ಸರ್ಕಾರದ ವ್ಯವಸ್ಥೆಯಲ್ಲಿ ಮಾದಿಗ ಸಮುದಾಯಕ್ಕೆ ಅವಕಾಶ ಸಿಗಬೇಕು: ಸಂಸದ ಬೊಮ್ಮಾಯಿ

By Kannadaprabha NewsFirst Published Jun 23, 2024, 4:45 PM IST
Highlights

ದೇಶದ ಎಲ್ಲ ಸಮುದಾಯಗಳು ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದುವರಿದಾಗ ದೇಶ ಅಭಿವೃದ್ಧಿ ಆಗುತ್ತದೆ. ಸಣ್ಣ ಸಮುದಾಯ ಹಿಂದುಳಿದರೆ ದೇಶದ ಅಭಿವೃದ್ಧಿ ಕುಂಠಿತಕ್ಕೆ ಕಾರಣವಾಗುತ್ತದೆ ಎಂದ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. 
 

ಹಾವೇರಿ (ಜೂ.23): ದೇಶದ ಎಲ್ಲ ಸಮುದಾಯಗಳು ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದುವರಿದಾಗ ದೇಶ ಅಭಿವೃದ್ಧಿ ಆಗುತ್ತದೆ. ಸಣ್ಣ ಸಮುದಾಯ ಹಿಂದುಳಿದರೆ ದೇಶದ ಅಭಿವೃದ್ಧಿ ಕುಂಠಿತಕ್ಕೆ ಕಾರಣವಾಗುತ್ತದೆ ಎಂದ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ನಗರದ ಖಾಸಗಿ ಹೋಟೆಲ್‌ನಲ್ಲಿ ಜಿಲ್ಲೆಯ ಮಾದಿಗ ಸಮಾಜದಿಂದ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ದಲಿತ ಮಾದರ ಸಮುದಾಯದ ಮತಗಳು ಸಹಕಾರಿಯಾಗಿದೆ. ಮತ ಹಾಕಿದವರು ದೊಡ್ಡವರು. ಅದಕ್ಕೆ ಮತದಾನ ಅಂತಾರೆ. ಹಾಗಾಗಿ, ಈ ಸನ್ಮಾನ ನಿಮಗೆ ಸಲ್ಲುತ್ತದೆ. ಚುನಾವಣೆ ಬರುತ್ತವೆ ಹೋಗುತ್ತವೆ. ನಮ್ಮ ಬದುಕು ನಿರಂತರವಾಗಿ ಸಾಗಬೇಕು. ಸ್ವತಂತ್ರ ಪೂರ್ವ ವ್ಯವಸ್ಥೆ ಏನಿತ್ತು ಎನ್ನುವುದು ಎಲ್ಲರಿಗೂ ಗೊತ್ತಿದೆ. ಈಗ ಬಹಳ ದೊಡ್ಡ ಪ್ರಮಾಣದಲ್ಲಿ ಬದಲಾವಣೆ ಆಗಿದೆ. ಸಾಮಾಜಿಕ ಬದಲಾವಣೆ ಆಗಬೇಕು. ದೇಶದ ಎಲ್ಲ ಸಮುದಾಯಗಳು ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದುವರಿದಾಗ ದೇಶ ಅಭಿವೃದ್ಧಿ ಆಗುತ್ತದೆ ಎಂದರು.

Latest Videos

ಜನರ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿಗಳ ಆಯ್ಕೆ ಮಾಡುತ್ತೇವೆ: ಸಚಿವ ದಿನೇಶ್ ಗುಂಡೂರಾವ್

ಸಣ್ಣ ಸಮುದಾಯ ಹಿಂದುಳಿದರೆ ದೇಶದ ಅಭಿವೃದ್ಧಿ ಕುಂಠಿತಕ್ಕೆ ಕಾರಣವಾಗುತ್ತದೆ. ಜಾತಿ ವ್ಯವಸ್ಥೆ ನಾವೇ ಜಟಿಲವಾಗಿ ಮಾಡಿಕೊಂಡಿರುವ ಸಮಸ್ಯೆ ಆಗಿದೆ. ನಮ್ಮ ಮನಸ್ಸು ಸಂಕುಚಿತವಾಗಿ ಯೋಚಿಸಿದಾಗ ಹೀಗೆ ಆಗುತ್ತದೆ ಎಂದರು. ಸರ್ಕಾರದ ವ್ಯವಸ್ಥೆಯಲ್ಲಿ ಮಾದಿಗ ಸಮುದಾಯಕ್ಕೆ ಅವಕಾಶ ಸಿಗಬೇಕು. ಯಾವುದಾದರೂ ಕೆಲಸ ಕೊಟ್ಟರೆ ಅಚ್ಚುಕಟ್ಟಾಗಿ ಮಾಡುವ ಸಾಮರ್ಥ್ಯ ಈ ಸಮುದಾಯಕ್ಕೆ ಇದೆ. ಭಾರತ ಬರಗಾಲ ಪೀಡಿತ ದೇಶವಾಗಿ ಬೇರೆ ದೇಶದ ಬಳಿ ಭಿಕ್ಷೆ ಬೇಡುವ ಸ್ಥಿತಿಯಲ್ಲಿತ್ತು. ಆಗ ಕೃಷಿ ಸಚಿವರಾಗಿ ಹಸಿರು ಕ್ರಾಂತಿಯ ಮೂಲಕ ಆಮೂಲಾಗ್ರ ಬದಲಾವಣೆ ತಂದವರು ಬಾಬು ಜಗಜೀವನರಾಂ ಎಂದು ಹೇಳಿದರು.

ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಈ ಸಮುದಾಯಕ್ಕೆ ಗೌರವಯುತವಾದ ಬದುಕು ಕಟ್ಟಿಕೊಡಲು, ಮಕ್ಕಳಿಗೆ ಶಿಕ್ಷಣ ಕೊಡಲು ನಿರಂತರವಾಗಿ ಪ್ರಯತ್ನ ಮಾಡುತ್ತೇನೆ. ನೀವು ಇನ್ನು ಮುಂದೆ ನಮ್ಮೊಂದಿಗೆ ಯಾರಿದ್ದಾರೆ ಎಂಬ ಹತಾಶ ಮನೋಭಾವನೆ ಬಿಡಿ. ನಿಮ್ಮ ಸಹೋದರ ಸಂಸದರಾಗಿ ದೆಹಲಿಗೆ ಹೋಗಿದ್ದಾರೆ. ವೇದಿಕೆ ಮೇಲೆ ಕುಳಿತವರು ಎಲ್ಲರೂ ಒಂದಾಗಿ ಆಗ ಎದುರಿಗೆ ಇರುವವರೆಲ್ಲರೂ ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ ಎಂದು ಕಿವಿಮಾತು ಹೇಳಿದರು.

ವಿಪಕ್ಷ ನಾಯಕ ಅಶೋಕ್‌ ಈಗ ನಿದ್ರೆಯಿಂದ ಎದ್ದಿದ್ದಾರೆ: ಸಚಿವ ಡಾ.ಶರಣಪ್ರಕಾಶ ಪಾಟೀಲ್

ಇತರ ಎಲ್ಲ ಸಮಾಜವನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕೆಲಸ ಆಗಬೇಕು. ಭವಿಷ್ಯಕ್ಕಾಗಿ ಒಗ್ಗಟ್ಟಾಗಿ ದುಡಿಯೋಣ. ನಮ್ಮ ಬದುಕಿನಂತೆ ನಮ್ಮ ಮಕ್ಕಳಾಗಬಾರದು. ಉಜ್ವಲ ಭವಿಷ್ಯ ಹೊಂದಬೇಕು ಎಂದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಶಿವರಾಜ ಸಜ್ಜನರ, ಮುಖಂಡರಾದ ಡಿ.ಎಸ್. ಮಾಳಗಿ, ಗವಿಸಿದ್ದಪ್ಪ ದ್ಯಾಮಣ್ಣವರ, ಪರಮೇಶಪ್ಪ ಮೇಗಳಮನಿ, ಚಂದ್ರಪ್ಪ ಹರಿಜನ, ಮಲ್ಲೇಶಪ್ಪ ಹರಿಜನ, ಹೊನ್ನಪ್ಪ ತಗಡಿನಮನಿ, ಪ್ರಕಾಶ ಪೂಜಾರ ಹಾಗೂ ಸೇರಿದಂತೆ ಇತರರು ಇದ್ದರು.

click me!