
ಗೋಕಾಕ (ಸೆ.26): ಇಡೀ ಜಾರಕಿಹೊಳಿ ಕುಟುಂಬ ಕೂಡಿ ಸರ್ಕಾರ ಉರುಳಿಸಿದ್ದಾರೆ ಎಂದು ಭಾಷಣಕಾರರು ಹೇಳಿದ್ದಾರೆ. ಜಾರಕಿಹೊಳಿ ಕುಟುಂಬ ಕೂಡಿ ಯಾವುದೇ ರೀತಿ ಸರ್ಕಾರ ಉರುಳಿಸಿಲ್ಲ. ಇದರಲ್ಲಿ ನನಗೂ, ಬಾಲಚಂದ್ರ ಹಾಗೂ ಲಖನ್ಗೂ ಯಾವುದೇ ರೀತಿ ಸಂಬಂಧವಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ನಗರದ ಹಿಲ್ಗಾರ್ಡನ್ ಕಚೇರಿಯಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸದ ಅವರು, ಸರ್ಕಾರ ಬೀಳಿಸುವಲ್ಲಿ ಯಾರ ಪಾತ್ರವಿದೆಯೋ ಅವರಿಗೆ ಮಾತ್ರ ಆ ಮಾತು ಹೋಗಲಿ. ಅದನ್ನು ಬಿಟ್ಟು ಸರ್ಕಾರ ಬೀಳಿಸುವುದರಲ್ಲಿ ಇಡೀ ಜಾರಕಿಹೊಳಿ ಕುಟುಂಬವಿದೆ ಎಂದು ಹೇಳುವುದು ಸರಿಯಲ್ಲ. ಇದು ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ. ಆದ್ದರಿಂದ ಇಂಥ ಮಾತುಗಳಾಡುವ ಮೊದಲು ಸರಿಯಾಗಿ ಮಾತನಾಡಬೇಕು. ರಾಜ್ಯ ರಾಜಕಾರಣದಲ್ಲಿ ನಾಲ್ವರೂ ಸಹೋದರರು ರಾಜಕೀಯದಲ್ಲಿ ಇದ್ದೇವೆ. ನಾಲ್ವರೂ ಒಂದೇ ಎಂದು ಭಾವಿಸಬೇಡಿ. ನಾಲ್ವರ ಕೆಲಸವೂ ಬೇರೆ ಬೇರೆ ಇದೆ. ಈ ಬಗ್ಗೆ ಯಾರಿಗೂ ಗೊಂದಲ ಬೇಡ ಎಂದು ಹೇಳಿದರು.
Belagavi: ಮಕ್ಕಳ ಭವಿಷ್ಯದ ಚಿಂತನೆ ಆಗಬೇಕು: ಸತೀಶ್ ಜಾರಕಿಹೊಳಿ
ವಾಲ್ಮೀಕಿ ಜಯಂತಿ ಬಹಿಷ್ಕಾರದ ಬೆದರಿಕೆ: ಎಸ್ಸಿ, ಎಸ್ಟಿಸಮುದಾಯಕ್ಕೆ ಮೀಸಲಾತಿ ನೀಡುವಲ್ಲಿ ಬಿಜೆಪಿ ಸರ್ಕಾರ ಹಿಂದೇಟ್ಟು ಹಾಕುತ್ತಿರುವ ಕಾರಣಕ್ಕಾಗಿ ಅ.9ರಂದು ಸರ್ಕಾರದಿಂದ ಆಚರಿಸುವ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ರಾಜ್ಯಾದ್ಯಂತ ಬಹಿಷ್ಕಾರ ಮಾಡಲಾಗುವುದು ಎಂದು ಈಗಾಗಲೇ ರಾಜ್ಯಮಟ್ಟದಲ್ಲಿ ತಿರ್ಮಾನಿಸಲಾಗಿದೆ. ರಾಜನಹಳ್ಳಿಯ ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಕೂಡಾ ಕಳೆದ 224 ದಿನಗಳಿಂದ ಪರಿಶಿಷ್ಟಜಾತಿ, ಪರಿಶಿಷ್ಟಪಂಗಡಗಳಿಗೆ ಹೆಚ್ಚಿನ ಮೀಸಲಾತಿ ಸಿಗಬೇಕೆಂದು ಧರಣಿ ನಡೆಸುತ್ತಿದ್ದಾರೆ. ಸರ್ಕಾರ ಇಚ್ಚಾಶಕ್ತಿ ಕೊರತೆಯಿಂದ ಭರವಸೆ ಈಡೇರಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಬೇರೆ ಬೇರೆ ರೀತಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಸಚಿವ ಶ್ರೀರಾಮುಲು ಅವರು ಸಚಿವ ಸ್ಥಾನ ಸಿಕ್ಕಕೂಡಲೇ 24 ಗಂಟೆಯಲ್ಲೇ ಎಸ್ಸಿ, ಎಸ್ಟಿಸಮುದಾಯಕ್ಕೆ ಮೀಸಲಾತಿ ನೀಡಲಾಗುವುದು ಎಂದು ಹೇಳಿದ್ದರು. ಈಗ ಅವರ ಅವಧಿ ಕೂಡಾ ಮುಗಿಯುವ ಹಂತಕ್ಕೆ ಬಂದಿದೆ. ಇನ್ನೂ ಕೂಡಾ ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಬರೀ ರಾಜಕೀಯ ಆಶ್ವಾಸನೆ ಮಾತ್ರ ಎಂದು ಕಿಡಿ ಕಾರಿದರು.
ಸರ್ಕಾರ ಬೀಳಿಸುವ ಶಕ್ತಿ ರಮೇಶರಲ್ಲಿ ಮಾತ್ರ ಇದೆ: ಸರ್ಕಾರ ಬೀಳಿಸುವ ಶಕ್ತಿ ರಮೇಶರಲ್ಲಿ ಮಾತ್ರ ಇದೆ. ಅವರು ಮತ್ತೊಮ್ಮೆ ಸರ್ಕಾರ ಬೀಳಿಸುವ ಪ್ರಯತ್ನ ಮಾಡಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಸತೀಶ ಜಾರಕಿಹೊಳಿ ಹೇಳಿದರು. ನಗರದಲ್ಲಿ ನಡೆದ ಉಪ್ಪಾರ ಸಮಾಜದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಾರಕಿಹೊಳಿ ಕುಟುಂಬದಲ್ಲಿ ಪ್ರಸ್ತುತ ನಾವು ನಾಲ್ಕು ಜನ ಸಹೋದರರು ಅಧಿಕಾರದಲ್ಲಿ ಇದ್ದರೂ ನಮ್ಮ ನಡೆ, ನುಡಿಗಳು ಬೇರೆ, ಬೇರೆಯಾಗಿವೆ. ಸರ್ಕಾರ ಬೀಳಿಸುವ ಕಾರ್ಯ ಶಾಸಕ ರಮೇಶ ಜಾರಕಿಹೊಳಿ ಅವರಿಂದ ಮಾತ್ರ ಸಾಧ್ಯ.
ಬಿಜೆಪಿಗರಿಗೆ ಸುಳ್ಳನ್ನು ನಿಜ ಮಾಡೋದು, ನಿಜವನ್ನು ಸುಳ್ಳು ಮಾಡೋದು ಬಿಟ್ಟರೆ ಬೇರೆ ಏನು ಗೊತ್ತಿಲ್ಲ: ಜಾರಕಿಹೊಳಿ
ನಾನು ರಮೇಶ ಜಾರಕಿಹೊಳಿ ಅವರಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ. ಅವರು ಮತ್ತೊಮ್ಮೆ ಅಂತಹ ಪ್ರಯೋಗ ಮಾಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು. ಜಾರಕಿಹೊಳಿ ಸಹೋದರಿಗೆ ಸರ್ಕಾರ ಉರಳಿಸುವ ಶಕ್ತಿ ಇದೆ ಎಂದು ಹೇಳುತ್ತಾರೆ. ಆದರೆ, ನಾವು ನಾಲ್ವರು ಒಂದೇ ಎಂದು ಭಾವಿಸಬಾರದು. ಸರ್ಕಾರ ಉರಳಿಸುವ ಶಕ್ತಿ ರಮೇಶ್ ಜಾರಕಿಹೊಳಿ ಮಾತ್ರ ಇದೆ. ಉಳಿದ ಸಹೋದರರು ಸರ್ಕಾರ ಉರಳಿಸುವುದರ ಭಾಗವಾಗುವುದಿಲ್ಲ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.