ಬಿಜೆಪಿ ಅಂತಿಮ ಪಟ್ಟಿಯಲ್ಲಿ ನನ್ನ ಹೆಸರು ಮುಂಚೂಣಿ: ದ್ವಾರಕಾಪುರ ಆಶ್ರಮದ ಪರಮಾತ್ಮಜೀ ಮಹಾರಾಜ ಹೊಸ ಬಾಂಬ್!

By Kannadaprabha NewsFirst Published Mar 10, 2023, 12:09 PM IST
Highlights

ಬಿಜೆಪಿ ಹೈಕಮಾಂಡ್‌ ಗೆಲುವು ಸಾಧಿಸುವ ಜನರಿಗಾಗಿ ಹುಡುಕಾಟ ನಡೆಸಿದ್ದು, ಅಂತಿಮ ಪಟ್ಟಿಯಲ್ಲಿ ತಮ್ಮ ಹೆಸರು ಮುಂಚೂಣಿಯಲ್ಲಿದೆ ಎಂದು ಧಾರವಾಡದ ದ್ವಾರಕಾಪುರ ಆಶ್ರಮದ ಪರಮಾತ್ಮಜೀ ಮಹಾರಾಜ ಹೊಸ ಬಾಂಬ್‌ ಸಿಡಿಸಿದ್ದಾರೆ.

ಹಳಿಯಾಳ (ಮಾ.10) : ಈಗಾಗಲೇ ಕೆಲವು ಖಾಸಗಿ ವಾಹಿನಿಗಳು ಸಮೀಕ್ಷೆ ನಡೆಸಿದ ಪ್ರಕಾರ ಹಳಿಯಾಳ ವಿಧಾನಸಭಾ ಕ್ಷೇತ್ರ(Haliyala assembly constituency)ದಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ಬಂದು ನಿಂತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಹೈಕಮಾಂಡ್‌ ಗೆಲುವು ಸಾಧಿಸುವ ಜನರಿಗಾಗಿ ಹುಡುಕಾಟ ನಡೆಸಿದ್ದು, ಅಂತಿಮ ಪಟ್ಟಿಯಲ್ಲಿ ತಮ್ಮ ಹೆಸರು ಮುಂಚೂಣಿಯಲ್ಲಿದೆ ಎಂದು ಧಾರವಾಡದ ದ್ವಾರಕಾಪುರ ಆಶ್ರಮದ ಪರಮಾತ್ಮಜೀ ಮಹಾರಾಜ(Paramatma maharaj) ಹೊಸ ಬಾಂಬ್‌ ಸಿಡಿಸಿದ್ದಾರೆ.

ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು, ಹಳಿಯಾಳ, ದಾಂಡೇಲಿ ಮತ್ತು ಜೊಯಿಡಾ ಕ್ಷೇತ್ರದ ಟಿಕೆಟ್‌ ತಮಗೆ ಸಿಗುವುದರಲ್ಲಿ ಯಾವುದೇ ಸಂಶಯವಿಲ್ಲ. ಈಗಾಗಲೇ ಬಿಜೆಪಿ ಪಕ್ಷದ ಹೈಕಮಾಂಡ್‌ ತಮ್ಮನ್ನು ಸಂಪರ್ಕಿಸಿದ್ದು ಶೀಘ್ರದಲ್ಲಿಯೇ ಬಹಿರಂಗ ಪಡಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

Latest Videos

Karnataka election 2023: ಧಾರವಾಡ ಜಿಲ್ಲೆಯಲ್ಲಿ ಮಹಿಳಾ ಶಾಸಕರಾಗಿದ್ದು ಬರೀ ಮೂವರು!

ಕ್ಷೇತ್ರದಲ್ಲಿ ಬಿಜೆಪಿ ಕುರಿತು ಅಪಾರವಾದ ಅಭಿಮಾನವಿದೆ. ಆದರೆ, ಇಲ್ಲಿಯ ನಾಯಕರ ಬಗ್ಗೆ ಹಲವಾರು ದೂರುಗಳಿವೆ. ಇದನ್ನು ಪರಿಗಣಿಸಿ ನಾಯಕತ್ವ ಬದಲಾವಣೆಗೆ ಬಿಜೆಪಿ ಹಿರಿಯ ಮುಖಂಡರು ಮುಂದಾಗಿದ್ದಾರೆ. ಅಲ್ಲದೇ ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಬಿಜೆಪಿ ತಮ್ಮ ಅಸ್ತಿತ್ವ ಕಳೆದುಕೊಳ್ಳಬಾರದು ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಾಣಬಾರದು ಎಂಬ ಉದ್ದೇಶದಿಂದ ನಾಯಕತ್ವ ಬದಲಾವಣೆಗೆ ಮುಂದಾಗಿದೆ ಎಂದು ಭವಿಷ್ಯ ನುಡಿದರು.

ಮಾಜಿ ಶಾಸಕ ಸುನೀಲ್‌ ಹೆಗಡೆ ಅವರ ಕುರಿತು ಪಕ್ಷದ ನೂರಾರು ಕಾರ್ಯಕರ್ತರು ಬೇಸತ್ತು ಬೇರೆ ಬೇರೆ ಪಕ್ಷಗಳಿಗೆ ವಲಸೆ ಹೋಗುತ್ತಿದ್ದಾರೆ. ಪಕ್ಷದ ಪರವಾಗಿ ಕೆಲಸ ಮಾಡುವ ಬದಲು ವ್ಯಕ್ತಿ ಪೂಜೆ ಮಾಡುತ್ತಿದ್ದು ಇದನ್ನು ಸೂಕ್ಷ್ಮವಾಗಿ ಅರಿತಿರುವ ಪಕ್ಷವು ಕ್ಷೇತ್ರದಲ್ಲಿ ರಾಜಕೀಯವಾಗಿ ಬಲಾಢ್ಯವಾಗಿ ಬೆಳೆದಿರುವ ಶಾಸಕ ಆರ್‌.ವಿ. ದೇಶಪಾಂಡೆ ವಿರುದ್ಧ ಗೆಲವು ಸಾಧಿಸಲು ಉತ್ತಮ ಅಭ್ಯರ್ಥಿಯ ಹುಡುಕಾಟದಲ್ಲಿ ನಿರತವಾಗಿದ್ದು ಟಿಕೆಟ್‌ ತಮಗೆ ದೊರೆಯುವುವುದು ಖಚಿತ ಎಂದರು.

ಅಧಿಕಾರ ಹಿಡಿಯುವ ಹುಮ್ಮಸ್ಸಿನಲ್ಲಿದ್ದ ಜೆಡಿಎಸ್‌ಗೆ ಹಾಸನ ಟಿಕೆಟ್ ಗೊಂದಲ ಸ್ಪೀಡ್ ಬ್ರೇಕರ್ ಆಗಿದ್ದು ಹೇಗೆ?

ಬಿಜೆಪಿ ಹೈಕಮಾಂಡ್‌ ಸಮಗ್ರ ಮಾಹಿತಿಗಳನ್ನು ಕಲೆ ಹಾಕಿ ಮಾಜಿ ಶಾಸಕ ಸುನೀಲ್‌ ಹೆಗಡೆ ಅವರ ಬದಲಾವಣೆಗೆ ಮುಂದಾಗಿದೆ. ಬಿಜೆಪಿ ಇನ್ನೂವರೆಗೂ ಹಳಿಯಾಳ ಕ್ಷೇತ್ರದ ಟಿಕೆಟ್‌ ಯಾರಿಗೂ ನೀಡಿಲ್ಲ. ಸ್ವಾಮೀಜಿಗಳಿಗೆ ಟಿಕೆಟ್‌ ನೀಡುವ ಚಿಂತನೆ ಪಕ್ಷದ ಮುಂದಿದ್ದು, ಟಿಕೆಟ್‌ ದೊರೆತರೆ ಇನ್ನಿತರ ಪಕ್ಷಗಳಿಂದ ಬಿಜೆಪಿಗೆ ಕಾರ್ಯಕರ್ತರ ಹರಿವು ಹೆಚ್ಚಾಗಲಿದೆ. ಆರ್‌ಎಸ್‌ಎಸ್‌, ವಿಎಚ್‌ಪಿ ಮತ್ತು ಭಜರಂಗದಳದೊಂದಿಗೆ ನಿಕಟ ಸಂಬಂಧ ಹೊಂದಿದ್ದು, ಆನಲೈನ್‌ ಮೂಲಕ ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವ ದೊರೆಯಲಿದೆ ಎಂದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಶಂಕರ ಕಾಜಗಾರ ಹಾಗೂ ರುದ್ರಗೌಡಾ ಹಾಜರಿದ್ದರು.

click me!