'ಕಾಂಗ್ರೆಸ್‌ ಭರವಸೆ ಈಡೇರಿಸದಿದ್ದರೆ ಹೋರಾಟ'

By Kannadaprabha NewsFirst Published May 21, 2023, 1:25 PM IST
Highlights

ಕಾಂಗ್ರೆಸ್‌ ಪಕ್ಷ ಕುತಂತ್ರ ನೀತಿ ಪಾಲಿಸಿ, ಮತ ಪಡೆದಿದೆ. ಮುಂದಿನ ದಿನಮಾನದಲ್ಲಿ ಜನತೆಗೆ ಕಾಂಗ್ರೆಸ್‌ನ ಕುತಂತ್ರ ಬುದ್ಧಿ ಏನೆಂಬುವುದು ತಿಳಿಯುತ್ತದೆ. ಮತದಾರ ಅಲ್ಪ ಆಸೆ-ಆಮಿಷಕ್ಕೆ ಬಲಿಯಾಗಿ ಮತ ನೀಡಿದ್ದು, ಕಾಂಗ್ರೆಸ್‌ ನೀಡಿದ ಭರವಸೆಗಳು ಈಡೇರಿಸಲು ವಿಫಲವಾಗುತ್ತದೆ: ಜಗದೀಶ ಗುಡಗುಂಟಿ 

ಜಮಖಂಡಿ(ಮೇ.21):  ರಾಜ್ಯದಲ್ಲಿ ಅಧಿಕಾರಕ್ಕೇರಿದ ಕಾಂಗ್ರೆಸ್‌ ಸರ್ಕಾರ ಜನತೆಗೆ ಮೋಸ ಮಾಡಿ ಬಂದಿದೆ. ಸುಳ್ಳು ಭರವಸೆ ನೀಡುವ ಮೂಲಕ ಮತದಾರರನ್ನು ಮೋಸ ಮಾಡಿ ಇಂದು ಅಧಿಕಾರಕ್ಕೆ ಬಂದಿದ್ದು ಹಾಸ್ಯಾಸ್ಪದ ಸಂಗತಿಯಾಗಿದೆಂದು ಜಮಖಂಡಿ ನೂತನ ಶಾಸಕ ಜಗದೀಶ ಗುಡಗುಂಟಿ ಹೇಳಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷ ಕುತಂತ್ರ ನೀತಿ ಪಾಲಿಸಿ, ಮತ ಪಡೆದಿದೆ. ಮುಂದಿನ ದಿನಮಾನದಲ್ಲಿ ಜನತೆಗೆ ಕಾಂಗ್ರೆಸ್‌ನ ಕುತಂತ್ರ ಬುದ್ಧಿ ಏನೆಂಬುವುದು ತಿಳಿಯುತ್ತದೆ. ಮತದಾರ ಅಲ್ಪ ಆಸೆ-ಆಮಿಷಕ್ಕೆ ಬಲಿಯಾಗಿ ಮತ ನೀಡಿದ್ದು, ಕಾಂಗ್ರೆಸ್‌ ನೀಡಿದ ಭರವಸೆಗಳು ಈಡೇರಿಸಲು ವಿಫಲವಾಗುತ್ತದೆ. ಹಾಗೇನಾದರೂ ಆದರೆ ಬಿಜೆಪಿ ಬೀದಿಗಿಳಿದು ಹೋರಾಟ ಮಾಡಿ ಜನತೆಗೆ ನೀಡಿದ ಭರವಸೆ ಈಡೇರಿಸುವಂತೆ ಒತ್ತಾಯಿಸುತ್ತದೆ. ಅಲ್ಲದೇ ಕಾಂಗ್ರೆಸ್‌ ಪಕ್ಷ ನೀಡಿದ ಭರವಸೆಗಳಿಗೆ ಫಲಾನುಭವಿಗೆ ಯಾವುದೇ ನಿರ್ಬಂಧನೆಗಳನ್ನು ಹಾಕಬಾರದೆಂದು ತಿಳಿಸಿದರು.

Karnataka Cabinet: ಮುಧೋಳಕ್ಕೆ ‘ಮಂತ್ರಿಗಿರಿ’ ಮೀಸಲು..!

ಜಮಖಂಡಿ ಮತಕ್ಷೇತ್ರದ ಮತದಾರ 10 ವರ್ಷಗಳ ಬಳಿಕ ಬಿಜೆಪಿಯನ್ನು ಗೆಲ್ಲುವಂತೆ ಮಾಡಿದ್ದು, ಮುಂಬರುವ ದಿನಗಳಲ್ಲಿ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಿ ಈ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವ ಗುರಿ ಹೊಂದಲಾಗಿದೆ. ಕುಡಿವ ನೀರು, ರಸ್ತೆ, ನೀರಾವರಿ, ಶಿಕ್ಷಣ ಇತರೆ ಅನೇಕ ಸಮಸ್ಯೆಗಳನ್ನು ಬಗೆಹರಿಸುವ ಕಾರ್ಯ ಕೈಕೊಳ್ಳುವುದಾಗಿ ತಿಳಿಸಿದರು.

ಬಹುದಿನಗಳ ಈ ಭಾಗದ ಜನತೆಯ ಬೇಡಿಕೆಯಾಗಿದ್ದ ಜಮಖಂಡಿ ಜಿಲ್ಲಾ ಕೇಂದ್ರವನ್ನಾಗಿಸುವ ಕನಸನ್ನು ನನಸು ಮಾಡಲು ಸರ್ಕಾರದ ಮೇಲೆ ಒತ್ತಡ ತಂದು ಜಮಖಂಡಿ ಜಿಲ್ಲೆ ಹಾಗೂ ಸಾವಳಗಿ ತಾಲೂಕು ಕೇಂದ್ರ ಮಾಡಿಸುವಲ್ಲಿ ಸತತ ಪ್ರಯತ್ನ ಮಾಡುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಜ್ಯದಲ್ಲಿ ಬಿಜೆಪಿ ಬಹುಮತ ಬಾರದಕ್ಕೆ ಆಡಳಿತ ವಿರೋಧಿ ಅಲೆಯೂ ಒಂದು ಕಾರಣವಾದರೆ ಕಾಂಗ್ರೆಸ್‌ ನೀಡಿದ ಪೊಳ್ಳು ಭರವಸೆಗೆ ಮತದಾರ ಮೋಸ ಹೋಗಿದ್ದು, ಗುಜರಾತ ಮಾದರಿ ಟಿಕೆಟ್‌ ಹಂಚಿಕೆಯೂ ವೈಫಲ್ಯಕ್ಕೆ ಕಾರಣವಾಗಿರಬಹುದೆಂದು ಹೇಳಿದರು.

ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ವಿಪ ಮಾಜಿ ಸದಸ್ಯ ಜಿ.ಎಸ್‌.ನ್ಯಾಮಗೌಡ, ಯೋಗಪ್ಪ ಸವದಿ,ಡಾ.ಉಮೇಶ ಮಹಾಬಳಶೆಟ್ಟಿ,ಸಿ.ಟಿ.ಉಪಾಧ್ಯೆ,ಕಾಡು ಮಾಳಿ, ಅಜೇಯ ಕಡಪಟ್ಟಿ, ಮಹಾದೇವ ನ್ಯಾಮಗೌಡ,ನಂದೆಪ್ಪ ದಡ್ಡಿಮನಿ,ಬಸವರಾಜ ಕಲೂತಿ, ಡಾ.ವಿಜಯ ಲಕ್ಷ್ಮಿ ತುಂಗಳ,ನಗರಸಭೆ ಸದಸ್ಯೆ ಪೂಜಾ ವಾಳ್ವೇಕರ,ವಿಜಯಲಕ್ಷ್ಮಿ ಉಕುಮನಾಳ, ಯಮನೂರ ಮೂಲಂಗಿ,ಶಂಕರ ಕಾಳೆ,ನಾಗಪ್ಪ ಸನದಿ,ಸದಾಗೌಡ ಪಾಟೀಲ ಸುದ್ದಿಗೋಷ್ಠಿಯಲ್ಲಿದ್ದರು.

Badami Election Result 2023: ಚಿಮ್ಮನಕಟ್ಟಿ ಋುಣ ತೀರಿಸಿದ ಸಿದ್ದರಾಮಯ್ಯ

ಕಾಂಗ್ರೆಸ್‌ ಗುಂಡಾವರ್ತನೆಗೆ ಖಂಡನೆ

ವಿಧಾನಸಭೆ ಚುನಾವಣೆ ಫಲಿತಾಂಶದಿಂದ ಹತಾಶೆಗೊಂಡಿರುವ ಕಾಂಗ್ರೆಸ್‌ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಮೇಲೆ ಗುಂಡಾ ವರ್ತನೆ ಮಾಡುತ್ತಿರುವುದು ಖಂಡನೀಯ. ಕಾಂಗ್ರೆಸ್‌ ಮಾಜಿ ಶಾಸಕರು, ಮುಖಂಡರು ತಮ್ಮ ಕಾರ್ಯಕರ್ತರನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕೆಂದು ಬಿಜೆಪಿ ಮುಖಂಡ ಡಾ.ಉಮೇಶ ಮಹಾಬಳಶೆಟ್ಟಿಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮಖಂಡಿ ಕ್ಷೇತ್ರ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ಚುನಾವಣೆಯಲ್ಲಿ ಮಾತ್ರ ಹಗೆತನ ತೋರುವುದು ಸಾಮಾನ್ಯ. ಆದರೆ, ಕಾಂಗ್ರೆಸ್‌ ಕಾರ್ಯಕರ್ತರ ಪುಂಡಾಟಿಕೆ ದಿನದಿಂದ ದಿನಕ್ಕೆ ಹೆಚ್ಚಾಗಿರುವುದು ಕಂಡು ಬಂದಿದ್ದು, ಬಿಜೆಪಿ ಕಾರ್ಯಕರ್ತರು ಸಹನೆ ಕಳೆದುಕೊಳ್ಳುವ ಮುಂಚೆ ಪರಿಸ್ಥಿತಿ ತಿಳಿಯಾಗಬೇಕು. ಕ್ಷೇತ್ರದಲ್ಲಿ ಅಭಿವೃದ್ಧಿ ಬದಲಾಗಿ ಗೊಂದಲ ಸೃಷ್ಟಿಯಾಗುವ ಸಾಧ್ಯತೆಯಿದೆ ಎಂದರು. ಮೇ.13ರ ಮತ ಏಣಿಕೆ ನಂತರ ತಾಲೂಕಿನಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು 15ಕ್ಕೂ ಹೆಚ್ಚು ಸ್ಥಳಗಳಲ್ಲಿ ಹೊಡೆದಾಡಿದ ಘಟನೆಗಳು ಬೆಳಕಿಗೆ ಬಂದಿವೆ. ಇದೇ ಪರಿಸ್ಥಿತಿ ಮುಂದವರೆದರೇ ಬಿಜೆಪಿ ಕಾರ್ಯಕರ್ತರು ಕೈಕಟ್ಟಿಕುಳಿತುಕೊಳ್ಳುವದಿಲ್ಲ. ದ್ವೇಷ ಭಾವನೆಗಳನ್ನು ಬಿಟ್ಟು ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಚುನಾವಣೆಯಲ್ಲಿ ಸೋಲು-ಗೆಲವು ಸಹಜ. ಚುನಾವಣೆ ಬಂದಾಗ ಚುನಾವಣೆ ಮಾಡೋಣ ಎಂದ ಅವರು, ಕಾಂಗ್ರೆಸ್‌ ಅಭ್ಯರ್ಥಿ ಸೋಲುಂಡ ನಂತರ ಹತಾಶೆಗೊಂಡ ಕಾರ್ಯಕರ್ತರು ಕೋಮು-ಗಲಭೆಗೆ ಪ್ರಚೋದನೆ ನೀಡುತ್ತಿದ್ದು, ಇದನ್ನು ಕಾಂಗ್ರೆಸ್‌ನ ಮಾಜಿ ಶಾಸಕರು ತಮ್ಮ ಕಾರ್ಯಕರ್ತರಿಗೆ ಮನವರಿಕೆ ಮಾಡಬೇಕೆಂದು ಎಚ್ಚರಿಕೆ ನೀಡಿದರು.

click me!