Mekedatu Politics: ಪಾದಯಾತ್ರೆ ಹಿಂದೆ ಜನರ ಪ್ರಾಣ ಬಲಿ ಪಡೆವ ದುರುದ್ದೇಶ: ಕಟೀಲ್‌

By Kannadaprabha NewsFirst Published Jan 13, 2022, 9:22 AM IST
Highlights

*  ಕಾಂಗ್ರೆಸ್ಸಿಂದ ಕೊರೋನಾ ಅಂಟಿತು ಎಂಬ ಅಪವಾದ ಬೇಡ
*  ತಪ್ಪು ಒಪ್ಪಿಕೊಳ್ಳುತ್ತೇವೆ, ಸರಿ ಮಾಡುತ್ತೇವೆ: ಸಚಿವ ಅಶ್ವತ್ಥ 
*  ದುರ್ಬುದ್ಧಿ ಬಿಡಿ, ಎಚ್ಚೆತ್ತುಕೊಳ್ಳಿ: ಕಾಂಗ್ರೆಸ್‌ಗೆ ಅಶೋಕ್‌ ಆಗ್ರಹ

ಬೆಂಗಳೂರು(ಜ.13):  ಕಾಂಗ್ರೆಸ್‌(Congress) ಪಕ್ಷ ಹಮ್ಮಿಕೊಂಡಿರುವ ಮೇಕೆದಾಟು ಪಾದಯಾತ್ರೆಯು(Mekedatu Padayatra) ಕೋವಿಡ್‌ ಹರಡುವ ಮೂಲಕ ಜನರ ಪ್ರಾಣಬಲಿ ಪಡೆಯುವ ದುರುದ್ದೇಶದಿಂದ ಕೂಡಿದಂತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌(Nalin Kumar Kateel) ಆಪಾದಿಸಿದ್ದಾರೆ.

ಪಾದಯಾತ್ರೆ ಬಗ್ಗೆ ರಾಜ್ಯ ಹೈಕೋರ್ಟ್‌(High Court of Karnataka) ಈಗಾಗಲೇ ತನ್ನ ಅಸಮಾಧಾನ ವ್ಯಕ್ತಪಡಿಸಿದೆ. ಕಾಂಗ್ರೆಸ್‌ ಪಕ್ಷದವರಿಗೆ ನ್ಯಾಯಾಂಗದ ಕುರಿತು ವಿಶ್ವಾಸ ಇದ್ದರೆ ಮತ್ತು ಜನರ ಜೀವದ ಬಗ್ಗೆ ಕಳಕಳಿ ಇದ್ದರೆ ತಕ್ಷಣ ತಮ್ಮ ಪಾದಯಾತ್ರೆಯನ್ನು ರದ್ದುಪಡಿಸಬೇಕು. ಜೊತೆಗೆ ಕೋವಿಡ್‌ ಹೆಚ್ಚಿಸಲು ಕಾರಣವಾಗಿದ್ದಕ್ಕೆ ಜನರ ಕ್ಷಮೆ ಕೇಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

Mekedatu Padayatra: ಪಾದಯಾತ್ರೆ ನಿರ್ಬಂಧಕ್ಕೆ ಸರ್ಕಾರದ ಅಧಿಕೃತ ಆದೇಶ, ರಾಮನಗರದಲ್ಲಿ ಬಂದೋಬಸ್ತ್!

ಈ ಪಾದಯಾತ್ರೆಯು ಡಿ.ಕೆ.ಶಿವಕುಮಾರ್‌(DK Shivakumar) ಅವರ ಪ್ರತಿಷ್ಠೆಯ ಪಾದಯಾತ್ರೆಯಂತಿದೆ. ಮೇಕೆದಾಟು ಯೋಜನೆ(Mekedatu Project) ವಿಚಾರದಲ್ಲಿ ಕಾಂಗ್ರೆಸ್‌ ಸರ್ಕಾರದ ಅನಪೇಕ್ಷಿತ ವಿಳಂಬ ಮತ್ತು ಬಿಜೆಪಿ(BJP) ಸರಕಾರದ ಬದ್ಧತೆಯ ಅರಿವಿದ್ದರೂ ಪಾದಯಾತ್ರೆ ಮುಂದುವರಿಸಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ(Basavaraj Bommai) ಅವರ ನೇತೃತ್ವದ ರಾಜ್ಯ ಸರಕಾರವು ನೆಲ, ಜಲ, ಭಾಷೆಯ ವಿಚಾರದಲ್ಲಿ ಯಾವತ್ತೂ ರಾಜಿ ಮಾಡಿಕೊಳ್ಳುವುದಿಲ್ಲ. ಸದಾ ಜನಪರ ಕಾರ್ಯಗಳನ್ನು ಮುಂದುವರಿಸಲಿದೆ ಎಂದು ತಿಳಿಸಿದ್ದಾರೆ.

ದುರ್ಬುದ್ಧಿ ಬಿಡಿ, ಎಚ್ಚೆತ್ತುಕೊಳ್ಳಿ: ಕಾಂಗ್ರೆಸ್‌ಗೆ ಅಶೋಕ್‌ ಆಗ್ರಹ

‘ಅಂದು ತಬ್ಲೀಘಿಗಳ ಸಭೆಯಿಂದಾಗಿ ಇಡೀ ದೇಶಕ್ಕೆ ಕೊರೋನಾ(Coronavirus) ಅಂಟಿತು ಎನ್ನುವ ಆರೋಪ ಇನ್ನೂ ಹೋಗಿಲ್ಲ. ಈಗ ಕಾಂಗ್ರೆಸ್‌ ರಾಜಕೀಯ ಪಾದಯಾತ್ರೆಯಿಂದ ಇಡೀ ರಾಜ್ಯ ಹಾಗೂ ಬೆಂಗಳೂರು ನಗರಕ್ಕೆ ಕೊರೋನಾ ಸೋಂಕು ಹಬ್ಬಿತು ಎನ್ನುವ ಆರೋಪ ಬರುವ ಮುನ್ನ ಎಚ್ಚೆತ್ತುಕೊಳ್ಳಿ. ಇದು ಕಾಂಗ್ರೆಸ್‌ ನಾಯಕರಿಗೆ ನನ್ನ ಮನವಿಯೂ ಹೌದು. ಆಗ್ರಹವೂ ಹೌದು’ ಎಂದು ಕಂದಾಯ ಸಚಿವ ಆರ್‌.ಅಶೋಕ್‌(R Ashok) ತಿಳಿಸಿದ್ದಾರೆ.

‘ಬೆಂಗಳೂರನ್ನು ‘ಟೇಕನ್‌ ಫಾರ್‌ ಗ್ರಾಂಟೆಡ್‌’ ಎನ್ನುವ ರೀತಿ ತೆಗೆದುಕೊಳ್ಳಬೇಡಿ. ನಗರದಲ್ಲಿ ಬಡವ, ಶ್ರೀಮಂತ, ಮಧ್ಯಮ ವರ್ಗ ಸೇರಿದಂತೆ ವಿದ್ಯಾರ್ಥಿಗಳು, ಹೊರ ರಾಜ್ಯದವರು ನೆಲೆಸಿದ್ದಾರೆ. ಬೆಂಗಳೂರಿಗೆ ಏನಾದರೇನು, ನಾವು ಪಾದಯಾತ್ರೆ ಮಾಡೇ ಮಾಡುತ್ತೇವೆ ಎನ್ನುವ ನಿಮ್ಮ ದುರ್ಬುದ್ಧಿಯನ್ನು ಬಿಡಿ. ಸರ್ಕಾರದ ಆದೇಶ ಪಾಲನೆ ಮಾಡಿ. ಹೈಕೋರ್ಟ್‌ ಅಭಿಪ್ರಾಯವನ್ನು ಗೌರವಿಸಿ’ ಎಂದು ಅವರು ಹೇಳಿದ್ದಾರೆ.

ಕೋವಿಡ್‌ ಮೂರನೇ ಅಲೆ(Covid 3dr Wave) ತೀವ್ರವಾಗಿ ಹಬ್ಬುತ್ತಿದೆ. ಇಂತಹ ಸಮಯದಲ್ಲಿ ನಿಮ್ಮ ಪಾದಯಾತ್ರೆ ರಾಜ್ಯದಲ್ಲಿ(Karnataka) ಮತ್ತು ವಿಶೇಷವಾಗಿ ಬೆಂಗಳೂರಿನ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ. ಬೆಂಗಳೂರಿನ ಜನಸಂಖ್ಯೆಯ ಸರಿ ಸುಮಾರು ಅರ್ಧದಷ್ಟು ಜನ ಶಾಲೆ ಕಾಲೇಜುಗಳಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಇದ್ದಾರೆ. ಅವರ ಪ್ರಾಣದ ಜೊತೆ ಕಾಂಗ್ರೆಸ್‌ ನಾಯಕರು ಚೆಲ್ಲಾಟ ಆಡುತ್ತಿದ್ದಾರೆ. ಬೆಂಗಳೂರು ನಗರಕ್ಕೆ ರಾಜ್ಯದ ಬೇರೆ ಬೇರೆ ನಗರದಿಂದ, ಜಿಲ್ಲೆಗಳಿಂದ ಜನ ಬರುತ್ತಾರೆ. ಇಲ್ಲೇ ಜೀವನ ಕಟ್ಟಿಕೊಂಡಿದ್ದಾರೆ. ಬೇರೆ ಬೇರೆ ಕೆಲಸಕ್ಕೆ ಬಂದವರ ಮಕ್ಕಳು ಇಲ್ಲೇ ಶಾಲೆ-ಕಾಲೇಜು ಓದುತ್ತಿದ್ದಾರೆ. ಅಂತಹ ಸಾಮಾನ್ಯ ಕುಟುಂಬದ ಮಕ್ಕಳಿಗೆ ನಿಮ್ಮ ರಾಜಕೀಯ ಯಾತ್ರೆಯಿಂದ ತೊಂದರೆಯಾದರೆ ಅದರ ಜವಾಬ್ದಾರಿಯನ್ನು ಕಾಂಗ್ರೆಸ್‌ ಹೊರಬೇಕಾಗುತ್ತದೆ ಎಂದು ಪ್ರಕಟಣೆ ಮೂಲಕ ಎಚ್ಚರಿಸಿದ್ದಾರೆ.

ಮೇಕೆದಾಟು ಯೋಜನೆ ಕುಡಿಯುವ ನೀರಿಗಾಗಿ. ಇದರಿಂದ ತಮಿಳುನಾಡಿಗೆ(Tamil Nadu) ಯಾವುದೇ ತೊಂದರೆ ಇಲ್ಲ. ಹೀಗಾಗಿ ಸುಪ್ರೀಕೋರ್ಟ್‌ನಲ್ಲಿ(Supreme Court) ದಾಖಲಿಸಿದ್ದ ದಾವೆ ವಾಪಸ್‌ ಪಡೆಯಿರಿ. ಯೋಜನೆಗೆ ಸಹಕರಿಸಿ ಎಂದು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ ಅವರಿಗೆ ಪತ್ರ ಬರೆದು ಸಂಧಾನದ ಮೂಲಕವೂ ವಿವಾದ ಇತ್ಯರ್ಥದ ದಾರಿ ಹುಡುಕಿದ್ದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು. ಕಾಂಗ್ರೆಸ್‌ ಜೊತೆಗೆ ಡಿಎಂಕೆ ಸರ್ಕಾರ ಇದೆ. ಈಗಲಾದರೂ ಕಾಂಗ್ರೆಸ್‌ ನಾಯಕರು ಸ್ಟಾಲಿನ್‌ ಜೊತೆ ಮಾತುಕತೆ ನಡೆಸಿ ದಾವೆ ವಾಪಸ್‌ ತೆಗೆಸಲಿ ಎಂದು ಅಶೋಕ್‌ ಆಗ್ರಹಿಸಿದ್ದಾರೆ.

Congress Padayatra ಕಾಂಗ್ರೆಸ್ ಪಾದಯಾತ್ರೆಗೆ ಪೊಲೀಸರಿಂದಲೇ ಸಹಕಾರ!

ಕೈ ಪಾದಯಾತ್ರೆ ಬಗ್ಗೆ ಸರ್ಕಾರದ ಮೃದುಧೋರಣೆ: ಅಶ್ವತ್ಥ ಒಪ್ಪಿಗೆ

ಕಾಂಗ್ರೆಸ್‌ನ ಪಾದಯಾತ್ರೆ ವಿಚಾರದಲ್ಲಿ ಸರ್ಕಾರ ಮೃದು ಧೋರಣೆ ತಾಳಿರುವುದನ್ನು ರಾಮನಗರ ಜಿಲ್ಲಾ ಉಸ್ತುವಾರಿಯೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌.ಅಶ್ವತ್ಥ ನಾರಾಯಣ(CN Ashwathnarayan) ಒಪ್ಪಿಕೊಂಡಿದ್ದು, ಈ ಸಂಬಂಧ ತಪ್ಪಾಗಿದೆ. ಇದನ್ನು ನಾವು ಒಪ್ಪಿಕೊಳ್ಳುತ್ತೇವೆ. ತಪ್ಪನ್ನು ಸರಿಪಡಿಸುತ್ತೇವೆ ಎಂದು ಹೇಳಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್‌ ಪಾದಯಾತ್ರೆ ವಿಚಾರವಾಗಿ ನಾವು ಸ್ವಲ್ಪ ಮೃದು ಧೋರಣೆ ತೋರಿದ್ದೇವೆ. ನಮ್ಮಿಂದ ತಪ್ಪಾಗಿದೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಈ ಮೂಲಕ ಆಗಿರುವ ತಪ್ಪನ್ನು ಸರಿಪಡಿಸುತ್ತೇವೆ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
 

click me!