
ಚಾಮರಾಜನಗರ, ಸೆಪ್ಟೆಂಬರ್.06): ಮೈಸೂರು ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪ ಉಪಮೇಯರ್ ಚುನಾವಣೆಯಲ್ಲಿ ಎರಡೂ ಸ್ಥಾನ ಬಿಜೆಪಿಗೆ ಒಳಿದಿವೆ.
ಜೆಡಿಎಸ್ನ ರೇಷ್ಮಾ ಎನ್ನುವರು ಉಪಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಆದ್ರೆ, ಬಿಸಿಎ ಸರ್ಟಿಫಿಕೇಟ್ ಸಲ್ಲಿಕೆಯಾಗದ ಕಾರಣ ಚುನಾವಣಾಧಿಕಾರಿಗಳು ನಾಮಪತ್ರ ಅಸಿಂಧುಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಜೆಡಿಎಸ್ ಬಿಜೆಪಿಗೆ ಬೆಂಬಲಿಸಬೇಕಾಯ್ತು. ಅದೃಷ್ಟದಿಂದ ಬಿಜೆಪಿಯ ರೂಪ ಅವರಿಗೆ ಉಪಮೇಯರ್ ಪಟ್ಟ ಒಲಿದುಬಂದಿದೆ.
ಬಿಜೆಪಿಗೆ ಒಲಿದ ಮೈಸೂರು ಮೇಯರ್, ಉಪ ಮೇಯರ್: ಸಾಬ್ರಿಗೆ ಚಾಕೊಲೇಟ್ ಕೊಟ್ಟಾಯ್ತು ಎಂದ ಶಾಸಕ
ಇನ್ನು ಈ ಬಗ್ಗೆ ಚಾಮರಾನಗರದಲ್ಲಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಜೆಡಿಎಸ್ನವರು ಮಂಗಗಳಾಗಿದ್ದಾರೆ. ಮೇಯರ್, ಉಪಮೇಯರ್ ಎರಡನ್ನೂ ಬಿಜೆಪಿಗೆ ಬಿಟ್ಟು ಕೊಟ್ಟಿದ್ದಾರೆ. ಬಿಜೆಪಿಯವರು ಜೆಡಿಎಸ್ಗೆ ಒಳ್ಳೆ ಮಕ್ಮಲ್ ಟೋಪಿ ಹಾಕಿ ಎರಡನ್ನೂ ಹೊಡೆದುಕೊಂಡಿದ್ದಾರೆ.ಎಂದು ವ್ಯಂಗ್ಯವಾಡಿದರು.
ಮೂರು ಪಕ್ಷದವರು ಏಕಾಂಗಿಯಾಗಿ ಸ್ಪರ್ಧೆ ಮಾಡಿದ್ರೆ ಕಾಂಗ್ರೆಸ್ ಅಧಿಕಾರಕ್ಕೆ ಬರ್ತಿತ್ತು. ಬಿಜೆಪಿ ಜೊತೆ ಹೋಗುವುದು ಸೆಕ್ಯೂಲರಿಸಂ ನಾ? ಜೆಡಿಎಸ್ ಅವಕಾಶವಾದಿ ಪಕ್ಷ ಎಂಬುದು ಮತ್ತೇ ಸಾಬಿತಾಗಿದೆ. ಅವರಿಗೆ ರಾಜಕೀಯ ಘನತೆ ಗೌರವ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಭಾರತ್ ಜೋಡೋ ಬದಲು ಕಾಂಗ್ರೆಸ್ ಜೋಡೊ ಯಾತ್ರೆ ಮಾಡಿ ಎಂಬ ಬಿಜೆಪಿ ಟೀಕೆ ಪ್ರತಿಕ್ರಿಯಿಸಿದ ಸಿದ್ದು, ಬಿಜೆಪಿ ವಲಸಿಗರ ಪಕ್ಷವಾಗಿದೆ. ಬಸವರಾಜ ಬೊಮ್ಮಾಯಿ ಆರ್ಎಸ್ಎಸ್ ನಾ? ಸೋಮಣ್ಣ,ಸೋಮಶೇಖರ್, ಮುನಿರತ್ನ, ಕಾರಜೋಳ ಇವರೆಲ್ಲ ಯಾರು? ಬಿಜೆಪಿಯಲ್ಲಿ ಯಾರೂ ಪಕ್ಷ ಬಿಟ್ಟು ಹೋಗಿಲ್ವಾ? ಜನಸಂಘದಲ್ಲಿ ಇದ್ದವರೇ ಈಗಲೂ ಇದ್ದಾರಾ? ಎಂದು ಪ್ರಶ್ನಿಸಿದರು.
ರಾಜಕೀಯ ಪಕ್ಷ ಎಂದಮೇಲೆ ನಿಂತ ನೀರಲ್ಲ. ಚುನಾವಣೆ ಸಂದರ್ಭದಲ್ಲಿ ಕೆಲವರು ಬಿಟ್ಟು ಹೋಗ್ತಾರೆ. ಕೆಲವರು ಸೇರ್ತಾರೆ ಎಂದು ಸಿದ್ದರಾಮಯ್ಯನವರು ಬಿಜೆಪಿಗೆ ತಿರುಗೇಟು ನೀಡಿದರು.
ಇನ್ನು ಇದೇ ವೇಳೆ ಶಿಕ್ಷಕರ ನೇಮಕಾತಿ ಹಗರಣ ಸಿಐಡಿಗೆ ವಹಿಸಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ತನಿಖೆ ಮಾಡ್ಲಿ ಯಾರು ಉಪ್ಪು ತಿಂದಿದಾರೆ ಅವರು ನೀರು ಕುಡಿತಾರೆ. ನಮ್ಮದು ಅದಕ್ಕೇನು ವಿರೋಧ ಇಲ್ಲ. 2015ರ ವಿಚಾರ ಇದು ಆಗಿನಿಂದ ಏನು ಮಾಡಿದ್ರು ಇವರು. ವಿರೋಧ ಪಕ್ಷದಲ್ಲಿ ಇದ್ರಲಾ ಏನು ಮಾಡಿದ್ರು. ಯಡಿಯೂರಪ್ಪ, ಬೊಮ್ಮಾಯಿ ಮಾತಾಡಿದ್ರಾ, ಜಗದೀಶ ಶೆಟ್ಟರ ಮಾತಾಡಿದ್ರಾ? ತನಿಖೆ ಮಾಡಿಕೊಳ್ಳಲಿ ನಮ್ಮದೇನು ವಿರೋಧ ಇಲ್ಲ. ಆಗ ಮಾತನಾಡದ ಬಿಜೆಪಿಯವರು ವಿರೋಧ ಪಕ್ಷದಲ್ಲಿ ಇರೋದಕ್ಕೂ ಫೇಲ್ ಆಗಿದಿರಿ ಅಂತ ಅರ್ಥ. ಆಗಲೇ ಯಾಕೆ ಆರೋಪ ಮಾಡಲಿಲ್ಲ. ಈಗ ಇವರು ಮಾಡ್ತಿರೋದು ದ್ವೇಷದ ರಾಜಕಾರಣ. 40% ಕಮಿಷನ್ ತನಿಖೆ ಮಾಡಿ ಎಂದಿದ್ದಕ್ಕೆ ಈಗ ಶಿಕ್ಷಕರ ನೇಮಕಾತಿ ಹಗರಣ ಅಂತ ಶುರು ಮಾಡಿದ್ದಾರೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.