ರಾಜ್ಯಾಧ್ಯಕ್ಷನಾಗಲು ಆತುರ ಇಲ್ಲ: ನಾನು ಏನು ಅಂತ ತೋರಿಸುವ ಛಲ ಇದೆ, ನಿಖಿಲ್ ಕುಮಾರಸ್ವಾಮಿ

Published : Jul 11, 2024, 09:12 AM ISTUpdated : Jul 11, 2024, 11:59 AM IST
ರಾಜ್ಯಾಧ್ಯಕ್ಷನಾಗಲು ಆತುರ ಇಲ್ಲ: ನಾನು ಏನು ಅಂತ ತೋರಿಸುವ ಛಲ ಇದೆ, ನಿಖಿಲ್ ಕುಮಾರಸ್ವಾಮಿ

ಸಾರಾಂಶ

ದೇವೇಗೌಡರ ಮೊಮ್ಮಗ, ಕುಮಾರಸ್ವಾಮಿ ಮಗ ಎಂಬುದರ ಹೊರತಾಗಿ ಪಕ್ಷ ಸಂಘಟಿಸುವ ಮುಖಾಂತರ ಈ ನಿಖಿಲ್‌ ಏನು, ಆತನ ವಿಷನ್‌ ಏನು ಎಂದು ತೋರಿಸುವ ಛಲವಿದೆ. ಕೇಡರ್‌ ಬೇಸ್‌ನಲ್ಲಿ ಪಕ್ಷದ ಸಂಘಟನೆ ಮಾಡಿ ಚುನಾವಣೆ ಮುಖಾಂತರ ಪಕ್ಷದ ರಾಜ್ಯಾಧ್ಯಕ್ಷ ಆಯ್ಕೆ ಆಗೇಬೇಕು ಎಂಬುದು ನನ್ನ ಭಾವನೆ: ಜೆಡಿಎಸ್‌  ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ 

ವಿಜಯ್‌ ಮಲಗಿಹಾಳ

ಬೆಂಗಳೂರು(ಜು.11):  ಜೆಡಿಎಸ್‌ನ ಹಾಲಿ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಲೋಕಸಭಾ ಚುನಾವಣೆ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಪ್ರವೇಶಿಸಲಿದ್ದಾರೆ ಎಂಬ ಸುದ್ದಿ ಹಬ್ಬುವ ಕೆಲವು ತಿಂಗಳುಗಳ ಮೊದಲೇ ಅವರ ಪುತ್ರ ಹಾಗೂ ಪಕ್ಷದ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರಮುಖ ಸಭೆ- ಸಮಾರಂಭಗಳಲ್ಲಿ ಸಕ್ರಿಯವಾಗಿ ಕಾಣತೊಡಗಿದ್ದರು. 

ಪರೋಕ್ಷವಾಗಿ ಮುಂದಿನ ನಾಯಕತ್ವ ಪಟ್ಟಕ್ಕೆ ಬೇಕಾದ ಗುಣಗಳನ್ನು ಮೈಗೂಡಿಸಿಕೊಂಡು ತಯಾರಿ ನಡೆಸಿದ್ದರು. ಇದೀಗ ಲೋಕಸಭಾ ಚುನಾವಣೆ ಮುಗಿದು, ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾದ ಬಳಿಕ ನಿಖಿಲ್‌ ಮುಂದಿನ ರಾಜ್ಯಾಧ್ಯಕ್ಷರಾಗುವ ಹೊಸ್ತಿಲಲ್ಲಿ ಬಂದು ನಿಂತಿದ್ದಾರೆ. ಈ ಹಿನ್ನೆಲೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ‘ಕನ್ನಡಪ್ರಭ’ಕ್ಕೆ ‘ಮುಖಾಮುಖಿ’ಯಾದಾಗ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದು ಹೀಗೆ..

ರಾಮನಗರ ಜಿಲ್ಲೆ ಬದಲಾವಣೆ ಹಿಂದೆ ತಷ್ಟೀಕರಣ ಅಜೆಂಡಾ: ನಿಖಿಲ್ ಕುಮಾರಸ್ವಾಮಿ.

*ತಾವು ಶೀಘ್ರ ಜೆಡಿಎಸ್‌ನಲ್ಲಿ ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿಕೊಳ್ಳುತ್ತೀರಂತೆ?

-ಎಚ್‌.ಡಿ.ಕುಮಾರಸ್ವಾಮಿ ಅವರು ಸಚಿವರಾಗಿ ಕೇಂದ್ರಕ್ಕೆ ಹೋದ ಬಳಿಕ ರಾಜ್ಯದಲ್ಲಿ ಪಕ್ಷ ರಾಜ್ಯಾಧ್ಯಕ್ಷರು ಯಾರು ಎಂಬ ಚರ್ಚೆ ಪ್ರಾರಂಭವಾಗಿದೆ. ನಾನು ಕಳೆದ ಒಂದೂವರೆ ವರ್ಷದಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಪಕ್ಷದಲ್ಲಿ ನಮ್ಮ ಕುಟುಂಬದಿಂದ ದೊಡ್ಡ ಬದಲಾವಣೆ ಪರ್ವ ಶುರುವಾಗಿರುವ ಬಗ್ಗೆ ಕಾರ್ಯಕರ್ತರಿಗೆ ಸಂದೇಶ ನೀಡಬೇಕು. ಪಕ್ಷದಲ್ಲಿ ಸಾಕಷ್ಟು ಹಿರಿಯ ನಾಯಕರು, ಮುಖಂಡರು ಇದ್ದಾರೆ. ಯಾವುದೇ ಹುದ್ದೆಯನ್ನು ಕಾರ್ಯಕರ್ತರ ಪ್ರೀತಿ-ವಿಶ್ವಾಸದಿಂದ ಗಳಿಸಬೇಕು.

*ಅಂದರೆ, ನಿಮಗೆ ಪಕ್ಷದ ರಾಜ್ಯಾಧ್ಯಕ್ಷರಾಗುವ ಆಸೆ ಇಲ್ಲವೇ ಅಥವಾ ಹಿಂಜರಿಕೆ ಇದೆಯೇ?

-ಆಸೆ ಅಥವಾ ಹಿಂಜರಿಕೆ ಅಂತ ಅಲ್ಲ. ನನಗೆ ರಾಜ್ಯಾಧ್ಯಕ್ಷನಾಗುವ ಆತುರ ಇಲ್ಲ. ಪಕ್ಷದಲ್ಲಿ ಸಾಕಷ್ಟು ಮಂದಿ ಅರ್ಹರು ಇದ್ದಾರೆ. ಎಚ್‌.ಡಿ.ದೇವೇಗೌಡರು ಹೇಳುವಂತೆ ರಾಜ್ಯಾದ್ಯಂತ ಸದಸ್ಯತ್ವ ನೋಂದಣಿ ಅಭಿಯಾನ ಮಾಡಬೇಕು. ಪಕ್ಷಕ್ಕೆ ರಾಜ್ಯದ ಎಲ್ಲಾ ಜಿಲ್ಲೆಗಳು, ತಾಲೂಕು, ಹೋಬಳಿ, ಪಂಚಾಯಿತಿ, ಹಳ್ಳಿಗಳ ಮಟ್ಟದಲ್ಲಿ ಕಾರ್ಯಕರ್ತರು ಇದ್ದಾರೆ. ಇಷ್ಟು ದಿನ ಪಕ್ಷವನ್ನು ಕೇಡರ್‌ ಬೇಸ್‌ ಸಂಘಟನೆ ಮಾಡುವಲ್ಲಿ ವಿಫಲರಾಗಿದ್ದೆವು. ಇನ್ನು ಮುಂದೆ ಕೇಡರ್‌ ಬೇಸ್‌ನಲ್ಲಿ ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸಲು ನಿರ್ಧರಿಸಿದ್ದೇವೆ. ಪ್ರತಿ ಬೂತ್‌ ಮಟ್ಟದಲ್ಲಿ ಸದಸ್ಯತ್ವ ನೋಂದಣಿ ಅಭಿಯಾನ ಮಾಡುತ್ತೇವೆ.

ಗೌಡರ ಮೊಮ್ಮಗನಿಗೆ ಪಟ್ಟ ಕಟ್ಟಲು ಪಕ್ಷದಿಂದ ಗ್ರೀನ್ ಸಿಗ್ನಲ್..? ರಾಷ್ಟ್ರ ರಾಜಕಾರಣಕ್ಕೆ ಅಪ್ಪ..ರಾಜ್ಯ ರಾಜಕಾರಣಕ್ಕೆ ಮಗ..!

*ತಾತ ದೇವೇಗೌಡ ಮತ್ತು ತಂದೆ ಕುಮಾರಸ್ವಾಮಿ ಅವರ ಪ್ರಭಾವಳಿಯಿಂದ ಹೊರಬಂದು ನಿಮ್ಮದೇ ಆದ ನಾಯಕತ್ವ ಪ್ರದರ್ಶಿಸುವುದು ತುಸು ಕಷ್ಟ ಎನಿಸುತ್ತಿದೆಯೇ?

-ದೇವೇಗೌಡರ ಮೊಮ್ಮಗ, ಕುಮಾರಸ್ವಾಮಿ ಮಗ ಎಂಬುದರ ಹೊರತಾಗಿ ಪಕ್ಷ ಸಂಘಟಿಸುವ ಮುಖಾಂತರ ಈ ನಿಖಿಲ್‌ ಏನು, ಆತನ ವಿಷನ್‌ ಏನು ಎಂದು ತೋರಿಸುವ ಛಲವಿದೆ. ಕೇಡರ್‌ ಬೇಸ್‌ನಲ್ಲಿ ಪಕ್ಷದ ಸಂಘಟನೆ ಮಾಡಿ ಚುನಾವಣೆ ಮುಖಾಂತರ ಪಕ್ಷದ ರಾಜ್ಯಾಧ್ಯಕ್ಷ ಆಯ್ಕೆ ಆಗೇಬೇಕು ಎಂಬುದು ನನ್ನ ಭಾವನೆ. ಮುಂಬರುವ ಚುನಾವಣೆಗಳಲ್ಲಿ ಹೆಚ್ಚು ಸ್ಥಾನ ಗಳಿಸುವ ನಿಟ್ಟಿನಲ್ಲಿ ಪಕ್ಷವನ್ನು ಸಂಘಟಿಸಬೇಕು. ಮುಂದಿನ ನಾಲ್ಕು ವರ್ಷ ಪಕ್ಷ ಸಂಘಟನೆಗೆ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತೇನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ಗೊಂದಲಕ್ಕೆ ಮತ್ತೆ ಬೆಂಕಿ: ಸಿದ್ದರಾಮಯ್ಯ 5 ವರ್ಷ ಸಿಎಂ, ಬದಲಾದರೆ ಡಿಕೆಶಿ ಒಬ್ರೇ ರೇಸ್‌ನಲ್ಲಿಲ್ಲ..; - ಕೆಎನ್ ರಾಜಣ್ಣ
CM-DCM ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ಸಿದ್ದರಾಮಯ್ಯ ಪುತ್ರ ಶಾಕಿಂಗ್ ಹೇಳಿಕೆ