
ಹೊಸಕೋಟೆ (ಮೇ.31): ಕಚೇರಿಗಳಲ್ಲಿ ಸರ್ಕಾರಿ ಅಧಿಕಾರಿಗಳು ಪಾರದರ್ಶಕ ಆಡಳಿತ ಮಾಡುವ ಮೂಲಕ ಕೆಲಸ ಕಾರ್ಯಗಳಿಗೆ ಬರುವ ಬಡವರಿಗೆ ತ್ವರಿತವಾಗಿ ಕೆಲಸ ಮಾಡಿಕೊಡಬೇಕು. ವಿನಾಕಾರಣ ಜನರನ್ನು ಕೆಲಸ ಮಾಡಿಕೊಡದೆ ಕಚೇರಿಗಳಿಗೆ ಅಲೆದಾಡಿಸಿದ್ರೆ ನಾನು ಸಹಿಸುವುದಿಲ್ಲ ಎಂದು ಶಾಸಕ ಶರತ್ ಬಚ್ಚೇಗೌಡ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ನಗರದ ತಾಲೂಕು ಕಚೇರಿ ಆವರಣದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರಿ ಕಚೇರಿಗಳಿಗೆ ಪ್ರತಿದಿನ ಜನ ಸಾಮಾನ್ಯರು ವಿಧವಾ ವೇತನ, ವೃದ್ಧಾಪ್ಯ ವೇತನ, ಜಾತಿ, ಆದಾಯ ಪ್ರಮಾಣ ಪತ್ರ, ವಂಶ ವೃಕ್ಷ, ಮರಣ ಪ್ರಮಾಣ ಪತ್ರ ಸೇರಿದಂತೆ ಹಲವಾರು ರೀತಿಯ ಅರ್ಜಿಗಳನ್ನು ಹಿಡಿದು ಬರುತ್ತಾರೆ. ಜನರ ಕೆಲಸ ಕಾರ್ಯಗಳನ್ನು ವಿಳಂಬ ಮಾಡದೆ, ತ್ವರಿತವಾಗಿ ಸರಳವಾಗಿ ವಿಲೇವಾರಿ ಮಾಡುವ ಮೂಲಕ ಕೆಲಸ ಮಾಡಿಕೊಡಬೇಕು. ವಿನಾಕಾರಣ ಅಲೆದಾಡುವಂತೆ ಮಾಡಿದ್ರೆ ನಾನು ಸಹಿಸಲ್ಲ. ಆದ್ದರಿಂದ ಪ್ರತಿಯೊಬ್ಬರು ಜವಾಬ್ದಾರಿ ಅರಿತು ಕೆಲಸ ಮಾಡಿ ಎಂದು ಹೇಳಿದರು.
ಯಾವುದೇ ಅನುಮಾನ ಬೇಡ, ಗ್ಯಾರಂಟಿ ಅನುಷ್ಠಾನ ಖಚಿತ: ಡಾ.ಜಿ.ಪರಮೇಶ್ವರ್
ನಿವೇಶನ ಹಂಚಿಕೆ ಚರ್ಚೆ: ಹೊಸಕೋಟೆ ತಾಲೂಕಿನಲ್ಲಿ ನಿವೇಶನ ಹಂಚಿಕೆ ಮಾಡುವ ದೃಷ್ಟಿಯಿಂದ ಈಗಾಗಲೆ 292 ಎಕರೆ ಜಾಗವನ್ನು ಮೀಸಲಿಟ್ಟಿರುವ ಪರಿಣಾಮ ಆಯಾ ಹೋಬಳಿ ವ್ಯಾಪ್ತಿಯ ಉಪ ತಹಶೀಲ್ದಾರ್, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳ ಜೊತೆ ಚರ್ಚೆ ನಡೆಸಿದ ಶಾಸಕ ಶರತ್ ಬಚ್ಚೇಗೌಡ, ಮೀಸಲಿಟ್ಟಿರುವ ಜಾಗದಲ್ಲಿ ಏನಾದರೂ ತಕರಾರು ಇದೆಯೇ ಎಂದು ಸಾಧಕ ಬಾಧಕಗಳ ಕೂಲಂಕುಷವಾಗಿ ಪರಿಶೀಲನೆ ನಡೆಸಿದರು. ಹೊಸಕೋಟೆ ನಗರ ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವ ಪರಿಣಾಮ ತಾಲೂಕಿನಲ್ಲಿ ಜಮೀನಿಗೆ ಹೆಚ್ಚು ಬೇಡಿಕೆ ಇದೆ.
ಜಮೀನು ವ್ಯಾಜ್ಯಗಳಿಂದಲೆ ಶಾಂತಿ ಸುವ್ಯವಸ್ಥೆ ಹದಗೆಡುವುದರ ಜೊತೆಗೆ ರಾಜಕೀಯ ವಿವಾದಗಳು ನಡೆಯುತ್ತದೆ. ಆದ್ದರಿಂದ ಕಂದಾಯ ಇಲಾಖೆ ಅಧಿಕಾರಿಗಳ ಪಾತ್ರ ತಾಲೂಕಿನಲ್ಲಿ ಅತಿ ಮುಖ್ಯವಾಗಿದ್ದು, ಸಾಕಷ್ಟು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಶಾಸಕ ಶರತ್ ತಿಳಿಸಿದರು. ಇದೇ ಸಂದರ್ಭದಲ್ಲಿ ಶಾಸಕ ಶರತ್ ಬಚ್ಚೇಗೌಡ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕಾರ ಮಾಡಿ, ಅಹವಾಲುಗಳಿಗೆ ತ್ವರಿತವಾಗಿ ಪರಿಹಾರ ನೀಡುವಂತೆ ತಹಶೀಲ್ದಾರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಮಹೇಶ್ ಕುಮಾರ್, ತಾಪಂ ಇಒ ಚಂದ್ರಶೇಖರ್ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ಎಂಟಿಬಿ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುವೆ: ಶಾಸಕ ಶರತ್ ಬಚ್ಚೇಗೌಡ
ಮಿನಿ ವಿಧಾನಸೌಧಕ್ಕೆ ಜಾಗ ಗುರುತಿಸಿ: ಬೆಂಗಳೂರು ನಗರಕ್ಕೆ ಕೂಗಳತೆ ದೂರದಲ್ಲಿರುವ ಹೊಸಕೋಟೆ ನಗರವನ್ನು ಮಾದರಿ ತಾಲೂಕನ್ನಾಗಿ ಮಾಡುವ ಉದ್ದೇಶ ಹೊಂದಿದ್ದೇನೆ. ಆದ್ದರಿಂದ ಅಧಿಕಾರಿಗಳ ಸಹಕಾರ ಅತ್ಯಗತ್ಯವಾಗಿದೆ. ಪ್ರಮುಖವಾಗಿ ನಗರದಲ್ಲಿ ಮಿನಿ ವಿಧಾನಸೌಧ ನಿರ್ಮಾಣ ಮಾಡುವ ಚಿಂತನೆ ಇದೆ. ಜೂನ್ನಲ್ಲಿ ಬಜೆಟ್ ಅಧಿವೇಶನ ಇರುವ ಕಾರಣದಿಂದ ಸೂಕ್ತವಾದ ಸ್ಥಳವನ್ನು ಗುರ್ತಿಸಿದರೆ ಅನುದಾನ ತಂದು ಎಲ್ಲಾ ಇಲಾಖೆ ಒಂದೇ ಕಡೆ ಕರ್ತವ್ಯ ನಿರ್ವಹಿಸುವಂತೆ ಮಿನಿ ವಿಧಾನಸೌಧ ನಿರ್ಮಾಣ ಮಾಡಲಾಗುವುದು. ಆದ್ದರಿಂದ ತ್ವರಿತವಾಗಿ ನಗರದ ಹೊರಗಡೆ ಬಿಟ್ಟು ಟೌನಿನಲ್ಲಿ ಸೂಕ್ತ ಸ್ಥಳ ಗುರ್ತಿಸಿ ಎಂದು ಶಾಸಕ ಶರತ್ ತಹಸೀಲ್ದಾರ್ಗೆ ಸೂಚನೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.