ಆಯೋಜಿಸಿರುವ ಶಿಬಿರವು ತಮ್ಮಲ್ಲಿ ಜ್ಞಾನ, ಇತಿಹಾಸ, ಅನುಭವಗಳನ್ನು ತಿಳಿದುಕೊಂಡು ಮೆಲಕು ಹಾಕಲು ನೆರವಾಗಲಿದ್ದು, ಇಂತಹ ಶಿಬಿರಗಳಿಂದ ಯುವಕರಲ್ಲಿ ಆತ್ಮ ವಿಶ್ವಾಸ ಹೆಚ್ಚಿ ನಾಯಕರಾಗಿ ಹೊರಹೊಮ್ಮಲು ಸಾಧ್ಯ ಎಂದರು.
ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಪಂಚ ಗ್ಯಾರಂಟಿ ಜಾರಿ: ಸಂಸದ ಡಿ.ಕೆ.ಸುರೇಶ್
ದೇಶದ ಪ್ರಧಾನಿಯಾಗುವ ಶಕ್ತಿ ರಾಹುಲ್ ಗಾಂಧಿ ಅವರಿಗಿದೆ. ದೇಶದ ಸಮಗ್ರತೆಗಾಗಿ 3500 ಕಿ.ಮೀ. ಭಾರತ್ ಜೂಡೋ ಯಾತ್ರೆ ಮಾಡಿದರು. ಆದರೆ, ವಿರೋಧ ಪಕ್ಷಗಳು ಅವರನ್ನು ಟೀಕಿಸಿ, ಸುಳ್ಳು ಪ್ರಕರಣಗಳನ್ನು ದಾಖಲಿಸುವ ಕೆಲಸ ಮಾಡುತ್ತಿದ್ದಾರೆ. ಯುವಕರು ರಾಜಕೀಯ ಹೊರತು ಪಡಿಸಿ ಎಲ್ಲರನ್ನು ಒಟ್ಟುಗೂಡಿಸಿಕೊಂಡು ಹೋಗುವ ಕೆಲಸ ಮಾಡಿ, ಪಕ್ಷದ ಕಾರ್ಯಕ್ರಮಗಳಾದ ಉಳುವವನೇ ಭೂ ಒಡೆಯ, ವಿದ್ಯುತ್ ಕ್ಷೇತ್ರಕ್ಕೆ ರಾಜೀವ್ ಗಾಂಧಿ ಅವರು ನೀಡಿದ ಕೊಡುಗೆ, ವಸತಿ ಹಂಚಿಕೆ ಸೇರಿದಂತೆ ಶಿಕ್ಷಣ,ಆರೋಗ್ಯ, ಮೂಲಭೂತ ಸೌಕರ್ಯಗಳನ್ನು ಜನರಿಗೆ ತಿಳಿಸುವ ಕೆಲಸಮಾಡಿ ಎಂದು ಕಿವಿ ಮಾತು ಹೇಳಿದರು.
ಭಾರತ ದೇಶದ ಯುವ ಶಕ್ತಿಗೆ ಉತ್ತಮ ಭವಿಷ್ಯವಿದೆ. ವಿಶ್ವದ ಎಲ್ಲ ವಲಯಗಳ ಪ್ರಮುಖ ಸ್ಥಾನಗಳಲ್ಲಿ ಭಾರತೀಯ ಯುವಕರು ಸ್ಥಾನ ಪಡೆದಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಕಾಂಗ್ರೆಸ್ ಪಕ್ಷದ ಕೊಡುಗೆಯಾಗಿದೆ. ಅದರಿಂದಲೇ ವಿಶ್ವದ ಗಮನ ಭಾರತದತ್ತ ನೋಡುವಂತಿದೆ ಎಂದರು. ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತವನ್ನು ಅರ್ಥಮಾಡಿಕೊಳ್ಳಬೇಕು. ಕಾಂಗ್ರೆಸ್ ಆಡಳಿತದಲ್ಲಿ ಎಲ್ಲ ವರ್ಗದವರಿಗೆ ಅನ್ಯಾಯವಾಗದಂತೆ ಸರ್ವರೂ ಸಮಾನರು ಎಂಬುದನ್ನು ಗಮನದಲ್ಲಿಟ್ಟುಕೊಂಡು ನೀತಿಗಳನ್ನು ರೂಪಿಸಲಾಗುತ್ತಿತ್ತು. ಅದರೆ ಇತ್ತೀಚಿನ ವ್ಯವಸ್ಥೆ ಭಿಕ್ಷುಕನಿಗೂ ಹೂರೆಯಾಗುವಂತ ನೀತಿಗಳು ಹೊರಬೀಳುತ್ತಿವೆ.
ನಿಮ್ಮ ಜೊತೆ ನಾನಿರುತ್ತೇನೆ: ದಾಸರಹಳ್ಳಿ ಕ್ಷೇತ್ರದ ಮುಖಂಡರಿಗೆ ಎಚ್ಡಿಕೆ ಧೈರ್ಯ
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ.ರಾಜು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಗಂಗಾಧರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ರಮೇಶ್, ಮುಖಂಡ ಡಿ.ಎಂ.ವಿಶ್ವನಾಥ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಗುರುಪ್ರಸಾದ್, ಬ್ಲಾಕ್ ಅಧ್ಯಕ್ಷರಾದ ಎ.ಬಿ.ಚೇತನ್ ಕುಮಾರ್, ನಟರಾಜು, ದಿಶಾ ಸದಸ್ಯೆ ಕಾವ್ಯ ಸೇರಿದಂತೆ ಜಿಲ್ಲೆಯ ಯುವ ಕಾಂಗ್ರೆಸ್ ಪದಾಧಿಕಾರಿಗಳು ಹಾಜರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.