ಜು.7ರೊಳಗೆ ಪ್ರಧಾನಿ ಮೋದಿ ಸಂಪುಟ ವಿಸ್ತರಣೆ..?

By Kannadaprabha NewsFirst Published Jul 3, 2021, 7:59 AM IST
Highlights
  • ಕೇಂದ್ರ ಸಚಿವ ಸಂಪುಟ ವಿಸ್ತರಣೆಯ ಕುರಿತಂತೆ ಎದ್ದಿರುವ ಎಲ್ಲಾ ಊಹಾಪೋಹಗಳಿಗೆ ಶೀಘ್ರದಲ್ಲೇ ತೆರೆ
  • ಪ್ರಧಾನಿ ನರೇಂದ್ರ ಮೋದಿಯಿಂದ ಎರಡು ಹಂತದಲ್ಲಿ ಸಂಪುಟ ಪುನರ್‌ ರಚನೆ
  • ಇನ್ನಷ್ಟು ಮಂದಿ ಸದಸ್ಯರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ

ನವದೆಹಲಿ (ಜು.03): ಕೇಂದ್ರ ಸಚಿವ ಸಂಪುಟ ವಿಸ್ತರಣೆಯ ಕುರಿತಂತೆ ಎದ್ದಿರುವ ಎಲ್ಲಾ ಊಹಾಪೋಹಗಳಿಗೆ ಶೀಘ್ರದಲ್ಲೇ ತೆರೆ ಬೀಳಲಿದೆ. ಪ್ರಧಾನಿ ನರೇಂದ್ರ ಮೋದಿ ಎರಡು ಹಂತದಲ್ಲಿ ಸಂಪುಟ ಪುನರ್‌ ರಚನೆಗೆ ಮುಂದಾಗುವ ಸಾಧ್ಯತೆ ಇದೆ. ಮೊದಲ ಹಂತದ ಸಂಪುಟ ಪುನರ್‌ ರಚನೆ ಜು.7ರ ಒಳಗಾಗಿ ನಡೆಯಬಹುದು. ಮುಂಗಾರು ಅಧಿವೇಶನ ಮುಗಿದ ಬಳಿಕ ಇನ್ನಷ್ಟು ಮಂದಿ ಸದಸ್ಯರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಮೋದಿ ತಮ್ಮ ಸಂಪುಟದಲ್ಲಿ ಗರಿಷ್ಠ 81 ಮಂದಿ ಸಚಿವರನ್ನು ಹೊಂದುವುದಕ್ಕೆ ಅವಕಾಶ ಇದೆ. ಸದ್ಯ ಮೋದಿ ಸಂಪುಟದಲ್ಲಿ 53 ಮಂದಿ ಸದಸ್ಯರಿದ್ದಾರೆ. ತಮ್ಮ ಸರ್ಕಾರದ ಆಡಳಿತ ದಕ್ಷತೆಯನ್ನು ಹೆಚ್ಚಿಸಲು ಮೋದಿ ಅವರು ಇನ್ನು 28 ಮಂದಿಯನ್ನು ಸಂಪಟಕ್ಕೆ ಸೇರಿಸಿಕೊಳ್ಳುವುದಕ್ಕೆ ಅವಕಾಶ ಇದೆ.

ಜುಲೈ 19 ರಿಂದ ಆರಂಭಗೊಳ್ಳಲಿದೆ ಸಂಸತ್ ಮುಂಗಾರು ಅಧಿವೇಶನ! ...

ಈ ಬಾರಿ ಸಂಪುಟದಲ್ಲಿ ಮಹತ್ವದ ಬದಲಾವಣೆಯನ್ನು ಮಾಡಲು ಮುಂದಾಗಿರುವ ಮೋದಿ 20ಕ್ಕೂ ಹೆಚ್ಚು ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇದೆ. ಹೊಸ ಮುಖಗಳನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದರ ಜೊತೆಗೆ ಎನ್‌ಡಿಎ ಮೈತ್ರಿಕೂಟದ ಮುಖಂಡರಿಗೂ ಆದ್ಯತೆ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಯಾರಿಗೆಲ್ಲಾ ಮಣೆ?:  ಕಾಂಗ್ರೆಸ್‌ನಿಂದ ಬಿಜೆಪಿಗೆ ವಲಸೆ ಬಂದಾಗಿನಿಂದಲೂ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಜ್ಯೋತಿರಾದಿತ್ಯ ಸಿಂಧಿಯಾ, ಅಸ್ಸಾಂ ಮಾಜಿ ಮುಖ್ಯಮಂತ್ರಿ ಸರಬಾನಂದ ಸೋನೋವಾಲ್‌ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು ಬಹುತೇಕ ಪಕ್ಕಾ ಎಂದು ಹೇಳಲಾಗುತ್ತಿದೆ. ಜೊತೆಗೆ ಎನ್‌ಡಿ ಮೈತ್ರಿಕೂಟದ ಪಕ್ಷಗಳಾದ ಜೆಡಿಯು ಮತ್ತು ಎಲ್‌ಜೆಪಿಯ ಮುಖಂಡರಿಗೂ ಆದ್ಯತೆ ನೀಡುವ ಸಾಧ್ಯತೆ ಇದೆ.

'ಮೋದಿ ದುಬಾರಿ ವಿಮಾನದಲ್ಲಿ ಓಡಾಡಿ ಸರ್ಕಾರದ ಖರ್ಚು ಜನರ ಮೇಲೆ ಹೇರ್ತಾರೆ' .

ಹರ್ಷವರ್ಧನ್‌ ಖಾತೆ ಬದಲು?: ಇದೇ ವೇಳೆ ಕೊರೋನಾ 2ನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ವೈಫಲ್ಯ ಅನುಭವಿಸಿರುವ ಆರೋಗ್ಯ ಸಚಿವ ಹರ್ಷವರ್ಧನ್‌ ಅವರ ಖಾತೆಯನ್ನು ಇನ್ನೊಬ್ಬರಿಗೆ ನೀಡುವ ಸಾಧ್ಯತೆ ಇದೆ. ಒಂದು ವೇಳೆ ಅವರನ್ನು ಆರೋಗ್ಯ ಖಾತೆಯಿಂದ ಕೆಳಗಿಳಿಸಿದರೆ ಸಂಪುಟದ ಬೇರೆ ಯಾವುದಾದರೂ ಖಾತೆಯನ್ನು ಅವರಿಗೆ ನೀಡುವ ಸಾಧ್ಯತೆ ಇದೆ. ಹರ್ಷವರ್ಧನ್‌ ಅವರಿಂದ ತೆರವಾಗಲಿರುವ ಸ್ಥಾನಕ್ಕೆ ದೆಹಲಿಯ ಸಂಸದ ಪರ್ವೇಶ್‌ ವರ್ಮಾ ಮತ್ತು ಮೀನಾಕ್ಷಿ ಲೇಖಿ ಅವರ ಹೆಸರುಗಳು ಕೇಳಿ ಬರುತ್ತಿವೆ.

ಹೆಚ್ಚುವರಿ ಖಾತೆ ತೆರವು:  ಇದೇ ವೇಳೆ ಹಲವು ಸಚಿವರು ಹೆಚ್ಚುವರಿ ಖಾತೆಗಳನ್ನು ನಿಭಾಯಿಸುತ್ತಿದ್ದು, ಅವರ ಮೇಲಿನ ಒತ್ತಡವನ್ನು ಕಡಿಮೆ ಮಾಡಿ ಹೊಸ ಮುಖಗಳಿಗೆ ಅದ್ಯತೆ ನೀಡಬಹುದು ಎನ್ನಲಾಗಿದೆ.

ಉದಾಹರಣೆಗೆ ಹರ್ದೀಪ್‌ ಸಿಂಗ್‌ ಪುರಿ ಅವರು ವಸತಿ, ನಗರ ವ್ಯವಹಾರ, ನಾಗರಿಕ ವಿಮಾನಯಾನ, ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ರಾಜ್ಯ ಸಚಿವ ಹುದ್ದೆಯನ್ನು ನಿಭಾಯಿಸುತ್ತಿದ್ದಾರೆ. ಪೀಯೂಷ್‌ ಗೋಯಲ್‌ ಅವರು ರೈಲ್ವೆ ಖಾತೆಯ ಜೊತೆಗೆ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರ, ಆಹಾರ ಮತ್ತು ಪಡಿತರ ಖಾತೆಯನ್ನು ನಿಭಾಯಿಸುತ್ತಿದ್ದಾರೆ. ಹೀಗೆ ಎರಡಕ್ಕಿಂತ ಹೆಚ್ಚಿನ ಖಾತೆಗಳನ್ನು ನಿಭಾಯಿಸುತ್ತಿರುವ ಸಚಿವರ ಖಾತೆಗಳನ್ನು ಬೇರೆಯವರಿಗೆ ನೀಡುವ ಕುರಿತು ಚಿಂತನೆ ನಡೆದಿದೆ.

ಸಂಪಟ ವಿಸ್ತರಣೆಯ ವೇಳೆ ಕರ್ನಾಟಕ, ಉತ್ತರಾಖಂಡ, ಹರ್ಯಾಣ ರಾಜ್ಯಗಳಿಗೆ ಹೆಚ್ಚಿನ ಪ್ರಾಶಸ್ತ್ಯ ದೊರೆಯವ ಸಾಧ್ಯತೆ ಇದೆ. ಜೊತೆಗೆ ಮುಂಬರುವ ಉತ್ತರ ಪ್ರದೇಶ ಚುನಾವಣೆಯನ್ನೂ ಗಣನೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

click me!