
ಬೆಂಗಳೂರು(ಏ.30): ‘40 ಪರ್ಸೆಂಟ್ ಭ್ರಷ್ಟಾಚಾರಕ್ಕೆ ಬಲಿಯಾದವರ ಆತ್ಮಗಳು, ಕೊರೋನಾ ಅಸಮರ್ಪಕ ನಿರ್ವಹಣೆ ಹಾಗೂ ಅವ್ಯವಹಾರ ಫಲವಾಗಿ ಮೃತಪಟ್ಟ ಜನಸಾಮಾನ್ಯರ ಆತ್ಮಗಳು ನಿಮ್ಮ ಉತ್ತರಕ್ಕೆ ಕಾಯುತ್ತಿವೆ. ಭ್ರಷ್ಟಾಚಾರ ಹಾಗೂ ಬೆಲೆ ಏರಿಕೆ ಮೂಲಕ ಜನಸಾಮಾನ್ಯರ ಬದುಕು ಬೀದಿಗೆ ತಳ್ಳಿದ್ದು ಯಾಕೆ ಎಂದು ಉತ್ತರಿಸಿ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪ್ರಶ್ನೆ ಮಾಡಿದ್ದಾರೆ.
ಶನಿವಾರ ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಆಗಮಿಸುವ ಮೊದಲೇ ‘ಉತ್ತರ ಕೊಡಿ ಮೋದಿ’ ಹೆಸರಿನಲ್ಲಿ ಸರಣಿ ಟ್ವೀಟ್ ಮಾಡಿದ ಅವರು, ‘ಸ್ಯಾನಿಟೈಜರ್, ಮಾಸ್ಕ್, ವೆಂಟಿಲೇಟರ್ ಖರೀದಿಯಲ್ಲಿ ರಾಜ್ಯ ಸರ್ಕಾರ 3 ಸಾವಿರ ಕೋಟಿ ರು. ಅವ್ಯವಹಾರ ನಡೆಸಿದೆ. ಆಹಾರ ಸಬ್ಸಿಡಿ ಶೇ.31ರಷ್ಟು ಕಡಿತಗೊಳಿಸಿ ಬಡವರ ಹೊಟ್ಟೆಗೆ ಕಲ್ಲು ಹಾಕಿದ್ದು ಏಕೆ? ಎಲ್ಪಿಜಿ ಸಿಲಿಂಡರ್ ಮೇಲಿನ ಸಬ್ಸಿಡಿ ಶೇ.75ರಷ್ಟು ಕಡಿತಗೊಳಿಸಿರುವುದು ಏಕೆ?’ ಎಂದು ಪ್ರಶ್ನಿಸಿದ್ದಾರೆ.
ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಅನ್ನುವ ಮೋದಿ ಒಬ್ಬ ಮುಸ್ಲಿಂನಿಗೂ ಟಿಕೆಟ್ ನೀಡಿಲ್ಲ: ಸಿದ್ದು
ಕೃಷಿ ಉತ್ಪನ್ನಗಳ ಬೆಲೆ ಕುಸಿತ, ಬಿತ್ತನೆ ಬೀಜ, ರಸಗೊಬ್ಬರಗಳ ಬೆಲೆ ಏರಿಕೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಹೀಗಿದ್ದರೂ ಅವರ ಬೆಳೆಗಳಿಗೆ ಬೆಂಬಲ ಬೆಲೆ ನೀಡುತ್ತಿಲ್ಲ. ಹತ್ತಿ ನಿಗಮದ ಬೆಂಬಲ ಬೆಲೆ ಅನುದಾನವನ್ನು 782 ಕೋಟಿ ರು.ಗಳಿಂದ ಬರೀ 1 ಲಕ್ಷ ರು.ಗೆ ಇಳಿಸಿದ್ದೀರಿ. ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆಂದು ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ನಲ್ಲಿ ರಸಗೊಬ್ಬರದ ಮೇಲಿನ ಸಬ್ಸಿಡಿಯನ್ನು 50,121 ಕೋಟಿ ರು.ಗಳಷ್ಟುಕಡಿಮೆ ಮಾಡಿದ್ದೀರಿ. ಈ ಎಲ್ಲ ರೈತ ವಿರೋಧಿ ಕ್ರಮಗಳಿಂದ ರೈತರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಉಪನಗರ ರೈಲು ಹಾಗೂ ಮೆಟ್ರೋ ಯೋಜನೆಗಳನ್ನು ಕೇಂದ್ರ ಬಜೆಟ್ನಲ್ಲಿ ನಿರ್ಲಕ್ಷಿಸುವ ಮೂಲಕ ಕನ್ನಡಿಗರ ಮೇಲೆ ದ್ವೇಷ ಸಾಧಿಸುತ್ತಿದ್ದೀರಾ? ಕೊರೋನಾ ಸಂದರ್ಭದಲ್ಲಿ ಅಗತ್ಯ ಸಲಕರಣೆ ಪೂರೈಕೆ ಮಾಡಿದ್ದ ಗುತ್ತಿಗೆದಾರ ಬಸವರಾಜ ಅಮರಗೋಳ ಅವರಿಗೆ ರಾಜ್ಯ ಸರ್ಕಾರ ಬಿಲ್ ಪಾವತಿಸದಿದ್ದಕ್ಕೆ ದಯಾಮರಣಕ್ಕೆ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ. ಕೊರೋನಾದಿಂದ ಸತ್ತವರ ಆತ್ಮಗಳಿಗೆ ನ್ಯಾಯಕ್ಕಾಗಿ ನಿಮ್ಮ ಹಾದಿ ಕಾಯುತ್ತಿವೆ ಎಂದು ಕಿಡಿ ಕಾರಿದ್ದಾರೆ.
ಹಿಂಡನ್ಬಗ್ರ್ ವರದಿ ನಂತರ ಅದಾನಿ ಸಮೂಹದ ಕಳ್ಳಾಟ ಬಯಲಾಗಿದ್ದು, ದೇಶದ ಆರ್ಥಿಕತೆ ಕುಸಿದಿದೆ. ಈ ಪ್ರಕರಣದ ತನಿಖೆ ಮಾಡದೆ ಮೌನಿ ಬಾಬಾ ಆಗಿರುವುದು ಏಕೆ ಎಂದೂ ಪ್ರಶ್ನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.