
ಸುವರ್ಣ ವಿಧಾನಸಭೆ(ಡಿ.19): ಕಲಾಪ ನಡೆಸುವ ವಿಚಾರದಲ್ಲಿ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್, ತಮ್ಮ ದಾಖಲೆಯನ್ನು ತಾವೇ ಮುರಿದಿದ್ದಾರೆ. ಎರಡು ದಿನಗಳ ಹಿಂದಷ್ಟೇ ಅಂದರೆ ಸೋಮವಾರ 14 ಗಂಟೆಗಳ ಕಾಲ ಕಲಾಪ ನಡೆಸಿದ್ದ ಖಾದರ್ ಅವರು ಬುಧವಾರ 15 ಗಂಟೆಗಳಷ್ಟು ಸುದೀರ್ಘ ಕಲಾಪ ನಡೆಸಿದರು. ಸೋಮವಾರ ಮಧ್ಯ ರಾತ್ರಿ 12.50 ರವ ರೆಗೆ ಕಲಾಪ ನಡೆದಿದ್ದರೆ, ಬುಧವಾರ ಮಧ್ಯ ರಾತ್ರಿ 12.45ರವರೆಗೆ ಕಲಾಪ ನಡೆಸಿದರು. ಇಂದು(ಗುರುವಾರ) ಅಧಿವೇಶನದ ಕೊನೆಯ ದಿನ. ಹೀಗಾಗಿ ಕಾರ್ಯಕಲಾಪ ಪೂರ್ಣಗೊಳಿಸಲು ಈ ರೀತಿ ಸುದೀರ್ಘ ಕಲಾಪ ನಡೆಸಲಾಯಿತು.
ಭೋಜನ ವಿರಾಮವೂ ಇಲ್ಲ:
ಸಾಮಾನ್ಯವಾಗಿ ಕಲಾಪಕ್ಕೆ ಮಧ್ಯಾಹ್ನದ ಭೋಜನ ವಿರಾಮ ನೀಡಲಾಗುತ್ತದೆ. ಆದರೆ, ಬುಧವಾರ ಭೋಜನ ವಿರಾಮವನ್ನೂ ನೀಡದೆ, ಯಾವುದೇ ಗದ್ದಲಕ್ಕೂ ಮುಂದೂಡದೆ ಬೆಳಗ್ಗೆ 9.45ರಿಂದ ಸತತ 15 ಗಂಟೆ ಕಾಲ ಕಲಾಪ ನಡೆಸಿದ್ದು ಅಧಿವೇಶನದ ಇತಿಹಾಸದಲ್ಲಿ ಇದೇ ಮೊದಲು. ಕಲಾಪ ಮುಗಿಯುವ ಹೊತ್ತಿನಲ್ಲಿ ಸಚಿವರಾದ ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಶಿವರಾಜ್ ತಂಗಡಗಿ ಸೇರಿ ಕೆಲವೇ ಸಚಿವರು, ಶಾಸಕರು ಹಾಜರಿದ್ದರು.
ವಿದ್ಯಾವಂತರೇ ಕೋಮುವಾದಿ, ಭ್ರಷ್ಟಾಚಾರಿ, ಭಯೋತ್ಪಾದಕರಾಗಿ ಬದಲಾಗುತ್ತಿದ್ದಾರೆ: ಯು.ಟಿ.ಖಾದರ್
ಆದರೆ, ಆ ಹೊತ್ತಿನಲ್ಲೂ ಸದಸ್ಯರ ಪ್ರಶ್ನೆಗಳಿಗೆ ಸಚಿವರು ತಾಳ್ಮೆಯಿಂದಲೇ ವಿವರವಾಗಿ ಉತ್ತರ ನೀಡಿದ್ದು ವಿಶೇಷವಾಗಿತ್ತು. ಸಂಪ್ರದಾಯದಂತೆ ಕಲಾಪ ಆರಂಭದ ಸಮಯದಲ್ಲೇ ಪ್ರಶೋತ್ತರ ಕಲಾಪ ನಡೆಯುತ್ತದೆ. ಆದರೆ, ಸ್ಪೀಕರ್ ಖಾದರ್ ಅವರು ಇತರ ಕಾರ್ಯಕಲಾಪಗಳನ್ನು ಪೂರ್ಣಗೊಳಿಸಿ ಕೊನೆಯಲ್ಲಿ ಪ್ರಶೋತ್ತರ ಮತ್ತು ಗಮನ ಸೆಳೆಯುವ ಸೂಚನೆ ತೆಗೆದುಕೊಳ್ಳುತ್ತಿದ್ದಾರೆ.
ಮಂಗಳೂರಿನವರಿಗಾಗಿಯೇ ಸದನ: ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಮಂಗಳೂರು ಭಾಗದಲ್ಲಿ ನಡೆಸುವ ಕಂಬಳಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರದ ಗಮನ ಸೆಳೆದರು. ಅದಕ್ಕೆ ಸ್ಪೀಕರ್, ಸರ್ಕಾರಕ್ಕೆ ಅನುದಾನ ಕೇಳುತ್ತಿದ್ದೇವೆ. ಅವರು ಕೊಡದಿದ್ದರೂ ಕಂಬಳ ನಡೆಸುವಷ್ಟು ಶಕ್ತರಾಗಿದ್ದೀರಿ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೃಷ್ಣಬೈರೇಗೌಡ, ಕಳೆದ ಒಂದೂವರೆ ವರ್ಷದಿಂದ ಮಂಗಳೂರಿನವರಿಗಾಗಿಯೇ ಸದನ ನಡೆಸಲಾಗುತ್ತಿದೆ ಎಂಬ ಭಾವನೆ ಮೂಡುತ್ತಿದೆ. ಅದರಲ್ಲಿ ತಪ್ಪೇನೂ ಇಲ್ಲ ಎಂದು ಸ್ಪೀಕರ್ ಸೇರಿ ಮಂಗಳೂರು ಶಾಸಕರ ಕಾಲೆಳೆದರು.
ಕೊನೆಯಲ್ಲಿ ಸ್ಪೀಕರ್ ಸದನದ ಕಲಾಪವನ್ನು ಗುರುವಾರ ಬೆಳಗ್ಗೆ 9ಕ್ಕೆ ಮುಂದೂಡಿದರು. ಇದಕ್ಕೂ ಮೊದಲು ರಾತ್ರಿ ಕಲಾಪದ ವಿಚಾರವಾಗಿ ಸ್ಪೀಕರ್ ಅವರೊಂದಿಗೆ ಮುನಿಸಿಕೊಂಡು ಬಿಜೆಪಿ ಸದಸ್ಯರು ಕಲಾಪದಿಂದ ಹೊರ ನಡೆದರು. ಇದರ ಹೊರತಾಗಿಯೂ ಕಲಾಪ ಯಾವುದೇ ವ್ಯತ್ಯಯವಿಲ್ಲದೆ ಮುಂದುವರಿಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.