ಪಂಜಾಬ್‌ನಲ್ಲಿ ಮಾಡಿದ ಪಿತೂರಿಯನ್ನೇ ರಾಜಸ್ಥಾನದಲ್ಲಿ ಮಾಡ್ತಿದ್ದಾರೆ: ಶಾಸಕನ ಎಚ್ಚರಿಕೆ!

By Santosh NaikFirst Published Sep 26, 2022, 3:48 PM IST
Highlights

ಅಶೋಕ್ ಗೆಹ್ಲೋಟ್ ಬೆಂಬಲಿಗರಲ್ಲಿ ಶಾಂತಿ ಸಿಂಗ್ ಧರಿವಾಲ್ ಕೂಡ ಒಬ್ಬರು. ಭಾನುವಾರ ಧರಿವಾಲ್ ಮನೆಯಲ್ಲಿಯೇ ದೊಡ್ಡ ಮಟ್ಟದ ಸಭೆ ನಡೆದಿದೆ. ಈ ವೇಳೆ ಗೆಹ್ಲೋಟ್ ಬೆಂಬಲಿಗ ಶಾಸಕರೆಲ್ಲರೂ ಆಗಮಿಸಿದ್ದು, ಇಲ್ಲಿಯೇ ಗೆಹ್ಲೋಟ್ ಪರ ಶಾಸಕರು ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಇದಾದ ಬಳಿಕ ಧರಿವಾಲ್ ಮನೆಯಿಂದ ಎಲ್ಲ ಶಾಸಕರು ಸ್ಪೀಕರ್ ನಿವಾಸಕ್ಕೆ ಆಗಮಿಸಿ ರಾಜೀನಾಮೆ ಸಲ್ಲಿಸಿದರು.
 

ಜೈಪುರ (ಸೆ. 26): ರಾಜಸ್ಥಾನ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಗೊಂದಲದ ನಡುವೆ, ಅಶೋಕ್ ಗೆಹ್ಲೋಟ್ ಸರ್ಕಾರದ ಸಚಿವ ಶಾಂತಿ ಸಿಂಗ್ ಧರಿವಾಲ್ ಅವರ ಹೊಸ ವೀಡಿಯೊ ಹೊರಬಿದ್ದಿದೆ. ಇದರಲ್ಲಿ ಪಿತೂರಿಯ ಭಾಗವಾಗಿ ಅಶೋಕ್ ಗೆಹ್ಲೋಟ್ ರಾಜೀನಾಮೆ ಕೇಳಲಾಗುತ್ತಿದೆ ಎಂದು ಶಾಂತಿ ಸಿಂಗ್ ಧರಿವಾಲ್ ಆರೋಪಿಸಿದ್ದಾರೆ. ಇದೆಲ್ಲ ಷಡ್ಯಂತ್ರ ಎಂದ ಅವರು, ಈ ಷಡ್ಯಂತ್ರದಿಂದ ಕಾಂಗ್ರೆಸ್, ಪಂಜಾಬ್ ಕಳೆದುಕೊಂಡಿದೆ. ಇದರಿಂದ ನಾವು ರಾಜಸ್ಥಾನವನ್ನೂ ಕಳೆದುಕೊಳ್ಳಲಿದ್ದೇವೆ. ಇದನ್ನು ಸರಿಯಾಗಿ ನಿರ್ವಹಣೆ ಮಾಡದಿದ್ದರೆ ರಾಜಸ್ಥಾನದಲ್ಲಿ ಕಾಂಗ್ರೆಸ್‌ಗೆ ಉಳಿಗಾಲ ಇರೋದಿಲ್ಲ. ಧರಿವಾಲ್ ಮನೆಯಲ್ಲಿ ನಡೆದ ಶಾಸಕರ ಸಭೆಯ ಕುರಿತು ಈ ವಿಡಿಯೋದಲ್ಲಿ ಹೇಳಲಾಗಿದೆ. ಅಶೋಕ್ ಗೆಹ್ಲೋಟ್ ಬೆಂಬಲಿಗರಲ್ಲಿ ಶಾಂತಿ ಸಿಂಗ್ ಧರಿವಾಲ್ ಕೂಡ ಪ್ರಮುಖರು. ಭಾನುವಾರ ಧರಿವಾಲ್ ಅವರ ನಿವಾಸದಲ್ಲಿಯೇ ಸಭೆ ನಡೆದಿದೆ. ಈ ವೇಳೆ ಗೆಹ್ಲೋಟ್ ಬೆಂಬಲಿಗ ಶಾಸಕರೆಲ್ಲರೂ ಆಗಮಿಸಿದ್ದು, ಇಲ್ಲಿಯೇ ಗೆಹ್ಲೋಟ್ ಪರ ಶಾಸಕರು ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಇದಾದ ಬಳಿಕ ಧರಿವಾಲ್ ಮನೆಯಿಂದ ಎಲ್ಲ ಶಾಸಕರು ಸ್ಪೀಕರ್ ನಿವಾಸಕ್ಕೆ ಆಗಮಿಸಿ ರಾಜೀನಾಮೆ ಸಲ್ಲಿಸಿದರು.

ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ ನಿಯಮದ ಅನ್ವಯ ರಾಜೀನಾಮೆ: "ನೀವು (ಕಾಂಗ್ರೆಸ್ ಹೈಕಮಾಂಡ್) ಹೇಳಿದ್ದೀರಿ, "ಗೆಹ್ಲೋಟ್ ಅವರಿಗೆ ಎರಡು ಹುದ್ದೆಗಳಿವೆ. ರಾಜೀನಾಮೆಗೆ ಆಗ್ರಹಿಸುತ್ತಿರುವ ಅವರು ಇಂದು ಯಾವ ಎರಡು ಹುದ್ದೆಗಳನ್ನು ಹೊಂದಿದ್ದಾರೆ. ಸದ್ಯ ಅವರ ಬಳಿ ಇರುವುದು ಮುಖ್ಯಮಂತ್ರಿ ಸ್ಥಾನ ಮಾತ್ರ. ಎರಡನೆ ಹುದ್ದೆ (ಪಕ್ಷದ ಅಧ್ಯಕ್ಷ) ಸಿಕ್ಕಾಗ ರಾಜೀನಾಮೆ ನೀಡುವ ಮಾತು ಕೇಳಿ ಬರಲಿದೆ. ಇವತ್ತು ರಾಜೀನಾಮೆ ಕೇಳುವುದರಲ್ಲಿ ಅರ್ಥವೇನು? ಇದೆಲ್ಲಾ ಪಿತೂರಿ, ಈ ಷಡ್ಯಂತ್ರದಲ್ಲಿ ಪಂಜಾಬ್ ಸೋತಿತು, ಅದೇ ಷಡ್ಯಂತ್ರದಲ್ಲಿ ರಾಜಸ್ಥಾನವೂ ಸೋಲಲಿದೆ. ನಾವು ಈ ಪರಿಸ್ಥಿತಿಯನ್ನು ನಿಭಾಯಿಸಿದರೆ, ರಾಜಸ್ಥಾನವು ಉಳಿಯುತ್ತದೆ, ಇಲ್ಲದಿದ್ದರೆ ಅದು ಉಳಿಯುವುದಿಲ್ಲ ಎಂದು ಧರಿವಾಲ್‌ ಎಚ್ಚರಿಸಿದ್ದಾರೆ.

ಸಿಎಂ ಬದಲಾವಣೆಯಿಂದ ಕಾಂಗ್ರೆಸ್‌ಗೆ ತೊಂದರೆ: ಇನ್ನು ಕಾಂಗ್ರೆಸ್ (Congress) ಶಾಸಕರನ್ನುದ್ದೇಶಿಸಿ ಮಾತನಾಡಿದ ಅವರು, ಹೈಕಮಾಂಡ್  ಇದನ್ನು ಒಪ್ಪಬೇಕು ಎಂದು ನನ್ನ ಮನವಿ. ಸಿಎಂ ಬದಲಿಸಿ ಯಾರನ್ನಾದರೂ ಮುಖ್ಯಮಂತ್ರಿ ಮಾಡಿದರೆ ಅದರ ಲಾಭ ಸಿಗುವುದಿಲ್ಲ ಎಂದು ಶಾಂತಿಕುಮಾರ್ ಧರಿವಾಲ್ (Shanti Singh Dhariwal) ಹೇಳಿದ್ದಾರೆ. ಇದರಿಂದ ಕಾಂಗ್ರೆಸ್ ನಷ್ಟ ಅನುಭವಿಸಲಿದೆ ಎಂದಿದ್ದಾರೆ.

ಅಶೋಕ್‌ ಗ್ಲೆಹೋಟ್‌ ಕಾಂಗ್ರೆಸ್‌ ಅಧ್ಯಕ್ಷರಾದಲ್ಲಿ, ಸಿಎಂ ಸ್ಥಾನಕ್ಕೆ ರಾಜೀನಾಮೆ?

ಮತ್ತೊಂದೆಡೆ, ರಾಜಸ್ಥಾನದ ಕಾಂಗ್ರೆಸ್ ವೀಕ್ಷಕ ಅಜಯ್ ಮಾಕೆನ್ (Ajay Maken), ಧರಿವಾಲ್ ಮನೆಯಲ್ಲಿ ನಡೆದ ಸಭೆಯನ್ನು ಅಶಿಸ್ತು ಎಂದು ಪರಿಗಣಿಸಿದ್ದಾರೆ. ಕಾಂಗ್ರೆಸ್ ಶಾಸಕರ ಸಭೆ ಕರೆಯಲಾಗಿದೆ ಎಂದು ತಿಳಿಸಿದರು. ಆದರೆ ಇದಕ್ಕೆ ಸಮಾನಾಂತರವಾಗಿ ಧರಿವಾಲ್ ಅವರ ಮನೆಯಲ್ಲಿ ಸಭೆ ನಡೆಸುತ್ತಿದ್ದರು. ಇದು ಅಶಿಸ್ತು. ಧರಿವಾಲ್ ವಿರುದ್ಧವೂ ಕ್ರಮಕ್ಕೆ ಸೂಚಿಸಿದ್ದರು. ಮತ್ತೊಂದೆಡೆ, ಶಾಂತಿ ಧರಿವಾಲ್ ಮತ್ತು ಮಹೇಶ್ ಜೋಶಿ ಅವರಿಗೆ ಪಕ್ಷ ಶೋಕಾಸ್ ನೋಟಿಸ್ ನೀಡಬಹುದು ಎಂದು ಕಾಂಗ್ರೆಸ್ ಮೂಲಗಳು ಹೇಳುತ್ತವೆ. ಪಕ್ಷ ವಿರೋಧಿ ಕೆಲಸ ಮಾಡಿದ್ದೀರಿ ಎಂದು ನೋಟಿಸ್ ಮೂಲಕ ಮುಖಂಡರನ್ನು ಪ್ರಶ್ನಿಸಲಾಗುತ್ತದೆ. ಶಾಸಕಾಂಗ ಪಕ್ಷದ ಸಭೆ ನಡೆಯುವಾಗ ಎರಡನೇ ಬಾರಿ ಸಮಾನಾಂತರ ಸಭೆ ನಡೆಸಿದ್ದಕ್ಕೆ ಏನು ಅರ್ಥ? ಎಂದು ಮಾಕೆನ್‌ ಪ್ರಶ್ನೆ ಮಾಡಿದ್ದಾರೆ.

Rajasthan Political Crisis: ಪೈಲಟ್‌ ವಿಮಾನ ಮತ್ತೆ ಕ್ರ್ಯಾಶ್‌, ಅಶಕ್ತ ಹೈಕಮಾಂಡ್‌ ವಿರುದ್ಧ ಗೆಹ್ಲೋಟ್‌ ಗೇಮ್‌

ಕಾಂಗ್ರೆಸ್ ಮೂಲಗಳ ಪ್ರಕಾರ ಅಶೋಕ್ ಗೆಹ್ಲೋಟ್ (Ashok Gehlot) ವರ್ತನೆಗೆ ಹೈಕಮಾಂಡ್ ತೀವ್ರ ಕೋಪಗೊಂಡಿದೆ. ಅಶೋಕ್ ಗೆಹ್ಲೋಟ್ ಅವರನ್ನು ಕೇಳಿದ ನಂತರವೇ ರಾಜಸ್ಥಾನದಲ್ಲಿ ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂದು ಪಕ್ಷ ಹೇಳಿದೆ. ಹಾಗಿದ್ದರೂ ಈ ವಿವಾದ ಮಾಡಿದ್ದು ಸರಿಯಲ್ಲ. ಇದರಿಂದಾಗಿ ಅಶೋಕ್ ಗೆಹ್ಲೋಟ್ ಇಮೇಜ್ ಕೂಡ ಹಾಳಾಗಿದೆ. ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ಪಕ್ಷ ಚಿಂತನೆ ನಡೆಸಿತ್ತು. ಹೀಗಿರುವಾಗ ಮುಖ್ಯಮಂತ್ರಿ ಹುದ್ದೆಯನ್ನೂ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ರೀತಿ ಮಾಡಬಾರದು. ಈ ಸಂಪೂರ್ಣ ರಾಜಕೀಯ ನಾಟಕದಲ್ಲಿ ನನ್ನ ಕೈವಾಡವಿಲ್ಲ ಎಂದು ಅಶೋಕ್ ಗೆಹ್ಲೋಟ್ ಸ್ಪಷ್ಟಪಡಿಸಿದ್ದಾರೆ. ಆದರೆ ಇದೆಲ್ಲವೂ ಅಶೋಕ್ ಗೆಹ್ಲೋಟ್ ಅವರ ಸೂಚನೆಯ ಮೇರೆಗೆ ನಡೆಯುತ್ತಿದೆ ಎಂದು ಪಕ್ಷದ ಹೈಕಮಾಂಡ್ ಭಾವಿಸಿದೆ. ಪಕ್ಷದ ಅಧ್ಯಕ್ಷರಿಗಿಂತ ಮುಖ್ಯಮಂತ್ರಿ ಕುರ್ಚಿ ದೊಡ್ಡದು ಎಂದು ಅಶೋಕ್ ಗೆಹ್ಲೋಟ್‌ಗೆ ಅವರ ಸುತ್ತಲಿನ ಜನರು ಮನವರಿಕೆ ಮಾಡಿದ್ದಾರೆ ಎಂದು ಪಕ್ಷವು ಭಾವಿಸಿದೆ. ಅದಕ್ಕೇ ಇಷ್ಟೆಲ್ಲಾ ರಾಜಕೀಯ ನಾಟಕ ನಡೆದಿದೆ. ಪಕ್ಷದ ವೀಕ್ಷಕರು ಇಂದು ಮಧ್ಯಾಹ್ನ ದೆಹಲಿಗೆ ಬಂದು ಸೋನಿಯಾ ಗಾಂಧಿ (Sonia Gandhi) ಅವರಿಗೆ ಸಂಪೂರ್ಣ ವರದಿ ನೀಡಲಿದ್ದಾರೆ.

click me!