Assembly election: ರಾಯಚೂರು, ಮಸ್ಕಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್‌ಗೆ ಭಾರೀ ಕಸರತ್ತು!

By Ravi JanekalFirst Published Dec 26, 2022, 11:42 AM IST
Highlights

ಜಿಲ್ಲೆಯಲ್ಲಿ 7 ವಿಧಾನಸಭಾ ಕ್ಷೇತ್ರಗಳು ಇವೆ. 7 ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ‌ಮತ್ತು ಬಿಜೆಪಿ ಜತೆಗೆ ಈ ಬಾರಿ ಜೆಡಿಎಸ್ ಸ್ಪರ್ಧೆಗೆ ಮುಂದಾಗಿದ್ದು, 2023ರ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಐದು ವಿಧಾನಸಭಾ ಕ್ಷೇತ್ರಗಳಿಗೆ ತಮ್ಮ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಆದರೆ ರಾಯಚೂರು, ಮಸ್ಕ್ರಿ ಕ್ಷೇತ್ರಕ್ಕೆ ಕ್ಷೇ ಮಾತ್ರ ಯಾರಿಗೆ ಟಿಕೆಟ್ ನೀಡುತ್ತಾರೆ ಎಂಬ ಕುತೂಹಲ ಮೂಡಿಸಿದೆ.

ವರದಿ : ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್

ರಾಯಚೂರು (ಡಿ.26) : ಜಿಲ್ಲೆಯಲ್ಲಿ 7 ವಿಧಾನಸಭಾ ಕ್ಷೇತ್ರಗಳು ಇವೆ. 7 ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ‌ಮತ್ತು ಬಿಜೆಪಿ ಜತೆಗೆ ಈ ಬಾರಿ ಜೆಡಿಎಸ್ ಸ್ಪರ್ಧೆಗೆ ಮುಂದಾಗಿದ್ದು, 2023ರ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಐದು ವಿಧಾನಸಭಾ ಕ್ಷೇತ್ರಗಳಿಗೆ ತಮ್ಮ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಮಾನ್ವಿ ವಿಧಾನಸಭಾ ಕ್ಷೇತ್ರಕ್ಕೆ ಹಾಲಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಸಿಂಧನೂರು ವಿಧಾನಸಭಾ ಕ್ಷೇತ್ರಕ್ಕೆ ಹಾಲಿ ಶಾಸಕ ಮತ್ತು ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಲಿಂಗಸೂಗೂರು ಕ್ಷೇತ್ರಕ್ಕೆ ಸಿದ್ದು ಬಂಡಿ, ದೇವದುರ್ಗ ಕ್ಷೇತ್ರಕ್ಕೆ ಕರೆಮ್ಮ ಗೋಪಾಲ ನಾಯಕ, ರಾಯಚೂರು ಗ್ರಾಮೀಣ ಕ್ಷೇತ್ರಕ್ಕೆ ಮೊನ್ನೆ ತಾನೇ ಜೆಡಿಎಸ್ ಸೇರ್ಪಡೆಗೊಂಡ ಸಣ್ಣ ನರಸಿಂಹ ನಾಯಕ ಅವರಿಗೆ ಟಿಕೆಟ್ ಘೋಷಣೆ ಮಾಡಿ ಜೆಡಿಎಸ್ ಹೈಕಮಾಂಡ್ ಆದೇಶ ಮಾಡಿದೆ. ಆದ್ರೆ ಇನ್ನುಳಿದ ಎರಡು ಕ್ಷೇತ್ರಗಳು ಮಾತ್ರ ಯಾರಿಗೆ ಟಿಕೆಟ್ ನೀಡುತ್ತಾರೆ ಎಂಬ ಕುತೂಹಲವಿದೆ. ಹೀಗಾಗಿ ಆ ಎರಡು ಟಿಕೆಟ್ ಗಾಗಿ ಜೆಡಿಎಸ್ ಮುಖಂಡರು ಹೈಕಮಾಂಡ್ ಮನವೊಲಿಸಲು ಮುಂದಾಗಿದ್ದಾರೆ. ಆದ್ರೂ ಆಕಾಂಕ್ಷಿಗಳು ನಮಗೆ ಜೆಡಿಎಸ್ ಟಿಕೆಟ್ ಸಿಗುತ್ತೆ ಅಂತ ಕ್ಷೇತ್ರದಲ್ಲಿ ಓಡಾಟ ಶುರು ಮಾಡಿದ್ದಾರೆ.

Ground Report: ರಾಯಚೂರಿನಲ್ಲಿ ಮೂರೂ ಪಕ್ಷಗಳ ಸಮಬಲದ ಹೋರಾಟ: ಹೇಗಿದೆ ಟಿಕೆಟ್‌ ಫೈಟ್‌?

 ಜಿಲ್ಲೆಯಲ್ಲಿ ಹೇಗಿದೆ ಜೆಡಿಎಸ್ ಪ್ರಭಾವ : 

ರಾಯಚೂರು ಜಿಲ್ಲೆ ಕಾಂಗ್ರೆಸ್ ನ ಭದ್ರಕೋಟೆ ಆಗಿತ್ತು. ಆದ್ರೆ ಕಳೆದ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಭದ್ರಕೋಟೆಯನ್ನ ಜೆಡಿಎಸ್ ಛಿದ್ರಗೊಳಿಸಿ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಎರಡು ವಿಧಾನಸಭಾ ಕ್ಷೇತ್ರಗಳಾದ ಮಾನ್ವಿ ಮತ್ತು ಸಿಂಧನೂರು ಕ್ಷೇತ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದು ಜಿಲ್ಲೆಯಲ್ಲಿ ಜೆಡಿಎಸ್ ತನ್ನ ಪ್ರಾಬಲ್ಯ ಪ್ರದರ್ಶನ ಮಾಡಿತ್ತು. ಅದೇ ಮಾದರಿಯಲ್ಲಿ 2023ರಲ್ಲಿ ಜೆಡಿಎಸ್ ತನ್ನ ಶಕ್ತಿ ಪ್ರದರ್ಶನಕ್ಕಾಗಿ ಎಲ್ಲಾ ಪಕ್ಷಗಳ ಮುಂಚೆಯೇ 5 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಫೈನಲ್ ಮಾಡಿ ಘೋಷಣೆ ‌ಮಾಡಿದೆ. ಈಗ ಅಭ್ಯರ್ಥಿಗಳು  ಗೆಲುವಿಗಾಗಿ ಕ್ಷೇತ್ರದಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತಾ ಓಡಾಟ ಶುರು ಮಾಡಿದ್ದಾರೆ.

 ಜೆಡಿಎಸ್ ಟಿಕೆಟ್ ಘೋಷಣೆ ಆದ 5 ಕ್ಷೇತ್ರದಲ್ಲಿ ಭಾರೀ ಪೈಪೋಟಿ: 

 ಸಿಂಧನೂರು ವಿಧಾನಸಭಾ ಕ್ಷೇತ್ರ: 

ಸಾಮಾನ್ಯ ಮೀಸಲು ಕ್ಷೇತ್ರವಾದ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ವೆಂಕಟರಾವ್ ನಾಡಗೌಡ ಮತ್ತೊಮ್ಮೆ ಶಾಸಕರಾಗಲು ಪ್ರಚಾರ ಶುರು ಮಾಡಿದ್ದಾರೆ. ಹೀಗಾಗಿ ಸಿಂಧನೂರು ಕ್ಷೇತ್ರದ ವಿವಿಧೆಡೆ ಹತ್ತಾರು ಕಾರ್ಯಕ್ರಮಗಳು ಮಾಡುತ್ತಾ, ಮತ್ತೊಮ್ಮೆ ಗೆಲ್ಲಿಸಿ ಅಂತ ತಿರುಗಾಟ ನಡೆಸಿದ್ದಾರೆ. ಆದ್ರೆ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಜೆಡಿಎಸ್ ತನ್ನ ಪ್ರಾಬಲ್ಯ ಹೊಂದಿಲ್ಲ ಎನ್ನಬಹುದು. ಏಕೆಂದರೆ ಹಾಲಿ ಶಾಸಕ ವೆಂಕಟರಾವ್ ನಾಡಗೌಡಗೆ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಹೆಚ್ಚಾಗಿದ್ದು, ಹೊಸ ಮುಖದ ಅಭ್ಯರ್ಥಿಗಾಗಿ ಸಿಂಧನೂರು ಕ್ಷೇತ್ರದ ಜನರು ಎದುರು ‌ನೋಡುತ್ತಿದ್ದಾರೆ. ಆದ್ರೂ ಹಾಲಿ ಶಾಸಕ ವೆಂಕಟರಾವ್ ನಾಡಗೌಡ ಕ್ಷೇತ್ರದಲ್ಲಿ ಸುತ್ತಾಟ ಮಾಡಿ ಜೆಡಿಎಸ್ ಪಕ್ಷ ಸಿಂಧನೂರಿನಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ತರಲು ಕಸರತ್ತು ಶುರು ಮಾಡಿದ್ದಾರೆ. 

 ಮಾನ್ವಿ ವಿಧಾನಸಭಾ ಕ್ಷೇತ್ರ: 

ಮಾನ್ವಿ ಎಸ್ ಟಿ ಮೀಸಲು ಕ್ಷೇತ್ರ. ಮಾನ್ವಿಯಲ್ಲಿ ಜೆಡಿಎಸ್ ನ ಹಾಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅಧಿಕಾರದಲ್ಲಿ ಇದ್ದಾರೆ. ಎರಡನೇ ಬಾರಿಯೂ ಶಾಸಕರಾಗುತ್ತೇನೆ ಎಂಬ ವಿಶ್ವಾಸದೊಂದಿಗೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಮಾಡುತ್ತಾ ಮತದಾರ ಮನಸೆಳೆಯಲು ಮುಂದಾಗಿದ್ದಾರೆ. ಆದ್ರೆ ಕಾಂಗ್ರೆಸ್ ಮತ್ತು ‌ಬಿಜೆಪಿ ಅಭ್ಯರ್ಥಿ ಯಾರು ಎಂಬುದು ಇನ್ನೂ ಮಾನ್ವಿ ಕ್ಷೇತ್ರದ ಜನತೆಯಲ್ಲಿ ಗೊಂದಲವಿದೆ. ಹೀಗಾಗಿ ಮತ್ತೊಮ್ಮೆ ಜನರ ಆರ್ಶಿವಾದ ಸಿಗಬಹುದು ಎಂಬ ಮಹಾದಾಸೆಯಿಂದ ಶಾಸಕ ರಾಜಾ ವೆಂಕಟಪ್ಪ ‌ನಾಯಕ ಕ್ಷೇತ್ರದಲ್ಲಿ ಜೆಡಿಎಸ್ ಪರ ಪ್ರಚಾರ ಶುರು ಮಾಡಿದ್ದಾರೆ.

 ಲಿಂಗಸೂಗೂರು ವಿಧಾನಸಭಾ ಕ್ಷೇತ್ರ:  

ಲಿಂಗಸೂಗೂರು ವಿಧಾನಸಭಾ ಕ್ಷೇತ್ರವೂ ಎಸ್ ಸಿ ಮೀಸಲು ಕ್ಷೇತ್ರ.‌ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಹಾಲಿ ಶಾಸಕ ಡಿ.ಎಸ್. ಹೊಲಗೇರಿ ವಿರುದ್ಧ ಆಡಳಿತ ವಿರೋಧಿ ಅಲೆ ಜೋರಾಗಿದೆ. ಅಷ್ಟೇ ಅಲ್ಲದೇ ಲಿಂಗಸೂಗೂರು ಕ್ಷೇತ್ರದ ತುಂಬಾ ಬಿಜೆಪಿ ಮತ್ತು ಕಾಂಗ್ರೆಸ್ ಬಣ ರಾಜಕೀಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ‌. ಇದರ ಮಧ್ಯೆ ಜೆಡಿಎಸ್ ಅಭ್ಯರ್ಥಿ ಸಿದ್ದು ಬಂಡಿಗೆ ಕ್ಷೇತ್ರದ ತುಂಬಾ ಅನುಕಂಪದ ಅಲೆಯೂ ಈ ಬಾರಿ ಸಿದ್ದು ಬಂಡಿ ಕೈ ಹಿಡಿಯುವ ಸಾಧ್ಯತೆ ದಟ್ಟವಾಗಿ ಕಂಡುಬರುತ್ತಿದೆ.

 ದೇವದುರ್ಗ ವಿಧಾನಸಭಾ ಕ್ಷೇತ್ರ: 

ದೇವದುರ್ಗ ವಿಧಾನಸಭಾ ಕ್ಷೇತ್ರವು ಎಸ್ ಟಿ ಮೀಸಲು ಕ್ಷೇತ್ರವಾಗಿದ್ದು, ಸದ್ಯ ಬಿಜೆಪಿ ಶಾಸಕ ಕೆ. ಶಿವನಗೌಡ ನಾಯಕ ಅಧಿಕಾರದಲ್ಲಿ ಇದ್ದಾರೆ. ಕೆ‌. ಶಿವನಗೌಡ ನಾಯಕ ಕ್ಷೇತ್ರದ ತುಂಬಾ ಓಡಾಟ ಮಾಡಿ ಬಿಜೆಪಿ ಗಟ್ಟಿಗೊಳಿದ್ದಾರೆ. ಹೀಗಾಗಿ ದೇವದುರ್ಗ ಬಿಜೆಪಿ ಭದ್ರಕೋಟೆ ಆಗಿದೆ. ಈ ಭದ್ರಕೋಟೆ ಛಿದ್ರ ಮಾಡಲು ಕಾಂಗ್ರೆಸ್ ನ ಜಿಲ್ಲಾಧ್ಯಕ್ಷ  ಬಿ.ವಿ.ನಾಯಕ ದೇವದುರ್ಗದಿಂದ ಸ್ಪರ್ಧೆ ಮಾಡಲು ಮುಂದಾಗಿದ್ದಾರೆ. ಇದರ ಮಧ್ಯೆ ಜೆಡಿಎಸ್ ನಿಂದ ಕರೆಮ್ಮ ಗೋಪಾಲ್ ನಾಯಕ ಸ್ಪರ್ಧೆ ಮಾಡಿ ಗೆಲುವು ಸಾಧಿಸುವುದು ಸುಲಭದ ಮಾತು ಅಲ್ಲ‌‌. ಆದ್ರೂ ಕರೆಮ್ಮ ಜೆಡಿಎಸ್ ಸೇರಿದ ಬಳಿಕ ಶಾಸಕ ಕೆ. ಶಿವನಗೌಡ ನಾಯಕ ವಿರುದ್ಧ ಹತ್ತಾರು ಹೋರಾಟಗಳು ಮಾಡಿ ಕ್ಷೇತ್ರದ ಜನರ ಮನಸೆಳೆಯಲು ಯತ್ನಿಸಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ವರ್ಚಸ್ಸಿನ ಮುಂದೆ ಜೆಡಿಎಸ್ ಯಾವ ರೀತಿ ತಂತ್ರ ರೂಪಿಸುತ್ತದೆ ಎಂಬುವುದು ಈಗ ಕುತೂಹಲ ಮೂಡಿಸಿದೆ.

 ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರ : 

ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರವೂ ಎಸ್ .ಟಿ. ಮೀಸಲು ಕ್ಷೇತ್ರವಾಗಿದ್ದು, ಈ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಹಾಲಿ ಶಾಸಕ ಬಸನಗೌಡ ದದ್ದಲ್ ಕಳೆದ ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಈ ಕ್ಷೇತ್ರದಲ್ಲಿ ಹಾಲಿ ಶಾಸಕ ಬಸನಗೌಡ ದದ್ದಲ್ ಮತ್ತು ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಮಧ್ಯೆ ಜಿದ್ದಾಜಿದ್ದಿನ ಪೈಪೋಟಿ ಇದೆ‌. ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ನಾಯಕರು ಕಾಲಿಗೆ ಚಕ್ರ ಕಟ್ಟಿಕೊಂಡವರ ರೀತಿಯಲ್ಲಿ ಓಡಾಟ ಮಾಡುತ್ತಿದ್ದಾರೆ. ‌ಇವರ ಓಡಾಟದ ಮಧ್ಯೆ ಸ್ಥಳೀಯರಾದ ಸಣ್ಣ ನರಸಿಂಹ ‌ನಾಯಕ ಅವರಿಗೆ ಜೆಡಿಎಸ್ ಟಿಕೆಟ್ ಘೋಷಣೆ ಮಾಡಿದೆ.  ಕಾಂಗ್ರೆಸ್ ಮತ್ತು ಬಿಜೆಪಿ ಪ್ರಾಬಲ್ಯ ಮುಂದೆ ಜೆಡಿಎಸ್ ನ ಅಭ್ಯರ್ಥಿ ಸಣ್ಣ ನರಸಿಂಹ ನಾಯಕ ಯಾವ ರೀತಿಯ ಕಸರತ್ತು ಮಾಡುತ್ತಾರೆ ಎಂಬುವುದು ‌ಕಾದು ನೋಡಬೇಕಾಗಿದೆ.

Ticket Fight: ಸಿಂಧನೂರಿನಲ್ಲೂ ಗಣಿ ರೆಡ್ಡಿ ಸ್ಪರ್ಧೆ ವದಂತಿ: ಕಾಂಗ್ರೆಸ್‌-ಬಿಜೆಪಿ ಟಿಕೆಟ್‌ಗೆ ತೀವ್ರ ಕದನ

ಮಸ್ಕಿ ಮತ್ತು ರಾಯಚೂರು ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಯಾರು?

ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಿಗೆ ಜೆಡಿಎಸ್ ತಮ್ಮ ಅಭ್ಯರ್ಥಿಗಳನ್ನು ಘೋಷಣೆ ಮಾಡಿ ಕಣಕ್ಕೆ ಇಳಿಸಿದೆ. ಆದ್ರೆ ಇನ್ನುಳಿದ ಮಸ್ಕಿ ಮತ್ತು ರಾಯಚೂರು ‌ನಗರ ಕ್ಷೇತ್ರಕ್ಕೆ ಯಾರಿಗೆ ಟಿಕೆಟ್ ನೀಡುತ್ತಾರೆ ಎಂಬುವುದು ಈಗ ಕುತೂಹಲವಿದೆ‌. ರಾಯಚೂರು ನಗರದ ಜೆಡಿಎಸ್ ಟಿಕೆಟ್ ಗಾಗಿ ರಾಮನಗೌಡ ಎಗನೂರು ಕಳೆದ ಒಂದು ವರ್ಷದಿಂದ ಸತತ ಪ್ರಯತ್ನ ಮಾಡುತ್ತಿದ್ದಾರೆ. ಜೆಡಿಎಸ್ ಟಿಕೆಟ್ ಫೈನಲ್ ಮಾಡಿಲ್ಲ.  ರಾಮನಗೌಡ ಎಗನೂರು ಹಬ್ಬ- ಸಭೆ, ಸಮಾರಂಭ ವೇಳೆಯಲ್ಲಿ ರಾಯಚೂರು ನಗರದ ತುಂಬಾ ದೊಡ್ಡ ದೊಡ್ಡ ಬ್ಯಾನರ್ ‌ಮತ್ತು ಕಟೌಟ್ ಗಳು ಹಾಕುತ್ತಾ ನಾನೇ ರಾಯಚೂರು ನಗರದ ಜೆಡಿಎಸ್ ಅಭ್ಯರ್ಥಿ ಅಂತ ಹೇಳುತ್ತಾ ಜೆಡಿಎಸ್ ನಾಯಕರ ಸುತ್ತ ಟಿಕೆಟ್ ಗಾಗಿ ತಿರುಗಾಟ ನಡೆಸಿದ್ದಾರೆ. ಇತ್ತ ಮಸ್ಕಿಯಲ್ಲಿಯೂ ಸಹ ರಾಘವೇಂದ್ರ ಬಳಗಾನೂರ ಸಹ ಮಸ್ಕಿ ಕ್ಷೇತ್ರದಲ್ಲಿ ಜೆಡಿಎಸ್ ಪರ ಪ್ರಚಾರ ಶುರು ಮಾಡಿದ್ದಾರೆ. ಆದ್ರೆ ಜೆಡಿಎಸ್ ಹೈಕಮಾಂಡ್ ಮಾತ್ರ ಯಾರಿಗೂ ಟಿಕೆಟ್ ‌ನಿಮಗೆ ನೀಡುತ್ತೇವೆ ಎಂದು ಹೇಳಿಲ್ಲ.‌ ಕ್ಷೇತ್ರದಲ್ಲಿ ಓಡಾಟ ಮಾಡಿ ಪಕ್ಷ ಸಂಘಟನೆ ‌ಮಾಡಲು‌ ಮಾತ್ರ ಸೂಚನೆ ‌ನೀಡಿದ್ದು, ಜೆಡಿಎಸ್ ಹೈಕಮಾಂಡ್ ‌ನಡೆ ಕುತೂಹಲ ‌ಮೂಡಿಸುತ್ತಿದೆ.

click me!