ಸಿಎಂ ಬದಲಾವಣೆ ಖರ್ಗೆ, ಸೋನಿಯಾ ಗಾಂಧಿಗಷ್ಟೇ ಗೊತ್ತು: ಬಿ.ಕೆ.ಹರಿಪ್ರಸಾದ್

By Kannadaprabha NewsFirst Published Oct 28, 2023, 10:43 PM IST
Highlights

ಎರಡೂವರೆ ವರ್ಷದ ಬಳಿಕ ಸಿಎಂ ಬದಲಾವಣೆ ವಿಚಾರ ಖರ್ಗೆ, ರಾಹುಲ್, ಸೋನಿಯಾ ಗಾಂಧಿ, ಸುರ್ಜೆವಾಲಾ, ವೇಣುಗೋಪಾಲ್ ಮತ್ತು ಸಿಎಂ, ಡಿಸಿಎಂಗೆ ಮಾತ್ರ ಗೊತ್ತಿದೆ. ಬೇರೆ ಯಾರಿಗೂ ಈ ಬಗ್ಗೆ ಹೇಳೊಕೆ ಆಗುವುದಿಲ್ಲವೆಂದು ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದರು. 

ಚಿತ್ರದುರ್ಗ (ಅ.28): ಎರಡೂವರೆ ವರ್ಷದ ಬಳಿಕ ಸಿಎಂ ಬದಲಾವಣೆ ವಿಚಾರ ಖರ್ಗೆ, ರಾಹುಲ್, ಸೋನಿಯಾ ಗಾಂಧಿ, ಸುರ್ಜೆವಾಲಾ, ವೇಣುಗೋಪಾಲ್ ಮತ್ತು ಸಿಎಂ, ಡಿಸಿಎಂಗೆ ಮಾತ್ರ ಗೊತ್ತಿದೆ. ಬೇರೆ ಯಾರಿಗೂ ಈ ಬಗ್ಗೆ ಹೇಳೊಕೆ ಆಗುವುದಿಲ್ಲವೆಂದು ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದರು. ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ‌ ಸಿಎಂ ಎಚ್‌ಡಿಕೆ ವಿಲನ್ ಎಂಬ ಸಿಎಂ ಹೇಳಿಕೆಗೆ ನಾನು ಸಿಎಂ ವಕ್ತಾರ ಅಲ್ಲ, ಎಚ್‌ಡಿಕೆ ಬೆಂಬಲಿಗನೂ ಅಲ್ಲವೆಂದರು. ಶಾಸಕರ ಟೀಮ್ ಜತೆ ಸಚಿವ ಜಾರಕಿಹೊಳಿ ದುಬೈ ಪ್ರವಾಸಕ್ಕೆ ಪ್ರತಿಕ್ರಿಯಿಸಿದ ಅವರು ಇದನ್ನು ತಪ್ಪಾಗಿ ಅರ್ಥೈಸಿಕೊಳ್ಳಬಾರದೆಂದರು. 

ಫ್ಯಾಷನ್‌ಗಾಗಿ ಹುಲಿ ಉಗುರು ಇತರೆ ವಸ್ತು ಬಳಕೆ ಸರಿಯಲ್ಲ. ವನ್ಯಜೀವಿ ಸಂರಕ್ಷಣೆ ಕಾಯ್ದೆ ಪ್ರಕಾರ ಕ್ರಮ ಜರುಗಿಸಬೇಕು. ಯಾರೇ ಆಗಿರಲಿ ಕಾಯ್ದೆ ಉಲ್ಲಂಘಿಸಿದವರ ವಿರುದ್ಧ ಕ್ರಮಕೈಗೊಳ್ಳಬೇಕು. ಮೌಲ್ವಿಗಳಿಂದ ನವಿಲು ಗರಿ ಬಳಕೆ ಬಗ್ಗೆ ಬೇರೆಯದೇ ರೀತಿಯಲ್ಲಿ ಪ್ರತಿಕ್ರಿಯಿಸಿದ ಅವರು ಪ್ರಧಾನ ಮಂತ್ರಿ ನವಿಲು ಗರಿ ಧರಿಸಿದ್ದರು. ನವಿಲು ಸಾಕಿಕೊಂಡು ಇದ್ದರು, ಪ್ರಧಾನಿ ಅವರನ್ನು ಹಿಡಿದುಕೊಂಡು ಹೋಗಬೇಕಾ ಎಂದರು. ನವಿಲುಗರಿ ನೈಸರ್ಗಿಕವಾಗಿ ಉದುರುತ್ತದೆ, ಕೊಂದು ತಂದಿದ್ದರೆ ಕ್ರಮ ಕೈಗೊಳ್ಳಬೇಕು ಎಂದು ಬಿ.ಕೆ ಹರಿಪ್ರಸಾದ್ ಹೇಳಿದರು.

ಶಾಖಾದ್ರಿ ಮನೆಯಲ್ಲಿ ಚಿರತೆ-ಜಿಂಕೆ ಚರ್ಮ ಪತ್ತೆಯಾಗಿದ್ರು ಬಂಧನ ಯಾಕಿಲ್ಲ: ಶ್ರೀರಾಮಸೇನೆ ಪ್ರಶ್ನೆ

ಅವಕಾಶ ಸಿಕ್ಕಿಲ್ಲ, ಹಿಂದುಳಿದಿದ್ದೇವೆನ್ನುವ ಕೊರಗು ಬೇಡ: ಅವಕಾಶ ಒದಗಿ ಬರಲಿಲ್ಲ, ಹಾಗಾಗಿ ಹಿಂದುಳಿದ್ದೇವೆ ಎಂಬ ಕೊರಗು ಯಾರೂ ಇಟ್ಟುಕೊಳ್ಳಬಾರದೆಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು. ಚಿತ್ರದುರ್ಗ ಹೊರವಲಯ ಸೀಬಾರ ಸಮೀಪವಿರುವ ಬಂಜಾರ ಗುರುಪೀಠದಲ್ಲಿ ನಡೆದ ಬಂಜಾರ ಬುಡಕಟ್ಟು(ಲಂಬಾಣಿ) ಸಂಸ್ಕೃತಿ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಮುಂದುವರೆದವರಿಗಿಂತ ನಾವೇನು ಕಮ್ಮಿಯಿಲ್ಲ ಎನ್ನುವ ಛಲ ನಿಮ್ಮಲ್ಲಿ ಬೆಳೆಯಬೇಕು ಎಂದರು. ಮೀಸಲಾತಿ ಭಿಕ್ಷೆಯಲ್ಲ. ಡಾ.ಬಿ.ಆರ್.ಅಂಬೇಡ್ಕರ್ ಎಲ್ಲಾ ಜಾತಿ ಧರ್ಮದವರಿಗೂ ಸಂವಿಧಾನದಡಿ ನೀಡಿರುವ ಹಕ್ಕು.

ಸಾವಿರಾರು ವರ್ಷಗಳಿಂದ ಶೋಷಣೆಗೊಳಗಾಗಿರುವ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ ಸಾಮಾಜಿಕ ನ್ಯಾಯದಡಿ ಸಮಾನ ಅವಕಾಶ ಸಿಗಬೇಕೆಂಬ ಆಶಯವನ್ನಿಟ್ಟುಕೊಂಡು ಅಂಬೇಡ್ಕರ್ ಸಂವಿಧಾನ ರಚಿಸಿ ದೇಶಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಪ್ರತಿಯೊಬ್ಬರು ಶಿಕ್ಷಣ, ಆರೋಗ್ಯ, ನೌಕರಿ ಪಡೆಯಬೇಕಾಗಿರುವುದರಿಂದ ಜನಗಣತಿ ಆಗಬೇಕು. ಆಗ ಮಾತ್ರ ಜಾತಿವಾರು ಜನಸಂಖ್ಯೆಗನುಗುಣವಾಗಿ ಸರ್ಕಾರದ ಸೌಲಭ್ಯಗಳನ್ನು ಒದಗಿಸಲು ಸಾಧ್ಯ ಎಂದರು.

ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ. ಗುರುಪೀಠಗಳಿಂದ ಮಾತ್ರ ಮಕ್ಕಳಲ್ಲಿ ಸಂಸ್ಕೃತಿ, ಸಂಸ್ಕಾರ ಕಲಿಸಬಹುದು. ಸಮಾಜದಲ್ಲಿ ಒಳ್ಳೆಯದು, ಕೆಟ್ಟದ್ದು, ಎರಡು ಇದೆ. ಒಳ್ಳೆಯದನ್ನು ಆಯ್ಕೆ ಮಾಡಿಕೊಂಡು ಜೀವನದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಂಡು ಮನುಷ್ಯತ್ವ ಮೈಗೂಡಿಸಿಕೊಳ್ಳಿ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೆ ರಾಜ ಮಹಾರಾಜರಿದ್ದಂತೆ. ನೀವುಗಳು ಕಟ್ಟುವ ತೆರಿಗೆ ಹಣದಿಂದಲೇ ಸರ್ಕಾರ ನಡೆಯುವುದು. ಜನಗಣತಿ ಆಗಬೇಕು. ಆದರೆ ಮೀಸಲಾತಿಗಾಗಿ ಅಲ್ಲ. ಸರ್ಕಾರದ ಗಮನ ಸೆಳೆಯುವುದಕ್ಕಾಗಿ. ಬಂಜಾರ ಜನಾಂಗದವರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ತಿಳಿಸಿದರು.

ನಟಿ ಶುಭಾ ಪೂಂಜಾರ ಜೊತೆ ಅಸಭ್ಯ ವರ್ತನೆ ಎನ್ನುವುದು ಸತ್ಯಕ್ಕೆ ದೂರ: ಸ್ಥಳೀಯರ ವಾದ

ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಸಾಂಸ್ಕೃತಿಕ ರಾಯಭಾರಿಗಳಾಗಿರುವ ಬಂಜಾರ ಸಮುದಾಯ ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿದೆ. ಆಧುನಿಕತೆ ಎಷ್ಟೆ ಮುಂದುವರೆದಿದ್ದರೂ ಲಂಬಾಣಿ ಜನಾಂಗದ ಪೂರ್ವಜರು ಆಚರಿಸಿಕೊಂಡು ಬರುತ್ತಿರುವ ಸಂಪ್ರದಾಯವನ್ನು ಇನ್ನು ಮುಂದುವರೆಸಿಕೊಂಡು ಬರುತ್ತಿರುವುದು ಸುಲಭದ ಕೆಲಸವಲ್ಲ. ದೇಶಕ್ಕೆ ಅಕ್ಕಿ, ಗೋಧಿ ಬೆಳೆದು ಕೊಟ್ಟವರಲ್ಲಿ ಬಂಜಾರ ಜನಾಂಗದ ಕೊಡುಗೆ ಬಹಳಷ್ಟಿದೆ. ಸಮಾಜದಲ್ಲಿ ಶಿಕ್ಷಣವಂತರು ಜಾಸ್ತಿಯಾಗಿ ಉನ್ನತ ಹುದ್ದೆಗಳಿಗೆ ಹೋಗಿದ್ದಾರೆ. ವಿಪರ್ಯಾಸವೆಂದರೆ ಶಿಕ್ಷಣವಂತರಾದ ಕೆಲವರು ಜನಾಂಗದ ಕಡೆ ತಿರುಗಿ ನೋಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

click me!