Assembly election: ರೆಡ್ಡಿ ಸ್ಪರ್ಧೆಯಿಂದ ತೊಂದರೆಯಿಲ್ಲ; ಗೆಲುವು ನನ್ನದೇ ಎಂದ ಶಾಸಕ ಪರಣ್ಣ

By Kannadaprabha NewsFirst Published Dec 26, 2022, 12:54 PM IST
Highlights

2023ರ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ನಾನೇ. ಜನಾರ್ದನ ರೆಡ್ಡಿಯವರ ಸ್ಪರ್ಧೆಯಿಂದ ಯಾವುದೇ ತೊಂದರೆಯಿಲ್ಲ. ಗೆಲುವು ನನ್ನದೆ ಎಂದು ಗಂಗಾವತಿಯ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ತಿಳಿಸಿದ್ದಾರೆ.

 ಹೊಸಪೇಟೆ (ಡಿ.26) : ಮಾಜಿ ಸಚಿವ ಜನಾರ್ದನ ರೆಡ್ಡಿಯವರು ಹೊಸ ಪಕ್ಷ ಘೋಷಣೆ ಮಾಡಿರುವುದು ಗಣಿ ನಾಡಿನಲ್ಲಿ ಬಿರುಗಾಳಿ ಎಬ್ಬಿಸಿದೆ. ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಕಮಲ ಅರಳುವಂತೆ ಮಾಡಿದ ಚಾಣಕ್ಯ ಜನಾರ್ದನ ರೆಡ್ಡಿ. 1999ರ ಬಳ್ಳಾರಿ ಲೋಕಸಭೆ ಚುನಾವಣೆ ಹೈವೋಲ್ಟೇಜ್‌ ಆಗಿತ್ತು. ಸೋನಿಯಾ ಗಾಂಧಿ ಹಾಗೂ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್‌ ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆಗ ರೆಡ್ಡಿ ಈ ಚುನಾವಣೆಯಲ್ಲಿ ನಿಭಾಯಿಸಿದ ಪಾತ್ರ ಹಿರಿದಾಗಿದೆ. ಸುಷ್ಮಾ ಸ್ವರಾಜ್‌ ವಿರೋಚಿತ ಸೋಲು ಕಂಡರೂ ಆ ಬಳಿಕ ನಡೆದ ಸಾಲು, ಸಾಲು ಚುನಾವಣೆಗಳಲ್ಲಿ ಕೈ ಪಾಳಯ ಹೊಡೆತ ತಿಂದಿದೆ.

ರೆಡ್ಡಿಯವರು ಅಖಂಡ ಬಳ್ಳಾರಿ ಜಿಲ್ಲೆಯ ಹತ್ತು ವಿಧಾನಸಭಾ ಸ್ಥಾನಗಳ ಮೇಲೆ ಕಣ್ಣಿಟ್ಟಿದ್ದಾರೆ. ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ತಲಾ ಐದು ಸ್ಥಾನಗಳಲ್ಲಿ ಅವರ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯುವುದು ನಿಕ್ಕಿಯಾಗಿದೆ. ಈಗಾಗಲೇ ಬೆಂಬಲಿಗರು ಹಾಗೂ ಹಿತೈಷಿಗಳ ಜತೆಗೆ ಮಾತುಕತೆ ನಡೆಸಿರುವ ಅವರು, ಕಮಲ ಪಾಳಯದ ಮತಗಳನ್ನು ಬೇಟೆಯಾಡಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ಜನಾರ್ದನ ರೆಡ್ಡಿಯನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಯತ್ನ: ಸಚಿವ ಶ್ರೀರಾಮುಲು

ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಬೇಕಾದರೆ ಗಣಿ ನಾಡು ಹಾಗೂ ಕರಾವಳಿ ಭಾಗದಲ್ಲಿ ಹೆಚ್ಚಿನ ಸ್ಥಾನ ಗೆಲ್ಲಬೇಕೆಂಬ ಲೆಕ್ಕಾಚಾರ ಬಿಜೆಪಿಯ ಚಿಂತಕರ ಚಾವಡಿಯದು. ಈಗ ರೆಡ್ಡಿಯವರ ಹೊಸ ಪಕ್ಷ ಸ್ಥಾಪನೆಯಿಂದ ಬಿಜೆಪಿ ಮತಗಳು ಚದುರಲಿವೆ. 2013ರಲ್ಲಿ ಬಿಎಸ್‌ಆರ್‌ ಹಾಗೂ ಕೆಜೆಪಿಯಿಂದಾಗಿ ಬಿಜೆಪಿಗೆ ಹೊಡೆತ ಬಿದ್ದು, ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಕಾಂಗ್ರೆಸ್‌ ಚಿಗುರಿತ್ತು. ಈಗ ಕೆಆರ್‌ಪಿ ಪಕ್ಷದಿಂದ ಕೈ ಪಾಳಯಕ್ಕಿಂತ ಕೇಸರಿ ಪಾಳಯಕ್ಕೆ ಭಾರಿ ಹೊಡೆತ ನೀಡಲಿದೆ ಎಂಬ ರಾಜಕೀಯ ವಿಶ್ಲೇಷಣೆ ನಡೆದಿದೆ.

ರೆಡ್ಡಿ ಸ್ಪರ್ಧೆಯಿಂದ ತೊಂದರೆಯಿಲ್ಲ, ಗೆಲುವು ನನ್ನದೆ: ಪರಣ್ಣ

ಗಂಗಾವತಿ: 2023ರ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ನಾನೇ. ಜನಾರ್ದನ ರೆಡ್ಡಿಯವರ ಸ್ಪರ್ಧೆಯಿಂದ ಯಾವುದೇ ತೊಂದರೆಯಿಲ್ಲ. ಗೆಲುವು ನನ್ನದೆ ಎಂದು ಗಂಗಾವತಿಯ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ತಿಳಿಸಿದ್ದಾರೆ. ಗಂಗಾವತಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾನೇ. 2023ಕ್ಕೆ ನಡೆಯುವ ಚುನಾವಣೆಯಲ್ಲಿ ನನ್ನ ಗೆಲುವು ಖಚಿತ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರಾದರೂ ಚುನಾವಣೆಗೆ ಸ್ಪರ್ಧಿಸಬಹುದು. ಇನ್ನೊಬ್ಬರು ಸ್ಪರ್ಧಿಸುವ ವಿಚಾರಕ್ಕೆ ನಾನೇಕೆ ಮಾತನಾಡಬೇಕು ಎಂದರು. ಇದೇ ವೇಳೆ, ವಿಧಾನಪರಿಷತ್‌ ಮಾಜಿ ಸದಸ್ಯ, ಎಚ್‌.ಆರ್‌. ಶ್ರೀನಾಥ ಪ್ರತಿಕ್ರಿಯಿಸಿ, ಇಲ್ಲಿ ನನಗೆ ಕಾಂಗ್ರೆಸ್‌ ಟಿಕೆಟ್‌ ಸಿಗುವುದು ಖಚಿತವಾಗಿದೆ. ನಾನು ಜಯ ಸಾಧಿಸುತ್ತೇನೆ. ರೆಡ್ಡಿ ಸ್ಪರ್ಧಿಸುವುದರಿಂದ ಬಿಜೆಪಿಗೆ ನಷ್ಟ. ಕಾಂಗ್ರೆಸ್ಸಿಗೆ ಏನೂ ತೊಂದರೆ ಇಲ್ಲ ಎಂದಿದ್ದಾರೆ.

ಗಂಗಾವತಿಯಲ್ಲಿ ಕಾಂಗ್ರೆಸ್‌ನಿಂದ ಮೂವರು ಟಿಕೆಟ್‌ ಆಕಾಂಕ್ಷಿಗಳಿದ್ದಾರೆ. ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಮತ್ತು ವಿಧಾನಪರಿಷತ್‌ ಮಾಜಿ ಸದಸ್ಯ ಎಚ್‌.ಆರ್‌. ಶ್ರೀನಾಥ. ಈ ಮಧ್ಯೆ, ಸಿದ್ದರಾಮಯ್ಯ ಅವರು ಅನ್ಸಾರಿ ಹೆಸರನ್ನು ಘೋಷಣೆ ಮಾಡಿದ್ದಾರೆ.

Assembly election:ಬಿಜೆಪಿಯ ಕುತಂತ್ರ ಬಯಲಿಗೆಳೆಯುತ್ತೇನೆ: ಹೊಸ ಪಕ್ಷ ಘೋಷಣೆ ಬೆನ್ನಲ್ಲೇ ಬಾಂಬ್‌ ಹಾಕಿದ ರೆಡ್ಡಿ

ಭಾನುವಾರ ಹೊಸ ಪಕ್ಷ ಘೋಷಣೆ ಮಾಡಿರುವ ಜನಾರ್ದನ ರೆಡ್ಡಿ, ಗಂಗಾವತಿಯಿಂದ ಸ್ಪರ್ಧೆಗೆ ಮುಂದಾಗಿದ್ದು, ಗಂಗಾವತಿ ನಗರದಲ್ಲಿ ಹೊಸ ಮನೆ ಖರೀದಿಸಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್‌ ಮತದಾರರನ್ನು ಸೆಳೆಯುವ ತಂತ್ರಗಾರಿಕೆಗೆ ಮುಂದಾಗಿದ್ದಾರೆ. ಬಿಜೆಪಿ ಕಾರ್ಯಕರ್ತರ ನಿವಾಸಗಳಿಗೆ ತೆರಳಿ ಕುಶಲೋಪರಿ ವಿಚಾರಿಸಿದರೆ, ಕಾಂಗ್ರೆಸ್‌ ಮತ ಸೆಳೆಯುವುದಕ್ಕೆ ಮಸೀದಿ, ದರ್ಗಾಗಳಿಗೆ ತೆರಳಿ ಅನುದಾನದ ಭರವಸೆ ನೀಡಿದ್ದಾರೆ. ಜೊತೆಗೆ, ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಹೊಸ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ನಿರ್ಧರಿಸಿದ್ದಾರೆ.

click me!