ಸಂಕಷ್ಟದಲ್ಲಿ ಪಿಣರಾಯಿಗೆ ಕೈ ಹಿಡಿದ ಹವಾಮಾನ, ಕಾಂಗ್ರೆಸ್‌ಗೆ ತಲೆನೋವಾದ ತಮಿಳುನಾಡು-ತೆಲಂಗಾಣ!

By Suvarna NewsFirst Published Dec 29, 2022, 4:46 PM IST
Highlights

ಭಾರತದಲ್ಲಿ ಇದೀಗ ರಾಜಕೀಯ ಚಟುವಟಿಕೆ ಚುರುಕಾಗಿದೆ. ಒಂದೊಂದೆ ರಾಜ್ಯಗಳು ವಿಧಾನಸಭಾ ಚುನಾವಣೆಗೆ ತಯಾರಿ ನಡೆಸುತ್ತಿದೆ. ಅಧಿಕಾರಕ್ಕಾಗಿ ರಾಜಕೀಯ ನಾಯಕರು ಕಸರತ್ತು ನಡೆಸುತ್ತಿದೆ. ಇದರ ನಡುವೆ ಬಂಡಾಯ, ಅಸಾಧಾನಗಳು ಹೆಚ್ಚಾಗುತ್ತಿದೆ. ಇದು ಕಾಂಗ್ರೆಸ್ ತಲೆನೋವಾಗಿ ಕಾರಣವಾಗಿದೆ. ಇತ್ತ ಕೇರಳದ ಸಿಎಂ ಪಿಣರಾಯಿ ಪ್ರತಿ ಬಾರಿ ಸಂಕಷ್ಟಕ್ಕೆ ಸಿಲುಕಿದಾಗ ಅವರ ಕೈಹಿಡಿದಿದ್ದು ಹವಾಮಾನ ಅನ್ನೋ ಕುತೂಹಲ ಮಾಹಿತಿ ಇಲ್ಲಿದೆ.

ಮುಜುಗರ ಸಂದರ್ಭದಲ್ಲಿ ಪಿಣರಾಯಿ ನೆರವಾದ ಹವಾಮಾನ!
ಪಿಣರಾಯಿ ವಿಜಯ್ ನೇತೃತ್ವದ ಕೇರಳ ಸರ್ಕಾರ ಇದೀಗ ಇಕ್ಕಟ್ಟಿಗೆ ಸಿಲುಕಿದೆ. ಚಿನ್ನ ಕಳ್ಳ ಸಾಗಾಟ ಸೇರಿದಂತೆ ಹಲವು ಅಕ್ರಮಗಳ ಬೆನ್ನಲ್ಲೇ ಇಧೀಗ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ತಮ್ಮದೇ ಪಕ್ಷದ ಹಿರಿಯ ನಾಯಕ ಪಿ ಜಯರಾಜನ್ ಇತ್ತೀಚೆಗೆ ಎಲ್‌ಡಿಎಫ್ ಸಂಚಾಲಕ ಇಪಿ ಜಯರಾಜನ್ ವಿರುದ್ಧವೇ ಭ್ರಷ್ಟಾಚಾರ ಆರೋಪ ಮಾಡಿದ್ದಾರೆ. ಇದು ಸರ್ಕಾರದ ಬುಡವನ್ನೇ ಅಲುಗಾಡಿಸಿದೆ. ಆದರೆ ಇಂತಹ ಹಲವು ಕಠಿಣ ಸಂದರ್ಭಗಳನ್ನು ಸಿಎಂ ಪಿಣರಾಯಿ ವಿಜಯನ್ ಯಶಸ್ವಿಯಾಗಿ ಎದುರಿಸಿ ಸರ್ಕಾರ ಉಳಿಸಿಕೊಂಡಿದ್ದಾರೆ. ಇದೀಗ ದೆಹಲಿ ಪ್ರವಾಸದ ವೇಳೆ ಇದೇ ಭ್ರಷ್ಟಾಚಾರದ ಕುರಿತು ಪ್ರಶ್ನಿಸಲಾಗಿದೆ. ಈ ವೇಳೆ ಪಿಣರಾಯಿ ವಿಜಯನ್ ಈ ಹಿಂದಿನಂತೆ ಮಾಧ್ಯದ ಬಾಣಗಳಿಂದ ತಪ್ಪಿಸಿಕೊಳ್ಳಲು ಹವಾಮಾನ ವರದಿ ಮುಂದಿಟ್ಟು ಜಾರಿಕೊಂಡಿದ್ದಾರೆ.  

ಮಾಧ್ಯಮಗಳ ಕಠಿಣ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡಿದೆ ಜಾರಿಕೊಳ್ಳುವ ಕಲೆ ಪಿಣರಾಯಿ ವಿಜಯನ್‌ಗಿಂತ ಚೆನ್ನಾಗಿ ಬಲ್ಲವರನ್ನು ಮತ್ಯಾರು ಇಲ್ಲ. ಪಿಣರಾಯಿ ಪಕ್ಷದಲ್ಲಿನ ಭ್ರಷ್ಟಾಚಾರ ಆರೋಪ ಕುರಿತು ಪ್ರಶ್ನೆಗೆ ಪಿಣರಾಯಿ, ಇಲ್ಲಿ(ದೆಹಲಿ) ತುಂಬಾ ಚಳಿ ಇದೆ ಎಂಬ ಉತ್ತರ ನೀಡಿ ಸಾಗಿದ್ದಾರೆ. ಇತ್ತೀಚೆಗೆ ಸಿಪಿಎಂ ಶಾಸಕ ಎಂಎಂ ಮಣಿ ಹಾಗೂ ಸಿಪಿಐ ರಾಷ್ಟ್ರೀಯ ನಾಯಕ ನಿ ರಾಜಾ ಮೇಲಿನ ಆರೋಪ ಪ್ರತ್ಯಾರೋಪ ಕುರಿತು ಕೇಳಿದ್ದ ಪ್ರಶ್ನೆಗೆ ಪಿಣರಾಯಿ ವಿಜಯನ್, ನಿಮ್ಮಲ್ಲಿ ಉತ್ತಮ ಮಳೆಯಾಗಿದೆ ಅಲ್ಲವೇ ಎಂದು ಮರು ಪ್ರಶ್ನಿಸಿ ಮುನ್ನಡೆದಿದ್ದಾರೆ.

India Gate ಚಳಿಗಾಲ ಅಧಿವೇಶನಕ್ಕೆ ಬ್ರೇಕ್, ತೆಲಂಗಾಣದಲ್ಲಿ ರಾಜಕೀಯ ತಳಮಳ!

ಸರ್ಕಾರಕ್ಕೆ ತೀವ್ರ ಹಿನ್ನಡೆ, ಪಕ್ಷಕ್ಕೆ ಮುಜುಗರ ಬಂದ ಸಂದರ್ಭಗಳಲ್ಲಿ ಮಾಧ್ಯಮ ಪ್ರಶ್ನೆಗಳಿಗೆ ಸಂಬಂಧವಿಲ್ಲದ ಉತ್ತರ ನೀಡಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುತ್ತಾರೆ. ಈ ಮೂಲಕ ಪತನಗೊಳ್ಳುತ್ತಿದ್ದ ಸರ್ಕಾರವನ್ನು ಉಳಿಸಿಕೊಳ್ಳುವಲ್ಲಿ ಇದುವರೆಗೂ ಯಶಸ್ವಿಯಾಗಿದ್ದಾರೆ. 

ಕಾಂಗ್ರೆಸ್ ಜೋಡೋಗೆ ಸಕಾಲ
ರಾಹುಲ್ ಗಾಂಧಿ ಒಡೆದು ಹೋಗಿರುವ ಭಾರತವನ್ನು ಒಗ್ಗೂಡಿಸಲು ಭಾರತ್ ಜೋಡೋ ಯಾತ್ರೆ ನಡೆಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಒಳಗಿನ ಆಂತರಿಕ ಕಚ್ಚಾಟದಿಂದ ಇದೀಗ ರಾಹುಲ್ ಕಾಂಗ್ರೆಸ್ ಜೋಡೋ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ. ಪ್ರಮುಖವಾಗಿ ತಮಿಳುನಾಡು ಕಾಂಗ್ರೆಸ್ ಹರಿದು ಹಂಚಿಹೋಗಿದೆ. ನಾಯಕತ್ವಕ್ಕಾಗಿ ಪ್ರಬಲರ ಹೋರಾಟ ನಡೆಯುತ್ತಿದೆ. ಬಿಜೆಪಿ ಅಣ್ಣಾಮಲೈ ನೇತೃತ್ವದಲ್ಲಿ ಪಕ್ಷ ಸಂಘಟನೆ ನಡೆಸುತ್ತಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಯುವ ನಾಯಕನಿಗೆ ಪಟ್ಟ ಕಟ್ಟಲು ಮುಂದಾಗಿತ್ತು. ಈ ರೇಸ್‌ನಲ್ಲಿ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಪುತ್ರನ ಹೆಸರು ಮುಂಚೂಣಿಯಲ್ಲಿತ್ತು. ಕೆಎಸ್ ಅಳಗಿರಿ ವಿರುದ್ಧ ಪಕ್ಷದೊಳಗೆ ಉತ್ತಮ ಅಭಿಪ್ರಾಯವಿಲ್ಲ. ಇದು ಕೂಡ ಕಾಂಗ್ರೆಸ್ ಪಕ್ಷಕ್ಕೆ ಸಂಕಷ್ಟ ತಂದಿದೆ. 

2024ರ ಚುನಾವಣೆಗೆ ತಯಾರಾಗುತ್ತಿರುವ ಕಾಂಗ್ರೆಸ್ ಒಗ್ಗಟ್ಟಿನಿಂದ ಮುನ್ನಗ್ಗಲು ಪ್ರಯತ್ನಿಸುತ್ತಿದೆ. ಆದರೆ ತಮಿಳುನಾಡು ಕಾಂಗ್ರೆಸ್ ನಾಯಕರು ಒಂದೊಂದು ದಿಕ್ಕಿನಲ್ಲಿ ಸಾಗುತ್ತಿದ್ದಾರೆ. ಹೀಗಾಗಿ ರಾಹುಲ್ ಗಾಂದಿ ಕಾಂಗ್ರೆಸ್ ಜೋಡೋ ಮೂಲಕ ಪಕ್ಷ ಸಂಘಟನೆ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.

FROM THE INDIA GATE: ಸಂಸದ್‌ ಟಿವಿಯಲ್ಲಿ ಪಟ್ಟು, ದೇವೇಗೌಡ-ಮೋದಿ ಭೇಟಿ ಹಿಂದಿನ ಗುಟ್ಟು!

ತೆಲಂಗಾಣ ಕಾಂಗ್ರೆಸ್‌ನಲ್ಲಿ ಬಿರುಕು, ದೇಶಿ ವರ್ಸಸ್ ವಿದೇಶಿ!
ತೆಲಂಗಾಣ ಕಾಂಗ್ರೆಸ್‌ನಲ್ಲಿ ಬಂಡಾಯ ಹೆಚ್ಚಾಗಿದೆ. ಪಿಸಿಸಿ ಮುಖ್ಯಸ್ಥರಾಗಿ ರೇವನಾಥ್ ರೆಡ್ಡಿ ನೇಮಕ ಇದೀಗ ಪಕ್ಷದೊಳಗೆ ಬಂಡಾಯವೇಳಲು ಕಾರಣವಾಗಿದೆ. ರೇವನಾಥ್ ರೆಡ್ಡಿ ನೇಮಕಕ್ಕೆ ಪಕ್ಷದ ಪ್ರಮುಖ ನಾಯಕರಾದ ಜಗ್ಗಾರೆಡ್ಡಿ ಹಾಗೂ ವಿ ಹನುಮಂತ ರಾವ್ ಬಂಡಾ ಎದ್ದಿದ್ದಾರೆ. ಟಿಡಿಪಿಯಿಂದ ಕಾಂಗ್ರೆಸ್‌ಗೆ ಬಂದ ವಲಸೆ ನಾಯಕರಿಗೆ ಮಣೆ ಹಾಕಿರುವುದು ಮೂಲ ಕಾಂಗ್ರೆಸ್ಸಿಗರ ವಿರೋಧಕ್ಕೆ ಕಾರಣವಾಗಿದೆ. ರೇವನಾಥ್ ನೇಮಕಕ್ಕೆ ಬೆಂಬಲ ಸೂಚಿಸಿದ ತೆಲಂಗಾಣ ಕಾಂಗ್ರೆಸ್ ಉಸ್ತುವಾರಿ ನಾಯಕ ಮಾಣಿಕ್ಕಂ ಟ್ಯಾಗೋರ್ ಬದಲು ಹೊಸ ಉಸ್ತುವಾರಿ ನೇಮಕಕ್ಕೆ ಕಾಂಗ್ರೆಸ್ ಮುಂದಾಗಿದೆ. ಇದರ ಬೆನ್ನಲ್ಲೇ  ದ್ವಿಗ್ವಿಜಯ್ ಸಿಂಗ್ ಸೇರಿದಂತೆ ಹಲವು ನಾಯಕರು ತೆಲಂಗಾಣದ ಕಾಂಗ್ರೆಸ್ ರಾಜಕೀಯ ಕುರಿತು ಚರ್ಚೆ ನಡೆಸಿದ್ದಾರೆ.

ಪಿಸಿಸಿ ಮುಖ್ಯಸ್ಥ ಉತ್ತಮ್ ಕುಮಾರ್ ರೆಡ್ಡಿ ಮತ್ತು ತೆಲಂಗಾಣದ ಶಾಸಕಾಂಗ ಪಕ್ಷದ ನಾಯಕ ಮಲ್ಲು ಭಟ್ಟಿ ವಿಕ್ರಮಾರ್ಕ ಸೇರಿದಂತೆ ಹಲವು ನಾಯಕರು ಇದೀಗ ರೇವನಾಥ್ ರೆಡ್ಡಿ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ದಿನದಿಂದ ದಿನಕ್ಕೆ ರೇವನಾಥ್ ವಿರೋಧಿ ಬಣದ ನಾಯಕರ ಸಂಖ್ಯೆ ಹೆಚ್ಚಾಗುತ್ತಿದೆ.  ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಶೀಘ್ರದಲ್ಲೇ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ. 

click me!