ದಾಂಪತ್ಯಕ್ಕೆ ಕಾಲಿಡುವುದರ ಜತೆಗೆ ನಿಖಿಲ್ ಹೊಸ ರಾಜಕೀಯ ಜೀವನ ಆರಂಭ

By Suvarna NewsFirst Published Mar 3, 2020, 7:59 PM IST
Highlights

ನಿಖಿಲ್ ಕುಮಾರಸ್ವಾಮಿ ಅವರು ಸದ್ಯ ಮದ್ವೆ ಖುಷಿಯಲ್ಲಿದ್ದು, ದಾಂಪತ್ಯ ಜೀವನಕ್ಕೆ ಕಾಲಿಡುವುದರ ಜತೆಗೆ ಹೊಸ ರಾಜಕೀಯ ಜೀವನವನ್ನ ಆರಂಭಿಸಲಿದ್ದಾರೆ. ಹೀಗಂತ ಸ್ವತಃ ಜೆಡಿಎಸ್​ ವರಿಷ್ಠ ಎಚ್.ಡಿ.  ದೇವೇಗೌಡ ಭವಿಷ್ಯ ನುಡಿದಿದ್ದಾರೆ. ಹಾಗಾದ್ರೆ, ಮಂಡ್ಯದಿಂದ ಶಿಫ್ಟ್ ಆಗಲಿರುವ ನಿಖಿಲ್ ಕುಮಾರಸ್ವಾಮಿಯ ಮುಂದಿನ ರಾಜಕೀಯ ನಿಲ್ದಾಣ ಯಾವುದು..?

ರಾಮನಗರ, [ಮಾ.03]: ಸದ್ಯ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಮದುವೆಯ ಖುಷಿಯಲ್ಲಿದ್ದಾರೆ. ಇದರ ಮಧ್ಯೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ನಿಖಿಲ್ ಕುಮಾರಸ್ವಾಮಿಯ ಮುಂದಿನ ರಾಜಕೀಯ ಭವಿಷ್ಯವನ್ನ ಹೇಳಿದ್ದಾರೆ.

ಇಂದು [ಮಂಗಳವಾರ]  ರಾಮನಗರದಲ್ಲಿ ನಿಖಿಲ್​-ರೇವತಿ ಮದುವೆ ಸ್ಥಳ ವೀಕ್ಷಣೆ ಬಳಿಕ ಮಾತನಾಡಿದ ದೇವೇಗೌಡ್ರು,  ಮಂಡ್ಯ ಲೋಕಸಭಾ ಚುನಾವಣೆ ಸೋಲಿನ ಕಹಿ ಬಳಿಕ ನಿಖಿಲ್​ ಕುಮಾರಸ್ವಾಮಿ ರಾಜಕೀಯ ಭವಿಷ್ಯ ಈಗ ಮದುವೆ ಮೂಲಕ ರಾಮನಗರ ಕ್ಷೇತ್ರದಿಂದ ಪುನರ್​ ಆರಂಭವಾಗಲಿದೆ ಭವಿಷ್ಯ ನುಡಿದರು.

ನಿಖಿಲ್‌ ಮದುವೆ ಸ್ಥಳದಲ್ಲಿ ವಾಸ್ತು ಪ್ರಕಾರ ಮಂಟಪ

ಹಾಸನದಲ್ಲಿ ರೇವಣ್ಣ ಬಳಿಕ ಪ್ರಜ್ವಲ್​ ರೇವಣ್ಣ ರಾಜಕೀಯ ನೆಲೆ ಕಂಡುಕೊಂಡರು. ರಾಮನಗರ ನನಗೆ ಹಾಗೂ ಕುಮಾರಸ್ವಾಮಿಗೆ ಕರ್ಮಭೂಮಿ ಆಯಿತು. ಈಗ ಇದೇ ಭೂಮಿ ನಿಖಿಲ್​ಗೆ ರಾಜಕೀಯ ನೆಲೆ ನೀಡುವ ಭರವಸೆ ಇದೆ ಎಂದು ತಮ್ಮ ಮನದ ಮಾತುಗಳನ್ನ ಹೊರಹಾಕಿದರು. 

ನಿಖಿಲ್​ ರಾಜಕೀಯದಲ್ಲಿ ದೈವದ ಆಟ ನಡೆಯಿತು. ಅವನ ರಾಜಕೀಯ ಮಂಡ್ಯದಿಂದ ಆರಂಭಿಸಬೇಕು ಎಂಬ ಉದ್ದೇಶವಿರಲಿಲ್ಲ. ಆಕಸ್ಮಿಕವಾಗಿ ಆತ ಅಲ್ಲಿ ನಿಂತ. ಮತ್ತೆ ಈಗ ಆ ತಪ್ಪು ಮಾಡುವುದಿಲ್ಲ. ಮಂಡ್ಯದಲ್ಲಿ ನಾವು ಪಕ್ಷವನ್ನು ಮಾತ್ರ ಕಟ್ಟುತ್ತೇವೆ. ರಾಮನಗರದಿಂದಲೇ ಹೊಸದಾಗಿ ಆತ ವೈವಾಹಿಕ ಜೀವನದ ಜೊತೆ ರಾಜಕೀಯ ಭವಿಷ್ಯ ಉದಯವಾಗಲಿದೆ ಎಂದು ಹೇಳಿದರು.

ಮಗನ ಮದುವೆ ಬಗ್ಗೆ ನನ್ನದೊಂದು ಕನಸಿದೆ: ಕುಮಾರಸ್ವಾಮಿ

ರಾಮನಗರ ನನಗೆ, ಕುಮಾರಸ್ವಾಮಿಗೆ ರಾಜಕೀಯ ಶಕ್ತಿಕೊಟ್ಟ ಸ್ಥಳ. ಇಲ್ಲಿಂದಲೇ ನಾನು ಸಿಎಂ ಆಗಿ ಪ್ರಧಾನಿಯಾದೆ. ನಮ್ಮ ವಂಶಕ್ಕೆ ರಾಜಕೀಯದಲ್ಲಿ 2ನೇ ಶಕ್ತಿ ಕೊಟ್ಟ ಸ್ಥಳವಿದು. ಇಲ್ಲಿಂದಲೇ ನಿಖಿಲ್​ ಕೂಡ ರಾಜಕೀಯವಾಗಿ ಬೆಳೆಯಬೇಕು ಎಂಬುದು ನಮ್ಮ ಉದ್ದೇಶ ಎಂದರು.

ಒಟ್ಟಿನಲ್ಲಿ 2019ರ ಲೋಕಸಭೆ ಚುನಾವಣೆಯಲ್ಲಿ ಸೋಲಿನ ಬಳಿಕ ಇದೀಗ ಮಂಡ್ಯದಲ್ಲಿ ನಮಗೆ ನೆಲೆ ಇಲ್ಲ ಎನ್ನುವುದನ್ನ ದೇವೇಗೌಡರಿಗೆ ಸಿಕ್ಸ್ ಸೆನ್ಸ್ ಹೇಳಿದಂತಿದೆ. ಈ ಹಿನ್ನೆಲೆಯಲ್ಲಿ ಮೊಮ್ಮಗ ನಿಖಿಲ್ ಕುಮಾರಸ್ವಾಮಿಯನ್ನ ರಾಮನಗರಕ್ಕೆ ಶಿಫ್ಟ್  ಮಾಡುತ್ತಿದ್ದಾರೆ.

ಇದೀಗ ರಾಮನಗರದಲ್ಲಿ ಮದುವೆ ಮಾಡುವ ಮೂಲಕ ಮಗನ ರಾಜಕೀಯ ಭವಿಷ್ಯಕ್ಕೆ ಕುಮಾರಸ್ವಾಮಿ ಮತ್ತು ದೇವೇಗೌಡ್ರು ಭದ್ರ ಬುನಾದಿ ಹಾಕುತ್ತಿದ್ದಾರೆ ಎನ್ನುವುದು ಈಗ ಖಾತರಿ ಆದಂತಾಯ್ತು.

click me!