ನಗರಸಭೆಯ ಭ್ರಷ್ಟಾಚಾರ ಕ್ಲೀನ್‌ ಮಾಡುವೆ: ಶಾಸಕ ಪ್ರದೀಪ್‌ ಈಶ್ವರ್‌

By Kannadaprabha NewsFirst Published Jul 31, 2023, 9:43 PM IST
Highlights

ಶಾಸಕರಾಗಿ ರಾಜಕೀಯಕ್ಕೆ ಬರುವವರು ನೋಂದಾಯಿತ ಪಕ್ಷದಲ್ಲಿ ನಿಂತು ಚುನಾವಣೆ ಎದುರಿಸುವುದು ಅನಿವಾರ್ಯ. ಗೆದ್ದ ಮೇಲೆ ತಾರತಮ್ಯ ಮಾಡದೆ ಕ್ಷೇತ್ರದ ಎಲ್ಲಾ ಜನರ ಸೇವೆ ಮಾಡಬೇಕು. ಈ ಅರ್ಥದಲ್ಲಿ ನಾನು 2 ಲಕ್ಷ ಮತದಾರರ ಸೇವಕ, ಶಾಸಕ. 

ಚಿಕ್ಕಬಳ್ಳಾಪುರ (ಜು.31): ಶಾಸಕರಾಗಿ ರಾಜಕೀಯಕ್ಕೆ ಬರುವವರು ನೋಂದಾಯಿತ ಪಕ್ಷದಲ್ಲಿ ನಿಂತು ಚುನಾವಣೆ ಎದುರಿಸುವುದು ಅನಿವಾರ್ಯ. ಗೆದ್ದ ಮೇಲೆ ತಾರತಮ್ಯ ಮಾಡದೆ ಕ್ಷೇತ್ರದ ಎಲ್ಲಾ ಜನರ ಸೇವೆ ಮಾಡಬೇಕು. ಈ ಅರ್ಥದಲ್ಲಿ ನಾನು 2 ಲಕ್ಷ ಮತದಾರರ ಸೇವಕ, ಶಾಸಕ. ಜೀವನ ಪರ್ಯಂತ ನಾನೇ ಶಾಸಕ ಆಗಬೇಕು ಎನ್ನುವ ಆಸೆಯಿಲ್ಲ. ಅನಿರೀಕ್ಷಿತವಾಗಿ ಈ ಅವಕಾಶ ಸಿಕ್ಕಿದೆ, ಪಾರದರ್ಶಕ ಸಮಾಜ ಕಟ್ಟುವ ಕನಸಿನೊಂದಿಗೆ ಬಂದಿದ್ದೇನೆ ಮಾಡುತ್ತೇನೆ. ಟೀಕೆಗೆ ಅಂಜಲ್ಲ ಎಂದು ಶಾಸಕ ಪ್ರದೀಪ್‌ ಈಶ್ವರ್‌ ಹೇಳಿದರು. ನಗರದ ಸರ್‌ಎಂವಿ ಜಿಲ್ಲಾ ಕ್ರೀಡಾಂಗಣದಲ್ಲಿ ಶಾಸಕರ ಮಾಲೀಕತ್ವದ ಪರಿಶ್ರಮ ನೀಟ್‌ ಅಕಾಡೆಮಿ ವತಿಯಿಂದ ಏರ್ಪಡಿಸಿದ್ದ ಆಟೋ ಚಾಲಕರಿಗೆ 5 ಸಾವಿರ ನಗದು ಪ್ರೋತ್ಸಾಹಧನ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನಾನು ಪೆರೇಸಂದ್ರದಲ್ಲಿದ್ದಾಗ ಆಟೋ ಓಡಿಸಿದ್ದೇನೆ. ಅವರ ಕಷ್ಟನನಗೆ ಗೊತ್ತಿದೆ. ಇದನ್ನು ಮನಗಂಡೇ ಅವರ ಕುಟುಂಬಗಳಿಗೆ ನೆರವಾಗಲು 5 ಸಾವಿರ ರು.ಗಳ ನೆರವು ನೀಡುತ್ತಿದ್ದೇನೆ. ಈ ಹಣದಿಂದ ಅವರು ಒಳ್ಳೆಯ ಬಟ್ಟೆ, ಇಲ್ಲವೇ ಒಂದು ಊಟ, ಬದಲಿಗೆ ಮಕ್ಕಳಿಗೆ ಫೀಸು, ಇಲ್ಲವೇ ಹಬ್ಬ ಆಚರಿಸಿಕೊಳ್ಳಲಿ. ಏನೇ ಮಾಡಿದರೂ ಸತ್ಕಾರ್ಯಗಳಿಗೆ ಮಾತ್ರ ಈ ಹಣ ವಿನಿಯೋಗ ಆಗಲಿ ಎನ್ನುವುದಷ್ಟೇ ನನ್ನ ಮನವಿ ಎಂದರು. ಕಾರ್ಯಕ್ರಮದಲ್ಲಿ 300 ಮಂದಿ ಆಟೋ ಚಾಲಕರಿಗೆ ತಲಾ 5 ಸಾವಿರ ರು.ಗಳನ್ನು ನೀಡಲಾಯಿತು.

ಕಾಂಗ್ರೆಸ್ಸಿಂದ ಲೋಕಸಭೆ ಸ್ಪರ್ಧೆಗೆ ಸುಧಾಕರ್‌ ಯತ್ನ: ಶಾಸಕ ಪ್ರದೀಪ್‌ ಈಶ್ವರ್‌

ನಗರಸಭೆ ಕ್ಲೀನ್‌ ಮಾಡುವೆ: ನಗರ ಸಭೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಕ್ಲೀನ್‌ ಮಾಡಿಯೇ ಮಾಡುತ್ತೇನೆ. ಆಟೋ ಚಾಲಕರು ಮೊದಲಾಗಿ ನಗರದ ಯಾವುದೇ ಪ್ರಜೆ ನಿಮಗೆ ಖಾತೆ ವಿಚಾರದಲ್ಲಿ ತೊಂದರೆ ಇದ್ದರೆ ನನ್ನ ಗಮನಕ್ಕೆ ತನ್ನಿ, ನಿಮ್ಮಲ್ಲಿರುವ ದಾಖಲೆ ನನಗೆ ಕೊಡಿ, ಉಚಿತವಾಗಿ ನಿಮ್ಮ ಮನೆಬಾಗಿಲಿಗೆ ಖಾತೆ ತಂದೊಪ್ಪಿಸುತ್ತೇನೆ. ಕ್ಷೇತ್ರದಲ್ಲಿ ಯಾವ ಇಲಾಖೆಯಲ್ಲಿಯೇ ಆಗಲಿ ಲಂಚ ನೀಡಬೇಡಿ, ಕೆಲವರು ಹೇಳುತ್ತಾರೆ ಇಷ್ಟುಸ್ಪೀಡ್‌ ಒಳ್ಳೆಯದಲ್ಲ ಎನ್ನುತ್ತಾರೆ, ಅವರಿಗೆ ಗೊತ್ತಿಲ್ಲ ಈ ಸ್ಪೀಡೇ ನನ್ನನ್ನು ಶಾಸಕನಾಗಿ ಮಾಡಿದ್ದು. ನನ್ನ ಮೇಲೆ ಕಲ್ಲೆಸೆದರೆ ನಾನು ಹೂ ಎಸೆಯುತ್ತೇನೆ. ಆದರೆ ಅದರೊಟ್ಟಿಗೆ ಕುಂಡವೂ ಇರುತ್ತೇ ನೆನಪಿರಲಿ ಎಂದರು.

ಧೈರ್ಯವಿದ್ರೆ ಪ್ರದೀಪ್‌ ರಾಜೀನಾಮೆ ಕೊಟ್ಟು ಸ್ಪರ್ಧಿಸಲಿ: ಮಾಜಿ ಸಚಿವ ಸುಧಾಕರ್‌

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸ್ಟೇಡಿಯಂ ಬಳಿ ಇರುವ ಸುಬ್ರಹ್ಮಣ್ಯಸ್ವಾಮಿ,ಸಾಯಿ ಬಾಬಾ,ಶನಿ ಮಹಾತ್ಮ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರು. ವೇದಿಕೆಯಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜಯರಾಂ, ಡ್ಯಾನ್ಸ್‌ ಶ್ರೀನಿವಾಸ್‌, ಮೊಬೈಲ್‌ ಬಾಬು, ಡಾಂಬು ಶ್ರೀನಿವಾಸ್‌, ಕುಬೇರ ಅಚ್ಚು, ಸುಧಾ ವೆಂಕಟೇಶ್‌, ಪೆದ್ದಣ್ಣ, ಜನಾರ್ದನ್‌, ಡೇರಿ ಗೋಪಿ, ಆಟೋ ಯುನಿಯನ್‌ ಮುಖಂಡರಾದ ಖಲೀಲ್‌, ಮುನಿರಾಜು, ಮುನಿಕೃಷ್ಣಪ್ಪ, ಸೇರಿದಂತೆ ನೂರಾರು ಮಂದಿ ಆಟೋ ಕುಟುಂಬದವರು ಇದ್ದರು.

click me!