ಕರ್ನಾಟಕದಿಂದ ಗೆದ್ದ ಮೊದಲ ಮಹಿಳಾ ಎಂಪಿ ಸರೋಜಿನಿ ಮಹಿಷಿ..!

Published : Mar 26, 2024, 11:30 AM ISTUpdated : Mar 26, 2024, 11:31 AM IST
ಕರ್ನಾಟಕದಿಂದ ಗೆದ್ದ ಮೊದಲ ಮಹಿಳಾ ಎಂಪಿ ಸರೋಜಿನಿ ಮಹಿಷಿ..!

ಸಾರಾಂಶ

ಸ್ವಾತಂತ್ರ್ಯಾನಂತರ 1952 ಹಾಗೂ 1957ರಲ್ಲಿ ನಡೆದ ಚುನಾವಣೆಯಲ್ಲಿ ಕರ್ನಾಟಕದಿಂದ ಯಾರೊಬ್ಬರೂ ಮಹಿಳಾ ಸದಸ್ಯರು ಆಯ್ಕೆಯಾಗಿರಲಿಲ್ಲ. ಆದರೆ, 1962ರಲ್ಲಿ ಮೂರನೆಯ ಲೋಕಸಭೆ ಚುನಾವಣೆಗೆ ಬರೋಬ್ಬರಿ 37 ಮಹಿಳೆಯರು ವಿವಿಧ ರಾಜ್ಯಗಳಿಂದ ಆಯ್ಕೆಯಾಗಿದ್ದರು. ಅದರಲ್ಲಿ ಕರ್ನಾಟಕದಿಂದ ಸರೋಜಿನಿ ಮಹಿಷಿ ಮಾತ್ರ ಚುನಾಯಿತರಾಗಿದ್ದರು. ಅವರು ಧಾರವಾಡ ಉತ್ತರ ಕ್ಷೇತ್ರದಿಂದ ಚುನಾಯಿತರಾಗಿದ್ದರು. ಹೀಗಾಗಿ ಲೋಕಸಭೆಗೆ ಕರ್ನಾಟಕದಿಂದ ಆಯ್ಕೆಯಾದ ಮೊದಲ ಮಹಿಳೆಯೆಂಬ ಕೀರ್ತಿ ಸರೋಜಿನಿ ಮಹಿಷಿ ಅವರಿಗೆ ಸಲ್ಲುತ್ತದೆ.  

ಶಿವಾನಂದ ಗೊಂಬಿ

ಹುಬ್ಬಳ್ಳಿ(ಮಾ.26):  ಡಾ.ಸರೋಜಿನಿ ಮಹಿಷಿ ಎಂದರೆ ಸಾಕು ಕರ್ನಾಟಕದಲ್ಲಿನ ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕೆಂದು ವರದಿ ಕೊಟ್ಟವರು ಎಂಬುದು ಥಟ್ಟನೆ ನೆನಪಾಗುತ್ತದೆ. ಈಗಲೂ ಸರೋಜಿನಿ ಮಹಿಷಿ ವರದಿ ಕಟ್ಟುನಿಟ್ಟಾಗಿ ಜಾರಿಯಾಗಲಿ ಎಂಬ ಬೇಡಿಕೆ ಮುಂದಿಟ್ಟುಕೊಂಡು ಹೋರಾಟ ಮಾಡುವುದನ್ನು ಕಾಣುತ್ತೇವೆ. ಆದರೆ ಕರ್ನಾಟಕದ ಪ್ರಥಮ ಮಹಿಳಾ ಸಂಸದರು ಎಂಬುದು ಸರೋಜಿನಿ ಮಹಿಷಿಯವರ ಮತ್ತೊಂದು ವಿಶೇಷತೆ!

1962ರಲ್ಲಿ ನಡೆದ ಮೂರನೆಯ ಲೋಕಸಭೆ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರದಿಂದ ಚುನಾಯಿತರಾದವರು ಡಾ.ಸರೋಜಿನಿ ಮಹಿಷಿ. ಸ್ವಾತಂತ್ರ್ಯಾನಂತರ 1952 ಹಾಗೂ 1957ರಲ್ಲಿ ನಡೆದ ಚುನಾವಣೆಯಲ್ಲಿ ಕರ್ನಾಟಕದಿಂದ ಯಾರೊಬ್ಬರೂ ಮಹಿಳಾ ಸದಸ್ಯರು ಆಯ್ಕೆಯಾಗಿರಲಿಲ್ಲ. ಆದರೆ, 1962ರಲ್ಲಿ ಮೂರನೆಯ ಲೋಕಸಭೆ ಚುನಾವಣೆಗೆ ಬರೋಬ್ಬರಿ 37 ಮಹಿಳೆಯರು ವಿವಿಧ ರಾಜ್ಯಗಳಿಂದ ಆಯ್ಕೆಯಾಗಿದ್ದರು. ಅದರಲ್ಲಿ ಕರ್ನಾಟಕದಿಂದ ಸರೋಜಿನಿ ಮಹಿಷಿ ಮಾತ್ರ ಚುನಾಯಿತರಾಗಿದ್ದರು. ಅವರು ಧಾರವಾಡ ಉತ್ತರ ಕ್ಷೇತ್ರದಿಂದ ಚುನಾಯಿತರಾಗಿದ್ದರು. ಹೀಗಾಗಿ ಲೋಕಸಭೆಗೆ ಕರ್ನಾಟಕದಿಂದ ಆಯ್ಕೆಯಾದ ಮೊದಲ ಮಹಿಳೆಯೆಂಬ ಕೀರ್ತಿ ಸರೋಜಿನಿ ಮಹಿಷಿ ಅವರಿಗೆ ಸಲ್ಲುತ್ತದೆ.

ಬಿಜೆಪಿಗೆ ಯಾರೇ ಸೇರ್ಪಡೆಗೊಂಡರೂ 'ವಾಷಿಂಗ್ ಪೌಡರ್ ನಿರ್ಮಾ' ಆಗ್ಬಿಡ್ತಾರೆ: ಸಚಿವ ಸಂತೋಷ್ ಲಾಡ್ ವ್ಯಂಗ್ಯ

ಹೇಗೆ ಸಿಕ್ತು ಟಿಕೆಟ್‌?:

ರಾಜ್ಯದಲ್ಲಿ ಆಗ ಬರೋಬ್ಬರಿ 32 ಕ್ಷೇತ್ರಗಳಲ್ಲಿದ್ದವು. ಅದರಲ್ಲಿ ಧಾರವಾಡ ಉತ್ತರ ಹಾಗೂ ಧಾರವಾಡ ದಕ್ಷಿಣ ಎಂಬ ಕ್ಷೇತ್ರಗಳಿದ್ದವು. ಧಾರವಾಡ ಉತ್ತರ ಕ್ಷೇತ್ರದಿಂದ 1952 ಹಾಗೂ 1957ರಲ್ಲಿ ಈ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಡಿ.ಪಿ. ಕರಮರಕರ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಬಳಿಕ 1962ರ ಹೊತ್ತಿಗೆ ಕಾಂಗ್ರೆಸ್‌ನಲ್ಲೇ ಭಿನ್ನಮತ, ಗುಂಪುಗಾರಿಕೆ ಕಾಣಿಸಿಕೊಂಡಿತ್ತು. ಹೀಗಾಗಿ ಡಿ.ಪಿ. ಕರಮರಕರ್‌ ಅವರಿಗೆ ಟಿಕೆಟ್‌ ಬೇಡ ಎಂದು ಒಂದು ಗುಂಪು ಆಗ್ರಹಿಸಿತ್ತು. ಆಗ ಕಾಂಗ್ರೆಸ್‌ ಜಿಲ್ಲಾಧ್ಯಕ್ಷರಾಗಿದ್ದ ಗುದ್ಲೆಪ್ಪ ಹಳ್ಳಿಕೇರಿ ವಕೀಲೆ, ಸಾಮಾಜಿಕ ಕಾರ್ಯಕರ್ತೆಯಾಗಿದ್ದ ಸರೋಜಿನಿ ಮಹಿಷಿ ಪರ ಬ್ಯಾಟಿಂಗ್‌ ಮಾಡಿದ್ದರು. ಜಿಲ್ಲಾ ಮುಖಂಡರ ಒತ್ತಾಯಕ್ಕೆ ಮಣಿದು ಹೈಕಮಾಂಡ್‌ ಕರಮರಕರ್‌ ಅವರಿಗೆ ಬಿಟ್ಟು ಸರೋಜಿನಿ ಮಹಿಷಿ ಅವರಿಗೆ ಟಿಕೆಟ್‌ ನೀಡಿತ್ತು. ಈ ಕಾರಣದಿಂದ 1962ರಲ್ಲಿ ಕಣಕ್ಕಿಳಿದ ಸರೋಜಿನಿ ಮಹಿಷಿ ಬರೋಬ್ಬರಿ 1,87,654 ಮತಗಳನ್ನು ಪಡೆದಿದ್ದರು. 1,53,550 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಲೋಕಸಭಾ ಚುನಾವಣೆ ಬಳಿಕ ಸಿದ್ದರಾಮಯ್ಯ ಇಳಿಯೋದು ಗ್ಯಾರಂಟಿ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೊಟ್ಟ ಕಾರಣವೇನು? 

ಮುಂದೆ 1967, 1971, 1977ರ ಚುನಾವಣೆಗಳಲ್ಲಿ ನಿರಂತರವಾಗಿ ಕಾಂಗ್ರೆಸ್‌ನಿಂದ ನಾಲ್ಕು ಬಾರಿ ಗೆಲುವು ಸಾಧಿಸಿದ್ದರು. ಒಂದು ಬಾರಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರ ಸಂಪುಟದಲ್ಲಿ ಸಚಿವರಾಗಿಯೂ ಕೆಲಸ ಮಾಡಿದ್ದರು. ಇಂದಿರಾ ಗಾಂಧಿ ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಆದರೆ ಜನತಾ ಪಕ್ಷದ ಮುಖಂಡ ಚಂದ್ರಶೇಖರ ಅವರ ಔತಣಕೂಟದಲ್ಲಿ ಮಹಿಷಿ ಪಾಲ್ಗೊಂಡ ಕಾರಣಕ್ಕೆ ಕಾಂಗ್ರೆಸ್‌ ಮುಖಂಡರು ಸಿಟ್ಟಾಗಿದ್ದರು. ಅದು ಇಂದಿರಾಗಾಂಧಿ ಹಾಗೂ ಸರೋಜಿನಿ ಮಹಿಷಿ ಬಾಂಧವ್ಯಕ್ಕೂ ಧಕ್ಕೆ ಮಾಡಿತ್ತು.

ಹೀಗಾಗಿ 1982ರಲ್ಲಿ ನಡೆದ ಚುನಾವಣೆಯಲ್ಲಿ ಸರೋಜಿನಿ ಮಹಿಷಿ ಅವರಿಗೆ ಟಿಕೆಟ್‌ ನಿರಾಕರಿಸಿ ಡಿ.ಕೆ. ನಾಯ್ಕರ ಅವರಿಗೆ ಪಕ್ಷ ಟಿಕೆಟ್‌ ನೀಡಿತ್ತು. ಆಗ ಸರೋಜಿನಿ ಮಹಿಷಿ ಡಿ.ಕೆ. ನಾಯ್ಕರ ವಿರುದ್ಧ ಜನತಾ ಪಕ್ಷದಿಂದ ಸ್ಪರ್ಧಿಸಿ ಸೋಲನುಭವಿಸಿದರು. ಇದಾದ ಬಳಿಕ ಧಾರವಾಡ ಲೋಕಸಭಾ ಕ್ಷೇತ್ರದಿಂದ ಮತ್ತೆ ಯಾರೂ ಮಹಿಳಾ ಅಭ್ಯರ್ಥಿಯಾಗಿ ಕಣಕ್ಕೂ ಇಳಿಯಲಿಲ್ಲ. ನಿಂತರೂ ಯಾವುದೇ ದೊಡ್ಡ ಪಕ್ಷದ ಬ್ಯಾನರನಡಿ ನಿಲ್ಲಲಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!