PM Modi Reply Ravana Jibe: ಕಾಂಗ್ರೆಸ್‌ ಎಂದಿಗೂ ರಾಮನನ್ನು ನಂಬಿಲ್ಲ, ನನ್ನ ನಿಂದನೆಗೆ ರಾವಣನ ತಂದಿದ್ದಾರೆ!

By Santosh NaikFirst Published Dec 1, 2022, 1:40 PM IST
Highlights

ಪ್ರಧಾನಿ ನರೇಂದ್ರ ಮೋದಿಯನ್ನು ರಾವಣ ಎಂದು ಕರೆದಿದ್ದ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಮೋದಿ ಗುಜರಾತ್‌ ವಿಧಾನಸಭೆ ಚುನಾವಣೆಯ ಪ್ರಚಾರದ ವೇಳೆ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್‌ ಎಂದಿಗೂ ರಾಮನನ್ನು ನಂಬಿಲ್ಲ. ಅದರಿಂದಾಗಿ ನನ್ನ ನಿಂದನೆಗೆ ರಾವಣನನ್ನು ತಂದಿದ್ದಾರೆ ಎಂದು ಟೀಕಿಸಿದ್ದಾರೆ.

ಅಹಮದಾಬಾದ್‌ (ಡಿ.1): ಪ್ರತಿ ಬಾರಿಯೂ ಎದುರಾಳಿಯ ಟೀಕೆಗಳನ್ನೇ ತಮ್ಮ ಅಸ್ತ್ರವನ್ನಾಗಿ ಬಳಕೆ ಮಾಡಿಕೊಳ್ಳುವ ಪ್ರಧಾನಿ ಮೋದಿ, ಕಾಂಗ್ರೆಸ್‌ ಪಕ್ಷದ ನೂತನ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರ ರಾವಣ ಟೀಕೆಗೂ ತಿರುಗೇಟು ನೀಡಿದ್ದಾರೆ. ಗುಜರಾತ್‌ನ ಪಂಚಮಹಲ್‌ನ ಕಾಲೋಲ್‌ನಲ್ಲಿ ಗುರುವಾರ ಬೃಹತ್‌ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ತಮ್ಮನ್ನು ರಾವಣ ಎಂದು ಕರೆದ ಮಲ್ಲಿಕಾರ್ಜುನ್‌ ಖರ್ಗೆಗೆ ಅದೇ ರಿತಿಯಲ್ಲಿ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್‌ ಪಕ್ಷದಲ್ಲಿ ನನ್ನನ್ನು ನಿಂದನೆ ಮಾಡುವ ನಿಟ್ಟಿನಲ್ಲಿ ಸ್ಪರ್ಧೆ ಇರುವಂತೆ ಕಾಣುತ್ತಿದೆ. ಆದರೆ. ಒಂದನ್ನು ಅರ್ಥ ಮಾಡಿಕೊಳ್ಳಲಿ. ನನ್ನ ಮೇಲೆ ಅವರು ಎಷ್ಟು ಕೆಸರನ್ನು ಎರಚುತ್ತಾರೋ, ಅಷ್ಟೇ ಕಮಲ ಅರಳುತ್ತದೆ ಎಂದು ಹೇಳಿದ್ದಾರೆ. ಇತ್ತೀಚೆಗೆ ಸೂರತ್‌ನಲ್ಲಿ ನಡದ ಬೃಹತ್‌ ಸಮಾವೇಶದಲ್ಲಿ ಮಾತನಾಡಿದ್ದ ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ್‌ ಖರ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾವಣನಿಗೆ ಹೋಲಿಕೆ ಮಾಡಿದ್ದರು. ಇದರ ಬೆನ್ನಲ್ಲಿಯೇ ಕರ್ನಾಟಕದಲ್ಲಿ ಖರ್ಗೆ ಅವರ ಹೇಳಿಕೆಗೆ ಬಿಜೆಪಿ ಟೀಕೆ ಮಾಡಿತ್ತು. ಮಲ್ಲಿಕಾರ್ಜುನ ಖರ್ಗೆ ದುಶ್ಯಾಸನ ಎಂದು ಕರ್ನಾಟಕ ಬಿಜೆಪಿ ಟೀಕೆ ಮಾಡಿತ್ತು.

ಕಾಂಗ್ರೆಸ್‌ ಎಂದಿಗೂ ರಾಮನನ್ನು ನಂಬಿಲ್ಲ, ಅದಕ್ಕಾಗಿ ರಾವಣ ಎಂದಿದ್ದಾರೆ: ಭಗವಾನ್‌ ರಾಮ ಇದ್ದ, ಅಯೋಧ್ಯೆಯಲ್ಲಿ ರಾಮನ ದೇವಾಲಯವಿತ್ತು ಎನ್ನುವುದನ್ನು ಕಾಂಗ್ರೆಸ್‌ ಪಕ್ಷ ಎಂದಿಗೂ ನಂಬಿಲ್ಲ. ಇದೇ ಜನರು ರಾಮ ಸೇತುವನ್ನೂ ವಿರೋಧಿಸಿದ್ದರು. ಹಾಗಾಗಿ ಅವರು ನನ್ನನ್ನು ನಿಂದನೆ ಮಾಡಲು ಇವರೆಲ್ಲಾ ರಾಮಾಯಣದ ರಾವಣನನ್ನು ತರುತ್ತಾರೆ ಎಂದು ಹೇಳಿದರು. ಇದೇ ಸಮಾವೇಶದಲ್ಲಿ ಮಾತನಾಡಿದ ಅವರು, ಕೆಲ ದಿನಗಳ ಹಿಂದೆ ಕಾಂಗ್ರೆಸ್‌ನ ನಾಯಕರೊಬ್ಬರು, ಮೋದಿ ನಾಯಿಯ ರೀತಿಯಲ್ಲಿ ಸಾಯುತ್ತಾರೆ ಎಂದಿದ್ದರು.  ನಾನೇ ಮೋದಿಯನ್ನು ಕೊಲ್ಲುತ್ತೇನೆ ಎಂದು ಆ ವ್ಯಕ್ತಿ ಹೇಳಿದ್ದ.. ಕೆಲವರು ನನ್ನನ್ನು ರಾವಣ ಎನ್ನುತ್ತಾರೆ. ಇನ್ನೂ ಕೆಲವರು ರಾಕ್ಷಸ ಎನ್ನುತ್ತಾರೆ. ಮತ್ತೆ ಕೆಲವರು ಜಿರಳೆ ಎನ್ನುತ್ತಾರೆ. ಮಲ್ಲಿಕಾರ್ಜುನ್‌ ಖರ್ಗೆ ಕ್ಷಮೆ ಕೇಳುವ ಮಾತು ಹಾಗಿರಲಿ,  ಕಾಂಗ್ರೆಸ್‌ನವರು ಯಾರೂ ಅವರ ಮಾತನ್ನು ವಿರೋಧ ಮಾಡಿಲ್ಲ ಎಂದು ಹೇಳಿದರು.

ಮಲ್ಲಿಕಾರ್ಜುನ್‌ ಖರ್ಗೆ ಹೇಳಿದ್ದೇನು: ಸೂರತ್‌ನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ್ದ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ಮತದಾರರಿಗೆ ನೀವು ನನ್ನ ಮುಖ ನೋಡಿ ಮತ ಹಾಕಿ ಎನ್ನುತ್ತಾರೆ. ಮೋದಿಯ ಮುಖ ನೋಡಿ ಮತ ನೀಡಿ ಎನ್ನುತ್ತಾರೆ. ಇವರ ಮುಖವನ್ನೇ ಎಷ್ಟು ಬಾರಿ ನೋಡುವುದು? ಕನಿಷ್ಠ ಸಣ್ಣ ಪಾಲಿಕೆ ಚುನಾವಣೆಯಲ್ಲೂ ಮೋದಿಯ ಮುಖ ನೋಡಿ ವೋಟ್‌ ಹಾಕುವಂತೆ ಹೇಳುತ್ತಾರೆ. ಸೂರತ್‌ನ ವಿಧಾನಸಭೆ ಚುನಾವಣೆ ಇರಲಿ, ಲೋಕಸಭಾ ಚುನಾವಣೆ ಇರಲಿ. ಎಲ್ಲಾ ಕಡೆಯೂ ಮೋದಿಯ ಮುಖವೇ ಕಾಣುತ್ತದೆ. ನೀವೂ ಕುಡ ರಾವಣನಂತೆ 100 ಮುಖ ಹೊಂದಿದ್ದೀರಿ ಎಂದು ಹೇಳಿದ್ದರು.

ಪ್ರಧಾನಿ ಮೋದಿಯನ್ನು ರಾವಣನಿಗೆ ಹೋಲಿಸಿದ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ: ಬಿಜೆಪಿ ತಿರುಗೇಟು

ನಾನು ಗುಜರಾತ್‌ನ ಮಗ: ನಾನು ಗುಜರಾತ್‌ನ ಮಗ. ನೀವು ನೀಡಿರುವ ಗುಣವೇ ನನ್ನಲ್ಲಿ ಬಂದಿದೆ. ಇಲ್ಲಿನ ಜನ ನೀಡಿರುವುದೇ ನನ್ನ ಶಕ್ತಿ ಎಂದು ಮೋದಿ ಹೇಳಿದರು. ನಾನು ಈ ಕಾಂಗ್ರೆಸ್‌ ನಾಯಕರಿಗೆ ತುಂಬಾ ತೊಂದರೆ ನೀಡುತ್ತಿದ್ದೇನೆ. ಕಾಂಗ್ರೆಸ್‌ನ ಸ್ನೇಹಿತರಿಗೆ ನಾನು ಹೇಳೋದಿಷ್ಟೇ. ಕಿವಿಗೊಟ್ಟು ಕೇಳಿ. ನೀವು ಸಂವಿಧಾನವನ್ನು ಎಂದೂ ನಂಬಿಲ್ಲ ಅದೇ ನಿಮ್ಮ ದೊಡ್ಡ ವಿಷಯ. ಒಂದು ಕುಟುಂಬಕ್ಕಾಗಿ ಬದುಕಬೇಕು ಎಂದುಕೊಂಡಿದ್ದರೆ, ಅದು ನಿಮ್ಮ ಆಯ್ಕೆ. ಆದರೆ, ಒಂದು ವಿಚಾರವನ್ನು ತಿಳಿದುಕೊಳ್ಳಿ. ನೀವು ನನ್ನ ಮೇಲೆ ಎಷ್ಟು ಕೆಸರು ಹಾಕುತ್ತೀರೋ, ಅಷ್ಟು ಕಮಲ ಅರಳುತ್ತದೆ ಎಂದು ಹೇಳಿದ್ದಾರೆ.

Assembly election: ದೇಶದಲ್ಲಿ ಕಾಂಗ್ರೆಸ್‌ ರೌಡಿಸಂ ಜನಕವಾಗಿದೆ ರವಿಕುಮಾರ್ ವಾಗ್ದಾಳಿ

ಮೋದಿ ಗುರುವಾರದಿಂದ ಎರಡು ದಿನಗಳ ಗುಜರಾತ್‌ ಪ್ರವಾಸ ಆರಂಭಿಸಿದ್ದಾರೆ. ಈ ಎರಡು ದಿನಗಳಲ್ಲಿ ಅವರು 7 ಸಮಾವೇಶಗಳನ್ನು ಮಾಡಲಿದ್ದಾರೆ. ಗುರುವಾರ ಅಹಮದಾಬಾದ್‌ನಲ್ಲಿ 50 ಕಿಲೋಮೀಟರ್‌ ರೋಡ್‌ ಶೋ ಕೂಡ ನಡೆಸಲಿದ್ದಾರೆ. ಕಲೋಲ್‌ ಮಾತ್ರವಲ್ಲದೆ, ಚೋಟಾ ಉದಯ್‌ಪುರ ಬೊಡೆಲಿ ಮತ್ತು ಹಿಮ್ಮತ್‌ ನಗರದಲ್ಲಿ ಸಮಾವೇಶ ಮಾಡಲಿದ್ದರೆ, ಶುಕ್ರವಾರ ಕಾಕ್ರೇಜ್‌, ಪಟಾನ್‌, ಸೋಜಿತ್ರಾ ಮತ್ತು ಅಹಮದಾಬಾದ್‌ನಲ್ಲಿ ಸಮಾವೇಶ ನಡೆಯಲಿದೆ.

click me!