
ವರದಿ: ದೊಡ್ಡೇಶ ಯಲಿಗಾರ್, ಏಶಿಯಾನೆಟ್ ಸುವರ್ಣ ನ್ಯೂಸ್, ಕೊಪ್ಪಳ
ಕೊಪ್ಪಳ (ಜು.08): ಇನ್ನೇನು ಕೆಲವೇ ತಿಂಗಳು ಕಳೆದರೆ 2023ರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಈ ಹಿನ್ನಲೆಯಲ್ಲಿ ಈಗಾಗಲೇ ಪ್ರತಿಯೊಂದು ಪಕ್ಷಗಳು ಸಹ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿವೆ. ಇದೇ ಬೆನ್ನಲ್ಲೇ ಇಲ್ಲೊಂದು ಕಾರ್ಯಕ್ರಮ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದೆ. ಅಷ್ಟಕ್ಕೂ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾದ ಕಾರ್ಯಕ್ರಮವಾದರೂ ಯಾವುದು? ಎಲ್ಲಿ ಆ ಕಾರ್ಯಕ್ರಮ ಜರುಗುತ್ತಿರುವುದು ನೋಡೋಣ ಈ ವರದಿಯಲ್ಲಿ.
ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾದ ಕಾರ್ಯಕ್ರಮ ಯಾವುದು: ಪ್ರತಿಯೊಂದು ಸರಕಾರಗಳು ಬಂದಾಗಲೂ ವಸತಿ ರಹಿತರಿಗೆ ಮನೆ ಒದಗಿಸುವ ಯೋಜನೆಗಳನ್ನು ಜಾರಿಗೆ ತರುತ್ತಿರುತ್ತದೆ. ಅದೇ ರೀತಿಯಾಗಿ ಪ್ರಸ್ತುತ ಸರಕಾರದಲ್ಲಿಯೂ ಸಹ ವಸತಿ ರಹಿತರಿಗೆ ಮನೆಗಳನ್ನು ನಿರ್ಮಿಸಿ ಕೊಡುವ ಯೋಜನೆಯನ್ನು ಜಾರಿಗೆ ತಂದಿದೆ. ನಗರ ಪ್ರದೇಶದ ಜನರಿಗಾಗಿ ನಗರಸಭೆ ವತಿಯಿಂದ ವಾಜಪೇಯಿ ನಗರ ವಸತಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ 2000 ಗುಂಪು ಮನೆಗಳ ಹಕ್ಕುಪತ್ರ ವಿತರಣಾ ಕಾರ್ಯಕ್ರಮ ಇದೀಗ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿಗೆ ಕಾರಣವಾಗಿದೆ.
ಗ್ರಾಹಕರಿಗೆ ಸಂತಸದ ಸುದ್ದಿ: ಇಳಿಯುತ್ತಿದೆ ತಾಳೆ ಎಣ್ಣೆ ಬೆಲೆ, ಪ್ರತಿ ಕೆಜಿಗೆ 40 ರೂ. ಕಡಿಮೆ..!
ಎಲ್ಲಿ ಈ ಕಾರ್ಯಕ್ರಮ: ಕೊಪ್ಪಳ ಅಂದರೆ ಸಾಕು ನಮಗೆ ನೆನಪಾಗುವುದು ಆಂಜನೇಯನ ಜನ್ಮಸ್ಥಳ ಅಂಜನಾದ್ರಿ ಪರ್ವತ. ಕಿಷ್ಕಂಧ ಪ್ರದೇಶ ಎಂದು ಕರೆಯಲ್ಪಡುವ ಈ ಜಿಲ್ಲೆಯಲ್ಲಿ ರಾಜಕೀಯ ಜಿದ್ದಾಜಿದ್ದಿಯೂ ಸಹ ಜೋರಾಗಿದೆ. ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಕೊಪ್ಪಳದಲ್ಲಿ ಸಹ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಅದರ ಭಾಗವಾಗಿ ಇದೀಗ ಕೊಪ್ಪಳ ನಗರಸಭೆ ವತಿಯಿಂದ ವಾಜಪೇಯಿ ನಗರ ವಸತಿ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ 2000 ಗುಂಪು ಮನೆಗಳ ಹಕ್ಕುಪತ್ರ ವಿತರಣಾ ಕಾರ್ಯಕ್ರಮ ಸಮಾರಂಭ ಕೊಪ್ಪಳ ನಗರಸಭೆಯಲ್ಲಿ ಜರುಗಲಿದೆ.
ಯಾರ-ಯಾರ ನಡುವೆ ಜಿದ್ದಾಜಿದ್ದಿ: ಕೊಪ್ಪಳದಲ್ಲಿ ಈ ಮುಂಚೆ ರಾಜಕೀಯ ಜಿದ್ದಾಜಿದ್ದಿ ಅಷ್ಟೊಂದು ಇದ್ದಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಮಾತ್ರ ರಾಜಕೀಯ ಜಿದ್ದಾಜಿದ್ದಿ ಬಹಳ ಜೋರಾಗಿಯೇ ಇದೆ. ಅದರಲ್ಲೂ ವಿಶೇಷವಾಗಿ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಂತೂ ರಾಜಕೀಯ ಕೊಂಚ ಜೋರಾಗಿಯೇ ಇದೆ. ಈ ಬಾರಿ ಜಿದ್ದಾಜಿದ್ದಿ ಏರ್ಪಟ್ಟಿರುವುದು ಬಿಜೆಪಿಯ ಸಂಸದ ಕರಡಿ ಸಂಗಣ್ಣ ಹಾಗೂ ಕೊಪ್ಪಳ ವಿಧಾನಸಭಾ ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ್ ನಡುವೆ ಇದೀಗ ರಾಜಕೀಯ ಜಿದ್ದಾಜಿದ್ದಿ ಏರ್ಪಟ್ಟಿದೆ. ಸಂಸದ ಕರಡಿ ಸಂಗಣ್ಣ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಹೀಗಾಗಿ ಇತ್ತೀಚಿನ ದಿನಗಳಲ್ಲಿ ಈ ಫುಲ್ ಆ್ಯಕ್ಟಿವ್ ಆಗಿದ್ದು, ಪ್ರತಿಯೊಂದು ಕಾರ್ಯಕ್ರಮಗಳನ್ನು ಬಲು ಜೋರಾಗಿಯೇ ಮಾಡುತ್ತಿದ್ದಾರೆ. ಹೀಗಾಗಿ ಹಕ್ಕುಪಕ್ಕ ವಿತರಣಾ ಕಾರ್ಯಕ್ರಮವನ್ನೂ ಸಹ ಜೋರಾಗಿ ಮಾಡುತ್ತಿದ್ದು, ಬಿಜೆಪಿ ಸರಕಾರದ ಯೋಜನೆಯ ಕ್ರೆಡಿಟ್ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಮತ್ತೊಂದೆಡೆ ಈ ಯೋಜನೆಯ ಕ್ರೆಡಿಟ್ ಪಡೆಯಲು ಸಹ ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ್ ಮುಂದಾಗಿದ್ದಾರೆ. ನಗರದಾದ್ಯಂತ ಸಂಸದ ಕರಡಿ ಸಂಗಣ್ಣ, ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ್ ಫ್ಲೆಕ್ಸ್ ಹಾಕುವ ಮೂಲಕ ಇಬ್ಬರೂ ಈ ಕಾರ್ಯಕ್ರಮವನ್ನು ತಮ್ಮ ರಾಜಕೀಯ ಜಿದ್ದಾಜಿದ್ದಿಗೆ ವೇದಿಕೆ ಮಾಡಿಕೊಂಡಿದ್ದಾರೆ.
ಮಲೆನಾಡಲ್ಲಿ ವ್ಯಾಪಕ ಮಳೆ: ಟಿಬಿ ಡ್ಯಾಂಗೆ ಒಂದೇ ದಿನ 5 ಟಿಎಂಸಿ ನೀರು..!
ಒಟ್ಟಿನಲ್ಲಿ ಕಳೆದ ಒಂದು ದಶಕದಿಂದ ಆರಂಭವಾಗದ ಕರಡಿ ಸಂಗಣ್ಣ ಹಾಗೂ ರಾಘವೇಂದ್ರ ಹಿಟ್ನಾಳ್ ನಡುವಿನ ರಾಜಕೀಯ ಜಿದ್ದಾಜಿದ್ದಿ ಇದೀಗ ಇಬ್ಬರ ನಡುವೆ ಚುನಾವಣೆ ಸಮೀಪಿಸುತ್ತಲೆ ಆರಂಭವಾಗಿದೆ. ಈ ಜಿದ್ದಾಜಿದ್ದಿ ಯಾವ ಹಂತಕ್ಕೆ ತಲುಪುತ್ತಿದೆ ಅನ್ನೋದನ್ನ ಕಾದುನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.