
ಮೂಲ್ಕಿ (ಫೆ.7) : ರಾಜ್ಯ ಬಿಜೆಪಿ ಸರ್ಕಾರವು ಇತಿಹಾಸವನ್ನು ತಿರುಚುವ ಜೊತೆಗೆ ಜನತೆಯ ಧಾರ್ಮಿಕ ಭಾವನೆಗಳ ಮೇಲೆ ಚೆಲ್ಲಾಟವಾಡುತ್ತಿದ್ದು ದೇಶಭಕ್ತಿಯ ಹೆಸರಿನಲ್ಲಿ ದ್ವೇಷಪೂರಿತ ಭಾಷಣ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಹಾಗೆ, ಕಾಂಗ್ರೆಸ್ ಸುಳ್ಳು ಹೇಳುವುದಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ. ಕೆ . ಹರಿಪ್ರಸಾದ್ ಹೇಳಿದರು.
ಮೂಲ್ಕಿಯ ಬಪ್ಪನಾಡು ದೇವಳದ ಶ್ರೀ ಅನ್ನ ಪೂರ್ಣೇಶ್ವರಿ ಸಭಾಗೃಹದಲ್ಲಿ ಜರುಗಿದ ಕಾಂಗ್ರೆಸ್ ಪಕ್ಷದ ಹಳೆಯಂಗಡಿ ಜಿ.ಪಂ. ಕ್ಷೇತ್ರ, ಮೂಲ್ಕಿ ಹಾಗೂ ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕರಾವಳಿ ಪ್ರಜಾಧ್ವನಿ ಯಾತ್ರೆ ಕಾಂಗ್ರೆಸ್ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಫೆಬ್ರವರಿ ಕೊನೆಯೊಳಗೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ: ಬಿ ಕೆ ಹರಿಪ್ರಸಾದ್
ಶೇ. 40 ಕಮಿಷನ್ ನ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಹೇಳಿದರು. ಕಾಂಗ್ರೆಸ್ ನಾಯಕ, ಪಕ್ಷದ ಹಿಂದುಳಿದ ವರ್ಗದ ಅಧ್ಯಕ್ಷ ಮಧು ಬಂಗಾರಪ್ಪ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೊಟ್ಟಸವಲತ್ತುಗಳನ್ನು ಕಿತ್ತುಕೊಂಡ ಹಾಗೂ ಕರಾವಳಿ ಭಾಗದ ಜನರ ಕೈಗೆ ಚಾಕು ಚೂರಿ ಕೊಟ್ಟಬಿಜೆಪಿ ಸರ್ಕಾರವನ್ನು ಬದಲಿಸುವ ಸಮಯ ಬಂದಿದೆ ಎಂದು ಅವರು ತಿಳಿಸಿದರು.
ವಿಧಾನ ಸಭಾ ವಿಪಕ್ಷ ಉಪ ನಾಯಕ ಯು. ಟಿ. ಖಾದರ್ ಮಾತನಾಡಿ, ಸಂವಿಧಾನ ವಿರೋಧಿ ಬಿಜೆಪಿ ಸರ್ಕಾರವನ್ನು ಮನೆಗೆ ಕಳಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಹೇಳಿದರು.
ಎಐಸಿಸಿ ಸದಸ್ಯ ರೋಜಿ ಜಾನ್ ಮಾತನಾಡಿ, ಭ್ರಷ್ಟಬಿಜೆಪಿ ಸರ್ಕಾರದ ಅಸಲಿ ಮುಖಗಳು ಬಯಲಾಗಿದ್ದು ದುರಾಡಳಿತಕ್ಕೆ ಫುಲ್ ಸ್ಟಾಪ್ ನೀಡಿ ಎಂದು ಕರೆ ನೀಡಿದರು.
ಈ ಸಂದರ್ಭ ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಮಂಜುನಾಥ ಭಂಡಾರಿ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಮಿಥುನ್ ರೈ, ಡಾ. ರಾಜಶೇಖರ ಕೋಟ್ಯಾನ್, ಮಾಜಿ ಮೇಯರ್ ಕವಿತಾ ಸನಿಲ್, ಶಾಲೆಟ್ ಪಿಂಟೋ, ಕೃಪಾ ಆಳ್ವ, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಮಮತಾ ಗಟ್ಟಿ, ಲುಕ್ಕಾನ್ ಬಂಟ್ವಾಳ, ಕೆಪಿಸಿಸಿ ಕೊ- ಆರ್ಡಿನೇಟರ್, ವಸಂತ ಬೆರ್ನಾಡ್ ಮತ್ತಿತರರು ಉಪಸ್ಥಿತರಿದ್ದರು. ಮೋಹನ್ ಕೋಟ್ಯಾನ್ ಸ್ವಾಗತಿಸಿದರು. ಮಂಜುನಾಥ ಭಂಡಾರಿ ಪ್ರಸ್ತಾವನೆಗೈದರು. ಪ್ರಕಾಶ್ ಕಿನ್ನಿಗೋಳಿ ನಿರೂಪಿಸಿದರು.
ಸೋಮಪ್ಪ ಸುವರ್ಣ ಮನೆಗೆ ಭೇಟಿ
ಭಾರತ್ ಜೋಡೋ ಮತ್ತು ಪ್ರಜಾ ಧ್ವನಿ ಯಾತ್ರೆಯ ಮೂಲಕ ಕಾಂಗ್ರೆಸ್ ಪಕ್ಷವು ಜನರಲ್ಲಿ ಶಾಂತಿ, ಧೈರ್ಯ ತುಂಬುವ ಕಾರ್ಯ ಮಾಡಿದ್ದು ಕಾಶ್ಮಿರದಲ್ಲಿ ಆರ್ಟಿಕಲ್ 370 ಯಿಂದ ಯಾವುದೇ ಪ್ರಯೋಜನ ಉಂಟಾಗಿಲ್ಲ. ಭಯೋತ್ಪಾದನೆ ಹೆಚ್ಚಾಗಿದ್ದು ಕಾಶ್ಮೀರಿ ಪಂಡಿತರ ಹತ್ಯೆ ಹಿಂದಿಗಿಂತ ಹೆಚ್ಚಾಗಿದೆ. ಸ್ವತಂತ್ರವಾಗಿ ತಿರುಗುವಂತಿಲ್ಲ. ಈ ಬಾರಿ ಕಾಂಗ್ರೆಸ್ ಪಕ್ಷ ಸಂಪೂರ್ಣ ಬಹುಮತಗಳಿಸಲಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಹೇಳಿದರು.
ಮೂಲ್ಕಿಯಲ್ಲಿ ಮಾಜಿ ಶಾಸಕ ದಿ. ಕೆ. ಸೋಮಪ್ಪ ಸುವರ್ಣರ ಮನೆಗೆ ಭೇಟಿ ನೀಡಿದ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದರು.
ಬಿಜೆಪಿ ಆಡಳಿತದಿಂದ ಕೇವಲ ಭಯದ ವಾತಾವರಣ ಸೃಷ್ಟಿಯಾಗಿದೆ. ಬುಲ್ದೋಜರ್ ಓಡಿಸುವ ಮೂಲಕ ಜನರ ಸ್ವತಂತ್ರವನ್ನು ಹತ್ತಿಕ್ಕುವ ಕಾರ್ಯ ಮಾಡುತ್ತಿದ್ದು ತಾಕತ್ತಿದ್ದರೆ ಅಮಿತ್ ಶಾ ಅವರು ಶ್ರೀನಗರದ ಬಿಜೆಪಿ ಕಚೇರಿಯಿಂದ ಲಾಲ್ ಚೌಕದವರೆಗೆ ರಾರಯಲಿ ಮಾಡಿ ತೋರಿಸಲಿ. ದೇಶದ ಇತರ ಕಡೆ ಜಾಗ ಖರೀದಿಸುವ ಅಂಬಾನಿ, ಅದಾನಿಯವರು ಕಾಶ್ಮೀರದಲ್ಲಿ ಜಾಗ ಖರೀದಿಸಿ ತೋರಿಸಿದಾಗ ಆರ್ಟಿಕಲ್ 370ಯಿಂದ ಪರಿವರ್ತನೆ ಯಾಗಿದೆ ಎಂದು ಗೊತ್ತಾಗುತ್ತದೆ. ಈ ಸಂದರ್ಭ ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಮಂಜುನಾಥ ಭಂಡಾರಿ, ಮಾಜಿ ಸಚಿವ ಅಭಯ್ ಚಂದ್ರ ಜೈನ್, ಕಾಂಗ್ರೆಸ್ ನಾಯಕ ಮಧು ಬಂಗಾರಪ್ಪ ಮತ್ತಿತರರು ಉಪಸ್ಥಿತರಿದ್ದರು.
ಬಿ.ಕೆ.ಹರಿಪ್ರಸಾದ ಕೊತ್ವಾಲ ರಾಮಚಂದ್ರನ ಶಿಷ್ಯ; ಪ್ರತಿಪಕ್ಷ ನಾಯಕನ ಜನ್ಮ ಜಾಲಾಡಿದ ಸಚಿವ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.