
ಚಿಕ್ಕಬಳ್ಳಾಪುರ (ಜು.07): ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ(ಕೋಚಿಮುಲ್)ದಲ್ಲಿ ರೈತರಿಗೆ ನೀಡುತ್ತಿದ್ದ ಹಣದಲ್ಲಿ 2 ರು.ಗಳನ್ನು ಕಡಿತ ಮಾಡಿರುವುದನ್ನು ವಿರೋಧಿಸಿ ಬಿಜೆಪಿ ನೇತೃತ್ವದಲ್ಲಿ ಜು.10 ರಂದು ಜಿಲ್ಲಾಡಳಿತ ಭವನದ ಮುಂದೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ಸಂಸದ ಡಾ.ಕೆ.ಸುಧಾಕರ್ ಹೇಳಿದರು. ನಗರದ ತಮ್ಮ ಗೃಹ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚಿಕ್ಕಬಳ್ಳಾಪುರ ಭಾಗದ ರೈತರು ಮೌನಕ್ಕೆ ಶರಣಾಗಿದ್ದಾರೆ. ಆದರೆ ಎಲ್ಲರೂ ಈ ಅನ್ಯಾಯದ ವಿರುದ್ಧ ಹೋರಾಡಬೇಕಿದೆ ಎಂದರು.
ಆಗ ಟೀಕಿಸಿ ಈಗ ದರ ಹೆಚ್ಚಳ: ಕಾಂಗ್ರೆಸ್ ನಾಯಕರು ಚುನಾವಣೆ ಸಮಯದಲ್ಲಿ ದರ ಏರಿಕೆ ವಿಷಯ ಇಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿದ್ದರು. ನಂದಿನಿ ಉಳಿಸಿ ಎಂದು ಅಭಿಯಾನ ಸಹ ಮಾಡಿದ್ದರು. ಆದರೆ ಅಧಿಕಾರಕ್ಕೆ ಬಂದ ನಂತರ ಎಲ್ಲ ದರಗಳನ್ನು ಏರಿಸಿದ್ದಾರೆ ಎಂದು ಟೀಕಿಸಿದರು.
ಮತ್ತೆ ಸ್ಪೋಟಗೊಂಡ ನಂದಿ ಸಕ್ಕರೆ ಕಾರ್ಖಾನೆ ಬಾಯ್ಲರ್: ಅದೃಷ್ಟವಶಾತ್ ಕಾರ್ಮಿಕರು ಅಪಾಯದಿಂದ ಪಾರು
ಹಾಲು ಮಾರಾಟ ದರ ಹೆಚ್ಚಿಸಲಾಗಿದೆ. ನ್ಯಾಯಯುತವಾಗಿ ರೈತರಿಗೆ ಹೆಚ್ಚು ಹಣ ನೀಡಬೇಕಿತ್ತು. ಏರಿಕೆ ಮಾಡಿದ 2 ರೂ. ಹಾಗೂ ರೈತರಿಂದ ಕಡಿತ ಮಾಡಿದ 2 ರು.ಸೇರಿದರೆ 4 ರು. ಆಗುತ್ತದೆ. ಕೋಚಿಮುಲ್ನಲ್ಲಿ ಸುಮಾರು 12 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದ್ದು, ಈ ಹೆಚ್ಚುವರಿ 4 ರು. ನಿಂದ ದಿನಕ್ಕೆ 48 ಲಕ್ಷ ರು. ಹೆಚ್ಚುವರಿಯಾಗಿ ಬರುತ್ತಿದೆ. ಇದನ್ನು ರೈತರಿಗೆ ನೀಡುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಹಾಲು ಖರೀದಿ ದರ ಇಳಿಕೆಗೆ ಆಕ್ರೋಷ: ಕೆ.ಎಂ.ಎಫ್ ಗ್ರಾಹಕರಿಗೆ ಹಾಲಿನ ದರ ಏರಿಕೆ ಮಾಡಿದರೆ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ(ಕೋಚಿಮುಲ್) ರೈತರಿಗೆ ಲೀಟರ್ ಗೆ 2 ರುಪಾಯಿ ಹಾಲು ಖರೀದಿ ದರ ಕಡಿತ ಮಾಡಿರುವುದಕ್ಕೆ ಬಿಜೆಪಿ ನಗರ ಮಂಡಲಾಧ್ಯಕ್ಷ ಅನು ಆನಂದ್ ಆಕ್ರೋಷ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಾಲಿನ ದರವನ್ನು 2 ರೂಪಾಯಿಗೆ ಇಳಿಕೆ ಮಾಡಿರುವುದು ಮಾತ್ರವಲ್ಲದೇ ಹಾಲು ಒಕ್ಕೂಟ ಮೂಲಭೂತ ಸೌಕರ್ಯ ನಿಧಿ ಹೆಸರಲ್ಲಿ 1 ರುಪಾಯಿ ಹೆಚ್ಚುವರಿ ವಸೂಲಿ ಮಾಡಲು ನಿರ್ಧಾರ ಮಾಡಿದೆ. ಇದರಿಂದ ಒಟ್ಟಾರೆ 3 ರುಪಾಯಿ ರೈತರಿಗೆ ಕಡಿತ ಆಗಲಿದ್ದು, ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಇನ್ಮುಂದೆ ರೈತರಿಗೆ ಪ್ರತಿ ಲೀಟರ್ ಕೇವಲ 31.40 ರುಪಾಯಿ ಸಿಗಲಿದೆ ಎಂದರು.
ರೈತರಿಗೆ ಕೋಚಿಮುಲ್ ಶಾಕ್: ಇತ್ತಿಚೆಗಷ್ಟೇ ರಾಜ್ಯ ಸರ್ಕಾರ ಹಾಲಿನ ದರವನ್ನು ಎರಡು ರುಪಾಯಿ ಹೆಚ್ಚಳ ಮಾಡಿ ಗ್ರಾಹಕರಿಗೆ ಶಾಕ್ ನೀಡಿತ್ತು. ಹಾಲಿನ ದರ ಹೆಚ್ಚಳ ಬಗ್ಗೆ ಆಕ್ರೋಶ ಕೇಳಿ ಬಂದ ವೇಳೆ ಸಮರ್ಥನೆ ನೀಡಿದ್ದ ಸರ್ಕಾರ, ಹೆಚ್ಚುವರಿಯಾಗಿ 50 ಎಂಎಲ್ ಹಾಲು ಕೊಡ್ತಿದ್ದೀವಿ ಅದಕ್ಕೆ 2ರೂ ಜಾಸ್ತಿ ಅಷ್ಟೇ ಅಂತ ಹೇಳಿತ್ತು. ಇದರ ನಡುವೆಯೇ ಕೋಚಿಮುಲ್ ಹಾಲು ಉತ್ಪಾದಿಸುವ ರೈತರಿಗೂ ಬಿಗ್ ಶಾಕ್ ನೀಡಿದೆ ಎಂದರು.
ರಾಜ್ಯದಲ್ಲಿ 7000ದ ಗಡಿ ದಾಟಿದ ಡೆಂಘೀ ಜ್ವರ, ತುರ್ತು ಸ್ಥಿತಿ ಘೋಷಿಸಿ: ಡಾ.ಸಿ.ಎನ್.ಮಂಜುನಾಥ್
ಕೂಡಲೆ ಸರ್ಕಾರ ಎಚ್ಚೆತ್ತು ಕೊಂಡು ಹಾಲು ಉತ್ಪಾದಕರಿಗೆ ಕಡಿತ ಮಾಡಿರುವ 3 ರೂ ಮತ್ತು ಗ್ರಾಹಕರಿಂದ ಪಡೆಯುವ ಹೆಚ್ಚುವರಿ 2 ರೂ ಸೇರಿಸಿ ಲೀಟರ್ ಗೆ ಐದು ರೂಗಳನ್ನು ಹಾಗೂ ಬಿಜೆಪಿ ಸರ್ಕಾರ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ನೀಡುವಂತೆ ಕೋಚಿಮುಲ್ ಗೆ ಆದೇಶಿಸ ಬೇಕೆಂದು ಆಗ್ರಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.