
ಬೆಳಗಾವಿ (ಜ.21): ಈ ಬಾರಿಯ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿಯವರನ್ನು ಎಂಎಲ್ಎ ಮಾಡುತ್ತೇವೆ. ಪಕ್ಷ ಯಾರಿಗೆ ಟಿಕೆಟ್ ನೀಡುತ್ತದೆಯೋ ಅವರ ಪರವಾಗಿ ಪ್ರಚಾರ ಮಾಡುತ್ತೇವೆ. ಬಿಜೆಪಿ ಝಂಡಾ ಹಾರಿಸುತ್ತೇವೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಲಕ್ಷ್ಮಿ ಹೆಬ್ಬಾಳಕರ್ ಸ್ವಕ್ಷೇತ್ರ ಬೆಳಗಾವಿ ಗ್ರಾಮೀಣ ಕ್ಷೇತ್ರದ ಸೂಳೇಬಾವಿಯಲ್ಲಿ ಶುಕ್ರವಾರ ರಮೇಶ ಜಾರಕಿಹೊಳಿ ಅವರು ಅಭಿಮಾನಿಗಳ ಬೃಹತ್ ಸಮಾವೇಶ ನಡೆಸಿ, ಶಾಸಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕಳೆದ ಬಾರಿ ನಾವೇ ಇಲ್ಲಿ ಕಾಂಗ್ರೆಸ್ನ್ನು ಗೆಲ್ಲಿಸಿದ್ದೇವೆ. ಒಳ್ಳೆಯ ಮನೆತನದವರು ಎಂದು ಅವರನ್ನು ಗೆಲ್ಲಿಸಿದೆವು.
ಆದರೆ, ಈಗ ನಮಗೇ ಅವರು ಗುರ್ ಎನ್ನುತ್ತಿದ್ದಾರೆ. ಹೆಬ್ಬಾಳಕರ ಶಾಸಕರಾದ ಮೇಲೆ ಕ್ಷೇತ್ರದಲ್ಲಿ ಬಾರ್, ಕ್ಲಬ್ಗಳು ಹೆಚ್ಚಾಗಿವೆ. ಹಾಗಾಗಿ, ಈ ಶಾಸಕರನ್ನು ನಾವು ತೆಗೆಯಲೇಬೇಕು. ಇದೇ ಸ್ಥಳದಲ್ಲಿ ಶಾಸಕರು ಹಿಂದೆ ಸಮಾವೇಶ ನಡೆಸಿ, ಗಿಫ್ಟ್ಕೊಟ್ಟಿದ್ದರೂ ಕೇವಲ 2-3 ಸಾವಿರ ಜನರಷ್ಟೇ ಸೇರಿದ್ದರು. ಆದರಿಂದು ನಾನೇನು ನೀಡದಿದ್ದರೂ ಸಹಸ್ರಾರು ಸಂಖ್ಯೆಯಲ್ಲಿ ಜನ ಬಂದಿದ್ದಾರೆ ಎಂದರು. ನಾನು 6 ಚುನಾವಣೆಯಲ್ಲಿ ಗೆದ್ದಿದ್ದೇನೆ. ನಾನು ಯಾರಿಗೂ ಗಿಫ್ಟ್ಕೊಟ್ಟಿಲ್ಲ. ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗೋಕಾಕ ಜನರೇ ಮತ ಹಾಕುತ್ತ ಬಂದಿದ್ದಾರೆ. ಆದರೆ, ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ದುರ್ದೈವ ಬಂದಿದೆ.
ಮಂತ್ರಿಗಿರಿ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ, ನಾನು ಬಿಜೆಪಿ ಬಿಡಲ್ಲ: ರಮೇಶ್ ಜಾರಕಿಹೊಳಿ
ಗ್ರಾಮೀಣ ಕ್ಷೇತ್ರಕ್ಕೆ ಈಗ ನಾವೇ ತಲೆ ಬಡಿದುಕೊಳ್ಳುವಸ್ಥಿತಿ ಬಂದಿದೆ. ಸಮಾಜಕ್ಕೆ ಬಹಳ ಕೆಟ್ಟಹುಳಾ ಅದು. ಈ ಕ್ಷೇತ್ರದಿಂದ ಎಸ್.ಸಿ.ಮಾಳಗಿ 3 ಬಾರಿ, ಮನೋಹರ ಕಿಣೇಕರ 1 ಬಾರಿ, ಸಂಜಯ ಪಾಟೀಲ 2 ಬಾರಿ ಹಾಗೂ ಅಭಯಪಾಟೀಲ ಹೀಗೆ ಬಹಳಷ್ಟುಶಾಸಕರು ಆಯ್ಕೆಯಾಗಿದ್ದರು. ಆದರೆ, ಸಂಜಯ ಪಾಟೀಲ ರಾರಯಷ್ ಇದ್ದರೂ ಕೆಟ್ಟಕೆಲಸ ಮಾಡಿಲ್ಲ. ಆದರೆ, ಹೆಬ್ಬಾಳಕರ ಶಾಸಕರಾದ ಮೇಲೆ ಕ್ಷೇತ್ರದಲ್ಲಿ ಬಾರ್, ಕ್ಲಬ್ಗಳು ಆಗಿವೆ. ಹಾಗಾಗಿ, ಈ ಶಾಸಕರನ್ನು ನಾವು ತೆಗೆಯಲೇಬೇಕು ಎಂದು ಕರೆ ನೀಡಿದರು. ಶಾಸಕರ ಸ್ಟೈಲ್ ಹೇಗಾಗಿದೆ ಎನ್ನುವ ಕುರಿತು ಐದು ವರ್ಷಗಳ ಹಿಂದಿನ, ಈಗಿನ ವಿಡಿಯೋ ನೋಡಿ, ಮೊದಲಿನ ಗಾಡಿ ನೋಡಿ, ಈಗಿನ ಗಾಡಿ ನೋಡಿ, ಅದು ಎಲ್ಲಿಂದ ಬಂತು? ಅದು ನಿಮ್ಮದೇ ದುಡ್ಡು.
ಜಲಮಿಷನ್ ಯೋಜನೆ ಗುತ್ತಿಗೆದಾರರು ಎಷ್ಟಿದ್ದೀರಿ ಎಂದು ಪ್ರಶ್ನಿಸಿದ ರಮೇಶ ಜಾರಕಿಹೊಳಿ, ಎಲ್ಲ ಶಾಸಕರು ಭ್ರಷ್ಟಇರುವುದಿಲ್ಲ. ಚುನಾವಣೆಯಲ್ಲಿ ಅವರಿಕ್ಕಿಂತ 10 ಪಟ್ಟು ಖರ್ಚು ಮಾಡುತ್ತೇನೆ ಎಂದರು. ಸ್ಥಳೀಯಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆ ವೇಳೆ ಖರ್ಚು ಮಾಡಿದ್ದು ಕೂಡ ಅವರ ದುಡ್ಡಲ್ಲ.ಸಾಲ ಮಾಡಿಸಿ ಗೆದ್ದಿದ್ದಾರೆ ಎನ್ನುವ ವೇಳೆ ಸಮಾವೇಶದಲ್ಲಿ ಭಾಗವಹಿಸಿದ್ದ ವೀಕ್ಷಕರೊಬ್ಬರು ಡಿಕೆಶಿ ಫಂಡ್ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ನೋಡಿ ಅವನು ದುಡ್ಡುಕೊಡುವುದಿಲ್ಲ. ಕಸಿದುಕೊಳ್ಳುತ್ತಾನೆ. ನನ್ನ ಮಂತ್ರಿ ಸ್ಥಾನ ಮುಂದುವರೆದಿದ್ದರೂ ಶಾಸಕರ ನಿಜ ಮುಖ ಗೊತ್ತಾಗುತ್ತಿರಲಿಲ್ಲ.
ನಿಮ್ಮ ಮಗಳು, ನಿಮ್ಮ ಮೊಮ್ಮಗಳು ಎಂದೂ ಇಲ್ಲಿಯೇ ಓಡಾಡುತ್ತಿದ್ದಳು. ನನ್ನ ಮಂತ್ರಿ ಸ್ಥಾನ ಹೋಗಿದ್ದರಿಂದಲೇ ಅವರ ನಿಜಮುಖ ಗೊತ್ತಾಯಿತು. ಅವರ ಸೊಕ್ಕು ಹೆಚ್ಚಾಯಿತು ಎಂದು ಲಕ್ಷ್ಮೇ ಹೆಬ್ಬಾಳಕರ ವಿರುದ್ಧ ನೇರವಾಗಿಯೇ ವಾಗ್ದಾಳಿ ನಡೆಸಿದರು. ಮಂತ್ರಿ ಸ್ಥಾನ ಹೋಗಿ ನಾನು ಮನೆಯಲ್ಲಿಯೇ ಇರುತ್ತೇನೆಂದು ಅವರು ತಿಳಿದುಕೊಂಡಿದ್ದರು. ಆದರೆ ನಾನು ಮನೆ ಹಿಡಿಯುವ ಮನುಷ್ಯನಲ್ಲ. ನಮ್ಮ ಕುಟುಂಬವೂ ಅಲ್ಲ. ಕಡೆಯವರೆಗೂ ನಾವು ಹೋರಾಟ ಮಾಡುತ್ತೇವೆ. 30 ವರ್ಷಗಳಿಂದ ನಮ್ಮ ಕುಟುಂಬದ ಮೇಲೆ ಷಡ್ಯಂತ್ರ ನಡೆಯುತ್ತಲೇಇವೆ. ಬೇಕಾದಷ್ಟುಷಡ್ಯಂತ್ರವಾಗಿದ್ದರೂ ನಾವು ಮರಳಿ ಬಂದಿದ್ದೇವೆ. ಜನರ ಪ್ರೀತಿ, ವಿಶ್ವಾಸ ನಮ್ಮ ಕುಟುಂಬದ ಮೇಲಿದೆ.
ಶಾಸಕಿಯಾದ ತಾಸಲ್ಲಿ ಹೆಬ್ಬಾಳ್ಕರ್ ತಲೆ ಏರಿ ಕೂತರು: ರಮೇಶ್ ಜಾರಕಿಹೊಳಿ
ಈ ಬಾರಿ ಚುನಾವಣೆಯಲ್ಲಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಎಂಎಲ್ಎ ಮಾಡುತ್ತೇವೆ. ಪಕ್ಷ ಟಿಕೆಟ್ ಯಾರಿಗೆ ನೀಡುತ್ತದೆಯೋ ಅವರ ಪರವಾಗಿ ಪ್ರಚಾರ ಮಾಡುತ್ತೇವೆ. ಬಿಜೆಪಿ ಝೇಂಡಾ ಹಾರಿಸುತ್ತೇವೆ.ಕಳೆದ ಬಾರಿ ನಾವೇ ಕಾಂಗ್ರೆಸ್ ಗೆಲ್ಲಿಸಿದ್ದೇವೆ. ನಾವು ಒಳ್ಳೆಯ ಮನೆತನ ಎಂದು ಮಾಡಿದ್ದೇವು. ಆದರೆ, ಈಗ ನಮಗೆ ಗುರ್.. ಎನ್ನುತ್ತಿದೆ ಎಂದು ಟೀಕಿಸಿದರು. ಸ್ಥಳೀಯಸಂಸ್ಥೆಗಳಿಂದ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸೋಲಿಗೆ ಆಗ ಉದ್ದ ಅಂಗಿಹಾಕಿಕೊಂಡು ಬಂದವರಿಂದಲೇ ಪಕ್ಷಕ್ಕೆ ದೋಖಾ ಆಗಿದೆ. ನನಗೆ ಮಂತ್ರಿ ಸ್ಥಾನ ಕೊಡಲಿ, ಬಿಡಲಿ, ನಾನು ಅದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಜಿಲ್ಲೆಯ 18 ಕ್ಷೇತ್ರಗಳ ಪೈಕಿ 13 ಸ್ಥಾನಗಳಲ್ಲಿ ಬಿಜೆಪಿವಿದೆ. ಈ ಬಾರಿ ಚುನಾವಣೆಯಲ್ಲಿ 14 ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸುತ್ತೇವೆ. ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸೋಣ ಎಂದು ಮತದಾರರಲ್ಲಿ ಮನವಿ ಮಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.