
ನರಗುಂದ (ಜೂ.08): ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜಿ ಒಂಬತ್ತು ವರ್ಷದ ಅಧಿಕಾರದ ಅವಧಿಯಲ್ಲಿ ಒಂದು ದಿನವೂ ರಜೆ ತೆಗೆದುಕೊಳ್ಳದೇ ಉತ್ತಮ ಆಡಳಿತ ನಡೆಸಿದ್ದಾರೆ. ಭಾರತದ ಅಭಿವೃದ್ಧಿಯತ್ತ ಸಾಗುತ್ತಿರುವುದು ನಮಗೆಲ್ಲ ಸಂತಸ ತಂದಿದೆ ಎಂದು ಶಾಸಕ, ಮಾಜಿ ಸಚಿವ ಸಿ.ಸಿ.ಪಾಟೀಲ್ ಹೇಳಿದರು. ಅವರು ಬುಧವಾರ ತಮ್ಮ ಸ್ವಗೃಹದಲ್ಲಿರುವ ಪಕ್ಷದ ಸಭಾಭವನದಲ್ಲಿ ಪ್ರಧಾನಿ ಮೋದಿಯವರ ಆಡಳಿತ 9 ವರ್ಷ ಗತಿಸಿದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮೋದಿಜಿ ಆಡಳಿತದಲ್ಲಿ ಪುಲ್ವಾಮ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ವಿವಿಧ ಉಗ್ರಗಾಮಿ ಅಡುಗುದಾಣಗಳ ಮೇಲೆ ದಾಳಿ ಮಾಡಿ ಸರ್ಜಿಕಲ್ ಸ್ಟೈಕ್ ನಡೆಸಿದ್ದಾರೆ.
ದೇಶದಲ್ಲಿದ್ದ ನೈರ್ಮಲ್ಯ ಸಮಸ್ಯೆಗೆ ಸ್ವಚ್ಛ ಭಾರತ, ಗಂಗಾನದಿ ಶುದ್ಧೀಕರಣಕ್ಕೆ ನಮಾಮಿ ಗಂಗೆ, ರೈತರ ಸಂಕಷ್ಟಗಳಿಗೆ ಸ್ಪಂದಿಸಲು ಕಿಸಾನ್ ಸಮ್ಮಾನ್ ಯೋಜನೆಯಡಿ ವರ್ಷಕ್ಕೆ 10 ಕೋಟಿ ರೈತರು ಅನುಕೂಲತೆ ಪಡೆಯುತ್ತಿದ್ದಾರೆ. ಕೋವಿಡ್ 19 ಆಘಾತ ನಿರ್ವಹಣೆಗೆ ಆತ್ಮ ನಿರ್ಭರ ಭಾರತ ಯೋಜನೆ ಅನುಷ್ಠಾನಕ್ಕೆ . 20 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಲಾಗಿದೆ ಎಂದರು.
ಡೆಪ್ಯುಟಿ ಸ್ಪೀಕರ್ ಸ್ಥಾನ ತಿರಸ್ಕರಿಸಿದ್ದ ಪುಟ್ಟರಂಗಶೆಟ್ಟಿ ಯೂ ಟರ್ನ್: ಕಾಂಗ್ರೆಸ್ ವರಿಷ್ಠರ ನಿರ್ಧಾರಕ್ಕೆ ಒಪ್ಪಿಗೆ
ಗ್ರಾಮೀಣ ಜನತೆಯ ಕಣ್ಣೀರೊರೆಸಲು ಗರೀಬ್ ಕಲ್ಯಾಣ ಯೋಜನೆ, ಜನಸಾಮಾನ್ಯರ ವಹಿವಾಟುಗಳಿಗೆ ಜನಧನ್ ಯೋಜನೆ, ನಗರಗಳ ಅಭಿವೃದ್ಧಿಗೆ ಸ್ಮಾರ್ಚ್ ಸಿಟಿ ಯೋಜನೆ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ಕಾಶ್ಮೀರ ಸಮಸ್ಯೆಗೆ ಮುಕ್ತಿ ಹೀಗೆ ಅನೇಕ ಜನಪರ ಕಲ್ಯಾಣ ಯೋಜನೆಗಳಿಗೆ ಚಾಲನೆ ನೀಡಿ ನವಭಾರತದ ನವಮನ್ವಂತರಕ್ಕೆ ಮುನ್ನುಡಿ ಬರೆದಿದ್ದಲ್ಲದೇ 2024ರ ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟದ ಬಿಜೆಪಿ ಸರಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದೇಶದಲ್ಲಿನ ಕಪ್ಪು ಹಣದ ದಂಧೆಗೆ ಮತ್ತು ನಕಲಿ ನೋಟುಗಳ ಹಾವಳಿಗೆ ಕಡಿವಾಣ ಹಾಕಲು ಇಡೀ ದೇಶದಲ್ಲಿಯೇ ನೋಟು ಅಮಾನ್ಯೀಕರಣ. ಸ್ವದೇಶಿ ಕೈಗಾರಿಕೋದ್ಯಮಿಗಳಿಗೆ ಉತ್ತೇಜನ ನೀಡಲು ಮೇಕ್ ಇನ್ ಇಂಡಿಯಾ ಯೋಜನೆ. ಮಹಿಳೆಯರ ವಿದ್ಯಾಭ್ಯಾಸಕ್ಕೆ ಒತ್ತು ನೀಡಲು ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆ. ಗ್ರಾಮಗಳ ಅಭಿವೃದ್ಧಿಗೆ ಸಂಸದರ ಆದರ್ಶ ಗ್ರಾಮ ಯೋಜನೆ. ಇಂಟರನೆಟ್ ಮತ್ತು ಮೊಬೈಲ್ ಸಂಪರ್ಕ ಆಧಾರಿತ ವ್ಯಾಪಾರ ವಹಿವಾಟುಗಳಿಗೆ ಸೌಲಭ್ಯ ಕಲ್ಪಿಸಿ ಡಿಜಿಟಲ್ ಕ್ರಾಂತಿ ಮಾಡಲಾಗುತ್ತಿದೆ. ರೈತರ ಬೆಳೆನಷ್ಟಕ್ಕೆ ಅನುಕೂಲವಾಗಲು ಫಸಲ್ ಬೀಮಾ ಯೋಜನೆ ಮತ್ತು ಬಡವರಿಗೆ ಮಧ್ಯಮ ವರ್ಗದವರಿಗೆ ಅನುಕೂಲವಾಗಲು ಕಡಿಮೆ ದರದಲ್ಲಿ ಔಷಧಿ ನೀಡುವ ಯೋಜನೆಯಾಗಿದೆ. ಶೇ.55ರಿಂದ ಶೇ.85ರಷ್ಟುಹಣದ ಉಳಿತಾಯವಾಗುತ್ತದೆ ಎಂದರು.
ಯೋಗಕ್ಕೆ ವಿಶ್ವಮನ್ನಣೆ ತಂದುಕೊಟ್ಟ ಕೀರ್ತಿ ಮತ್ತು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಣೆಗೆ ತಂದ ಶ್ರೇಯಸ್ಸು ಮೋದಿಜಿಯವರಿಗೆ ಸಲ್ಲುತ್ತದೆ. ಭಾರತವು ಈಗ ವಿಶ್ವದಲ್ಲಿಯೇ ಎರಡನೇ ಅತೀ ಹೆಚ್ಚಿನ ಸ್ಟೀಲ್ ಉತ್ಪಾದನೆಯ ರಾಷ್ಟ್ರವಾಗಿದೆ. ಜಗತ್ತಿನ 4ನೇ ಅತೀ ಹೆಚ್ಚು ಆಟೋಮೊಬೈಲ್ ಉತ್ಪಾದನಾ ರಾಷ್ಟ್ರಗಳಲ್ಲಿ ಭಾರತವು ಒಂದಾಗಿರಲು ಮೋದಿಜಿಯವರ ಪಾತ್ರ ದೊಡ್ಡದಾಗಿದೆ ಎಂದು ಶ್ಲಾಘಿಸಿದರು.
ತಿಹಾರ್ ರೀತಿ ರಾಜ್ಯದ ಜೈಲುಗಳಿಗೆ ಕಠಿಣ ಜಾಮರ್: ಮೊಬೈಲ್ ಬಳಕೆ ತಡೆಯಲು ಹೊಸ ತಂತ್ರಜ್ಞಾನ
ಸುಭದ್ರ ರಾಷ್ಟ್ರಕ್ಕಾಗಿ ಆರ್ಟಿಕಲ್ 370 ಕಲಂ ರದ್ದುಗೊಳಿಸಿ, ಕಾಶ್ಮೀರವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಲಾಗುತ್ತಿದೆ. ಜಮ್ಮು ಮತ್ತು ಲಡಾಖ್ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಣೆ ಮಾಡಿದೆ. ಚೀನಾ ಹಾಗೂ ಪಾಕಿಸ್ತಾನ ಈ ಎರಡು ರಾಷ್ಟ್ರಗಳನ್ನು ಎದುರಿಸುವ ಶಕ್ತಿಯನ್ನು ಹೊಂದಿದೆಯಲ್ಲದೇ ಶಸ್ತ್ರಾಸ್ತ್ರಗಳನ್ನು ತಯಾರಿಸಿ ವಿದೇಶಕ್ಕೆ ರಪ್ತು ಮಾಡುವ ಶಕ್ತಿಯನ್ನು ಹೊಂದಿದೆ. ಒಟ್ಟಾರೆ ಮೋದಿ ಅವರು ಭಾರತದ ಅಭಿವೃದ್ಧಿಯತ್ತ ಗಮನ ಹರಿಸಿದ್ದಾರೆ ಹೊರತು ಮತಕ್ಕಾಗಿ, ಅಧಿಕಾರಕ್ಕಾಗಿ ಅಲ್ಲ. ಮೋದಿಜಿ ಪೇಪರಲೆಸ್ ಸಂಸತ್ತು ನಿರ್ಮಿಸಿ ಜಗತ್ತು ಭಾರತದ ಕಡೆ ನೋಡುವಂತೆ ಮಾಡಿದ್ದಾರೆಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.