
ಹಾಸನ(ಅ.24): ಯಾರೋ ಗಿರಾಕಿಗಳು ಅಧಿಕಾರಿಗಳಿಂದ ಲಂಚ ಪಡೆದಿದ್ದಾರೆ ಎಂದು ಆರೋಪಿಸಿರುವ ಎಚ್.ಡಿ. ರೇವಣ್ಣನವರು ಲಂಚ ಪಡೆದ ಆರೋಪಿ ಯಾರೆಂದು ಬಹಿರಂಗಪಡಿಸಬೇಕು ಎಂದು ಕಾಂಗ್ರೆಸ್ ಮುಖಂಡ ಹಾಗೂ ವಿಧಾನಸಭಾ ಚುನಾವಣೆಯ ಪರಾಜಿತ ಅಭ್ಯರ್ಥಿ ಶ್ರೇಯಸ್ ಪಟೇಲ್ ಸವಾಲು ಹಾಕಿದರು.
ಪತ್ರಿಕಾಗೋಷ್ಠಿಯಲ್ಲಿ ಭಾನುವಾರ ಮಾತನಾಡಿ, ಶಾಂತಿಗ್ರಾಮ ಉಪ ತಹಶೀಲ್ದಾರರ ಮತ್ತು ಆರ್ಐ ಅವರ ಬಳಿ ಯಾರೋ ಗಿರಾಕಿಗಳು, ಮಧ್ಯವರ್ತಿಗಳು, ದಲ್ಲಾಳಿಗಳು ನಾಲ್ಕು ಲಕ್ಷ ಹಣ ಪಡೆದಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಈ ರೀತಿಯ ಅಧಾರವಿಲ್ಲದೆ ಆರೋಪ ಮಾಡಿರುವ ರೇವಣ್ಣ ಅವರು ಲಂಚ ಪಡೆದಿರುವ ಆರೋಪಿ ಯಾರೆಂದು ಬಹಿರಂಗವಾಗಿ ಹೇಳಬೇಕು. ರೇವಣ್ಣ ಅವರು ಹಿರಿಯರಿದ್ದಾರೆ, ಅವರ ಮೇಲೆ ಗೌರವ ಇದ್ದ ಕಾರಣ ಇಷ್ಟು ದಿನ ಏನನ್ನು ಮಾತನಾಡದೆ ಸುಮ್ಮನೆ ಇದ್ದೆವು ಎಂದು ಹೇಳಿದರು.
ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ಸಿಗೆ ಭಯ: ಎಚ್.ಡಿ.ರೇವಣ್ಣ
ಪ್ರಸ್ತುತ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಅವರ ಮೇಲೆ ಜನರು ಹೆಚ್ಚಿನ ಒಲವು ತೋರುತ್ತಿರುವ ಹಿನ್ನೆಲೆಯಲ್ಲಿ ಎಚ್.ಡಿ ರೇವಣ್ಣ ಅವರು ಹತಾಶರಾಗಿ ಹೀಗೆಲ್ಲಾ ಮಾತನಾಡುತ್ತಿದ್ದಾರೆ. ಈಗಾಗಲೇ ಹೊಳೇನರಸೀಪುರ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಇದ್ದಂತಹ ಅಧಿಕಾರಿಗಳನ್ನು ಕಾಂಗ್ರೆಸ್ ಸರ್ಕಾರ ಬೇರೆಡೆ ವರ್ಗಾವಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ರೇವಣ್ಣನವರಿಗರ ಅಧಿಕಾರಿಗಳನ್ನು ಹೆದರಿಸಿ ಕೆಲಸ ಮಾಡಿಸಿಕೊಳ್ಳಲು ಆಗುತ್ತಿಲ್ಲ. ಅದಕ್ಕೆ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.
ಇಷ್ಟು ದಿನ ಹೊಳೆನರಸೀಪುರದಲ್ಲಿ ನಡೆಯುತ್ತಿದ್ದುದ್ದೇ ಬೇರೆ, ಚುನಾವಣೆಯ ಮುಗಿದ ನಂತರ ಅಲ್ಲಿ ನಡೆಯತ್ತಿರುವುದೇ ಬೇರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಾನು ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲಿ ತುಂಬಾ ವರ್ಷಗಳಿಂದ ಇದ್ದಂತಹ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಮನವಿ ಮಾಡಿದ್ದೆ, ಅದರಂತೆ ಕೆಲ ಅಧಿಕಾರಿಗಳು ಬದಲಾಗಿದ್ದಾರೆ. ಕಾನೂನುಬದ್ಧವಾಗಿ ಕೆಲಸ ಮಾಡಿದರೆ ನಮ್ಮ ಅಭ್ಯಂತರವಿಲ್ಲ. ಯಾವುದೇ ಅಕ್ರಮ ಕೆಲಸಗಳು ನಡೆದರೆ ನಾವು ಪ್ರಶ್ನೆ ಮಾಡುತ್ತೇವೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರೇವಣ್ಣ ಅವರಿಗೆ ಭ್ರಷ್ಟಚಾರ ಮಾಡಲು ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬೇಕಾಬಿಟ್ಟಿ ಆರೋಪ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಹಾಸನ ಲೋಕಸಭಾ ಚುನವಾಣೆ ಕುರಿತು ಕಳೆದ ಒಂದು ವಾರದ ಹಿಂದೆ ಸಭೆ ನಡೆಯಿತು. ಆ ಸಭೆಯಲ್ಲಿ ನನ್ನ ಅಭಿಪ್ರಾಯವನ್ನು ಸಹ ವರಿಷ್ಠರು ಕೇಳಿದರು. ಪಕ್ಷ ಏನೂ ತೀರ್ಮಾನ ಕೈಗೊಳ್ಳುತ್ತದೋ ಅದಕ್ಕೆ ನಾನು ಬದ್ಧವಾಗಿರುತ್ತೇನೆ ಎಂದು ಹೇಳಿದ್ದೇನೆ ಎಂದರು.
ತಮಿಳ್ನಾಡಿನ 40 ಎಂಪಿ ಸೀಟಿಗಾಗಿ ರಾಜ್ಯವನ್ನೇ ಅಡವಿಟ್ಟ ಕಾಂಗ್ರೆಸ್: ಎಚ್.ಡಿ.ರೇವಣ್ಣ
ಹೊಳೆನರಸೀಪುರ ಕ್ಷೇತ್ರದ ಅಭಿವೃದ್ಧಿಗೆ ಕ್ರೀಯಾಯೋಜನೆ ತಯಾರಿಸಿ ಈಗಾಗಲೇ ರಾಜ್ಯ ಸರ್ಕಾರಕ್ಕೆ ನೀಡಿದ್ದೇವೆ. ರಸ್ತೆ, ಚರಂಡಿ, ಕುಡಿಯುವ ನೀರು ಹೀಗೆ ಸಾರ್ವಜನಿಕರಿಗೆ ಬೇಕಾದ ಮುಖ್ಯ ಮೂಲಭೂತ ಸೌಲಭ್ಯಗಳನ್ನು ನೀಡಿ ಎಂದು ಮನವಿ ಮಾಡಿದ್ದೇವೆ. ಅದಕ್ಕೆ ರಾಜ್ಯ ಸರ್ಕಾರ ಸಹ ಸಕರಾತ್ಮಕವಾಗಿ ಸ್ಪಂದಿಸಿ ಡಿಸೆಂಬರ್ ತಿಂಗಳ ನಂತರ ಯೋಜನೆಗಳಿಗೆ ಅನುಷ್ಠಾವನ್ನು ನೀಡುವ ಭರವಸೆಯನ್ನು ನೀಡಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಲಕ್ಷ್ಮಣ್ ಇದ್ದರು.
ಆತ್ಮಸಾಕ್ಷಿ ಇದ್ದರೆ ಆಣೆ ಮಾಡಲಿ
ರೇವಣ್ಣ ಅವರು ಅಧಿಕಾರಿಗಳ ಬಳಿ ಮಧ್ಯವರ್ತಿಗಳು, ಗಿರಾಕಿಗಳು ನಾಲ್ಕು ಲಕ್ಷ ರು. ಹಣ ಪಡೆದಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಅವರಿಗೆ ಆತ್ಮಸಾಕ್ಷಿ ಇದ್ದರೆ ಅವರು ಇದುವರೆಗೂ ಯಾರ ಬಳಿಯೂ ಲಂಚ ಪಡದೇ ಇಲ್ಲ, ಭ್ರಷ್ಟಚಾರ ಮಾಡಿಯೇ ಇಲ್ಲ, ಅಧಿಕಾರಿಗಳಿಗೆ ಧಮ್ಕಿ ಹಾಕಿಲ್ಲ, ಸರ್ಕಾರಿ ಹಣವನ್ನು ಲೂಟಿ ಹೊಡೆದಿಲ್ಲ, ಸುಳ್ಳು ಬಿಲ್ ಮಾಡಿಸಿಕೊಂಡಿಲ್ಲ ಮತ್ತು ಅಧಿಕಾರಿಗಳ ಬಳಿ ಲಂಚ ಪಡೆದಿಲ್ಲ ಎಂದು ಹೊಳೇನರಸೀಪುರದ ಗ್ರಾಮದೇವತೆ ಲಕ್ಷ್ಮಿನರಸಿಂಹ ದೇವಾಲಯದ ಬಳಿ ಬಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.