
ಮೈಸೂರು (ಜು.16): ಅಧಿಕಾರ ಹಂಚಿಕೆ ವಿಚಾರ ಅಪ್ರಸ್ತುತ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು. ಅಧಿಕಾರ ಹಂಚಿಕೆ ವಿಚಾರ ಸಂಬಂಧ ಶಾಸಕ ವಿ.ಆರ್. ದೇಶಪಾಂಡೆ ಅವರ ಹೇಳಿಕೆ ಕುರಿತು ಶನಿವಾರ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಅಧಿಕಾರ ಹಂಚಿಕೆ ಆಗುತ್ತಾ ಎಂಬ ಪ್ರಶ್ನೆ ಅಪ್ರಸ್ತುತ ಎಂದರು. ಕಾಂಗ್ರೆಸ್ ಸರ್ಕಾರ ಬಡವರಿಗೆ ಏನು ಮಾಡುತ್ತಿದೆ ಅದರ ಬಗ್ಗೆ ಚರ್ಚೆ ಮಾಡಿ. ನಮ್ಮ ಸರ್ಕಾರ ಭದ್ರವಾಗಿದೆ, ಉತ್ತಮ ಮತ್ತು ಒಳ್ಳೆಯ ಆಡಳಿತ ನಡೆಸುತ್ತಿದೆ, ಕೊಟ್ಟಭರವಸೆ ಈಡೆರಿಸುತ್ತಿದೆ. ಎಲ್ಲಾ ಯೋಜನೆಗಳು ಮತ್ತು ಗ್ಯಾರಂಟಿ ಅನುಷ್ಟಾನಕ್ಕೆ ಬರುತ್ತಿವೆ. ಈಗಾಗಲೇ 3 ಗ್ಯಾರಂಟಿ ಕಾರ್ಯಗತವಾಗಿದೆ ಎಂದು ಅವರು ಹೇಳಿದರು.
ಶಕ್ತಿ ಯೋಜನೆ ಬಂದಿದೆ, ದಿನ ನಿತ್ಯ 50 ಲಕ್ಷ ಮಹಿಳೆಯರು ಅದನ್ನು ಉಪಯೋಗಿಸುತ್ತಿದ್ದಾರೆ. ನಾವು 52 ಸಾವಿರ ಕೋಟಿ ಮೀಸಲಿಟ್ಟು ನಾವು ಕೋಟ್ಟಂತಹ ಗ್ಯಾರಂಟಿ ಅನುಷ್ಟಾನಕ್ಕೆ ತಂದಿದ್ದೇವೆ. ರಾಜ್ಯದ ಸರ್ವಾಂಗಿಣ ಅಭಿವೃದ್ಧಿ ಮಾಡುತ್ತೇವೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಎಲ್ಲವೂ ನಡೆಯುತ್ತಿದೆ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.
ನಮಗೆ 136 ಸೀಟು ಬಂದಿದ್ದಕ್ಕೆ ಶೋಭಾಗೆ ಹೊಟ್ಟೆ ಉರಿ: ಸಚಿವ ಪರಮೇಶ್ವರ್
ಕಾಡಿನ ಪ್ರಾಣಿ ನಾಡಿಗೆ ಬರುವುದನ್ನು ತಡೆಯಲು ಕ್ರಮ: ಕಾಡಿನ ಪ್ರಾಣಿಗಳು ನಾಡಿಗೆ ಬರುವುದನ್ನು ತಡೆಯಲು ಸರ್ಕಾರದಿಂದ ಸೂಕ್ತ ಕ್ರಮ ವಹಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.ನ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಸುತ್ತೂರು ಶಾಖಾ ಮಠಕ್ಕೆ ಶನಿವಾರ ಭೇಟಿ ನೀಡಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಸರ, ಪ್ರಾಣಿ, ಪಶುಗಳ ಸಂರಕ್ಷಣೆ ಜೊತೆಗೆ ವಿಶೇಷವಾಗಿ ವನ್ಯ ಪ್ರಾಣಿ ಮತ್ತು ಮಾನವ ಸಂಘರ್ಷಗಳನ್ನು ತಡೆಗಟ್ಟುವುದು ಮುಖ್ಯ ಕರ್ತವ್ಯವಾಗಿದೆ ಎಂದರು.
ಆನೆ ತುಳಿತಕ್ಕೆ ಸಾವು ವಿಚಾರ ಕುರಿತು ಕ್ರಮ ಕೈಗೊಂಡಿದ್ದೇವೆ. ಈಗಾಗಲೇ ಸೋಲಾರ್ ವ್ಯವಸ್ಥೆ, ಕಂದಕಗಳ ವ್ಯವಸ್ಥೆ ಮಾಡಲಾಗಿದೆ. ಆನೆಗಳು ಚಲಿಸುತ್ತಿರುತ್ತೆ, ಅದನ್ನ ನಾವು ತಡೆಯೋಕೆ ಆಗಲ್ಲ. ಇಲ್ಲ ಅಂದರೆ ಅದಕ್ಕೆ ಉಳಿಗಾಲ ಇಲ್ಲ. ರಾಜ್ಯದಲ್ಲಿ 640 ಕಿ.ಮೀ ರೈಲ್ವೆ ಬ್ಯಾರಿಕೆಡ್ ಮಾಡಬೇಕು ಎಂಬ ಪ್ರಸ್ತಾವನೆ ಇದೆ. ಈಗಾಗಲೇ 312 ಕಿ.ಮೀ ರೈಲ್ವೆ ಬ್ಯಾರಿಕೇಡ್ ಮಾಡಿದ್ದು, ಇನ್ನೂ 330 ಕಿ.ಮೀ ಬ್ಯಾರಿಕೇಡ್ ಮಾಡಬೇಕು. 1 ಕಿ.ಮೀ ರೈಲ್ವೆ ಬ್ಯಾರಿಕೇಡ್ ಮಾಡೋದಕ್ಕೆ .1.5 ಕೋಟಿ ಬೇಕಾಗುತ್ತದೆ.
ಈ ಮಟ್ಟದ ಅನುದಾನ ಒಂದೇ ಬಾರಿಗೆ ಸಿಗೋದಿಲ್ಲ. ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ ಎಂದು ಅವರು ಹೇಳಿದರು. ಸುಶೀಲಾ ಎಂಬ ಬಾಲಕಿಯ ಮೇಲೆ ಚಿರತೆ ದಾಳಿ ವಿಚಾರ ಕೇಳಿ ಬೇಸರ ಆಗಿದೆ. ಸರ್ಕಾರದಿಂದ . 15 ಲಕ್ಷ ಪರಿಹಾರವನ್ನು ನೀಡಬೇಕೆಂದು ತಿಳಿಸಿದ್ದೇನೆ. ತಿಂಗಳಿಗೆ 4000 ಮಾಸಾಸನ ಬರುವಂತೆ ಸರ್ಕಾರಕ್ಕೆ ಬೇಡಿಕೆ ಇಟ್ಟು ಜಾರಿಗೊಳಿಸಲು ಪ್ರಯತ್ನಿಸುತ್ತೇನೆ ಎಂದು ಅವರು ಭರವಸೆ ನೀಡಿದರು.
ಪ್ಲಾಸ್ಟಿಕ್ ಬದಲು ಬಟ್ಟೆಚೀಲ ಬಳಸಿ: ಪ್ರತಿಯೊಂದು ಸಮಸ್ಯೆಗೂ ಪರಿಹಾರ ಇದ್ದೇ ಇರುತ್ತೆ ಎಂಬಂತೆ ಪ್ಲಾಸ್ಟಿಕ್ ಬಳಕೆಗೂ ಪರಿಹಾರ ಇದೆ. ಪ್ಲಾಸ್ಟಿಕ್ ಅನ್ನು ಹೆಚ್ಚು ಬಳಕೆ ಮಾಡುವುದರ ಬದಲು ಬಟ್ಟೆಚೀಲವನ್ನು ಉಪಯೋಗಿಸುವುದು ಉತ್ತಮ. ಬಟ್ಟೆಚೀಲಗಳ ಬಳಕೆಗೆ ಮತ್ತು ಅದರ ಉತ್ಪಾದನೆಗೆ ಸರ್ಕಾರದ ವತಿಯಿಂದ ಅನುದಾನ ನೀಡಿದರೆ ಇದೆಲ್ಲದಕ್ಕೂ ಪರಿಹಾರ ಸಿಗುತ್ತದೆ. ಬೀದರ್, ಕಲ್ಬುರ್ಗಿ, ಮೈಸೂರು. ಧರ್ಮಸ್ಥಳ ಹಾಗೂ ಮತ್ತೊಂದು ಯಾವುದಾದರೂ ಪ್ರಮುಖ ನಗರವನ್ನು ಆಯ್ಕೆ ಮಾಡಿಕೊಂಡು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡುವ ಯೋಚನೆ ನಮಗಿದೆ ಎಂದರು.
ಖಜಾನೆ ಖಾಲಿ ಮಾಡಿದ ಹಿಂದಿನ ಬಿಜೆಪಿ ಸರ್ಕಾರ: ದೇಶಪಾಂಡೆ
ಏಕ ಬಳಕೆ ಪ್ಲಾಸ್ಟಿಕ್ ಅನ್ನು ಉಪಯೋಗಿಸದಂತೆ ಈಗಾಗಲೇ ಕಾಯ್ದೆ ಕಾನೂನುಗಳು ಜಾರಿಯಲ್ಲಿವೆ. 2016 ರಲ್ಲಿ ಇದರ ಬಗ್ಗೆ ನಿರ್ಧಾರ ಕೈಗೊಂಡಿದ್ದು, ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ. ಇದನ್ನು ಜಾರಿಗೊಳಿಸಲು ಜನ ಜಾಗೃತಿ ಅವಶ್ಯಕವಾಗಿದೆ. ಪ್ಲಾಸ್ಟಿಕ್ ನೀರಿನಲ್ಲಿ ಕರಗುವುದಿಲ್ಲ, ಮಣ್ಣಿನಲ್ಲಿ ಮಣ್ಣಾಗುವುದಿಲ್ಲ. ಅದಕ್ಕೆ ಬೆಂಕಿ ಬಿದ್ದರೆ ಹೊರಡುವಂತಹ ವಿಷದಿಂದ ಆಗುವಂತ ಮಾಲಿನ್ಯವನ್ನು ತಡೆಗಟ್ಟುವುದೇ ಇಂದಿನ ಸವಾಲಾಗಿದೆ. ಪ್ಲಾಸ್ಟಿಕ್ ಮುಕ್ತ ಮಾಡಲು ಪ್ರತಿಯೊಬ್ಬರ ಸಹಕಾರ ಮುಖ್ಯ ಎಂದು ಅವರು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.