
ವಿಜಯಪುರ (ಅ.04): ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳು ಪ್ರವಾಹ ಹೊಡೆತಕ್ಕೆ ಪರದಾಡುವಂತಾಗಿದೆ. ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಿಜಯಪುರ ಜಿಲ್ಲೆಯಲ್ಲಿ ಪ್ರವಾಹ ಹಾನಿ ಅಧ್ಯಯನ ನಡೆಸುತ್ತಿದ್ದು, ಹಾನಿಯಾದ ಬೆಳೆ ವೀಕ್ಷಣೆ ಮಾಡುತ್ತಿದ್ದಾರೆ. ಈ ವೇಳೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದಾರೆ. ಬಳಿಕ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆಗೆ ಮಾಹಿತಿ ಹಂಚಿಕೊಂಡ ಆರ್.ಅಶೋಕ್, ವಿಮಾನದಲ್ಲಿ ಕುಳಿತು ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ, ಸಚಿವರ ವಿರುದ್ಧ ವಾಗ್ದಾಳಿ ನಡೆಸಿದಲ್ಲದೇ, ಪ್ರವಾಹ ಸಂತ್ರಸ್ತ ರೈತರು ಸಚಿವರೇ ಬಂದಿಲ್ಲ ಎಂದು ಅಳಲು ತೋಡಿಕೊಳ್ತಿದ್ದಾರೆ. ರೈತರು ಸರ್ಕಾರಕ್ಕೆ ಹಿಡಿಶಾಪ ಹಾಕ್ತಿದ್ದಾರೆ. ಪರಿಹಾರ ಕೊಡಿ ಇಲ್ಲ ಅಧಿಕಾರ ಬಿಟ್ಟು ತೊಲಗಿ ಎನ್ನುತ್ತಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಪ್ರವಾಹ ಅಧ್ಯಯನ ಟೀಕಿಸಿದ ಸಚಿವ ಎಂ.ಬಿ.ಪಾಟೀಲ್ ವಿಚಾರವಾಗಿ, ಟ್ರೈನ್ ಹೋದ ಮೇಲೆ ಬಿಜೆಪಿ ಟಿಕೇಟ್ ತೆಗೆದುಕೊಂಡಿದೆ ಎಂದಿದ್ದ ಎಂ.ಬಿ.ಪಾಟೀಲ್ ಅವರಿಗೆ ಕಾಂಗ್ರೆಸ್ ಟ್ರೈನೇ ಇಲ್ಲ. ಕಾಂಗ್ರೆಸ್ ಟ್ರೈನ್ ನಿಂತು ಕೆಟ್ಟು ಹೋಗಿದೆ. ರಿಪೇರಿ ಮಾಡಲಾಗದ ಸ್ಥಿತಿಯಲ್ಲಿದೆ. ಸಿಎಂ ಬದಲಾವಣೆ, ಮಂತ್ರಿ ಮಂಡಲ ಚೇಂಜ್ ಗೊಂದಲದಲ್ಲಿ ಸರ್ಕಾರ ಇದೆ. ನಮ್ಮ ಟ್ರೈನ್ ಹೋದ ಮೇಲೆ ಎನ್ತಿದ್ದಾರೆ, ಅವ್ರದ್ದು ಟ್ರೈನೇ ಇಲ್ಲ. ಕಾಂಗ್ರೆಸ್ನದ್ದು ಲೂಟಿ ಮಾಡುವ ಟ್ರೈನ್ ಎಂದು ಟೀಕಿಸಿದರು. ಪ್ರವಾಹ ಮುಗಿದ ಮೇಲೆ ಬಿಜೆಪಿ ಸರ್ವೇಗೆ ಬರ್ತಿದೆ ಎನ್ನುವ ವಿಚಾರವಾಗಿ ಕಾಂಗ್ರೆಸ್ ಪಾಲಿಗೆ ಪ್ರವಾಹ ಮುಗಿದಿದೆ. ಇನ್ನೂ ರೈತರ ಜಮೀನುಗಳಲ್ಲಿ ನೀರಿದೆ. ಈರುಳ್ಳಿ ಕಿತ್ತು ಬಿಸಾಕಿದ್ದಾರೆ, ತೊಗರಿ ಒಣಗಿದೆ ಕಿತ್ತು ಹಾಕೋಕೆ ಇನ್ನೂ ತಿಂಗಳು ಬೇಕು. ಕಾಂಗ್ರೆಸ್ ಯೋಗ್ಯತೆಗೆ ರೈತರ ಜಮೀನಿಗೆ ಬಂದಿಲ್ಲ. ನಾವು ಬಂದಿದ್ದೇವೆ ಎಂದರು.
ಸಿಎಂ ವೈಮಾನಿಕ ಸಮೀಕ್ಷೆ ವಿಚಾರವಾಗಿ, ಜನರು ಬೀದಿಲಿ ಬಂದ್ರೆ ಛೀಮಾರಿ ಹಾಕ್ತಾರೆ, ರಸ್ತೆಲಿ ಬಂದ್ರೆ ಗೇರಾವ್ ಹಾಕ್ತಾರೆ. ಅದಕ್ಕೆ ವಿಮಾನದಲ್ಲಿ ಸಮೀಕ್ಷೆ ಮಾಡಿದ್ದಾರೆ ಎಂದು ಟೀಕಿಸಿದರು. ಕೇಂದ್ರದಿಂದ ಪರಿಹಾರ ಹಣ ತರಲಿ ವಿಚಾರವಾಗಿ ಕಾಂಗ್ರೆಸ್ ಶ್ವೇತ ಪತ್ರ ಬಿಡುಗಡೆ ಮಾಡಲಿ. ಮೋದಿ ಇದ್ದಾಗ, ಮನಮೋಹನ್ ಸಿಂಗ್ ಇದ್ದಾಗ ಎಷ್ಟು ನೀಡಿದ್ದಾರೆ ಶ್ವೇತಪತ್ರ ಬಿಡುಗಡೆ ಮಾಡಲಿ ಎಂದುಕಾಂಗ್ರೆಸ್ ನಾಯಕರಿಗೆ ಆರ್.ಅಶೋಕ್ ಸವಾಲು ಹಾಕಿದರು. ಸರ್ಕಾರದ ಅಧಿಕಾರಿ, ಸಚಿವ, ಸಿಎಂ ಬಂದಿಲ್ಲ ಎಂದು ಜನರು ಆಕ್ರೋಶ ಹೊರಹಾಕ್ತಿದ್ದಾರೆ. ಸರ್ಕಾರದ ಖಜಾನೆ ಖಾಲಿಯಾಗಿದೆ. ಗ್ಯಾರಂಟಿಗೆ ಹಣ ಇಲ್ಲ. ನಮಗೆ ಎಲ್ಲಿಂದ ಹಣ ಕೊಡ್ತಾರೆ ಎಂದು ಜನರು ಸಂಕಷ್ಟ ಹೇಳಿಕೊಳ್ತಿದ್ದಾರೆ ಎಂದು ಹೇಳಿದರು.
ಬೆಳೆ ವಿಮೆ ಇಲ್ಲದೆ ಹೋದ್ರು ರೈತರಿಗೆ ಬೆಳೆಹಾನಿ ಪರಿಹಾರ ನೀಡಬೇಕು. ರೈತರಿಗೆ ಬೆಳೆಹಾನಿ ಪರಿಹಾರ ಜಾಸ್ತಿ ನೀಡಿದ್ದೇವೆ ಎಂಬ ಸಚಿವ ಎಂ.ಬಿ.ಪಾಟೀಲ್ ಹೇಳಿಕೆಗೆ ಆರ್.ಅಶೋಕ್ ಪ್ರತಿ ಸವಾಲು ಹಾಕಿದರಲ್ಲದೇ, ಎಷ್ಟು ಜಾಸ್ತಿ ಕೊಟ್ಟಿದ್ದಾರೆ ಅದನ್ನ ಜನಕ್ಕೆ ಹೇಳಲಿ. ಬಿಜೆಪಿ ಪ್ರವಾಹ ಆದಾಗ ಇದ್ದಾಗ ಎಷ್ಟು ಕೊಟ್ಟು ತಾವು ಎಷ್ಟು ಕೊಡ್ತಿದ್ದೇವೆ ಅನ್ನೋದನ್ನ ಹೇಳಲಿ. ಬಿಜೆಪಿ ಅಧಿಕಾರದಲ್ಲಿದ್ದಾಗ 5 ಸಾವಿರ ಕೊಟ್ರು, ನಾವು 10 ಸಾವಿರ ಕೊಡ್ತಿದ್ದೇವೆ ಎಂದು ಹೇಳಲಿ. ಧಮ್, ತಾಕತ್ತು ಇದ್ರೆ ಹೇಳಲಿ. ಬಿಜೆಪಿ ಪ್ರವಾಹ ಸರ್ವೇ ಪ್ರಶ್ನಿಸಿದ ಕಾಂಗ್ರೆಸ್ಗೆ ಸವಾಲ್ ಹಾಕಿದ ವಿಚಾರವಾಗಿ, ನಾವು ಚಂದ್ರಲೋಕದಲ್ಲಿ ಇದ್ದೇವಾ? ನೀವು ಚಂದ್ರಲೋಕದಲ್ಲಿದ್ದೀರಿ. ಕಾಂಗ್ರೆಸ್ ಮಾಡಿದ ಪಾಪಕ್ಕೆ ನರಕಕ್ಕೆ ಹೋಗ್ತಾರೆ ಎಂದು ಆರ್.ಅಶೋಕ್ ಆಕ್ರೋಶವನ್ನು ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.