
ದೊಡ್ಡಬಳ್ಳಾಪುರ(ಡಿ.03): ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ತಾಲೂಕಿನ ಸೊಣ್ಣಪ್ಪನಹಳ್ಳಿ, ಕೋಡಿಹಳ್ಳಿ ಗ್ರಾಮಗಳಿಗೆ ಮಾಜಿ ಸಚಿವ ಡಾ.ಕೆ ಸುಧಾಕರ್, ಸ್ಥಳೀಯ ಶಾಸಕ ಧೀರಜ್ ಮುನಿರಾಜ್ ಅವರೊಂದಿಗೆ ಶುಕ್ರವಾರ ರಾತ್ರಿ ಭೇಟಿ ನೀಡಿ ಬರ ಪರಿಸ್ಥಿತಿಯ ಅಧ್ಯಯನ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಹಲವು ಜಿಲ್ಲೆಗಳಲ್ಲಿ ಬರಗಾಲದ ವಸ್ತುಸ್ಥಿತಿ ಅಧ್ಯಯನ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಮಳೆಯೂ ಬಂದಿಲ್ಲ. ರೈತರಿಗೆ ಭರಪೂರ ಆಶ್ವಾಸನೆ ನೀಡಿ ನಡು ನೀರಿನಲ್ಲಿ ಕೈ ಬಿಟ್ಟಿದ್ದಾರೆ ಎಂದು ಟೀಕಿಸಿದರು.
ಬೆಂಗಳೂರು ಹಬ್ಬ, ವಿಧಾನ ಸೌಧದಲ್ಲಿ ಲಾಂಟಾನ್ ಆನೆಗಳನ್ನು ನೋಡಿ ಜನ ಫಿದಾ
ಅಧಿವೇಶನ ಹಿನ್ನಲೆ 2 ಸಾವಿರ ರು. ಬೆಳೆ ಪರಿಹಾರ:
ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ಆರಂಭವಾಗುತ್ತಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ 2 ಸಾವಿರ ರುಪಾಯಿಗಳವರೆಗೆ ಬೆಳೆ ಪರಿಹಾರ ಧನ ಘೋಷಣೆ ಮಾಡಿದ್ದಾರೆ. ಇದು ರಾಜಕೀಯ ಹಿತಾಸಕ್ತಿಯೇ ಹೊರತು ಜನಪರ ಕಾಳಜಿಯಲ್ಲ. ಈ ಸರ್ಕಾರ ರೈತರಿಗೆ ಕನಿಷ್ಟ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ ಎಂದರು.
ರೈತರ ಸಾಲ ಮನ್ನಾ ಮಾಡಿ:
ರೈತರು ಬರಗಾಲದಿಂದ ಕಂಗಾಲಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಹೀಗಾಗಿ ರೈತರ ಸಾಲವನ್ನು 2 ಲಕ್ಷ ರುಪಾಯಿಯವರೆಗೂ ಮನ್ನಾ ಮಾಡಬೇಕು. ಹಗಲಿನ ವೇಳೆ ವಿದ್ಯುತ್ ನೀಡಬೇಕು, ಕೇಂದ್ರ ಸರ್ಕಾರ ನೀಡುತ್ತಿರುವ ಅಕ್ಕಿಯನ್ನು ಸಂಪೂರ್ಣವಾಗಿ ನೀಡಬೇಕು ಎಂದು ವಿಧಾನಸಭೆಯಲ್ಲಿ ಪ್ರಶ್ನೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಅಧಿಕಾರಕ್ಕಾಗಿ ಕಿತ್ತಾಟ:
ಸಿಎಂ ಸಿದ್ದರಾಮಯ್ಯ ಮೊದಲಿನ ಸಿದ್ದರಾಮಯ್ಯ ಆಗಿಲ್ಲ. ನಾವು ಅಧಿಕಾರದಲ್ಲಿದ್ದಾಗ ಬರ ಇದ್ದಾಗ ಒಂದೇ ತಿಂಗಳಲ್ಲಿ ಬರದ ಹಣವನ್ನು ನೀಡಿದ್ದೇವು, ಮಳೆ ಆಧಾರಿತ ಬೆಳೆಗೆ ಎಕರೆಗೆ 13,600 ರುಪಾಯಿ, ತೋಟಗಾರಿಕೆ ಬೆಳೆಗೆ 25 ಸಾವಿರ ರುಪಾಯಿ ಕೊಟ್ಟಿದ್ದೆವು. ಇವರ ಬಳಿ ಹಣ ಇಲ್ಲ ಹೀಗಾಗಿ ಕೊಡುತ್ತಿಲ್ಲ. ಮಂತ್ರಿಗಳು ಅಧಿಕಾರದ ಆಸೆಗಾಗಿ ಕಿತ್ತಾಡುತ್ತಿದ್ದಾರೆ ಎಂದರು.
ನನ್ನ ಬಳಿಯೂ ದಾಖಲೆ ಇವೆ: ಬಿ.ಆರ್.ಪಾಟೀಲ ಹೇಳಿಕೆಗೆ ಭೈರೇಗೌಡ ತಿರುಗೇಟು
ಸರ್ಕಾರದ ಕಿವಿ ಹಿಂಡುತ್ತೇವೆ:
ವಿರೋಧ ಪಕ್ಷದ ನಾಯಕನಾದ ಬಳಿಕ ಬೀದರ್, ಕಲಬುರಗಿ, ಚಿಕ್ಕಬಳ್ಳಾಪುರ, ಬೆಂ ಗ್ರಾ, ಜಿಲ್ಲೆ ಸೇರಿ ಹಲವು ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ. ಬರ ಅಧ್ಯಯನ ಮಾಡಿದ್ದೇನೆ. ಸರ್ಕಾರದ ಎಲ್ಲಾ ವೈಫಲ್ಯಗಳನ್ನು ಎತ್ತಿ ಹಿಡಿದು, ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಈ ವೇಳೆ ಮಾಜಿ ಸಚಿವ ಡಾ.ಕೆ ಸುಧಾಕರ್, ಶಾಸಕ ಧೀರಜ್ ಮುನಿರಾಜು, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಟಿ.ವಿ ಲಕ್ಷ್ಮೀನಾರಾಯಣ, ಬಮೂಲ್ ನಿರ್ದೇಶಕ ಬಿ.ಸಿ ಆನಂದ್ ಕುಮಾರ್, ಬಿಜೆಪಿ ತಾಲೂಕು ಅಧ್ಯಕ್ಷ ನಾಗೇಶ್, ಬಂತಿ ವೆಂಕಟೇಶ್ ಮತ್ತಿತರರು ಹಾಜರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.