
ಸಂಡೂರು(ಬಳ್ಳಾರಿ) (ಫೆ.3) : ತಾಲೂಕಿನ ಬನ್ನಿಹಟ್ಟಿಗ್ರಾಮದಲ್ಲಿ ಬುಧವಾರ ನಡೆದ ಜಾತ್ರೆ ಸಂದರ್ಭದಲ್ಲಿ ಕಾಂಗ್ರೆಸ್ನ ಮಾಜಿ ಸಚಿವ ಸಂತೋಷ್ ಲಾಡ್, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರನ್ನು ಬಹಿರಂಗವಾಗಿ ಪರಸ್ಪರ ಆಲಂಗಿಸಿಕೊಂಡಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಐದು ವರ್ಷಗಳ ನಂತರ ಬನ್ನಿಹಟ್ಟಿಗ್ರಾಮದ ಉಡಸಲಮ್ಮ ದೇವಿ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯಿತು. ಜಾತ್ರೆಯಲ್ಲಿ ಮಾಜಿ ಸಚಿವ ಸಂತೋಷ್ ಲಾಡ್ ಹಾಗೂ ಸಾರಿಗೆ ಸಚಿವ ಶ್ರೀರಾಮುಲು ಪರಸ್ಪರ ಎದುರಾಗಿದ್ದರು. ಈ ವೇಳೆ ಲಾಡ್ ಅವರು ಶ್ರೀರಾಮುಲು ಮೇಲೆ ಆತ್ಮೀಯತೆ ತೋರಿದ್ದಾರೆ. ತೀರಾ ಸಂತಸದಿಂದ ಆಲಿಂಗಿಸಿ, ಚುಂಬಿಸಿದರು. ಅದಕ್ಕೆ ಶ್ರೀರಾಮುಲು ಕೂಡ ಸಂತಸದಿಂದ ಪ್ರತಿಸ್ಪಂದಿಸಿದರು.
ಕಾಂಗ್ರೆಸ್ ಭ್ರಷ್ಟಾಚಾರದ ರಾಯಭಾರಿ ಇದ್ದಂತೆ; ಸಚಿವ ಶ್ರೀರಾಮುಲು ಟೀಕೆ
ಸಂಡೂರು ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕ ಈ.ತುಕಾರಾಮ ಸಂತೋಷ್ ಲಾಡ್ ಅವರ ಪರಮಾಪ್ತ. ಇಲ್ಲಿ ಬಿಜೆಪಿ ಟಿಕೆಟ್ ಯಾರಿಗೆಂಬ ಗೊಂದಲ ಮೂಡಿರುವಾಗಲೇ ಶ್ರೀರಾಮುಲು ಕ್ಷೇತ್ರದಲ್ಲಿ ಸಕ್ರಿಯರಾಗುತ್ತಿದ್ದಾರೆ. ಇತ್ತೀಚೆಗಷ್ಟೆಶ್ರೀರಾಮುಲು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಂಡೂರಿನಿಂದ ಸ್ಪರ್ಧಿಸುವುದಾಗಿ ಹೇಳಿದ್ದಾರೆ.
ಅತ್ತ ಕಲಘಟಗಿ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಲಾಡ್ಗೆ ಕಾಂಗ್ರೆಸ್ ಟಿಕೆಟ್ ಲಭಿಸುವ ಬಗ್ಗೆ ಖಚಿತತೆ ಇಲ್ಲ. ಕಾಂಗ್ರೆಸ್ ಟಿಕೆಟ್ ಸಿಗದಿದ್ದರೆ ಲಾಡ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಇಂಗಿತದಲ್ಲಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ ಶ್ರೀರಾಮುಲು ಮೂಲಕ ಬಿಜೆಪಿ ಕದ ತಟ್ಟಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇಂಥ ಸಂದರ್ಭದಲ್ಲಿ ಈ ನಾಯಕರ ಆಲಿಂಗನ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಬಿಜೆಪಿ ಎಂಬ ಬುಲ್ಡೋಜರ್ ಕಾಂಗ್ರೆಸನ್ನು ನೆಲಸಮ ಮಾಡಲಿದೆ: ಸಚಿವ ಶ್ರೀರಾಮುಲು
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಂತೋಷ್ ಲಾಡ್, ‘ಈ ಮುಂಚೆ ಸಾಕಷ್ಟುಸಲ ಆ ರೀತಿಯ ಆತ್ಮೀಯತೆ ತೋರಿದ್ದೇವೆ. ಆದರೆ ಈ ಬಾರಿ ಅದು ಕ್ಯಾಮೆರಾದಲ್ಲಿ ಸೆರೆಯಾಗಿದ್ದರಿಂದ ಸಾಕಷ್ಟುಚರ್ಚೆಗೆ ಗ್ರಾಸವಾಗುತ್ತಿದೆಯಷ್ಟೆ. ನನ್ನ ಸ್ಪರ್ಧೆ ಏನಿದ್ದರೂ ಕಾಂಗ್ರೆಸ್ ಪಕ್ಷದಿಂದಲೇ’ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.