
ವಿಧಾನಸಭೆ (ಜು.17): ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಿಂದಾಗಿ ಕೆಆರ್ಎಸ್ ಸೇರಿದಂತೆ ವಿವಿಧ ಜಲಾಶಯಗಳಿಗೆ ನೀರಿನ ಹರಿವಿನ ಪ್ರಮಾಣ ಹೆಚ್ಚಳವಾಗಿದ್ದು, ಇದರಿಂದ ತಮಿಳುನಾಡಿಗೂ ನಿತ್ಯ ಹರಿಯುವ ನೀರಿನ ಪ್ರಮಾಣ 1.5 ಟಿಎಂಸಿ ಮುಟ್ಟಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಸದನದಲ್ಲಿ ಮಂಗಳವಾರ ಕಾವೇರಿ ಜಲಾನಯನ ಪ್ರದೇಶಗಳ ನದಿ ನೀರು ಹರಿವಿನ ಪ್ರಮಾಣದ ಮಾಹಿತಿ ನೀಡಿದರು.
ಹಾರಂಗಿ ಜಲಾಶಯಕ್ಕೆ 12,827 ಕ್ಯೂಸೆಕ್ಸ್, ಹೇಮಾವತಿಗೆ 14,027, ಕೆಆರ್ಎಸ್ಗೆ 25,933, ಕಬಿನಿಗೆ 28,840 ಸೇರಿ ಒಟ್ಟು 56,626 ಕ್ಯೂಸೆಕ್ಸ್ ನೀರು ಹರಿದುಬರುತ್ತಿದೆ. ಕಾನೂನಿನ ಪ್ರಕಾರ ತಮಿಳುನಾಡಿಗೆ ಈ ವರೆಗೆ 40 ಟಿಎಂಸಿ ನೀರು ಹೋಗಬೇಕಾಗಿತ್ತು. ಬಿಳಿಗುಂಡ್ಲುವಿನಲ್ಲಿ ದಾಖಲೆ ಪ್ರಕಾರ 6 ಟಿಎಂಸಿ ನೀರು ಹೋಗಿದೆ. ಅಂದರೆ ಪ್ರತಿ ದಿನ ನೀರಿನ ಹರಿವಿನ ಪ್ರಮಾಣ 1.5 ಟಿಎಂಸಿ ಮುಟ್ಟಿದೆ. ಏಕೆಂದರೆ 250 ಕಿ.ಮೀ ನಷ್ಟು ನೀರು ಹರಿಯಬೇಕಿದೆ. ಇದೇ ರೀತಿ ಮಳೆ ಬಂದು ನೀರು ಹರಿದರೆ ತೊಂದರೆಯಾಗುವುದಿಲ್ಲ ಎಂಬುದು ನನ್ನ ಭಾವನೆ ಎಂದರು.
ಸೌದೀಲಿ ಕಷ್ಟಕ್ಕೆ ಸಿಲುಕಿದವನ ರಕ್ಷಣೆ: ನೌಕರಿ ನಂಬಿ ಹೋಗಿದ್ದ ರಾಮನಗರದ ಯುವಕ
ಸಿಸಿಟಿವಿ ಅವಳವಡಿಕೆ: ರಸ್ತೆ ಬದಿ ಕಸ ಸುರಿಯುವವರ ವಿರುದ್ಧ ಕ್ರಮ ಕೈಗೊಳ್ಳಲು ನಗರದ ಪ್ರತಿ ವಿದ್ಯುತ್ ಕಂಬಕ್ಕೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಕಣ್ಗಾವಲು ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ಮನೆಯ ಬಳಿ ಬರುವ ಕಸ ಸಂಗ್ರಹ ವಾಹನಗಳಿಗೆ ಕಸವನ್ನು ಹಾಕದೆ ರಸ್ತೆ ಬದಿ ಎಸೆಯುತ್ತಿದ್ದಾರೆ. ಈ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ತಪ್ಪಿಸಲು ನಗರದ ಪ್ರತಿ ವಿದ್ಯುತ್ ಕಂಬಕ್ಕೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಸೂಚನೆ ನೀಡಲಾಗಿದೆ.
ಈಗಾಗಲೇ ಕಸ ಹಾಗೂ ಕಟ್ಟಡ ನಿರ್ಮಾಣ ತ್ಯಾಜ್ಯ ಸುರಿಯುವವರನ್ನು ಗುರುತಿಸಿ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಹೇಳಿದರು. ನಗರದಲ್ಲಿ ಡೆಂಘೀ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪಾಲಿಕೆ ಹಾಗೂ ಆರೋಗ್ಯ ಇಲಾಖೆ ಜಂಟಿಯಾಗಿ ಕೆಲಸ ಮಾಡುತ್ತಿವೆ. ಎಲ್ಲ ಇಲಾಖೆಗಳ ಮುಖ್ಯಸ್ಥರೊಂದಿಗೆ ಮುಖ್ಯಮಂತ್ರಿಗಳು ಪ್ರತ್ಯೇಕ ಸಭೆ ನಡೆಸುತ್ತಾರೆ ಎಂದರು.
ಕಾಲುವೆಗಳಿಗೆ ಪಂಪ್ಸೆಟ್ ಅಳವಡಿಕೆ ತಡೆಗೆ ಮಸೂದೆ: ರಾಜ್ಯದ ನೀರಾವರಿ ಯೋಜನೆಗಳಲ್ಲಿ ರೈತರು ಅಕ್ರಮವಾಗಿ ಕೆನಾಲ್ಗಳಿಗೆ ಪಂಪ್ಸೆಟ್ ಅಳವಡಿಸಿ ನೀರು ಎತ್ತುತ್ತಿರುವುದರಿಂದ ಯೋಜನೆಯ ಕೊನೆಯ ಭಾಗದ ಹಳ್ಳಿಗಳಿಗೆ ನೀರು ತಲುಪುತ್ತಿಲ್ಲ. ಇದನ್ನು ತಡೆಯಲು ಇದೇ ಅಧಿವೇಶನದಲ್ಲೇ ವಾರದೊಳಗೆ ಅಗತ್ಯ ಮಸೂದೆ ಮಂಡಿಸಲಾಗುವುದು ಎಂದು ಬೃಹತ್ ನೀರಾವರಿ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸದನದಲ್ಲಿ ಮಂಗಳವಾರ ಪ್ರಶ್ನೋತ್ತರ ಕಲಾಪದ ವೇಳೆ ಜಮಖಂಡಿ ಸದಸ್ಯ ಜಗದೀಶ್ ಶಿವಣ್ಣ ಗುಡಗುಂಟಿ ಅವರ ಪ್ರಶ್ನೆಗೆ ಉತ್ತರ ನೀಡಿದವರು.
ಆಶಾ ಕಾರ್ಯಕರ್ತೆಯರ ಟ್ಯಾಬ್ ಕದ್ದ ಆಂಬುಲೆನ್ಸ್ ಚಾಲಕ: ಇತ್ತ ಏಳು ಡ್ರಗ್ಸ್ ದಂಧೆಕೋರರ ಸೆರೆ
ಮಂಡ್ಯ, ಹಾಸನ, ಬಾಗಲಕೋಟೆ ಸೇರಿದಂತೆ ರಾಜ್ಯದ ನೀರಾವರಿ ಪ್ರದೇಶಗಳ ಕೊನೆಯ ಭಾಗಗಳಿಗೆ ನೀರು ತಲುಪುತ್ತಿಲ್ಲ. ಏತ ನೀರಾವರಿ ಮಾಡಿದರೂ ಸಹ ಶೇ.50 ರಷ್ಟು ನೀರು ಸಹ ಹೋಗುತ್ತಿಲ್ಲ. ಇದನ್ನು ತಡೆಯಲು ವಾರದೊಳಗೆ ಮಸೂದೆ ತಯಾರು ಮಾಡಿ ಮಂಡಿಸಲಾಗುವುದು. ಇದನ್ನು ಎಲ್ಲ ಸದಸ್ಯರೂ ಪರಾಮರ್ಶಿಸಿ ಒಪ್ಪಿಗೆ ನೀಡಿದರೆ ಜಾರಿಗೊಳಿಸಲಾಗುವುದು ಎಂದರು. ನಾವು ನೀರನ್ನು ಏತ ನೀರಾವರಿ ಮೂಲಕ 40 ಕಿ.ಮೀ.ವರೆಗೆ ನೀರು ಹರಿಸುತ್ತೇವೆ. ಆ ನೀರನ್ನೇ ಕೆಲವೆಡೆ 10 ಕಿಮೀಗಟ್ಟಲೇ ಪಂಪ್ ಮಾಡುತ್ತಿದ್ದಾರೆ. ಯೋಜನೆ ಮಾಡಿ ಏನು ಲಾಭ? ಕೆಆರ್ಎಸ್ ನೀರು ಮಳವಳ್ಳಿಗೆ ಹೋಗುವುದೇ ಇಲ್ಲ. ಕಾಲುವೆ ಮಾಡಿ 20 ವರ್ಷಗಳಾದರೂ ಗದಗ ಜಿಲ್ಲೆ ನೀರನ್ನೇ ನೋಡಿಲ್ಲ. ಎಲ್ಲರೂ ಸಹಕಾರ ಕೊಟ್ಟರೇ ನಾವು ನೀರಿನ ರಕ್ಷಣೆ ಮಾಡಿ ಕೊನೆಯ ಭಾಗದ ರೈತರಿಗೂ ನೀರು ತಲುಪುವಂತೆ ಮಾಡುವ ಕಾನೂನು ತರಲಾಗುವುದು ಎಂದರು. ಇದಕ್ಕೆ, ಬಿಜೆಪಿ ಸದಸ್ಯ ಸಿ.ಸಿ.ಪಾಟೀಲ್ ಸಹಮತ ವ್ಯಕ್ತಪಡಿಸಿ, ದಯವಿಟ್ಟು ಆದಷ್ಟು ಬೇಗ ವಿಧೇಯಕ ಸಿದ್ದಪಡಿಸಿ, ನಮ್ಮ ಸಂಪೂರ್ಣ ಸಹಕಾರವಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.