
ಗದಗ (ಮೇ.08): ದೇಶದ ಅಮಾಯಕರ ಮೇಲೆ ಉಗ್ರರರು ನಡೆಸಿದ ಕೃತ್ಯಕ್ಕೆ ನಮ್ಮ ಸೈನಿಕರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹೇಳಿದರು. ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದ ಮೇಲೆ ನಡೆಯುವ ಯಾವುದೇ ಉಗ್ರರ ಕೃತ್ಯ ನಾವು ಸಹಿಸುವುದಿಲ್ಲ ಎನ್ನುವುದಕ್ಕೆ ತಕ್ಕ ಪ್ರತೀಕಾರವಾಗಿ ಭಾರತದ ಸೇನೆ 9 ಉಗ್ರರ ನೆಲೆಗಳ ಮೇಲೆ ಯಶಸ್ವಿ ದಾಳಿ ನಡೆಸಿ ಉಗ್ರರ ನೆಲೆಗಳನ್ನು ನಾಶ ಮಾಡಿದ್ದಾರೆ. ಇದು ದೇಶದ ಜನರಲ್ಲಿ ವಿಶ್ವಾಸ ಹಾಗೂ ಸಮಾಧಾನ ಮೂಡಿಸಿದೆ ಎಂದರು.
ನಮ್ಮ ದೇಶ ಶಾಂತಿಯ ಹಾದಿಯಲ್ಲಿ ಸಾಗುತ್ತಿದ್ದರೂ ಅದನ್ನು ಕೆಣಕಿದರೆ ತಕ್ಕ ಶಿಕ್ಷೆ ಕೊಡಲಾಗುತ್ತದೆ ಎಂಬ ಬಲಿಷ್ಠ ಸಂದೇಶ ಈ ದಾಳಿಯಿಂದ ಗಡಿಯಾಚೆಗಿನಿಂದ ನಡೆಸುವ ಕುಕೃತ್ಯಗಳಿಗೆ ತಕ್ಕ ಉತ್ತರವಾಗಿದೆ. ಯುದ್ಧ ಎಂದರೆ ಯಾರೋ ಗಡಿಯಲ್ಲಿ ನಡೆಸುವುದಲ್ಲ, ದೇಶದ 140 ಕೋಟಿ ಜನರು ಒಗ್ಗಟ್ಟಾಗಿ ಅದನ್ನು ಎದುರಿಸಬೇಕು. ಎಲ್ಲದಕ್ಕೂ ನಾವು ಸರ್ವ ಸನ್ನದ್ಧವಾಗಿರಬೇಕು.
ದೇಶದ ಸೈನ್ಯ ನಡೆಸುವ ಎಲ್ಲ ಕಾರ್ಯಾಚರಣೆಗೂ ಪ್ರತಿಯೊಬ್ಬ ಭಾರತೀಯ ಬೆಂಬಲವಾಗಿ ನಿಲ್ಲಬೇಕು. ನಿಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ ಅವರು, ಭಾರತದ ಸೈನ್ಯ ತನ್ನ ಧೈರ್ಯದಿಂದ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ನೀಡಿದೆ. ಆದರೆ ನಾವು ಶಾಂತಿಯಿಂದ ಇರುತ್ತೇವೆ ಎಂದರೆ ಅದು ನಮ್ಮ ದೌರ್ಬಲ್ಯವಲ್ಲ ಎನ್ನುವುದನ್ನು ವೈರಿ ರಾಷ್ಟ್ರಗಳಿಗೆ ಹೇಳುವುದರೊಟ್ಟಿಗೆ ಈ ರೀತಿಯ ಭಯೋತ್ಪಾದನೆ ನಡೆಸುವವರಿಗೆ ತಕ್ಕ ಶಾಸ್ತಿಯಾಗಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಸಲಿಂಗಪ್ಪ, ಬಿ.ಬಿ. ಅಸೂಟಿ, ಅಶೋಕ ಮಂದಾಲಿ, ಉಮರ್ ಫಾರೂಕ್ ಹುಬ್ಬಳ್ಳಿ, ಜಿಪಂ ಮಾಜಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ, ಪ್ರಭು ಬುರಬುರೆ ಮುಂತಾದವರು ಹಾಜರಿದ್ದರು.
ಟೂರಿಸಂನಿಂದ 4 ವರ್ಷಕ್ಕೆ 2750 ಕೋಟಿ ಆದಾಯ: ಸಚಿವ ಎಚ್.ಕೆ.ಪಾಟೀಲ್
ಇಂದು ವಿಶೇಷ ಸಭೆ: ದೇಶದಲ್ಲಿ ಯುದ್ಧದ ಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ಜನತೆಯನ್ನು ಜಾಗೃತಗೊಳಿಸುವ ಉದ್ದೇಶದಿಂದ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ಮಾಜಿ ಸೈನಿಕರೊಂದಿಗೆ ಗದಗ ಜಿಲ್ಲಾಡಳಿತದ ಆಡಿಟೋರಿಯಂ ಹಾಲ್ ನಲ್ಲಿ ಮೇ.8 ರಂದು ಬೆಳಗ್ಗೆ 10.30 ಕ್ಕೆ ವಿಶೇಷ ಸಭೆ ಆಯೋಜಿಸಲಾಗಿದ್ದು, ಸಭೆಯಲ್ಲಿ ಜನರು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.