
ಕೆಜಿಎಫ್ (ಏ.07): ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ಕೆಜಿಎಫ್ನಲ್ಲಿ ಗೆಲ್ಲಿಸುವುದೇ ನಮ್ಮ ಗುರಿಯಾಗಿದ್ದು ಅದನ್ನು ಸಾಧಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿದರು. ನಗರದ ಅಂಬೇಡ್ಕರ್ ಮತ್ತು ಅರ್ಮಗೋಂ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿ ಅಪಾರ ಬೆಂಬಲಿಗರೊಂದಿಗೆ ಪ್ರಸನ್ನ ಲಕ್ಷ್ಮೇ ವೆಂಕಟರಮಣ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಬೆಂಗಳೂರಿನ ವೇಲು ನಾಯಕರ್ ಕೆಜಿಎಫ್ ಕ್ಷೇತ್ರದ ಬಿಜೆಪಿ ಆಕಾಂಕ್ಷಿಯಾಗಿದ್ದು ತಮ್ಮೊಟ್ಟಿಗೆ ಬಂದು ಪೂಜೆ ಸಲ್ಲಿಸುವಂತೆ ಆಹ್ವಾನ ನೀಡಿದ್ದಕ್ಕೆ ಅವರೊಂದಿಗೆ ಬಂದು ಪೂಜೆ ಸಲ್ಲಿಸಿರುವುದ್ದೇನೆ ಎಂದರು.
ಕೆಜಿಎಫ್ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಐದಾರು ಮಂದಿ ಆಕಾಂಕ್ಷಿಗಳಿದ್ದು, ಪಕ್ಷಕ್ಕಾಗಿ ಹಗಲಿರುಳು ದುಡಿಯುತ್ತಿದ್ದು, ಅವರ ಗತಿಯೇನು ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಬಿಜೆಪಿಯು ರಾಷ್ಟ್ರೀಯ ಪಕ್ಷವಾಗಿದ್ದು, ಪಕ್ಷಕ್ಕಾಗಿ ಹಲವಾರು ಮಂದಿ ದುಡಿಯುತ್ತಿದ್ದರೂ ಸಹ ಅಭ್ಯರ್ಥಿ ಒಬ್ಬರೇ ಆಗುತ್ತಾರೆ. ಪಕ್ಷ ಯಾರನ್ನೇ ಅಭ್ಯರ್ಥಿಯನ್ನಾಗಿ ಘೋಷಿಸಿದರೂ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದರು. ಬಿಜೆಪಿ ಗ್ರಾಮಾಂತರ ಘಟಕದ ಅಧ್ಯಕ್ಷರು, ಕಾರ್ಯಕರ್ತರು ಮತ್ತು ಜನರ ಅನುಮತಿ ಪಡೆದುಕೊಳ್ಳಲಾಗಿದೆಯೇ ಎಂದು ಪತ್ರಕರ್ತರು ಪ್ರಶ್ನಿಸಿದ್ದಕ್ಕೆ, ಇಂದು ವೇಲು ನಾಯಕರ್ ಪೂಜೆ ಮಾಡೋಣ ಬನ್ನಿ ಎಂದು ಕರೆದರು, ಅವರೊಟ್ಟಿಗೆ ಬಂದಿದ್ದೇನೆ.
ಯಶವಂತಪುರ ಟಿಕೆಟ್ ಕೈತಪ್ಪಿದ ಹಿನ್ನಲೆ: ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದ ನಟಿ ಭಾವನಾ
ಯಾರೇ ನನ್ನನ್ನು ಕರೆದರೂ ಅವರೆಲ್ಲರೊಟ್ಟಿಗೆ ಬರುತ್ತೇನೆ. ಇಲ್ಲಿ ಲೋಕಲ್ ಔಟ್ಸೈಡ್ನವರು ಎನ್ನುವುದು ಗಣನೆಗೆ ಬರುವುದಿಲ್ಲ, ನಮ್ಮದು ರಾಷ್ಟ್ರೀಯ ಪಕ್ಷವಾಗಿದ್ದು, ಅಭ್ಯರ್ಥಿ ಯಾರೆಂಬುದನ್ನು ಪಕ್ಷ ತೀರ್ಮಾನಿಸುತ್ತದೆ. 9 ಜನ ಆಕಾಂಕ್ಷಿಗಳಿದ್ದರೂ ಒಬ್ಬರು ಅಭ್ಯರ್ಥಿಯಾಗುತ್ತಾರೆ, ಉಳಿದ 8 ಮಂದಿ ಒಬ್ಬ ವ್ಯಕ್ತಿಗೆ ಕೆಲಸ ಮಾಡುತ್ತಾರೆ ಎಂದರು. ಕೆಜಿಎಫ್ನಲ್ಲಿ ಎಷ್ಟುಜನ ಆಕಾಂಕ್ಷಿಗಳಿದ್ದಾರೋ ಅವರೆಲ್ಲರೂ ನಮ್ಮವರೇ, ಅದು ಸಂಪಂಗಿಯವರಾಗಲೀ, ಮೋಹನ್ಕೃಷ್ಣಾ ಆಗಲೀ ಎಲ್ಲರೂ ಒಂದೇ. ನಮ್ಮ ಉದ್ದೇಶ ಒಂದೇ ಆಕಾಂಕ್ಷಿಗಳೆಷ್ಟೇ ಜನ ಇದ್ದರೂ ಅಂತಿಮವಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿ ಒಬ್ಬರೇ ಆಗಿದ್ದು, ಅವರು ಗೆಲ್ಲುವವರಾಗಿರಬೇಕು, ಅಂತಹ ಅಭ್ಯರ್ಥಿಯನ್ನು ಪಕ್ಷವು ಆಯ್ಕೆ ಮಾಡಲಿದೆ ಎಂದರು.
ಬಿಜೆಪಿ ಟಿಕೆಟ್ ಆಕಾಂಕ್ಷಿ ವೇಲು ನಾಯಕರ್ ಮಾತನಾಡಿ, ಕಾರ್ಯಕರ್ತರ ಸೇವೆಯನ್ನು ಗುರುತಿಸುವ ಪಕ್ಷವೆಂದರೆ ಅದು ಬಿಜೆಪಿ ಪಕ್ಷವಾಗಿದ್ದು, ನಾನು ಪರಿಶಿಷ್ಟಜಾತಿಯ ಬಲ ಪಂಥೀಯ ಸಮುದಾಯಕ್ಕೆ ಸೇರಿದವನಾಗಿದ್ದು, ಬೆಂಗಳೂರಿನಲ್ಲಿ ಬಹುತೇಕ ಸಾಮಾನ್ಯ ವರ್ಗಕ್ಕೆ ಸೀಟುಗಳು ಮೀಸಲಾಗಿದ್ದು, ಬೆಂಗಳೂರಿನ ಸುತ್ತಮುತ್ತಲ ಮೀಸಲು ಕ್ಷೇತ್ರಗಳಲ್ಲಿ ಕೆಜಿಎಫ್ನ್ನು ಆಯ್ಕೆ ಮಾಡಿಕೊಂಡಿದ್ದು, ಇಲ್ಲಿರುವ ನಾಲ್ಕೈದು ಮಂದಿ ಆಕಾಂಕ್ಷಿಗಳೊಂದಿಗೆ ನಾನೂ ಸಹ ಒಬ್ಬ ಆಕಾಂಕ್ಷಿಯಾಗಿ ಇಲ್ಲಿಗೆ ಬಂದಿದ್ದೇನೆ ಎಂದರು.
ಶಾಸಕಿ ಸೌಮ್ಯಾ ರೆಡ್ಡಿ ಕಾರಿನಲ್ಲಿ 20 ಸೀರೆ, 14 ಮೊಬೈಲ್ಗಳು ಪತ್ತೆ: ದೂರು ದಾಖಲು
ಭರ್ಜರಿ ರೋಡ್ ಷೋ: ಸುರಜ್ಮಲ್ ವೃತ್ತದಿಂದ ಅಪಾರ ಸಂಖ್ಯೆ ಬಿಜೆಪಿ ಕಾರ್ಯಕರ್ತರು ವೆಂಕರಮಣ ದೇವಾಲಯದವರೆಗೂ ಭರ್ಜರಿ ರೋಡ್ ಷೋ ನಡೆಸಿ ವೆಲ್ನಾಯಕರ್ ತಮ್ಮಗಿರುವ ಶಕ್ತಿಯನ್ನು ಪ್ರದರ್ಶಸಿದರು. ಬಿಜೆಪಿ ನಗರ ಘಟಕ ಅಧ್ಯಕ್ಷ ಕಮಲ್ನಾಥನ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ನಾರಾಯಣ್ ಕುಟ್ಟಿ, ಡಾ.ಅರಿವಳಗನ್, ಮುಖಂಡ ಚಂದ್ರಶೇಖರರೆಡ್ಡಿ (ಸುನೀಲ್), ಶ್ಯಾಮ್, ಕಣ್ಣೂರು ವಿಜಿಕುಮಾರ್, ಬಾಬಿ ಸುರೇಶ್ ಮೊದಲಾದವರು ಇದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.