
ಮೈಸೂರು (ಜೂ.12): ರಾಜ್ಯಸಭಾ ಚುನಾವಣೆಯಲ್ಲಿ 3ನೇ ಸ್ಥಾನ ಬಿಜೆಪಿ ಪಾಲಾದ ಬಳಿಕ ಕಾಂಗ್ರೆಸ್ ಮತ್ತು ಜೆಡಿಎಸ್ ಆರೋಪ- ಪ್ರತ್ಯಾರೋಪ ಮತ್ತಷ್ಟು ಜೋರಾಗಿದ್ದು, ಹಳೆಯ ದೋಸ್ತಿ ಕೆದಕಿ ಪರಸ್ಪರ ಟಾಂಗ್ ನೀಡಲಾಗುತ್ತಿದೆ. ಕಾಂಗ್ರೆಸ್ ಸಹವಾಸ ಇನ್ನು ಮುಂದೆ ಬೇಡವೇ ಬೇಡ ಎಂದಿರುವ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಜೆಡಿಎಸ್ನವರ ಜೊತೆ ಹೋಗಿಯೇ ಸಂಸತ್ ಚುನಾವಣೆಯಲ್ಲಿ ಕೆಟ್ಟೆವು ಎಂದಿದ್ದಾರೆ. ತನ್ಮೂಲಕ ಜೆಡಿಎಸ್ ಜತೆ ಸೇರಿ ಮೈತ್ರಿ ಸರ್ಕಾರ ರಚಿಸಿದ್ದರ ಬಗ್ಗೆ ಬಹಿರಂಗವಾಗಿಯೇ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಪಾರ್ಲಿಮೆಂಟ್ ಎಲೆಕ್ಷನ್ನಲ್ಲಿ ಜೆಡಿಎಸ್ ಜೊತೆ ಹೋಗಿದ್ದಕ್ಕೇ ನಾವು ಕೆಟ್ಟಿದ್ದು ಎಂದರು. ರಾಜ್ಯಸಭೆಯಲ್ಲಿ ಬಿಜೆಪಿ ಗೆಲ್ಲುವುದಕ್ಕೆ ಸಿದ್ದರಾಮಯ್ಯ ಕಾರಣ ಎಂಬ ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದ ಅವರು, ಬಿಜೆಪಿ ಗೆಲ್ಲಲು ಅವರು ಕಾರಣ ಅಲ್ವಾ? ಮೊದಲು ನಾವು ಅಭ್ಯರ್ಥಿ ಹಾಕಿದ್ದು, ಆ ನಂತರ ಅವರು ಅಭ್ಯರ್ಥಿ ಹಾಕಿದ್ದು. ಬಿಜೆಪಿ ಗೆಲ್ಲಬಾರದಿತ್ತು ಅನ್ನೋದಾದರೆ ಅವರು ಕ್ಯಾಂಡಿಡೇಟ್ ಹಾಕಬಾರದಿತ್ತು. ಬಿಜೆಪಿ ಗೆಲ್ಲಲು ಅವರೇ ಕಾರಣ ಎಂದು ಪ್ರತ್ಯುತ್ತರ ನೀಡಿದರು.
Rajya Sabha Election: ಕಾಂಗ್ರೆಸ್ಸಿಗರ ಮೇಲೆ ಸಿದ್ದು, ಡಿಕೆಶಿ ಕಣ್ಣು
ಸಬ್ ಕಾ ಸಾತ್ ಸಬ್ ಕಾ ನಾಶ್ ಮಾಡಿದ್ದಾರೆ ನರೇಂದ್ರ ಮೋದಿ: ‘ನಾನು ಮುಖ್ಯಮಂತ್ರಿಯಾಗಿದ್ದಾಗ 15 ಲಕ್ಷ ಮನೆಗಳನ್ನು ಬಡವರಿಗೆ ಕಟ್ಟಿಸಿಕೊಟ್ಟಿದ್ದೆ. ಬಿಎಸ್ವೈ, ಬೊಮ್ಮಾಯಿ ನೇತೃತ್ವದ ಸರ್ಕಾರ ಈ ನಾಲ್ಕು ವರ್ಷಗಳಲ್ಲಿ ಒಂದೇ ಒಂದು ಮನೆಯನ್ನೂ ಕಟ್ಟಿಸಿಕೊಟ್ಟಿಲ್ಲ. ಬಡವರಿಗೆ ಸೂರು ಕೊಡದ ದರಿದ್ರ ಸರ್ಕಾರ ರಾಜ್ಯದಲ್ಲಿ ಇರಬೇಕಾ? ಇಂಥ ಕೆಟ್ಟ ಸರ್ಕಾರವನ್ನು ಇತಿಹಾಸದಲ್ಲೇ ನೋಡಿರಲಿಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಹಾವೇರಿ ನಗರದ ಕೃಷ್ಣ ಕಲ್ಯಾಣ ಮಂಟಪದಲ್ಲಿ ಬುಧವಾರ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಪರ ಮತಯಾಚಿಸಿ ಅವರು ಮಾತನಾಡಿದರು.
ಸಾಧನೆಯ ಪಟ್ಟಿ ಕೊಡಿ: ನಾವು ಏನು ಮಾಡಿದ್ದೇವೆ ಎಂಬ ಬಗ್ಗೆ ಸಾಧನೆಯ ಪಟ್ಟಿ ಕೊಡುತ್ತೇವೆ. ಬಿಜೆಪಿಯವರು ಬೆಲೆ ಏರಿಕೆ, ಸಾಲ ಹೆಚ್ಚಳ, ಬಡವರಿಗೆ ಮನೆ ಕೊಟ್ಟಿಲ್ಲ, ಶೇ 40ರಷ್ಟು ಕಮಿಷನ್ ಪಡೆದಿದ್ದೇವೆ ಅಂತ ಪಟ್ಟಿ ಕೊಡಬೇಕಷ್ಟೆ ಎಂದು ವ್ಯಂಗ್ಯವಾಡಿದರು. ರಾಜ್ಯದ ಉಳಿವಿಗಾಗಿ ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯುವ ನಿರ್ಧಾರವನ್ನು ಕೈಗೊಳ್ಳಿ ಎಂದು ಹೇಳಿದರು.
ಕೈ 2ನೇ ಅಭ್ಯರ್ಥಿ ಸೋತರೂ ಸಿದ್ದು ತಂತ್ರಗಾರಿಕೆಗೆ ಜಯ, ಒಂದೇ ಏಟಿಗೆ 3 ಹಕ್ಕಿ ಹೊಡೆದ ಮಾಜಿ ಸಿಎಂ!
ಚರಿತ್ರೆಯನ್ನೇ ತಿರುಚಿದ್ದಾರೆ: ಬಸವಣ್ಣ, ಅಂಬೇಡ್ಕರ್, ನಾರಾಯಣಗುರು, ಕುವೆಂಪು, ಭಗತ್ಸಿಂಗ್ ಇವರ್ಯಾರು ಹಿಂದೂಗಳಲ್ವಾ? ಇವರ ಪಠ್ಯಗಳಿಗೆ ಬಿಜೆಪಿ ಸರ್ಕಾರ ಕತ್ತರಿ ಹಾಕಿದೆ. ವೈದಿಕ ಧರ್ಮ ವಿರೋಧಿಸಿ ಲಿಂಗಾಯತ ಧರ್ಮ ಸ್ಥಾಪಿಸಿದ್ದ ಬಸವಣ್ಣ, ವಿಶ್ವಮಾನವ ಕಲ್ಪನೆ ನೀಡಿದ ಕುವೆಂಪು ಅವರ ಚರಿತ್ರೆಯನ್ನೇ ತಿರುಚಲು ಹೊರಟಿದ್ದಾರೆ. ಪಠ್ಯ ಪುಸ್ತಕಗಳು ಕೇಸರೀಕರಣವಾಗುತ್ತಿವೆ ಎಂದು ಸಾಹಿತಿ, ಸ್ವಾಮೀಜಿಗಳೇ ಹೇಳುತ್ತಿದ್ದಾರೆ. ವೈದಿಕ ಧರ್ಮ ಸ್ಥಾಪಿಸುವ, ಕೇಸರೀಕರಣಗೊಳಿಸುವ ಹುನ್ನಾರ, ಷಡ್ಯಂತ್ರಗಳನ್ನು ತಡೆಯಬೇಕಿದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.