MLC Election: 'ಪ್ರಧಾನಿ ಮೋದಿ ಸುಳ್ಳು ಆಶ್ವಾಸನೆಗಳಿಂದ ಬೇಸತ್ತ ಜನ'

By Kannadaprabha NewsFirst Published Nov 26, 2021, 8:06 AM IST
Highlights

*  ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನ
*  ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ವಿಪ ಅಭ್ಯರ್ಥಿ ಸಲೀಂ ಅಹ್ಮದ ವಿಶ್ವಾಸ
*  ರಾಜ್ಯದಲ್ಲಿರುವುದು ನಿರ್ಜೀವ ಸರ್ಕಾರ
 

ಹುಬ್ಬಳ್ಳಿ(ನ.26):  ಕಾಂಗ್ರೆಸ್‌ನಿಂದ(Congress) ಯಾವುದೇ ಮೀಸಲಾತಿ ರಾಜಕಾರಣ ಮಾಡುತ್ತಿಲ್ಲ. ಏನಿದ್ದರೂ ಬಿಜೆಪಿಯ ವಿರುದ್ಧ ಹೋರಾಟ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿರುವ ವಿಧಾನ ಪರಿಷತ್‌ ಕಾಂಗ್ರೆಸ್‌ ಅಭ್ಯರ್ಥಿ ಸಲೀಂ ಅಹ್ಮದ(Saleem Ahmed), ಪಕ್ಷಕ್ಕೆ ಮೊದಲ ಪ್ರಾಶಸ್ತ್ಯದ ಮತ ಬೀಳುವಂತೆ ಮಾಡುವುದು ಎಲ್ಲರ ಹೊಣೆ. ಈ 25 ಸ್ಥಾನಗಳ ಪೈಕಿ 15ಕ್ಕಿಂತಲೂ ಹೆಚ್ಚಿನ ಸ್ಥಾನಗಳಲ್ಲಿ ಕಾಂಗ್ರೆಸ್‌ ಗೆಲವು ಸಾಧಿಸಲಿದೆ ಎಂದರು.

ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಪರಿಷತ್‌ ಚುನಾವಣೆ(Vidhan Parishat Election) ಹಿನ್ನೆಲೆಯಲ್ಲಿ ಕಾರ್ಯಕರ್ತರ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಪರಿಷತ್‌ ಚುನಾವಣೆಯಲ್ಲಿ ಜನಪ್ರತಿನಿಧಿಗಳಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಹೆಚ್ಚಿನ ಮತಗಳ ಅಂತರಗಳ ಗೆಲವು ಸಾಧಿಸುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 25 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಹಿಂದೆ 14 ಸ್ಥಾನಗಳಲ್ಲಿ ಕಾಂಗ್ರೆಸ್‌ ಗೆಲವು ಸಾಧಿಸಿತ್ತು. ಈ ಸಲ ಅದಕ್ಕಿಂತಲೂ ಹೆಚ್ಚಿನ ಸ್ಥಾನಗಳಲ್ಲಿ ಗೆಲವು ಸಾಧಿಸುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ(Government of Karnataka) ಪಂಚಾಯಿತಿ ಚುನಾವಣೆಗಳನ್ನು(Panchayat Election) ಮುಂದೂಡಿಕೊಂಡು ಬರುವ ಮೂಲಕ, ಪಂಚಾಯತ್‌ ರಾಜ್‌(Panchayat Raj) ವ್ಯವಸ್ಥೆಯನ್ನು ಸಡಿಲಗೊಳಿಸುತ್ತಿದೆ. ಗ್ರಾಮ ಪಂಚಾಯಿತಿಯ ಅಧಿಕಾರವನ್ನು ಮೊಟಕುಗೊಳಿಸಲಾಗುತ್ತಿದೆ. ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡಿರುವ ಸ್ಥಳೀಯ ಜನಪ್ರತಿನಿಧಿಗಳು, ಚುನಾವಣೆಯಲ್ಲಿ ಬಿಜೆಪಿಗೆ(BJP) ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

Karnataka Politics| ಭಯದಿಂದಾಗಿ ಬಿಜೆಪಿ ತಾಪಂ, ಜಿಪಂ ಚುನಾವಣೆ ನಡೆಸಿಲ್ಲ: ಪಾಟೀಲ್‌

ಹಾವೇರಿ(Haveri) ನನ್ನ ಕರ್ಮಭೂಮಿ. 20 ವರ್ಷಗಳಿಂದ ಅಲ್ಲಿ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ. ಎರಡು ಸಲ ಲೋಕಸಭಾ ಚುನಾವಣೆಗೆ(Lok Sabha Election) ಸ್ಪರ್ಧಿಸಿದ್ದೇನೆ. ವಿಧಾನ ಪರಿಷತ್‌ ಸದಸ್ಯನಾಗಿ ಕ್ಷೇತ್ರಕ್ಕೆ ಅನುದಾನ ತಂದು ಅಭಿವೃದ್ಧಿ ಮಾಡಿದ್ದೇನೆ. ಮುಂದೆಯೂ ಮಾಡುತ್ತೇನೆ ಎಂದರು.

ಟಿಕೆಟ್‌ ಆಕಾಂಕ್ಷಿಯಾಗಿದ್ದ ವಿಧಾನ ಪರಿಷತ್‌ ಮಾಜಿ ಸದಸ್ಯರೂ ಆದ ಹುಬ್ಬಳ್ಳಿಯ ಎ.ಎಂ. ಹಿಂಡಸಗೇರಿ ಅವರಿಗೆ ಪಕ್ಷದಲ್ಲಿ ಉತ್ತಮ ಸ್ಥಾನ ನೀಡುವ ಕುರಿತು ಚರ್ಚೆ ನಡೆಯುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ದಿನಬಳಕೆಯ ವಸ್ತುಗಳ ಬೆಲೆ ಏರಿಕೆ, ಭ್ರಷ್ಟಾಚಾರ(Corruption), ಆಡಳಿತ ವೈಫಲ್ಯ, ರೈತ ಹಾಗೂ ಜನ ವಿರೋಧಿ ನೀತಿಗಳಿಂದಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆಡಳಿತ ವಿರೋಧಿ ಅಲೆ ಎದುರಿಸುತ್ತಿವೆ. ಇವೇ ಈ ಬಾರಿಯ ಚುನಾವಣಾ ವಿಷಯಗಳಾಗಿವೆ. ಬಿಜೆಪಿಯವರಿಗೆ ಮತ ಕೇಳುವ ನೈತಿಕತೆಯೇ ಇಲ್ಲ ಎಂದರು.

ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಸುಳ್ಳು ಆಶ್ವಾಸನೆಗಳಿಂದ ಜನ ಬೇಸತ್ತಿದ್ದಾರೆ. ಜನರಿಗೆ ಮೋದಿ ಅವರ ಮನ್‌ ಕಿ ಬಾತ್‌ ಬೇಡ, ಬದಲಿಗೆ ಜನ್‌ ಕಿ ಬಾತ್‌ ಬೇಕು. 56 ಇಂಚಿನ ಎದೆ ಇದ್ದರೆ ಸಾಲದು, ಜನರ ಸಂಕಷ್ಟಕ್ಕೆ ಸ್ಪಂದಿಸುವ ಹೃದಯ ಇರಬೇಕು ಎಂದು ಟೀಕಿಸಿದ ಅವರು, ರೈತರಿಗೆ(Farmers) ಬೇಡವಾದ ಕೃಷಿ ಕಾಯ್ದೆ ಹಿಂಪಡೆಯಲು ಸರ್ಕಾರಕ್ಕೆ ಒಂದು ವರ್ಷ ಬೇಕಾಯಿತು. ಈ ಅವಧಿಯಲ್ಲಿ 700ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದಾರೆ. ಅವರ ಕುಟುಂಬಕ್ಕೆ ಸರ್ಕಾರ ತಲಾ 25 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ನ. 21ರಿಂದ ಕಾಂಗ್ರೆಸ್‌ನಿಂದ ಜನಜಾಗೃತಿ ಆಂದೋಲನ ಆರಂಭಿಸಲಾಗಿದೆ. ಸದಸ್ಯತ್ವ ನೋಂದಣಿ ಅಭಿಯಾನವೂ ಶುರುವಾಗಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Farm Laws Withdrawn:ಒಣ ಪ್ರತಿಷ್ಠೆಗೆ ಒಳಗಾಗದೆ ಕಾಯ್ದೆ ವಾಪಸ್ ಎಂದ ಬಿಎಸ್​ವೈ

ಶಾಸಕ ಶ್ರೀನಿವಾಸ ಮಾನೆ, ಮಾಜಿ ಸಚಿವ ಸಂತೋಷ ಲಾಡ್‌, ಮಾಜಿ ಎಂಎಲ್ಸಿಗಳಾದ ನಾಗರಾಜ ಛಬ್ಬಿ, ಎಂ.ವಿ. ವೆಂಕಟೇಶ, ವೀರಣ್ಣ ಮತ್ತಿಕಟ್ಟಿ, ಮಾಜಿ ಸಚಿವ ಕೆ.ಎನ್‌. ಗಡ್ಡಿ, ಮುಖಂಡರಾದ ಅನೀಲಕುಮಾರ ಪಾಟೀಲ, ಅಲ್ತಾಫ ಹಳ್ಳೂರ, ಸದಾನಂದ ಡಂಗನವರ ಸೇರಿದಂತೆ ಹಲವರಿದ್ದರು.

ರಾಜ್ಯದಲ್ಲಿರುವುದು ನಿರ್ಜೀವ ಸರ್ಕಾರ. ಅಕಾಲಿಕ ಮಳೆಗೆ ರಾಜ್ಯಾದ್ಯಂತ(Karnataka) ಬೆಳೆ(Crop) ಹಾಗೂ ಮನೆಗಳ ಹಾನಿಯಾಗಿ ಜನ ಸಂಕಷ್ಟದಲ್ಲಿದ್ದಾರೆ. ಆದರೆ, ಸಚಿವರು ಹಾಗೂ ಶಾಸಕರು ರೈತರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಇವೆಲ್ಲವೂ ಚುನಾವಣೆಯ ಮೇಲೆ ಪರಿಣಾಮ ಬೀರಲಿವೆ ಎಂದು ವಿಧಾನ ಪರಿಷತ್‌ ಅಭ್ಯರ್ಥಿಸಲೀಂ ಅಹ್ಮದ ತಿಳಿಸಿದ್ದಾರೆ.  
 

click me!