ನನ್ನ ಮೇಲೆ ಸಿಟ್ಟಾಗಲು ಸಿಎಂಗೆ ಹಕ್ಕಿದೆ: ಪ್ರತಾಪ ಸಿಂಹ

By Kannadaprabha NewsFirst Published Jul 22, 2022, 4:00 AM IST
Highlights

ಬೊಮ್ಮಾಯಿ ಅವರು ವೈಯಕ್ತಿಕವಾಗಿ ನನಗೆ ಅಣ್ಣನ ಸಮಾನ. ಸೋಮಣ್ಣ ಅವರ ಹುಟ್ಟುಹಬ್ಬ ಇದ್ದ ಕಾರಣ, ಅವರಿಗೆ ಶುಭಕೋರಲು ಹೋಗಿದ್ದೆ. ಹೀಗಾಗಿ ಮೈಸೂರಿಗೆ ಸಿಎಂ ಬಂದಾಗ ಬರಲು ಆಗಲಿಲ್ಲ ಎಂದ ಪ್ರತಾಪ ಸಿಂಹ

ಮೈಸೂರು(ಜು.22): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನನ್ನ ಮೇಲೆ ಸಿಡುಕುವುದಕ್ಕೆ, ಕೋಪಿಸಿಕೊಳ್ಳುವುದಕ್ಕೆ ಹಕ್ಕಿದೆ ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದರು. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಅವರು ಅತೀ ಬುದ್ಧಿವಂತ ನೀನು ಹೋಗು ಎಂದು ಬೈಯ್ದ ವಿಷಯಕ್ಕೆ ಸ್ಪಷ್ಟನೆ ನೀಡಿದ ಅವರು, ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಸಿಎಂ ಬಳಿ ಪತ್ರ ಕೊಟ್ಟೆ. ಸಿಎಂ ಸಂಪುಟದ ಮುಂದೆ ಇಡಲು ಪತ್ರದ ಮೇಲೆ ನೋಟ್‌ ಬರೆದರು. ಆ ಫೈಲ್‌ ಫಾಲೋ ಆಫ್‌ ಮಾಡಲು ಆ ಪತ್ರದ ಫೋಟೋ ತೆಗೆದುಕೊಳ್ಳಲು ಕೇಳಿದೆ. ಆಗ ಮುಖ್ಯಮಂತ್ರಿಗಳು ಕಾರ್ಯದ ಒತ್ತಡದಲ್ಲಿ ಸಣ್ಣದಾಗಿ ಸಿಡುಕಿದ್ದಾಗಿ ಹೇಳಿದರು.

ಸಿಎಂಗೆ ನನ್ನ ಮೇಲೆ ಸಿಡುಕುವುದಕ್ಕೆ, ಕೋಪಿಸಿಕೊಳ್ಳುವುದುಕ್ಕೆ ಹಕ್ಕಿದೆ. ಪೆಟ್ಟು ಕೊಟ್ಟರು ನನಗೆ ಬೇಸರವಿಲ್ಲ. ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಸಿಎಂ ನಾನು ಕೇಳಿದ್ದಕ್ಕೆಲ್ಲಾ ಹಣ ಕೊಟ್ಟಿದ್ದಾರೆ. ನಾನು ಕೇಳಿದ್ದಕ್ಕೆಲ್ಲಾ ಹಣ ಕೊಟ್ಟ ಏಕೈಕ ಮುಖ್ಯಮಂತ್ರಿ ಬೊಮ್ಮಾಯಿ ಅವರು. ಜನರ ಸೇವಕ ನಾನು. ಕಾಲಿಗೆ ಬಿದ್ದು, ಕೈ ಮುಗಿದು ಜನರ ಕೆಲಸ ಮಾಡಿ ಕೊಡುತ್ತೇನೆ. ನಾನು ಯಾವುದೋ ವರ್ಗಾವಣೆ, ಕಂಟ್ರಾಕ್ಟರ್‌ ಫೈಲ್‌ ತೆಗೆದುಕೊಂಡು ಹೋಗಿದ್ದಾಗ ಹೀಗೆ ಆಗಿದ್ದರೆ ಅದು ಅವಮಾನ ಆಗುತ್ತಿತ್ತು ಎಂದರು.

ಕಾಂಗ್ರೆಸ್‌ ಆಳಾಗಿ ಕೃತಿ ರಚಿಸಿದ ದೇವನೂರು ಮಹದೇವ: ಪ್ರತಾಪ್ ಸಿಂಹ

ಬೊಮ್ಮಾಯಿ ಅವರು ವೈಯಕ್ತಿಕವಾಗಿ ನನಗೆ ಅಣ್ಣನ ಸಮಾನ. ಸೋಮಣ್ಣ ಅವರ ಹುಟ್ಟುಹಬ್ಬ ಇದ್ದ ಕಾರಣ, ಅವರಿಗೆ ಶುಭಕೋರಲು ಹೋಗಿದ್ದೆ. ಹೀಗಾಗಿ ಮೈಸೂರಿಗೆ ಸಿಎಂ ಬಂದಾಗ ಬರಲು ಆಗಲಿಲ್ಲ ಎಂದು ತಿಳಿಸಿದರು.

ಕಾಂಗ್ರೆಸ್‌ ನಿಜ ಬಣ್ಣ ಬಯಲು:

ಕಾಂಗ್ರೆಸ್‌ನ ನಿಜ ಬಣ್ಣ ಬೀದಿಗೆ ಬಂದಿದೆ. ಕೋರ್ಚ್‌ ತೀರ್ಪು ಬಂದ ಕೂಡಲೇ ಅವರ ಬಣ್ಣ ಇನ್ನೂ ಬಟಾ ಬಯಲಾಗುತ್ತದೆ. ಸೋನಿಯಾ ಗಾಂಧಿ ಬಹಳ ಘನ ಕಾರ್ಯಕ್ಕೆ ವಿಚಾರಣೆ ಎದುರಿಸುತ್ತಿದ್ದರೆ ಜನರ ಸಿಂಪತಿ ಸಿಗುತ್ತಿತ್ತು. ಅವ್ಯವಹಾರದ ಆರೋಪದಲ್ಲಿ ಸಿಲುಕಿದವರಿಗೆ ಜನರ ಸಿಂಪತಿ ಸಿಗುವುದಿಲ್ಲ ಎಂದು ಟೀಕಿಸಿದರು.
 

click me!