
ಬೆಳಗಾವಿ (ಜೂ.22): ರಾಜ್ಯ ಕಾಂಗ್ರೆಸ್ ಸರ್ಕಾರದ ಯೋಜನೆಗಳ ಸರ್ವರ್ ಅನ್ನು ಕೇಂದ್ರ ಸರ್ಕಾರ ಹ್ಯಾಕ್ ಮಾಡಿದೆ ಎಂದು ಗಂಭೀರ ಆರೋಪ ಮಾಡಿದ್ದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಇದೀಗ ಉಲ್ಟಾ ಹೊಡೆದಿದ್ದಾರೆ. ಅದೊಂದು ರಾಜಕೀಯ ಹೇಳಿಕೆ ಅಷ್ಟೆ. ಆ ಕುರಿತ ಚರ್ಚೆಯನ್ನು ಇಲ್ಲೇ ನಿಲ್ಲಿಸಿ ಬಿಡಿ ಎಂದು ಮನವಿ ಮಾಡಿದ್ದಾರೆ. ಹುಕ್ಕೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸರ್ವರ್ ಹ್ಯಾಕ್ ಕುರಿತ ಹೇಳಿಕೆ ವಾಪಸ್ ಪಡೆಯುತ್ತೀರಾ ಎಂಬ ಪ್ರಶ್ನೆಗೆ, ಹಾಗೆಯೇ ತಿಳಿದುಕೊಳ್ಳಿ ಎಂದು ಪ್ರತಿಕ್ರಿಯಿಸಿದರು.
ನನ್ನ ಸರ್ವರ್ ಹೇಳಿಕೆಯನ್ನು ಇಲ್ಲಿಗೇ ಬಿಟ್ಟು ಬಿಡಿ, ಅದೊಂದು ರಾಜಕೀಯ ಸ್ಟೇಟ್ಮೆಂಟ್. ನನ್ನ ಹೇಳಿಕೆಯನ್ನು ಬಿಜೆಪಿಯವರು ತಿರುಚುವ ಪ್ರಯತ್ನ ಮಾಡಿದ್ದಾರೆ. ಬಿಜೆಪಿ ನಾಯಕರ ಇಂಥ ನೂರಾರು ಹೇಳಿಕೆಗಳಿವೆ. ನನಗೆ ಅನುಮಾನ ಬಂದಿದ್ದನ್ನು ಹೇಳಿದ್ದೇನೆ. ಸರ್ವರ್ ಹ್ಯಾಕ್ ಆಗಿಲ್ಲ ಎಂದರೆ ಮುಗಿದು ಹೋಯ್ತು ಅಷ್ಟೆ. ಹಿಂದೆ ಕೇಂದ್ರ ಸರ್ಕಾರದ ಮೇಲೆ ಫೋನ್ ಟ್ಯಾಪಿಂಗ್, ಇವಿಎಂ ಹ್ಯಾಕ್ನಂಥ ಆರೋಪಗಳಿವೆ. ಹೀಗಾಗಿ ಅದೇ ರೀತಿ ಆಗಿರಬಹುದು ಎನ್ನುವುದು ನನ್ನ ಸಂಶಯ. ಪ್ರಧಾನಿಯಿಂದ ಹಿಡಿದು ಬಿಜೆಪಿ ನಾಯಕರು ಇಂಥ ಅನೇಕ ಹೇಳಿಕೆ ಕೊಟ್ಟಿದ್ದಾರೆ ಎಂದರು.
ಲೋಕಸಭಾ ಚುನಾವಣೆ: ಬೆಂಗಳೂರು ಗ್ರಾಮಾಂತರ ಕ್ಷೇತ್ರ ಟಿಕೆಟ್ ಯೋಗೇಶ್ವರ್ಗೆ?
ಸರ್ವರ್ ಹ್ಯಾಕ್ ಹೇಳಿಕೆ ವೈಯಕ್ತಿಕ. ಈ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ನನ್ನ ಹೇಳಿಕೆಗೆ ಸಮರ್ಥನೆಗೆ ಬರಬೇಕಿಲ್ಲ. ನನಗೆ ಅನಿಸಿದ್ದನ್ನು ಹೇಳಿದ್ದೇನೆ. ಕೆಸರಲ್ಲಿ ಕಲ್ಲು ಹುಡುಕುವುದು ಬೇಡ. ಪ್ರತಿನಿತ್ಯ ಸಾಕಷ್ಟುಆರೋಪ, ಪ್ರತ್ಯಾರೋಪಗಳು ಬರುತ್ತವೆ. ಎಲ್ಲದಕ್ಕೂ ಕಾಗದ ತೋರಿಸಲು ಆಗುವುದಿಲ್ಲ. ನನ್ನ ಹೇಳಿಕೆ ಹಿಂಪಡೆಯುವುದಿಲ್ಲ. ಬೇರೆ ಬೇರೆ ವಿಷಯಗಳ ಕುರಿತು ಚರ್ಚೆ ಮಾಡೋಣ. ಈ ವಿಚಾರವನ್ನು ಇಲ್ಲೇ ನಿಲ್ಲಿಸಿ ಬಿಡೋಣ ಎಂದರು.
ಇವರಿಗೆಲ್ಲಾ ಪುನಶ್ಚೇತನ ಶಿಬಿರ ಅಗತ್ಯವಿದೆ: ಸರ್ಕಾರ ಗೃಹಜ್ಯೋತಿ ಯೋಜನೆಯ ಸರ್ವರ್ ಹ್ಯಾಕ್ ಮಾಡಿದೆ ಎಂಬ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ಅಸಂಬದ್ಧವಾಗಿದೆ. ಇದರಿಂದ ರಾಜ್ಯದ ಜನ ತಲೆತಗ್ಗಿಸಬೇಕಾಗುತ್ತದೆ. ಇವರಿಗೆಲ್ಲ ಸಾರ್ವಜನಿಕವಾಗಿ ಹೇಗೆ ಮಾತನಾಡಬೇಕು ಎಂಬ ಬಗ್ಗೆ ಪುನಶ್ಚೇತನ ಶಿಬಿರದ ಅಗತ್ಯವಿದೆ ಎಂದು ಹೇಳಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯನವರ ಸರ್ಕಾರದಲ್ಲಿ ಎಂತೆಂಥ ಸಚಿವರಿದ್ದಾರೆ. ಯಾವುದರ ಬಗ್ಗೆಯೂ ಅರಿವಿಲ್ಲದೆ ಈ ರೀತಿಯ ಹೇಳಿಕೆ ಕೊಡುತ್ತಿದ್ದಾರೆ. ಇದೊಂದು ರೀತಿ ಕರ್ನಾಟಕಕ್ಕೆ ಮಾಡಿದ ಅವಮಾನ. ಸಾರ್ವಜನಿಕವಾಗಿ ಏನು ಮಾತನಾಡಬೇಕು ಎಂಬ ಅರಿವೇ ಅವರಿಗಿಲ್ಲ.
ಗೃಹಜ್ಯೋತಿ ನೋಂದಣಿಗೆ ಇಂದಿನಿಂದ 2000 ಸೇವಾ ಕೇಂದ್ರ: 4 ದಿನದಲ್ಲಿ 12.51 ಲಕ್ಷ ನೋಂದಣಿ
ಈ ರೀತಿಯ ಅಸಂಬದ್ಧ ಹೇಳಿಕೆ ನೀಡಿದರೆ ಕರ್ನಾಟಕದ ಮರ್ಯಾದೆ ಹೋಗುತ್ತದೆ. ಇವರಿಗೆಲ್ಲ ಪುನಶ್ಚೇತನ ಶಿಬಿರದ ಅಗತ್ಯವಿದೆ ಎಂದರು. ಸತೀಶ್ ಜಾರಕಿಹೊಳಿ ನಮ್ಮ ರಾಜ್ಯ ಸರ್ಕಾರದ ಪ್ರತಿನಿಧಿ. ಹ್ಯಾಕ್ಗೆ ಸಂಬಂಧಿಸಿ ಈ ರೀತಿಯ ಹೇಳಿಕೆ ನೀಡಿ ಮುಜುಗರಕ್ಕೆ ಒಳಗಾಗುವುದು ಬೇಡ ಎಂದು ಕಿವಿಮಾತು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 40 ವರ್ಷಗಳ ರಾಜಕೀಯ ಅನುಭವ ಇದೆ. ಆದಷ್ಟುಬೇಗ ಮೊದಲ ಬಾರಿಗೆ ಗೆದ್ದ ಶಾಸಕರಿಗೆ, ಹಿರಿಯ ಶಾಸಕರಿಗೆ, ಗೊತ್ತಿಲ್ಲದವರಿಗೆ ಪುನಶ್ಚೇತನ ಕಾರ್ಯಕ್ರಮ ಆಯೋಜಿಸಬೇಕಾದ ಅಗತ್ಯವಿದೆ. ಸಾರ್ವಜನಿಕ ಜೀವನದಲ್ಲಿ ಹೇಗೆ ಮಾತನಾಡಬೇಕು, ಹೇಗೆ ಕೆಲಸ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಲು ಹೇಳಿ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.