
ಬೆಂಗಳೂರು (ಸೆ.06): 'ಗೇಮ್ ಚೇಂಜರ್ಸ್' ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೇವಲ 'ನೇಮ್ ಚೇಂಜರ್ಸ್' ಆಗಿದೆ. ಎಂದು ರಿಪಬ್ಲಿಕ್ ಆಫ್ ಭಾರತ್ ಮರು ನಾಮಕರಣಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 2014ರ ಮೊದಲು ಅಮೇರಿಕಾ, ಬ್ರಿಟನ್, ರಷ್ಯಾಗಳಂತಹ ಮುಂದುವರೆದ ದೇಶಗಳೊಂದಿಗೆ ಭಾರತದ ಸ್ಪರ್ಧೆ ಇತ್ತು. ಈಗ ಗುಜರಾತ್ ಮಾಡೆಲ್, ಯುಪಿ ಮಾಡೆಲ್ ಹೆಸರಲ್ಲಿ ಜಾತಿ ಜನಾಂಗಗಳ ನಡುವೆ ದ್ವೇಷ ಬಿತ್ತಿ 'ಮಣಿಪುರ್ ಮಾಡೆಲ್' ಸೃಷ್ಟಿಸಿದ್ದಾರೆ.
ಯಕಶ್ಚಿತ್ ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾಗಳೊಂದಿಗೆ ಭಾರತವನ್ನು ತುಲನೆ ಮಾಡಿಕೊಂಡು ಬೆನ್ನುತಟ್ಟಿಕೊಳ್ಳುವ ಪರಿಸ್ಥಿತಿಗೆ ತಂದಿಟ್ಟಿರುವ ಬಿಜೆಪಿಯಿಂದ ಹೆಸರುಗಳ ಬದಲಾವಣೆಗಳನ್ನಲ್ಲದೆ ಬೇರೆ ಇನ್ನೇನು ನಿರೀಕ್ಷಿಸಲು ಸಾಧ್ಯ? ಸಮರ್ಥ ಆಡಳಿತಗಾರರು ಭಾರತದಲ್ಲಿ ಬದಲಾವಣೆ ತರುತ್ತಾರೆಯೇ ಹೊರತು ಭಾರತದ ಹೆಸರಿನ ಬದಲಾವಣೆಯನ್ನಲ್ಲ ಎಂದು ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.
ಹಿಂದೂ ಧರ್ಮ ಯಾವಾಗ ಹುಟ್ಟಿತು, ಹುಟ್ಟಿಸಿದ್ದು ಯಾರು?: ಗೃಹಸಚಿವ ಪರಮೇಶ್ವರ್
ಸಮಾನತೆ ಇಲ್ಲದ ಧರ್ಮ ಧರ್ಮವೇ ಅಲ್ಲ: ಯಾವ ಧರ್ಮದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಇಲ್ಲವೋ, ಯಾವ ಧರ್ಮದಲ್ಲಿ ಮನುಷ್ಯರ ನಡುವೆ ಭೇದ-ಭಾವ ಇರುತ್ತದೆಯೋ ಅದು ಧರ್ಮವೇ ಅಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಯಾವ ಸಂದರ್ಭದಲ್ಲಿ ಉದಯನಿಧಿ ಸ್ಟಾಲಿನ್ ಈ ಹೇಳಿಕೆ ಕೊಟ್ಟಿದ್ದಾರೋ ಗೊತ್ತಿಲ್ಲ. ಸಂವಿಧಾನವೇ ನಮ್ಮ ಧರ್ಮ, ನಾವೆಲ್ಲರೂ ಸಂವಿಧಾನದ ಅಡಿಯಲ್ಲಿ ಇದ್ದೇವೆ. ಬುದ್ಧ, ಬಸವ ಹಾಕಿಕೊಟ್ಟಿರುವ ಮಾರ್ಗವನ್ನು ಅನುಸರಿಸುತ್ತೇವೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.
ಸನಾತನ ಹಿಂದೂ ಧರ್ಮದ ಅವಹೇಳನಕ್ಕೆ ಖಂಡನೆ: ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್, ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಳಗಿರಿ ಮುಂತಾದವರು ಸನಾತನ ಹಿಂದೂ ಧರ್ಮವನ್ನು ಈ ದೇಶದಿಂದ ಸಂಪೂರ್ಣ ತೊಲಗಿಸಲು ಕರೆ ನೀಡಿದ್ದಾರೆ. ಕಾಂಗ್ರೆಸ್ಸಿನ ರಾಷ್ಟ್ರೀಯ ನಾಯಕ ವೇಣುಗೋಪಾಲ, ಸಚಿವರಾದ ಮಹಾದೇವಪ್ಪ ಮತ್ತು ಪ್ರಿಯಾಂಕ ಖರ್ಗೆ ಈ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ಮೂಲಕ ಕಾಂಗ್ರೆಸ್ ಹಿಂದೂ ವಿರೋಧಿ ಎಂಬುದನ್ನು ಸಾಬೀತುಪಡಿಸಿದೆ ಎಂದು ಯಲ್ಲಾಪುರದ ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ್ ಎಂದು ಕಿಡಿಕಾರಿದ್ದಾರೆ.
ಸಾಹಿತಿಗಳನ್ನು ಬೆದರಿಸಿದವರ ಮೇಲೆ ಕಠಿಣ ಕ್ರಮ ಖಚಿತ: ಸಿದ್ದರಾಮಯ್ಯ
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ತಮ್ಮ ಕೈಗೆ ಅಧಿಕಾರ ಸಿಕ್ಕರೆ, ದೇಶದ ನೂರು ಕೋಟಿ ಹಿಂದೂಗಳ ಪರಿಸ್ಥಿತಿ ಏನಾಗಬಹುದೆಂದು ಲೋಕಸಭೆ ಚುನಾವಣೆಗೂ ಮೊದಲೇ ಮನವರಿಕೆ ಮಾಡಿಕೊಟ್ಟಂತಾಗಿದೆ. ಅಧಿಕಾರದ ಸಮೀಪವೂ ಬಂದಿರದ ಈ ದುಷ್ಟ ಕೂಟದ ವ್ಯಕ್ತಿಗಳು ಹಿಂದೂ ಧರ್ಮದ ಕುರಿತಾಗಿ ಅತ್ಯಂತ ನಿಕೃಷ್ಠವಾಗಿ ಮಾತನಾಡುತ್ತಿರುವುದು ಖಂಡನೀಯ ಎಂದಿರುವ ಇವರು, ಚುನಾವಣೆಗೂ ಮೊದಲೇ ರಾಜಕೀಯ ಪಕ್ಷಗಳಲ್ಲಿ ಹರಿದು ಹಂಚಿ ಹೋಗಿರುವ ಈ ದೇಶದ ಹಿಂದೂಗಳು ಈಗ ತಮ್ಮ ತಮ್ಮ ಪಕ್ಷ ರಾಜಕೀಯದ ಗಡಿ ಮೀರಿ ಗಂಭೀರವಾಗಿ ಯೋಚಿಸುವ ಸಂದರ್ಭ ಬಂದಿದೆ. ನಮಗೆ ನಮ್ಮತನ ಮುಖ್ಯವೋ ಅಥವಾ ಸ್ವಾರ್ಥ ರಾಜಕಾರಣ ಮುಖ್ಯವೋ ಎಂಬುದನ್ನು ಚಿಂತಿಸಬೇಕಾಗಿದೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.