
ಮದ್ದೂರು (ಮಾ.07): ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಯಾರ ಕೊಡುಗೆ ಎನ್ನುವುದು ಜನರಿಗೆ ಗೊತ್ತಿದೆ. ಪ್ರತಾಪ್ ಸಿಂಹ ಮಾಡಿದ ಕೆಲಸದ ಕ್ರೆಡಿಟ್ ಪಡೆಯಲು ಕಾಂಗ್ರೆಸ್ ನಾಟಕವಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಿಜೆಪಿ ನಾಯಕರಿಂದ ಅಭಿನಂದನೆ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಪ್ರತಾಪ್ ಸಿಂಹ ಪ್ರಯತ್ನ ಹಾಗೂ ಮೋದಿ ಅವರ ಕೊಡುಗೆಯಿಂದ ಹೆದ್ದಾರಿ ನಿರ್ಮಾಣವಾಗಿದೆ. 70 ವರ್ಷ ದೇಶವನ್ನಾಳಿದ ಕಾಂಗ್ರೆಸ್ನವರು ಎಷ್ಟುರಾಷ್ಟ್ರೀಯ ಹೆದ್ದಾರಿ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.
ಆಟಲ್ ಬಿಹಾರಿ ವಾಜಪೇಯಿ ಇದ್ದಾಗ ಈ ರಾಷ್ಟ್ರದಲ್ಲಿ ದಿನಕ್ಕೆ 11ಕಿ.ಮೀ.ಕಾಮಗಾರಿ ಆಗಿತ್ತು. ಮನಮೋಹನ್ಸಿಂಗ್ ಅಧಿಕಾರದಲ್ಲಿದ್ದಾಗ ಕೇವಲ 4 ಕಿ.ಮೀ. ರಸ್ತೆ ಕಾಮಗಾರಿ ಆಗಿದೆ. ಇವರ ಕೊಡುಗೆ ಏನೆಂಬುದು ಜನರಿಗೆ ಚೆನ್ನಾಗಿ ಗೊತ್ತಿದೆ ಎಂದ ಅವರು, ರಾಷ್ಟ್ರೀಯ ಹೆದ್ದಾರಿ ಇನ್ನೂ ಪೂರ್ಣಗೊಂಡಿಲ್ಲವೆಂಬ ಪ್ರಶ್ನೆಗೆ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಂಡಿದೆ. ರಾಷ್ಟ್ರೀಯ ಹೆದ್ದಾರಿ ಅಂದಮೇಲೆ ಕೆಲವೊಂದು ಸಮಸ್ಯೆಗಳಿರುತ್ತವೆ. ಅದನ್ನ ಸರ್ಕಾರ ಬಗೆಹರಿಸುತ್ತದೆ ಎಂದು ಜಾರಿಕೆ ಉತ್ತರ ನೀಡಿದರು.
ಬಿಜೆಪಿ ಅಧಿಕಾರಕ್ಕೆ ಕನಕಪುರ ಮತದಾರರು ಮುನ್ನುಡಿ ಬರೆಯಿರಿ: ಸಚಿವ ಅಶೋಕ್
ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಯಾರೇ ತಪ್ಪು ಮಾಡಿದರೂ ಅವರ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಲೋಕಾಯುಕ್ತ ತನಿಖೆ ನಡೆಸುತ್ತಿದೆ. ನಂತರ ಹೈಕಮಾಂಡ್ ಕ್ರಮ ಕೈಗೊಳ್ಳಲಿದೆ. ಭ್ರಷ್ಟಾಚಾರದ ಗಂಗೋತ್ರಿ ಕಾಂಗ್ರೆಸ್. ಅವರ ಕಾಲದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ನಡೆದಿದೆ. ಹಾಗಾಗಿ ಮೊದಲು ಕಾಂಗ್ರೆಸ್ ಕಚೇರಿ ಬಂದ್ ಮಾಡಬೇಕು. ಅವರ ಸೋನಿಯಾ ಮೇಡಂ, ರಾಹುಲ್ ಗಾಂಧಿ, ವಾದ್ರಾ ಏಕೆ ಬೇಲ್ನಲ್ಲಿ ಇದ್ದಾರೆ, ಡಿಕೆಶಿ ಯಾಕೆ ಜೈಲಿಗೆ ಹೋಗಿದ್ದರು. ಇವೆಲ್ಲವನ್ನೂ ಅರಿತು ಮಾತನಾಡಬೇಕು. ಬಂದ್ ಹೆಸರಿನಲ್ಲಿ ಜನರಿಗೆ ತೊಂದರೆ ಕೊಡಬಾರದು ಎಂದರು.
ಕುಕ್ಕರ್ ಬಾಂಬ್ ಸ್ಫೋಟ ಬೆಂಬಲಿಸುವ ಕಾಂಗ್ರೆಸ್ ಉಗ್ರ ಪರವೇ?: ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟದಂತಹ ಉಗ್ರ ಕೃತ್ಯ ನಡೆದಾಗ ಕಾಂಗ್ರೆಸ್ ಅವರ ಪರವಾಗಿ ನಿಲ್ಲುತ್ತದೆ. ಹಾಗಾದರೆ ಕಾಂಗ್ರೆಸ್ ಭಯೋತ್ಪಾದನಾ ಚಟುವಟಿಕೆಗಳಿಗೆ ಬೆಂಬಲ ಕೊಡುವ ಪಾರ್ಟಿಯಾ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ, ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಸಂತ್ರಸ್ತ ಆಟೋರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಮನೆಗೆ ತೆರಳಿ ಅವರಿಗೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ವತಿಯಿಂದ ಹೊಸ ಆಟೋರಿಕ್ಷಾ ಹಾಗೂ ಬಿಜೆಪಿ ವತಿಯಿಂದ 5 ಲಕ್ಷ ರು. ಪರಿಹಾರ ಚೆಕ್ ಹಸ್ತಾಂತರಿಸಿದ ಬಳಿಕ ಅವರು ಸುದ್ದಿಗಾರರಲ್ಲಿ ಮಾತನಾಡಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಐಸಿಯೂನಲ್ಲಿದೆ: ಜಗದೀಶ್ ಶೆಟ್ಟರ್ ಲೇವಡಿ
ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಗಾಯಗೊಂಡ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅಮಾಯಕ. ಆದರೆ ಎನ್ಐಎ ಬಂಧಿಸಿದ ಉಗ್ರನನ್ನೇ ಕಾಂಗ್ರೆಸ್ ಅಮಾಯಕ ಎನ್ನುತ್ತಿದೆ. ಇದರಲ್ಲಿ ಉಡುಪಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪುತ್ರನನ್ನೇ ಎನ್ಐಎ ಬಂಧಿಸಿದೆ. ಇವತ್ತಿನವರೆಗೆ ಕಾಂಗ್ರೆಸ್ ಆತನನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದನ್ನು ನೋಡಿದ್ದೀರಾ?, ಆತನನ್ನು ಇನ್ನೂ ಪಕ್ಷದಲ್ಲಿ ಇಟ್ಟುಕೊಂಡಿದೆ ಅಂದರೆ ಭಯೋತ್ಪಾದಕರು ಕಾಂಗ್ರೆಸ್ನಲ್ಲಿ ಇದ್ದಾರೆ ಎನ್ನುವುದು ಸ್ಪಷ್ಟ. ಕಾಂಗ್ರೆಸ್ನ ತುಷ್ಟೀಕರಣದ ನೀತಿಯಿಂದ ಭಯೋತ್ಪಾದನಾ ಚಟುವಟಿಕೆ ಹಳ್ಳಿಗಳಿಗೂ ವ್ಯಾಪಿಸಿದೆ. ಉಗ್ರರನ್ನು ಬಂಧಿಸುವ ಮೂಲಕ ಎನ್ಐಎ ಕಾಂಗ್ರೆಸ್ಗೆ ಉತ್ತರ ನೀಡಿದೆ. ಇದಕ್ಕೆ ಡಿಕೆಶಿ ಮತ್ತು ಸಿದ್ದರಾಮಯ್ಯ ಏನು ಹೇಳುತ್ತಾರೆ ಎಂದು ನಳಿನ್ ಕುಮಾರ್ ಪ್ರಶ್ನಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.