
ಬೆಂಗಳೂರು(ಡಿ.01): ‘ಬಿಜೆಪಿ ಸರ್ಕಾರವು ಕೇವಲ ಮತದಾರ ಪಟ್ಟಿಮೇಲೆ ಮಾತ್ರವಲ್ಲ. ನಾಗರಿಕರ ಮೇಲೂ ಹದ್ದಿನ ಕಣ್ಣಿಟ್ಟಿದೆ. ಪ್ರತಿಯೊಬ್ಬ ಮತದಾರನ ಸಾಮಾಜಿಕ ಜಾಲತಾಣ ಪರಿಶೀಲಿಸಿ ಅವರು ಬಿಜೆಪಿಯೇತರ ಪಕ್ಷದೊಂದಿಗೆ ಗುರುತಿಸಿ ಕೊಂಡಿದ್ದರೆ ಮತದಾರರ ಪಟ್ಟಿಯಿಂದ ಕೈಬಿಡಲಾಗುತ್ತಿದೆ. ಇದಕ್ಕಾಗಿಯೇ ದಿನದ 24 ಗಂಟೆಯೂ ನಾಗರಿಕರ ಮೇಲೆ ನಿಗಾವಹಿಸಲಾಗುತ್ತಿದೆ’ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ‘ಪ್ರತಿಯೊಬ್ಬ ಜನಸಾಮಾನ್ಯರ ಸಾಮಾಜಿಕ ಜಾಲತಾಣಗಳನ್ನು ಪರಿಶೀಲಿಸಿ ಅವರು ಯಾವ ಪಕ್ಷದ ಬಗ್ಗೆ ಮೃದು ಧೋರಣೆ ಹೊಂದಿದ್ದಾರೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ. ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಅವರನ್ನು ಫಾಲೋ ಮಾಡುತ್ತಿದ್ದರೆ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಯಲಾಗುತ್ತಿದೆ. ನರೇಂದ್ರ ಮೋದಿ, ಬಿಜೆಪಿಯನ್ನು ಫಾಲೋ ಮಾಡುತ್ತಿದ್ದರೆ ಮುಂದುವರೆಸಲಾಗುತ್ತಿದೆ. ಇದು ಕೇವಲ ರಾಜ್ಯಕ್ಕೆ ಸೀಮಿತವಾಗಿಲ್ಲ. ದೇಶಾದ್ಯಂತ ಇದೇ ರೀತಿಯಲ್ಲಿ ಅಕ್ರಮ ನಡೆಸಲಾಗುತ್ತಿದೆ’ ಎಂದು ದೂರಿದರು.
ಪ್ರಿಯಾಂಕ್ ಖರ್ಗೆ ಸೋಲಿಗಾಗಿ ಪಣ: ಮೊಣಕಾಲ ಮೇಲೆ ತಿರುಮಲ ಬೆಟ್ಟ ಹತ್ತಿ ಹರಕೆ ಹೊತ್ತ ಬಿಜೆಪಿ ಮುಖಂಡ
ರಹಸ್ಯ ಕಾರ್ಯಾಚರಣೆ:
ಹೇಗೆ ಅಕ್ರಮ ಮಾಡುತ್ತಿದ್ದಾರೆ ಎಂಬುದನ್ನೂ ವಿವರಿಸಿದ ಅವರು, ‘ಮತದಾರರ ಗುರುತಿನ ಚೀಟಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುತ್ತಾರೆ. ಅದರ ಜತೆ ಮೊಬೈಲ್ ನಂಬರ್ ಕೊಡಬೇಕು. ಪ್ರತಿಯೊಂದು ಸಾಮಾಜಿಕ ಜಾಲತಾಣ ತೆರೆಯಲೂ ಮೊಬೈಲ್ ನಂಬರ್ ಅಗತ್ಯ. ಹೀಗಾಗಿ ನಿಮ್ಮ ದೂರವಾಣಿ ಸಂಖ್ಯೆ ನೋಡಿ ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಪ್ರೊಫೈಲ್ ಹುಡುಕಲಾಗುತ್ತದೆ. ನಿಮ್ಮ ರಾಜಕೀಯ ಆಸಕ್ತಿಗಳನ್ನು ತಿಳಿದು ನೀವು ಕಾಂಗ್ರೆಸ್ಸಿಗರಾಗಿದದ್ದರೆ ಮತದಾರರ ಪಟ್ಟಿಯಿಂದ ಕೈಬಿಡಲಾಗುತ್ತದೆ’ ಎಂದು ಆರೋಪಿಸಿದರು.
ಡೇಟಾ ಪ್ರೈವಸಿ ಹಿಂಪಡೆದಿದ್ದೇಕೆ?:
‘ಡೇಟಾ ಪ್ರೈವಸಿ ಪ್ರತಿಯೊಬ್ಬರ ಹಕ್ಕು. ಇದನ್ನು ಕಾಪಾಡಲು ದಿ ಡಿಜಿಟಲ್ ಪರ್ಸನ್ ಡಾಟಾ ಪ್ರೊಟೆಕ್ಷನ್ ಬಿಲ್-2022 ಹೆಸರಿನಲ್ಲಿ ವಿಧೇಯಕ ತಂದರು. ಇದನ್ನು ಸಮಿತಿಗೆ ತಂದು ಮತ್ತೆ ಪರಿಶೀಲನೆ ಹೆಸರಿನಲ್ಲಿ ವಾಪಸು ತೆಗೆದುಕೊಂಡರು. ಸರ್ಕಾರಕ್ಕೆ ನಾವು ಏನು ಮಾಡುತ್ತಿದ್ದೇವೆ ? ಏನು ಖರೀದಿ ಮಾಡುತ್ತಿದ್ದೇವೆ ಎಂಬುದೆಲ್ಲಾ ಯಾಕೆ ಬೇಕು? ಈ ಸರ್ಕಾರ ನಾಗರಿಕರ ಮೇಲೆ ದಿನದ 24 ಗಂಟೆಯೂ ಸರ್ವೈಲನ್ಸ್ (ನಿಗಾ) ಮಾಡುತ್ತಿದ್ದಂತಲ್ಲವೇ?’ ಎಂದು ಕಿಡಿಕಾರಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.