ಜನತೆಗೆ ನೀಡಿದ ಭರವಸೆಯಂತೆ ನುಡಿದಂತೆ ನಡೆಯದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪೆಟ್ರೋಲ್ ಡೀಸೆಲ್ ಧಾರಣೆಯನ್ನು ಏರಿಕೆ ಮಾಡಿದ ಫಲವಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು ಈ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಆಗ್ರಹಿಸಿದರು.
ತೀರ್ಥಹಳ್ಳಿ (ಜೂ.23): ಜನತೆಗೆ ನೀಡಿದ ಭರವಸೆಯಂತೆ ನುಡಿದಂತೆ ನಡೆಯದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪೆಟ್ರೋಲ್ ಡೀಸೆಲ್ ಧಾರಣೆಯನ್ನು ಏರಿಕೆ ಮಾಡಿದ ಫಲವಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು ಈ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಆಗ್ರಹಿಸಿದರು. ಪೆಟ್ರೋಲ್ ಡೀಸೆಲ್ ಧಾರಣೆ ಏರಿಕೆಯನ್ನು ಖಂಡಿಸಿ ಬಿಜೆಪಿ ಮಂಡಲ ವತಿಯಿಂದ ಪಟ್ಟಣದಲ್ಲಿ ಮೆರವಣಿಗೆ ನಡೆಸಿ ತಾಲೂಕು ಕಚೇರಿ ಎದುರು ನಡೆಸಿದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಗ್ಯಾರೆಂಟಿ ಯೋಜನೆಗೆ ವಿನಿಯೋಗಿಸುತ್ತಿರುವ 62 ಸಾವಿರ ಕೋಟಿ ವ್ಯರ್ಥ ಯೋಜನೆಯಿಂದಾಗಿ ಆಡಳಿತವನ್ನು ಸರಿ ದೂಗಿಸಲು ಸರ್ಕಾರ ವಿಫಲವಾಗಿದ್ದು, 15 ಬಾರಿ ಬಜೆಟ್ ಮಂಡನೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಈ ಬಗ್ಗೆ ಅರಿವಿಲ್ಲವೇ ಎಂದು ವಾಗ್ದಾಳಿ ನಡೆಸಿದರು.
ಜನವಿರೋಧಿ ಆಗಿರುವ ಈ ಸರ್ಕಾರ ಒಂದು ದಿನ ಕೂಡಾ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಹೊಂದಿಲ್ಲಾ. ಅಧಿಕಾರದ ತೀಟೆಗಾಗಿ ಈ ಸರ್ಕಾರ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ. ಅಭಿವೃದ್ದಿಗೆ ಚಿಕ್ಕ ಕಾಸು ನೀಡದ ಸರ್ಕಾರ, ಅಂಗನವಾಡಿ ಸಿಬ್ಬಂದಿಗೆ, ಆಸ್ಪತ್ರೆ ಡಿ ದರ್ಜೆ ನೌಕರರಿಗೆ ವೇತನ ನೀಡಿಲ್ಲಾ. ಕಮಿಶನ್ ನೀಡದ ಗುತ್ತಿಗೆದಾರರು ಬಿಲ್ ಬಾರದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು. ಕೇಂದ್ರದಲ್ಲಿ ಮತ್ತೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ. ವಾಲ್ಮೀಕಿ ನಿಗಮದ ಹಣ ದುರುಪಯೋಗವನ್ನು ಬಿಡೋದಿಲ್ಲಾ. ಮತ್ತು ಪ್ರಕರಣ ಈಗಾಗಲೇ ಸಿಬಿಐಗೆ ಹೋಗಿದ್ದು ಮುಖ್ಯಮಂತ್ರಿಗಳ ಸಹಿತ ಎಲ್ಲರ ಮುಖವಾಡವನ್ನೂ ಕಳಚುತ್ತೇವೆ ಎಂದು ಗುಡುಗಿದರು.
ಸರ್ಕಾರದ ವ್ಯವಸ್ಥೆಯಲ್ಲಿ ಮಾದಿಗ ಸಮುದಾಯಕ್ಕೆ ಅವಕಾಶ ಸಿಗಬೇಕು: ಸಂಸದ ಬೊಮ್ಮಾಯಿ
ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ನೀಡಿದ ಮನವಿಯಲ್ಲಿ ಪೆಟ್ರೋಲ್ ಡೀಸೆಲ್ ಧಾರಣೆ ಏರಿಕೆಯಿಂದಾಗಿ ದೈನಂದಿನ ವಸ್ತುಗಳ ಬೆಲೆ ಏರಿಕೆಯಾಗಲಿದ್ದು ದರ ಪರಿಷ್ಕರಣೆ ಕೈ ಬಿಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸುವಂತೆ ಮನವಿ ಮಾಡಲಾಗಿದೆ ಎಂದರು. ಮಂಡಲ ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್, ಚಂದವಳ್ಳಿ ಸೋಮಶೇಕರ್, ಕೆ.ಎಂ.ಮೋಹನ್, ಪ್ರಶಂತ್ ಕುಕ್ಕೆ, ಕಾಸರವಳ್ಳಿ ಶ್ರೀನಿವಾಸ್, ನಂದನ್ ಹಸಿರುಮನೆ, ಸೊಪ್ಪುಗುಡ್ಡೆ ರಾಘವೇಂದ್ರ, ಪ್ರಸಾದ್ ಶೆಟ್ಟಿ ತಳಲೆ, ಕೊಡಸಗೊಳ್ಳಿ ಶ್ಯಾಮಣ್ಣ ಇದ್ದರು.