
ನವದೆಹಲಿ: ಪಂಚರಾಜ್ಯ ಚುನಾವಣೆಯ ಫಲಿತಾಂಶ ಘೋಷಣೆಯಾಗಿದೆ. ತಮಿಳುನಾಡಿನಲ್ಲಿ ಟಿವಿಕೆ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ, ಅಸ್ಸಾಂ ನಲ್ಲಿ ಬಿಜೆಪಿ, ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್, ಪುದುಚೇರಿಯಲ್ಲಿ ಬಿಜೆಪಿ ಗೆಲುವು ಕಾಯ್ದುಕೊಂಡಿದೆ. ಈ ಹಿನ್ನಲೆಯಲ್ಲಿ ವಿಶ್ವದ ಅತಿದೊಡ್ಡ ವಿಕೇಂದ್ರೀಕೃತ ಊಹೆ ಮಾರುಕಟ್ಟೆ ವೇದಿಕೆಯಾಗಿರುವ ಪಾಲಿಮಾರ್ಕೆಟ್ನಲ್ಲಿ ಬೆಟ್ಟಿಂಗ್ ಹೆಚ್ಚಿದ್ದು, ಹಣದ ಹೊಳೆಯೇ ಹರಿದಿತ್ತು. ಫಲಿತಾಂಶಕ್ಕೂ ಮುನ್ನವೇ 242.8 ಕೋಟಿ ರು.ನಷ್ಟು ವ್ಯವಹಾರ ನಡೆದಿದೆ. ಅರ್ಥಾತ್ ಅಷ್ಟೊಂದು ಪ್ರಮಾಣದಲ್ಲಿ ಬೆಟ್ ಕಟ್ಟಲಾಗಿದೆ.
ಭಾರತದಲ್ಲಿ ಪಾಲಿಮಾರ್ಕೆಟ್ ಕಾರ್ಯಾಚರಣೆಯ ಮೇಲೆ ನಿರ್ಬಂಧವಿದ್ದರೂ ಕ್ರಿಪ್ಟೋ ಮೂಲಕ ಈ ವ್ಯವಹಾರ ಮುಂದುವರೆದಿದೆ. ಸದ್ಯ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಿದ್ದ ತಮಿಳುನಾಡಿನಲ್ಲಿ ಅತಿಹೆಚ್ಚು ಬೆಟ್ಟಿಂಗ್ ಚಟುವಟಿಕೆ ನಡೆದಿದ್ದು, 189 ಕೋಟಿ ರು.ನಷ್ಟು ವ್ಯವಹಾರವಾಗಿದೆ. ಡಿಎಂಕೆ ಗೆಲ್ಲುವ ಶೇ.87ರಷ್ಟು ಸಾಧ್ಯತೆಯಿದೆಯೆಂದು ಜನ ನಂಬಿ ಬೆಟ್ ಕಟ್ಟಿದ್ದಾರೆ. ಆದರೆ ಫಲಿತಾಂಶದ ಬಳಿಕ ಆಡಳಿತಾರೂಢ ಡಿಎಂಕೆ ಮೂರನೇ ಸ್ಥಾನಕ್ಕೆ ಕುಸಿದಿದೆ. ನಟ ವಿಜಯ್ ನೇತೃತ್ವದ ಟಿವಿಕೆ ಲೀಡ್ ಪಕ್ಷವಾಗಿ 100ರ ಗಡಿದಾಟಿ ಐತಿಹಾಸಿಕ ಸಾಧನೆ ಮಾಡಿದೆ.
ಉಳಿದಂತೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲ್ಲುವ ಬಗ್ಗೆ ಶೇ.51ರಷ್ಟು ನಿರೀಕ್ಷೆಯಿಟ್ಟು 3.8 ಕೋಟಿ ರು. ಬೆಟ್ ಕಟ್ಟಲಾಗಿದೆ. ಅದರಂತೆ ಅಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದುಕೊಂಡಿದೆ. ಅಸ್ಸಾಂನಲ್ಲಿ ಬಿಜೆಪಿ ಮೇಲೆ ಶೇ.98ರಷ್ಟು ನಿರೀಕ್ಷೆಯಿದ್ದು 1.78 ಕೋಟಿ ರು. ಹಾಗೂ ಪುದುಚೇರಿಯಲ್ಲಿ 18 ಲಕ್ಷ ರು. ವ್ಯವಹಾರ ನಡೆದಿದೆ. ಅದರಂತೆ ಬಿಜೆಪಿ ಗೆಲುವು ದಾಖಲಿಸಲಾಗಿದೆ.
ಇನ್ನು ಕೇರಳದ ಪೂಂಜಾರ್ ಅಸೆಂಬ್ಲಿ ಕ್ಷೇತ್ರದಿಂದ ನನ್ನ ಗೆಲುವು ಖಚಿತ. ಈ ವಿಚಾರವಾಗಿ 1 ಕೋಟಿ ರು. ಬೆಟ್ ಕೂಡ ಕಟ್ಟಲು ಸಿದ್ಧ ಎಂದು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಜಾರ್ಜ್ ಸವಾಲು ಹಾಕಿದ್ದರು. ಜತೆಗೆ, ರಾಜ್ಯದಲ್ಲಿ ಈ ಬಾರಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂದಿದ್ದರು, ಎನ್ಡಿಎ ಮೈತ್ರಿಕೂಟ 11 ಸ್ಥಾನಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ಅದೀಗ ತಲೆ ಕೆಳಗೆ ಆಗಿದೆ. ಪೂಂಜಾರ್ ಕ್ಷೇತ್ರದಲ್ಲಿ ಕಾಂಗ್ರೆಸ್ನ ಸಬೆಸ್ಟಿಯನ್ ಗೆಲುವಿನ ನಗೆ ಬೀರಿದ್ದಾರೆ.
ಮಾಧ್ಯಮದ ಜೊತೆಗೆ ಫಲಿತಾಂಶಕ್ಕೂ ಮುನ್ನ ಮಾತನಾಡಿದ್ದ ಪಿ.ಸಿ.ಜಾರ್ಜ್, ‘ಪೂಂಜಾರ್ ಕ್ಷೇತ್ರದಿಂದ ನಾನು ಭಾರೀ ಮತಗಳ ಅಂತರದಿಂದ ಗೆಲ್ಲಲಿದ್ದೇನೆ. ಯಾರಿಗಾದರೂ ಈ ಬಗ್ಗೆ ಅನುಮಾನ ಇದ್ದರೆ ಅವರು 1 ಕೋಟಿ ರು. ಬಾಜಿ ಕಟ್ಟಲು ಮುಂದೆ ಬರಲಿ. ನೆರೆಯ ಪಾಲಾ ಕ್ಷೇತ್ರದಿಂದ ತಮ್ಮ ಪುತ್ರ ಶೋನೆ ಜಾರ್ಜ್ ಕೂಡ ಗೆಲುವು ಸಾಧಿಸಲಿದ್ದಾರೆ. ತಂದೆ-ಮಗ ಇಬ್ಬರೂ ಶಾಸಕರಾಗಲಿದ್ದೇವೆ’ ಎಂದಿದ್ದರು
‘ಪಕ್ಷದ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಬಿಜೆಪಿಯು ಕೇರಳದಲ್ಲಿ ಈ ಬಾರಿ ಉತ್ತಮ ಪ್ರದರ್ಶನ ತೋರಲಿದೆ. 11 ಸ್ಥಾನದಲ್ಲಿ ಗೆಲ್ಲಲಿದ್ದೇವೆ. ಆದರೆ ಈ ಬಾರಿ ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ. ಯಾವ ಪಕ್ಷಕ್ಕೂ ಬಹುಮತ ಸಿಗುವುದಿಲ್ಲ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಹಾಗಂತ, ಸಿಪಿಎಂ ನೇತೃತ್ವದ ಎಲ್ಡಿಎಫ್ ಕೂಡ ಅಷ್ಟೇನೂ ಕಳಪೆ ಪ್ರದರ್ಶನ ನೀಡುವುದಿಲ್ಲ’ ಎಂದಿದ್ದರು. ಆದರೆ ಫಲಿತಾಂಶಸ ನಂತರ ಕೇರಳದಲ್ಲಿ ಬಿಜೆಪಿ 3 ಸ್ಥಾನಗಳನ್ನು ಗೆದ್ದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.