ರಾಜಕೀಯ ಮಾಡುವುದು ಚುನಾವಣೆಗೆ ಮಾತ್ರ ಸೀಮಿತವಾಗಬೇಕು: ಕೇಂದ್ರ ಸಚಿವ ವಿ.ಸೋಮಣ್ಣ

By Kannadaprabha NewsFirst Published Sep 18, 2024, 7:15 PM IST
Highlights

ರಾಜಕಾರಣಿಗಳು ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕಾರಣ ಮಾಡಬೇಕು. ಉಳಿದಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಇಂದಿಲ್ಲಿ ಹೇಳಿದರು. 

ತುಮಕೂರು (ಸೆ.18): ರಾಜಕಾರಣಿಗಳು ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕಾರಣ ಮಾಡಬೇಕು. ಉಳಿದಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಇಂದಿಲ್ಲಿ ಹೇಳಿದರು. ನಗರದ ಹೊರವಲಯದ ಬೆಳಗುಂಬ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಸ್ವಚ್ಛತೆಯೇ ಸೇವೆ-2024, ಸ್ವಚ್ಛತೆಯೆಡೆ ದಿಟ್ಟ ಹೆಜ್ಜೆ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು. ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೆಳಗುಂಬ ಗ್ರಾಮ ಪಂಚಾಯ್ತಿಯನ್ನು ದತ್ತು ಪಡೆದು ಅಭಿವೃದ್ಧಿಪಡಿಸುವುದಾಗಿ ಸಚಿವ ಸೋಮಣ್ಣ ಅವರು ಇದೇ ಸಂದರ್ಭದಲ್ಲಿ ಪ್ರಕಟಿಸಿದರು. 

ಬೆಳಗುಂಬ ಪಂಚಾಯ್ತಿ, ಸ್ವಾಂದೇನಹಳ್ಳಿ, ಗೂಳೂರು, ಹೆತ್ತೇನಹಳ್ಳಿ, ಹೆಗ್ಗೆರೆ ಈ ೫ ಪಂಚಾಯ್ತಿಗಳನ್ನು ಆಂದೋಲನವನ್ನಾಗಿ ಪರಿವರ್ತನೆ ಮಾಡುವ ಜತೆಯಲ್ಲಿ ಈ ಪಂಚಾಯ್ತಿಗಳನ್ನು ದತ್ತು ತೆಗೆದುಕೊಳ್ಳುವಂತೆ ಜಿ.ಪಂ. ಸಿಇಓಗೆ ಸೂಚನೆ ನೀಡಿದರು. 5 ಪಂಚಾಯ್ತಿಗಳಲ್ಲಿ ತಿಂಗಳಿಗೆ 2-3 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನರ ಮನೆ ಬಾಗಿಲಿಗೆ ಹೋಗುವ ಕೆಲಸವನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಾಡಬೇಕಾಗಿದೆ ಎಂದರು. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಸಾಮಾನ್ಯ ಜನರಿಗೆ ವೈಯುಕ್ತಿಕ ಶೌಚಾಲಯ, ಮನೆ ಮನೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ಯಶಸ್ವಿಯಾಗಿ ಜಾರಿಗೆ ತಂದಿದೆ.

Latest Videos

ಸಿದ್ದರಾಮಯ್ಯನವರೇ ಕಾಂತರಾಜು ವರದಿ ಜಾರಿಗೆ ರಾಯಣ್ಣನ ಧೈರ್ಯವಿಲ್ಲವೇ: ಎಚ್.ವಿಶ್ವನಾಥ್

50:50ರ ಅನುಪಾತದಲ್ಲಿ ಅನುದಾನ ಸಹ ಒದಗಿಸಲಾಗುತ್ತಿದೆ. ಆದರೆ ಯೋಜನೆಯ ಉಸ್ತುವಾರಿಯನ್ನು ರಾಜ್ಯ ಸರ್ಕಾರಗಳೇ ನೋಡಿಕೊಳ್ಳುತ್ತಿವೆ ಎಂದರು. ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವೈಖರಿ ಎಲ್ಲರಿಗೂ ಮಾದರಿಯಾಗಿದೆ. ಅವರ ಹುಟ್ಟುಹಬ್ಬವನ್ನು ಹಳ್ಳಿಗಾಡಿನ ಸ್ವಚ್ಛತೆಯೊಂದಿಗೆ ಆಚರಣೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು. ಒಬ್ಬ ಪಿಡಿಓ ಸಹಿ ಹೈಕೋರ್ಟ್ ಜಡ್ಜ್ಗೆ ಸಮಾನ. ಹಾಗಾಗಿ ಪಿಡಿಓಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಹಳ್ಳಿಗಳ ಸ್ವಚ್ಛತೆ, ಪ್ರಗತಿ ಹಾಗೂ ಮೂಲಭೂತ ಸೌಕರ್ಯ ಒದಗಿಸುವ ಹೊಣೆಗಾರಿಗೆ ಪಿಡಿಓಗಳ ಮೇಲೆ ಹೆಚ್ಚಿರುತ್ತದೆ ಎಂದು ಅವರು ಹೇಳಿದರು.

ನಾನು ಅನಿರೀಕ್ಷಿತವಾಗಿ ನಾನು ಈ ಕ್ಷೇತ್ರಕ್ಕೆ ಬಂದವನು. ನನ್ನ ಪಕ್ಷದ ಸಂದೇಶವನ್ನು ತಲೆಮೇಲೆ ಇಟ್ಟುಕೊಂಡು ಬಂದಂತಹ ಸಂದರ್ಭದಲ್ಲಿ ಎಲ್ಲರ ಕೂಗುಗಳಿಗೆ ಸರಿಯಾದ ಉತ್ತರ ಕೊಟ್ಟಿದ್ದೇನೆ. ಬೆಳಗುಂಬ ಗುರುಸಿದ್ದರಾಮೇಶ್ವರ ಭವನ ನಿರ್ಮಾಣಕ್ಕೆ ವೈಯುಕ್ತಿಕವಾಗಿ ೧೦ ಲಕ್ಷ ರೂ. ಅನುದಾನ ನೀಡುವುದಾಗಿ ಸಚಿವ ಸೋಮಣ್ಣ ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು. ಶಾಸಕ ಸುರೇಶ್‌ಗೌಡ ಮಾತನಾಡಿ, ಕೇಂದ್ರ ಸಚಿವ ಸೋಮಣ್ಣ ಅವರು ರೈಲ್ವೆ ಸಚಿವರಾಗಿ ಕೇವಲ 3 ತಿಂಗಳಲ್ಲಿ ತುಮಕೂರು ಜಿಲ್ಲೆಯಲ್ಲಿ ಕ್ರಾಂತಿ ಮಾಡಿದ್ದಾರೆ. ಶರವೇಗದಲ್ಲಿ ಕೆಲಸ ಮಾಡಿದ ಯಾವ ಸಂಸದರನ್ನು ನಾವು ನೋಡಿರಲಿಲ್ಲ. ಅಷ್ಟು ವೇಗದಲ್ಲಿ ಸೋಮಣ್ಣನವರು ಕೆಲಸ ಮಾಡುತ್ತಿದ್ದಾರೆ ಎಂದರು.

ರಾಜ್ಯ ಸರ್ಕಾರದಲ್ಲಂತೂ ಅಭಿವೃದ್ಧಿಗೆ ಹಣ ಇಲ್ಲ. ಹಾಗಾಗಿ ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ಕೊಟ್ಟು ಕೇಂದ್ರದಿಂದ ಸಿಎಫ್‌ಆರ್ ಅನುದಾನವನ್ನು ಕೊಡಿಸಬೇಕು ಎಂದು ಮನವಿ ಮಾಡಿದರು. ಕಸ ವಿಲೇವಾರಿ ಘಟಕ ಅಜ್ಜಗೊಂಡನಹಳ್ಳಿಯಲ್ಲಿದೆ. ಹಾಗಾಗಿ ಬೆಳಗುಂಬ, ಹೆಗ್ಗೆರೆ, ಗೂಳೂರು ಪಂಚಾಯ್ತಿಗಳ ಕಸವನ್ನು ವಿಲೇವಾರಿ ಮಾಡಲು ಪಾಲಿಕೆ ವತಿಯಿಂದ ಅವಕಾಶ ಕಲ್ಪಿಸುವಂತೆ ಮಾಡಿದ ಮನವಿಗೆ ಆಯುಕ್ತರು ಸ್ಪಂದಿಸಿದ್ದಾರೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಾರ್ಷಿಕ ಬಜೆಟ್ 2 ಲಕ್ಷ ಕೋಟಿ. ಇದರಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು 4 ಲಕ್ಷ ಕೋಟಿ ವೆಚ್ಚ ಮಾಡಲಾಗುತ್ತಿದೆ. 

ಗೆಲ್ಲುವ ಯೋಗ್ಯತೆ ಇಲ್ಲದ ಬಿ.ಎಲ್.ಸಂತೋಷ್ ರಾಜ್ಯ ನಿಯಂತ್ರಿಸ್ತಿದಾರೆ: ಸಚಿವ ಆರ್‌.ಬಿ.ತಿಮ್ಮಾಪುರ

ಹಾಗಾಗಿ ಪ್ರತಿಯೊಬ್ಬರೂ ಸಹ ತಮ್ಮ ಮನೆ ಜತೆಗೆ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಮುಂದಾಗಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಸಕರಾದ ಸುರೇಶ್‌ಗೌಡ, ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಬೆಳಗುಂಬ ಗ್ರಾ.ಪಂ. ಅಧ್ಯಕ್ಷೆ ಪುಷ್ಪಲತಾ, ತಾ.ಪಂ. ಮಾಜಿ ಅಧ್ಯಕ್ಷ ಗಂಗಾಂಜನೇಯ ತಾ.ಪಂ. ಇಓ ಹರ್ಷಕುಮಾರ್, ಬೆಳಗುಂಬ ಗ್ರಾ.ಪಂ. ಪಿಡಿಓ ಯೋಗ ಶ್ರೀನಿವಾಸ್, ಸಣ್ಣಮಸಿಯಪ್ಪ, ಕುಂಭಯ್ಯ, ಶಂಕರಣ್ಣ, ಬೆಳಗುಂಬ ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

click me!