ಅಧಿವೇಶನದಲ್ಲಿ 2ನೇ ದಿನವೂ ವಾಲ್ಮೀಕಿ ಹಗರಣ ಜಟಾಪಟಿ: ಸಿಎಂ ರಾಜೀನಾಮೆ, ಸಿಬಿಐ ತನಿಖೆಗೆ ಪ್ರತಿಪಕ್ಷ ಬಿಗಿಪಟ್ಟು

By Kannadaprabha NewsFirst Published Jul 17, 2024, 5:46 AM IST
Highlights

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಹಗರಣ ವಿಧಾನಮಂಡಲ ಅಧಿವೇಶನದ ಎರಡನೇ ದಿನವೂ ಉಭಯ ಸದನಗಳಲ್ಲಿ ತೀವ್ರ ಜಟಾಪಟಿ, ಆರೋಪ-ಪ್ರತ್ಯಾರೋಪ, ವೈಯಕ್ತಿಕ ದೋಷಾರೋಪಣೆ ಹಂತ ಮುಟ್ಟಿದ್ದು, ತೀವ್ರ ಕೋಲಾಹಲಕ್ಕೆ ಕಾರಣವಾಯಿತು. 

ವಿಧಾನಮಂಡಲ (ಜು.17): ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಹಗರಣ ವಿಧಾನಮಂಡಲ ಅಧಿವೇಶನದ ಎರಡನೇ ದಿನವೂ ಉಭಯ ಸದನಗಳಲ್ಲಿ ತೀವ್ರ ಜಟಾಪಟಿ, ಆರೋಪ-ಪ್ರತ್ಯಾರೋಪ, ವೈಯಕ್ತಿಕ ದೋಷಾರೋಪಣೆ ಹಂತ ಮುಟ್ಟಿದ್ದು, ತೀವ್ರ ಕೋಲಾಹಲಕ್ಕೆ ಕಾರಣವಾಯಿತು. ವಿಧಾನಪರಿಷತ್ತಿನಲ್ಲಂತೂ ಜಟಾಪಟಿ ವಿಕೋಪ ಮುಟ್ಟಿದ ಪರಿಣಾಮ ಕಲಾಪ ಗುರುವಾರಕ್ಕೆ ಮುಂದೂಡಿಕೆ ಕಂಡಿತು. ಉಭಯ ಸದನಗಳಲ್ಲಿ ಪ್ರಶ್ನೋತ್ತರದ ನಂತರ ಹಗರಣದ ಬಗ್ಗೆ ಕಾವೇರಿದ ಚರ್ಚೆ ನಡೆಯಿತು. 

ಕೆಳಮನೆಯಲ್ಲಿ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ಸೇರಿದಂತೆ ಬಿ.ವೈ. ವಿಜಯೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು, ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು. ಮೇಲ್ಮನೆಯಲ್ಲಿ ಸಿ.ಟಿ. ರವಿ ಅವರು ಸಹ ತೀಕ್ಷ್ಣವಾಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ಸಚಿವರು, ಅಧಿಕಾರಿಗಳು ಶಾಮೀಲಾಗಿದ್ದಾರೆ. ಸರ್ಕಾರದ ಗಮನಕ್ಕೆ ಬಂದೇ ಹಣ ವರ್ಗಾವಣೆಯಾಗಿರುವುದರಿಂದ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು ಹಾಗೂ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.

Latest Videos

ಗೂಂಡಾ ವರ್ತನೆ, ಟಾರ್ಗೆಟ್ ರಾಜಕಾರಣ ಕಾಂಗ್ರೆಸ್ ಸಂಸ್ಕೃತಿ: ನಿಖಿಲ್ ಕುಮಾರಸ್ವಾಮಿ

ಏಟು-ತಿರುಗೇಟು: ಉಭಯ ಸದನಗಳಲ್ಲಿ ಪ್ರತಿಪಕ್ಷಗಳ ಆರೋಪ, ಮಾತುಗಳನ್ನು ಎದುರಿಸಲು ಸಾಕಷ್ಟು ಸಿದ್ಧತೆ ಮಾಡಿಕೊಂಡು ಬಂದಿದ್ದ ಕಾಂಗ್ರೆಸ್‌ ಸದಸ್ಯರು ಬಿಜೆಪಿ ನಾಯಕರ ಜೊತೆ ನೆಕ್ಕುಂಟಿ ನಾಗರಾಜ ಇರುವ ಫೋಟೋ ಪ್ರದರ್ಶಿಸಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೇಳಿ ಬಂದ ಕೋವಿಡ್‌ ಹಗರಣ, ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ಅಕ್ರಮ, ತಾಂಡಾ ಅಭಿವೃದ್ಧಿ ನಿಗಮದ ಅಕ್ರಮಗಳ ಬಗ್ಗೆಯೂ ಮಾತನಾಡಿ ಎಂದು ತಿರುಗೇಟು ನೀಡಿದರು.

ಇದರಿಂದ ಸದನದಲ್ಲಿ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆಯುತ್ತಿದ್ದಂತೆ ಸಭಾಧ್ಯಕ್ಷರು ಕಲಾಪವನ್ನು ಗುರುವಾರಕ್ಕೆ ಮುಂದೂಡಿದರು. ಈ ಮಧ್ಯೆ ವಿಧಾನಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಿಜೆಪಿಯ ಡಾ. ಸಿ.ಎನ್. ಅಶ್ವತ್ಥ್‌ನಾರಾಯಣ ಕುರಿತು ಭ್ರಷ್ಟಾಚಾರದ ಪಿತಾಮಹ ಎಂದು ಮಾಡಿದ ಆರೋಪ ವೈಯಕ್ತಿಕ ಮಟ್ಟದ ವಾಗ್ವಾದಕ್ಕೆ ಕಾರಣವಾಯಿತು. ಕೊನೆಗೆ ಬಳಸಿದ ಶಬ್ದವನ್ನು ಕಡತದಿಂದ ತೆಗೆದುಹಾಕುವಂತೆ ಸಭಾಧ್ಯಕ್ಷರು ಸೂಚಿಸಿದರು.

ಮೇಲ್ಮನೆಯಲ್ಲೂ ವಾಗ್ವಾದ: ವಿಧಾನ ಪರಿಷತ್ತಿನಲ್ಲಿ ಪ್ರಶ್ನೋತ್ತರ, ಶೂನ್ಯವೇಳೆ ನಂತರ ಹಗರಣದ ಬಗ್ಗೆ ಚರ್ಚಿಸಲು ಅವಕಾಶ ನೀಡಬೇಕೆಂಬ ಮನವಿಗೆ ಸಭಾಪತಿ ಬಸವರಾಜ ಹೊರಟ್ಟಿ ನಿರಾಕರಿಸಿ, ಈಗಾಗಲೇ ನಿಗದಿಪಡಿಸಿರುವಂತೆ ಕಲಾಪ ನಡೆಸಲಾಗುವುದು. ಗುರುವಾರ ಚರ್ಚೆಗೆ ಅವಕಾಶ ನೀಡಲಾಗುವುದು ಎಂದರು. ಆದರೆ ಇದನ್ನು ಒಪ್ಪದ ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್‌ ಸದಸ್ಯರು ಸಭಾಪತಿಗಳ ಮುಂದೆ ಬಂದು ಸರ್ಕಾರದ ವಿರುದ್ಧ ಘೋಷಣೆ ಕೂಗತೊಡಗಿದರು. ಇದಕ್ಕೆ ಆಡಳಿತಾರೂಢ ಕಾಂಗ್ರೆಸ್‌ ಸದಸ್ಯರು ಆಕ್ಷೇಪ ವ್ಯಕ್ತಪಡಿಸತೊಡುತ್ತಿದ್ದಂತೆ ಸಭಾಪತಿಗಳು ಕಲಾಪವನ್ನು ಮುಂದೂಡಿದರು. 

ನಂತರ ತಮ್ಮ ಕಚೇರಿಯಲ್ಲಿ ಬಿಜೆಪಿ ಸದಸ್ಯರ ಜೊತೆ ಸಭೆ ನಡೆಸಿದರು. ಭೋಜನ ವಿರಾಮದ ನಂತರ ಚರ್ಚೆ ಆರಂಭಿಸಿದ ಬಿಜೆಪಿ ಸಿ.ಟಿ. ರವಿ, ದಲಿತರ ಹಣ ದುರುಪಯೋಗ ಆಗಿದೆ. ಸಚಿವರು, ಹಿರಿಯ ಅಧಿಕಾರಿಗಳು, ಮಧ್ಯವರ್ತಿಗಳು ಶಾಮೀಲಾಗಿದ್ದಾರೆ. ಈ ಹಣ ತೆಲಂಗಾಣದ ಚುನಾವಣೆ ಮತ್ತು ಕರ್ನಾಟಕ ಲೋಕಸಭಾ ಚುನಾವಣೆಗೆ ಬಳಕೆಯಾಗಿದೆ. ಸರ್ಕಾರದ ಗಮನಕ್ಕೆ ಬಂದೇ ಹಣ ವರ್ಗಾವಣೆಯಾಗಿರುವ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ನೀರಿನ ಸಮಸ್ಯೆಗೆ ಸೌಹಾರ್ದಯುತ ಪರಿಹಾರ ಅಗತ್ಯ: ಸಂಸದ ಮಂಜುನಾಥ್

ಚರ್ಚೆ ಮಧ್ಯ ಸಿ.ಟಿ. ರವಿ ಅವರು ಹಗರಣದ ಆರೋಪಿಗಳಲ್ಲಿ ಒಬ್ಬರಾದ ನೆಕ್ಕುಂಟಿ ನಾಗರಾಜ ಮುಖ್ಯಮಂತ್ರಿ ಹಾಗೂ ಸಚಿವರ ಜೊತೆ ಇರುವ ಫೋಟೋಗಳನ್ನು ಪ್ರದರ್ಶಿಸುತ್ತಿದ್ದಂತೆ ಕಾಂಗ್ರೆಸ್‌ ಸದಸ್ಯರು ಬಿಜೆಪಿಯ ಬಿ. ಶ್ರೀರಾಮುಲು ಸೇರಿದಂತೆ ಬಿಜೆಪಿಯ ನಾಯಕರ ಜೊತೆಗಿರುವ ಫೋಟೋ ಪ್ರದರ್ಶಿಸಿದರು. ಈ ಹಂತದಲ್ಲಿ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರ ನಡುವೆ ತೀವ್ರ ವಾಗ್ವಾದ ಆರಂಭವಾಗುತ್ತಿದ್ದಂತೆ ಸಭಾಪತಿಗಳು ಸದನವನ್ನು ಗುರುವಾರಕ್ಕೆ ಮುಂದೂಡಿದರು.

click me!