Latest Videos

ಶಿವಮೊಗ್ಗ ಶಾಸ​ಕ​ರ ‘ಕೈ​’ ಹಿಡಿ​ಯ​ಲಿಲ್ಲ ಸಿದ್ದ​ರಾ​ಮ​ಯ್ಯ ಸರ್ಕಾರ

By Kannadaprabha NewsFirst Published May 20, 2023, 11:59 PM IST
Highlights

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆಯ ಮೊಲದ ದಿನ 8 ಮಂದಿ ಶಾಸಕರಿಗೆ ಮಂತ್ರಿಸ್ಥಾನ ನೀಡಲಾಗಿದೆ. 

ಶಿವಮೊಗ್ಗ (ಮೇ.20): ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆಯ ಮೊಲದ ದಿನ 8 ಮಂದಿ ಶಾಸಕರಿಗೆ ಮಂತ್ರಿಸ್ಥಾನ ನೀಡಲಾಗಿದೆ. ಸಚಿವರ ಸಂಭಾವ್ಯ ಪಟ್ಟಿಯಲ್ಲಿ ಸೊರಬ ಶಾಸಕ ಮಧು ಬಂಗಾರಪ್ಪ ಹೆಸರು ಇದ್ದರೂ ಅವರಿಗೆ ಮೊದಲ ಪ್ರಾಶಸ್ತ್ಯದಲ್ಲಿ ಅದ್ಯತೆ ನೀಡದಿರುವುದು ಅವರ ಬೆಂಬಲಿಗರು, ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.

ಮೊದಲ ಸಂಪುಟದಲ್ಲಿ ಜಾತಿ, ಧರ್ಮವಾರು ಆದ್ಯತೆ ನೀಡಿದಂತೆ ಕಂಡು ಬಂದಿದೆ. ಪ್ರದೇಶವಾರು ಸಚಿವ ಸ್ಥಾನ ನೀಡಿಲ್ಲ. ಮಧ್ಯೆ ಕರ್ನಾಟಕ ಭಾಗದ ಯಾವೊಬ್ಬ ಶಾಸರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ಈಚೆಗೆ ಎಲ್ಲ ಸರ್ಕಾರಗಳಲ್ಲೂ ಮೊದಲಿಗೆ ಶಿವಮೊಗ್ಗ ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ಒಲಿಯುತ್ತಿತ್ತು. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್‌ ಅವರಿಗೆ ಸಚಿವ ಸ್ಥಾನ ಒಲಿದು ಬಂದಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ, ಕೆ.ಎಸ್‌.ಈಶ್ವರಪ್ಪ ಅವರಿಗೆ ಪ್ರಭಾವಿ ಖಾತೆ ಲಭಿಸಿತ್ತು. ಆದರೆ, ಈ ಬಾರಿ ಮೊದಲ ಸಂಪುಟದಲ್ಲಿ ಶಿವಮೊಗ್ಗದ ಹೆಸರು ಇಲ್ಲವಾಗಿದೆ.

ಕಾಂಗ್ರೆಸ್‌ ಗ್ಯಾರಂಟಿಯೇ ಕಮಲದ ಸೋಲಿಗೆ ಕಾರಣ: ಶಾಸಕ ಸುರೇಶ್‌ ಗೌಡ

ಮೂವರಲ್ಲಿ ಯಾರಿಗೆ ಮಂತ್ರಿಗಿರಿ?: ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷದ ಮೂವರು ಶಾಸಕರಾಗಿದ್ದಾರೆ. ಭದ್ರಾವತಿಯ ಬಿ.ಕೆ.ಸಂಗಮೇಶ್ವರ್‌, ಸಾಗರದ ಬೇಳೂರು ಗೋಪಾಲಕೃಷ್ಣ, ಸೊರಬದ ಮಧು ಬಂಗಾರಪ್ಪ ಗೆದ್ದಿದ್ದಾರೆ. ಈ ಪೈಕಿ ಸಂಗಮೇಶ್ವರ್‌ ಮತ್ತು ಮಧು ಬಂಗಾರಪ್ಪ ಅವರಿಗೆ ಸಚಿವ ಸ್ಥಾನ ದೊರೆಯಬಹುದು ಎಂಬ ಚರ್ಚೆಗಳಿವೆ. ಅವರ ಬೆಂಬಲಿಗರು, ಅಭಿಮಾನಿಗಳು ಈ ಬಗ್ಗೆ ಕಾತುರರಾಗಿದ್ದಾರೆ. ಕನಿಷ್ಠ ಒಬ್ಬರಿಗಾದರೂ ಪ್ರಭಾವಿ ಖಾತೆ ಸಿಗುವ ಸಾಧ್ಯೆ ಇದೆ.

ಮುಂದೆ ಸಂಪುಟ ವಿಸ್ತರಣೆಯಾಗಲಿದೆ. ಈ ವೇಳೆ ಶಿವಮೊಗ್ಗದ ಶಾಸಕರು ಸಚಿವರಾಗಿ ಬಡ್ತಿ ಪಡೆಯುವ ಸಾಧ್ಯತೆ ಇದೆ. ಹಾಗಾಗಿ ಜಿಲ್ಲೆಯ ಜನರು ಸಂಪುಟ ವಿಸ್ತರಣೆಯ ಕುರಿತು ಕಾತುರದಿಂದ ಇದ್ದಾರೆ. ಜಿಲ್ಲೆಯವರಿಗೆ ಸಚಿವ ಸ್ಥಾನ ನೀಡಿ, ಉಸ್ತುವಾರಿ ಸಚಿವರನ್ನಾಗಿ ಮಾಡಿದರೆ ಅನುಕೂಲ ಎಂಬ ಚರ್ಚೆಗಳಿವೆ. ಹೊರಗಿನವರು ಉಸ್ತುವಾರಿ ಸಚಿವರಾದರೆ ಇಲ್ಲಿಯ ಜನರ ಕಷ್ಟ, ನಷ್ಟಗಳು ಅರ್ಥ ಮಾಡಿಕೊಳ್ಳುವುದಕ್ಕೆ ಸಮಯ ಹಿಡಿಯಲಿದೆ. ಜಿಲ್ಲೆಗೆ ಅವರ ಭೇಟಿಯು ಅಪರೂಪದ್ದಾಗಿರುತ್ತದೆ.

ದೇಶ ಗೆಲ್ಲಿಸುವ ಲೋಕಸಭಾ ಚುನಾವಣೆಗೆ ಸಜ್ಜಾಗಿ: ಶಾಸಕ ಸಿ.ಸಿ.ಪಾಟೀಲ್‌

ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆ.ಸಿ.ನಾರಾಯಣ ಗೌಡ ಅವರು ಉಸ್ತುವಾರಿ ಸಚಿವರಾಗಿದ್ದರು. ಬೆರಳೆಣಿಕೆಯಷ್ಟುಬಾರಿ ಮಾತ್ರ ಜಿಲ್ಲೆಗೆ ಬಂದಿದ್ದರು. ಅಲ್ಲದೆ ಯಾವುದೆ ವಿಚಾರಕ್ಕೆ ಒಪ್ಪಿಗೆ ನೀಡಲು ಸಂಸದ ರಾಘವೇಂದ್ರ, ಸಚಿವರಾಗಿದ್ದ ಈಶ್ವರಪ್ಪ ಅವರ ಒಪ್ಪಿಗೆ ಪಡೆಯುತ್ತಿದ್ದರು. ಹಾಗಾಗಿ ಜಿಲ್ಲೆಯವರಿಗೆ ಉಸ್ತುವಾರಿ ಸಚಿವ ಸ್ಥಾನ ನೀಡಬೇಕು ಎಂಬ ಚರ್ಚೆ ಜೋರಾಗಿದೆ. ಸಚಿವ ಸ್ಥಾನ ನೀಡದ್ದಕ್ಕೆ ಮಧು ಬಂಗಾರಪ್ಪ ಅವರು ಬೇಸರಗೊಂಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದೆ ಕಾರಣಕ್ಕೆ ಇವತ್ತು ಪ್ರಮಾಣವಚನ ಕಾರ್ಯಕ್ರಮಕ್ಕೆ ಅವರು ಗೈರಾಗಿದ್ದರು ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಮಧು ಬಂಗಾರಪ್ಪ ಅವರು ಸ್ಪಷ್ಟನೆ ನೀಡಿಲ್ಲ.

click me!