ಬಿಜೆಪಿಯಿಂದ ರಾಜ್ಯ, ದೇಶ ಆರ್ಥಿಕ ದಿವಾಳಿ; ಸಿದ್ದರಾಮಯ್ಯ ವಾಗ್ದಾಳಿ

Published : Jan 18, 2023, 07:10 AM IST
ಬಿಜೆಪಿಯಿಂದ ರಾಜ್ಯ, ದೇಶ ಆರ್ಥಿಕ ದಿವಾಳಿ; ಸಿದ್ದರಾಮಯ್ಯ ವಾಗ್ದಾಳಿ

ಸಾರಾಂಶ

ಶವು ಅತಿಯಾದ ಸಾಲದಿಂದ ಆರ್ಥಿಕ ದಿವಾಳಿತನ ಎದುರಿಸುವಂತಾಗಿದೆ. ಇದಕ್ಕೆ ಬಿಜೆಪಿಯ ಆಡಳಿತವೇ ಕಾರಣವಾಗಿದೆ ಎಂದು ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದರು.

ಕೊಪ್ಪಳ (ಜ.18)

ರಾಜ್ಯ ಮತ್ತು ದೇಶವು ಅತಿಯಾದ ಸಾಲದಿಂದ ಆರ್ಥಿಕ ದಿವಾಳಿತನ ಎದುರಿಸುವಂತಾಗಿದೆ. ಇದಕ್ಕೆ ಬಿಜೆಪಿಯ ಆಡಳಿತವೇ ಕಾರಣವಾಗಿದೆ ಎಂದು ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದರು.

ನಗರದಲ್ಲಿ ಮಂಗಳವಾರ ಕಾಂಗ್ರೆಸ್‌ ಪಕ್ಷದಿಂದ ಆಯೋಜಿಸಿದ್ದ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು, ನಾವು ಅಧಿಕಾರಕ್ಕೆ ಬಂದಾಗ 10 ಸಾವಿರ ಯುನಿಟ್‌ ಇದ್ದ ಉತ್ಪಾದನೆಯನ್ನು 20 ಸಾವಿರ ಯುನಿಟ್‌ ವಿದ್ಯುತ್‌ಗೆ ಹೆಚ್ಚಳ ಮಾಡಿದ್ದೇವೆ. ಮಾತು ಕೊಟ್ಟಂತೆ ನಡೆದುಕೊಂಡಿದ್ದೇವೆ. ಆದರೆ ಬಿಜೆಪಿಯವರು ಭ್ರಷ್ಟಾಚಾರ ನಡೆಸಿ ಲೂಟಿ ಹೊಡೆದಿದ್ದಾರೆ. 70 ವರ್ಷಗಳಲ್ಲಿ ಕೇವಲ .2 ಲಕ್ಷ ಕೋಟಿ ಸಾಲ ಮಾಡಿದರೆ, ಬಿಜೆಪಿಯವರು ಈ ಐದು ವರ್ಷದಲ್ಲಿ .3 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಈಗ ರಾಜ್ಯದ ಸಾಲದ ಹೊರೆ ಐದೂವರೆ ಲಕ್ಷ ಕೋಟಿಯಾಗಿದ್ದು, ಪ್ರತಿಯೊಬ್ಬರ ತಲೆ ಮೇಲೆ .80 ಸಾವಿರ ಸಾಲ ಮಾಡಿದ್ದೀರಿ ಎಂದರು.

ಬಿಜೆಪಿಯಂಥ ಭ್ರಷ್ಟ ಸರ್ಕಾರವನ್ನು 4 ದಶಕದಲ್ಲೇ ನೋಡಿಲ್ಲ: ಸಿದ್ದರಾಮಯ್ಯ ಕಿಡಿ

ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುವ ಮುನ್ನ .55 ಲಕ್ಷ ಕೋಟಿ ಸಾಲ ಇದ್ದರೆ, ಆದರೆ ಈಗ .153 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಅಭಿವೃದ್ಧಿಯಿಂದ ರಾಷ್ಟ್ರವನ್ನು ಮುನ್ನಡೆಸಿದ್ದೇವೆ ಎನ್ನುವವರು ಇದಕ್ಕೆ ಉತ್ತರ ಕೊಡಿ ಎಂದು ಸವಾಲು ಹಾಕಿದರು.

ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಶತಃಸಿದ್ಧ. ಸೂರ್ಯೋದಯದಷ್ಟೆಸತ್ಯ. ಜಿಲ್ಲೆಯಲ್ಲಿ ಐದೂ ಕ್ಷೇತ್ರ ಗೆಲ್ಲುತ್ತೇವೆ. ನಾವು ಅಧಿಕಾರಕ್ಕೆ ಬಂದರೆ ನೂರಕ್ಕೆ ನೂರು ಭರವಸೆ ಈಡೇರಿಸುತ್ತೇವೆ. ಪಡಿತರವನ್ನು ಹತ್ತು ಕೆಜಿ ಅಕ್ಕಿ ನೀಡುತ್ತೇವೆ ಎಂದು ಭರವಸೆ ನೀಡಿದರು.

73 ಸಾವಿರ ಕೋಟಿ ಸಾಲಮನ್ನಾ:

ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎಂದು ಹೇಳಿ ಮೋಸ ಮಾಡಿದ್ದೀರಿ. ರೈತರಿಗೆ ಟೋಪಿ ಹಾಕಿದ್ದೀರಿ. ಆದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಒಂದು ಲಕ್ಷ ಸಾಲ ಮನ್ನಾ ಮಾಡುತ್ತೇವೆ ಎಂದು ಹೇಳಿದವರು ಒಂದು ರುಪಾಯಿ ಮನ್ನಾ ಮಾಡಲಿಲ್ಲ. ಮನಮೋಹನ್‌ ಸಿಂಗ್‌ ಅವರು .73 ಸಾವಿರ ಕೋಟಿ ಮನ್ನಾ ಮಾಡಿದ್ದರು. ನಾನು ಸಿಎಂ ಆಗಿದ್ದಾಗ ರೈತರ ತಲಾ ಐವತ್ತು ಸಾವಿರ ರುಪಾಯಿ ಮನ್ನಾ ಮಾಡಿದ್ದೇನೆ ಎಂದರು.

ಬಿಜೆಪಿಯವರೇ ನಿಮ್ಮ ಪ್ರಣಾಳಿಕೆಯಲ್ಲಿ 600 ಭರವಸೆ ನೀಡಿ 60 ಭರವಸೆ ಈಡೇರಿಸದೆ ವಚನಭ್ರಷ್ಟರಾಗಿದ್ದೀರಿ. ಮೋದಿ ಹೇಳಿದಂತೆ ಅಚ್ಛೇ ದಿನ ಬಂತಾ? ಎಲ್ಲ ವಸ್ತುಗಳ ಬೆಲೆ ಗಗನಮುಖಿಯಾಗಿವೆ ಎಂದರು.

ಜಿಲ್ಲೆಗೆ ಸಾಕಷ್ಟುಅನುದಾನ:

ನಾನು ಸಿಎಂ ಆಗಿದ್ದಾಗ ಜಿಲ್ಲೆಗೆ ಸಾಕಷ್ಟುಅನುದಾನ ನೀಡಿದ್ದೇನೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ .2- 3 ಸಾವಿರ ಕೋಟಿ ನೀಡಿದ್ದೇನೆ. ಕೊಪ್ಪಳ ಮೆಡಿಕಲ್‌ ಕಾಲೇಜಿಗೆ ನಾನೇ ಶಂಕಸ್ಥಾಪನೆ ಮಾಡಿ, ನಾನೇ ಉದ್ಘಾಟಿಸಿದ್ದೇನೆ.

ನಾನು ಸಿಎಂ ಆಗಿದ್ದ ವೇಳೆ ಎರಡು ಲಕ್ಷ ಕೃಷಿ ಹೊಂಡಗಳನ್ನು ರಾಜ್ಯಾದ್ಯಂತ ನಿರ್ಮಾಣ ಮಾಡಲಾಗಿದೆ. ಈ ದರಿದ್ರ ಬಿಜೆಪಿ ಸರ್ಕಾರ ಅದನ್ನು ನಿಲ್ಲಿಸುವಂತೆ ಮಾಡಿದೆ. ಕೊಪ್ಪಳ ಜಿಲ್ಲೆಯೊಂದರಲ್ಲಿ ಹತ್ತು ಸಾವಿರ ಕೃಷಿ ಹೊಂಡ ನಿರ್ಮಾಣ ಮಾಡಿದ್ದೇವೆ ಎಂದರು.

ಪಕೋಡಾ ಮಾರಲು ಹೋಗಿ ಎಂದಿದ್ದು ಸೂಕ್ತವೇ?:

2 ಕೋಟಿ ಉದ್ಯೋಗ ಕೊಡುತ್ತೇವೆ ಎಂದವರು ಪಕೋಡಾ ಮಾರಲು ಹೋಗಿ ಎನ್ನುತ್ತಿರಿ. ಎಂಎ, ಎಂಎಸ್‌ಸಿ ಮಾಡಿದವರು, ಸೈಂಟಿಸ್ಟ್‌ಗಳು ಪಕೋಡಾ ಮಾರಲು ಹೋಗಬೇಕೇ, ಇದು ಸೂಕ್ತವೇ ಎಂದು ಸಿದ್ದರಾಮಯ್ಯ ಬಿಜೆಪಿ ಸರ್ಕಾರವನ್ನು ತಿವಿದರು. ಭಾರತದಲ್ಲಿ ಒಡೆದ ಮನಸ್ಸು ಒಂದು ಮಾಡಲು ಭಾರತ ಜೋಡೊ ಯಾತ್ರೆ ಮಾಡಲಾಗುತ್ತಿದೆ. ಹಾಗೆ ಜನರ ಕಷ್ಟ, ಧ್ವನಿ ಆಲಿಸಲು ಪ್ರಜಾಧ್ವನಿ ಆಯೋಜಿಸಲಾಗಿದೆ ಎಂದರು.

ಹೌದ ಹುಲಿ 23 ಎಂದ ವ್ಯಕ್ತಿ

ಸಮಾವೇಶದಲ್ಲಿ ಕುಡುಕನೊಬ್ಬ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಭಾಷಣ ವೇಳೆ ಹೌದ್‌ ಹುಲಿ 23 ಎಂದು ಕೂಗಿದೆ. ಪೊಲೀಸರು ಅವನನ್ನು ಒತ್ತಾಯಪೂರ್ವಕವಾಗಿ ಆತನನ್ನು ಹೊರಗೆ ಕಳುಹಿಸಿದರು. ಅವರ ಭಾಷಣದುದ್ದಕ್ಕೂ ಈ ರೀತಿ ಕೂಗುವವರ ಸಂಖ್ಯೆ ಹೆಚ್ಚುತ್ತಲೇ ಹೋಯಿತು.

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಭಾಷಣ ಮಾಡಲು ಎದ್ದು ನಿಂತಾಗ ಜನರು ಅಭಿಮಾನದಿಂದ ಭರ್ಜರಿ ಕೂಗಿದರು. ಜನರು ಕೂಗು ನಿಲ್ಲಿಸುವಂತೆ ಸಿದ್ದರಾಮಯ್ಯ ಅವರು ಕೈ ಮಾಡಿದರೂ ಅಭಿಮಾನಿಗಳ ಕರತಾಡನ ನಿಲ್ಲಲಿಲ್ಲ.

ಗವಿಸಿದ್ದೇಶ್ವರ ಜಾತ್ರೆ ಬಣ್ಣಿಸಿದ ಮಾಜಿ ಸಿಎಂ

ಕೊಪ್ಪಳ ಗವಿಮಠದ ಗವಿಸಿದ್ದೇಶ್ವರ ಜಾತ್ರೆಯನ್ನು ಸಿದ್ದರಾಮಯ್ಯ ಬಣ್ಣಿಸಿದರು. ಹತ್ತು ಲಕ್ಷಕ್ಕೂ ಅಧಿಕ ಭಕ್ತರೂ ರಥೋತ್ಸವಕ್ಕೆ ಆಗಮಿಸಿದ್ದರು. ಕೋವಿಡ್‌ನಿಂದಾಗಿ ಎರಡು ವರ್ಷದಿಂದ ಜಾತ್ರೆ ಆಗಿರಲಿಲ್ಲ. ಹೀಗಾಗಿ ಹಿಂದೆಂದಿಗಿಂತಲೂ ಅಧಿಕ ಜನರು ಜಾತ್ರೆಯಲ್ಲಿ ನೆರೆದಿದ್ದರು ಎಂದರು. ಇದು ನಾಡಿನಲ್ಲಿಯೇ ಪ್ರಸಿದ್ಧ ಜಾತ್ರೆಯಾಗಿದೆ ಎಂದರು. ಶ್ರೀಗಳ ಮಹಾನ್‌ ಕಾರ್ಯವನ್ನು ಶ್ಲಾಘಿಸುತ್ತೇನೆ ಎಂದರು.

ಬೃಹತ್‌ ಮೆರವಣಿಗೆ

ಪ್ರಜಾಧ್ವನಿ ಯಾತ್ರೆಯ ಹಿನ್ನೆಲೆ ಕೊಪ್ಪಳದಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕರ ಮೆರವಣಿಗೆ ನಡೆಯಿತು. ನಗರದ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರ ಪುತ್ಥಳಿಗೆ ಹಾರ ಹಾಕಿದ ನಾಯಕರು, ತೆರೆದ ಲಾರಿಯಲ್ಲಿ ಮೆರವಣಿಗೆಯಲ್ಲಿ ಸಾಗಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹಾಗೂ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸೇರಿದಂತೆ ಅನೇಕರು ಭಾಗಿಯಾಗಿದ್ದರು. ವಾದ್ಯವೃಂದಗಳ ಮೆರವಣಿಯಲ್ಲಿ ಜೆ.ಎಚ್‌. ಪಟೇಲ್‌ ರಸ್ತೆಯ ಮೂಲಕ ಆಗಮಿಸಿ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಪಾಲ್ಗೊಂಡರು.

4 ದಶಕ ರಾಜಕೀಯ ಮಾಡಿದ್ದರೂ ಸಿದ್ದುಗೆ ಸೋಲಿನ ಭೀತಿ: ಸಿ.ಟಿ.ರವಿ

ಗವಿಸಿದ್ದೇಶ್ವರ ಮಠಕ್ಕೆ ಭೇಟಿ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹಾಗೂ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರಜಾಧ್ವನಿ ಯಾತ್ರೆಯಲ್ಲಿ ಭಾಗವಹಿಸಲು ಕೊಪ್ಪಳಕ್ಕೆ ಆಗಮಿಸಿದ್ದಾಗ ಗವಿಸಿದ್ದೇಶ್ವರಮಠಕ್ಕೆ ಭೇಟಿ ನೀಡಿ ಸ್ವಾಮಿಗಳೊಂದಿಗೆ ಕೆಲಹೊತ್ತು ಕುಶಲೋಪಹರಿ ಮಾತುಕತೆ ನಡೆಸಿದರು. ಈ ವೇಳೆ ಕಾಂಗ್ರೆಸ್‌ ಅನೇಕ ನಾಯಕರು ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗ್ರೇಟರ್‌ ಬೆಂಗಳೂರು.. ವೈಜ್ಞಾನಿಕವಾಗಿ ಕಸ ಸಂಸ್ಕರಣೆ, ಆತಂಕ ಬೇಡ: ಡಿ.ಕೆ.ಶಿವಕುಮಾರ್‌
ಅನ್ನಭಾಗ್ಯ ಅಕ್ಕಿ ಫಾರಿನ್‌ಗೆ ಪ್ರಕರಣ: ಎಸ್ಐಟಿ ತನಿಖೆಗೆ ಸಿ.ಟಿ.ರವಿ ಆಗ್ರಹ