Karnataka assembly election: ಎಂ.ಪಿ.ರೇಣುಕಾಚಾರ್ಯ ಗೆಲುವು ನಿಶ್ಚಿತ: ಬಿಎಸ್‌ವೈ

By Kannadaprabha NewsFirst Published Mar 18, 2023, 8:35 AM IST
Highlights

 ಮುಂದಿನ ಚುನಾವಣೆಯಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ಕನಿಷ್ಠ 25 ಸಾವಿರ ಮತಗಳ ಅಂತರದಿಂದ ಗೆಲ್ಲುವುದು ಶತಸ್ಸಿದ್ಧ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಹೊನ್ನಾಳಿ (ಮಾ.18) : ಮುಂದಿನ ಚುನಾವಣೆಯಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ಕನಿಷ್ಠ 25 ಸಾವಿರ ಮತಗಳ ಅಂತರದಿಂದ ಗೆಲ್ಲುವುದು ಶತಸ್ಸಿದ್ಧ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ(BS Yadiyurappa) ಹೇಳಿದರು.

ಪಟ್ಟಣದ ಶೆಟ್ಟಿಲೇ ಔಟ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ 1,933 ಕೋಟಿ ರು. ವೆಚ್ಚದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿ ರೇಣುಕಾಚಾರ್ಯ(MP Renukacharya) ಹಗಲು ರಾತ್ರಿ ಎನ್ನದೇ ಜನರ ಕಷ್ಟ, ಸುಖಗಳಿಗೆ ಸ್ಪಂದಿಸುವ ಅಪರೂಪದ ರಾಜಕಾರಣಿ. ಕ್ಷೇತ್ರದಲ್ಲಿ ಈ ಬಾರಿಯೂ ಗೆಲ್ಲುವುದು ಸೂರ್ಯ, ಚಂದ್ರರಷ್ಟೇ ಸತ್ಯ ಎಂದರು.

ದಾವಣಗೆರೆ: ಬಿಜೆಪಿ ಮಹಾಸಂಗಮ ಐತಿಹಾಸಿಕ ಸಮಾವೇಶಕ್ಕೆ ಚಾಲನೆ

ಕಾಂಗ್ರೆಸ್‌ನದ್ದು ಬೋಗಸ್‌ ಕಾರ್ಡ್‌:

ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ನಾಲ್ಕು ಬಾರಿ ಇದೇ ಕೊನೆ ಚುನಾವಣೆ ಎಂದು ಹೇಳುತ್ತಲೇ ಇದ್ದಾರೆ, ತಮ್ಮದು ನಾಟಕ ಕಂಪನಿ ಎಂದು ಅವರೇ ಹೇಳಿಕೊಳ್ಳುತ್ತಿದ್ದಾರೆ ಎಂದು ಮಾಜಿ ಶಾಸಕರ ಪರೋಕ್ಷವಾಗಿ ವ್ಯಂಗ್ಯವಾಡಿ ಅವರು ಒಂದು ಹೆಜ್ಜೆ ಮುಂದಿಟ್ಟರೆ ನಾನು ನೂರು ಹೆಜ್ಜೆ ಮುಂದಿಡುತ್ತೇನೆ ಎಂದು ವಿಪಕ್ಷದವರಿಗೆ ಟಾಂಗ್‌ ನೀಡಿದರು. ಯಡಿಯೂರಪ್ಪ ಅವರು ನನಗೆ ತಂದೆ ಇದ್ದ ಹಾಗೇ ಸಿಎಂ ಬೊಮ್ಮಾಯಿ ಸಹೋದರಿದ್ದಂತೆ, ಪಕ್ಷ ತನಗೆ ತಾಯಿ ಇದ್ದಂತೆ. ಯಡಿಯೂರಪ್ಪ ಹಾಗೂ ಬಸವರಾಜ್‌ ಬೊಮ್ಮಾಯಿ ಅವರು ಕ್ಷೇತ್ರಕ್ಕೆ 4.5 ಸಾವಿರ ಕೋಟಿಗೂ ಅಧಿಕ ಅನುದಾನ ನೀಡಿ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್‌ನವರು ತಮ್ಮ ಬಗ್ಗೆಯೇ ಗ್ಯಾರಂಟಿ ಇಲ್ಲದೇ ಚುನಾವಣೆ ಸಮೀಪಿಸುತ್ತಿದ್ದಂತೆ ಇದೀಗ ಜನತಗೆ ಗ್ಯಾರಂಟಿ ಕಾರ್ಡ್‌ ನೀಡಿ ಜನರಿಗೆ ಆಮಿಷ ಒಡ್ಡುತ್ತಿದ್ದಾರೆ. ಇವರು ಸರ್ಕಾರದ ಲಾಂಛನ, ಸರ್ಕಾರದ ಪ್ರತಿನಿಧಿಯವರ ಸಹಿ ಇರುವ ಕಾರ್ಡ್‌ ನೀಡಲಿ ನೊಡೋಣ ಎಂದು ಸವಾಲು ಹಾಕಿದರು.

ಅವಳಿ ತಾಲೂಕುಗಳಿಗೆ ಸಾವಿರಾರು ಕೋಟಿ ರುಪಾಯಿ ಅನುದಾನ ತಂದು ಕುಡಿಯುವ ನೀರು, ಧೂಳು ಮುಕ್ತ ರಸ್ತೆ, ಶಾಲಾ ಕಾಲೇಜುಗಳ ಕಟ್ಟಡ, ಆಸ್ಪತ್ರೆಗಳು, ನೀರಾವರಿ ಸೌಲಭ್ಯ, ಬೀದಿ ದೀಪಗಳು ಹೀಗೆ ಸರ್ವಾಂಗೀಣ ಅಭಿವೃದ್ಧಿ ಕಾರ್ಯಗಳ ಮಾಡಿದ್ದೇನೆ. ಇವುಗಳು ಸುಳ್ಳು ಎಂದಾದರೆ ತಾನು ರಾಜಕೀಯ ನಿವೃತ್ತಿ ಹೊಂದಲು ಸಿದ್ಧ.

ಎಂ.ಪಿ.ರೇಣುಕಾಚಾರ್ಯ, ಶಾಸಕ

 

ಹೊನ್ನಾಳಿ-ನ್ಯಾಮತಿ ತಾಲೂಕಿನ 1933 ಕೋಟಿ ರು.ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಸಿಎಂ ಬೊಮ್ಮಾಯಿ ಉದ್ಘಾಟನೆ, ಶಂಕು

ಹೊನ್ನಾಳಿ ಕ್ಷೇತ್ರ ಹಾಗೂ ಅವಳಿ ತಾಲೂಕಿನ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನವಿದು. ರೇಣುಕಾಚಾರ್ಯ(MP Renukacharya) ಶ್ರಮ, ಪ್ರಯತ್ನದಿಂದ 1,933 ಕೋಟಿ ರು.ಗೂ ಅಧಿಕ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುತ್ತಿದ್ದು, ಇಂತಹ ದಾಖಲೆ ಮಾಡುವ ತಾಕತ್ತು ಯಾರಿಗಾದರೂ ಇದ್ದರೆ ಹೊನ್ನಾಳಿ ಹುಲಿಗೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai) ಶ್ಲಾಘಿಸಿದರು.

ಹೊನ್ನಾಳಿ ಪಟ್ಟಣದ ಪಟ್ಣಣಶೆಟ್ಟಿಲೇಔಟ್‌ನಲ್ಲಿ ಶುಕ್ರವಾರ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ 1933 ಕೋಟಿ ರು.ಗೂ ಅಧಿಕ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿ, ರೇಣುಕಾಚಾರ್ಯ ಕ್ಷೇತ್ರವನ್ನು ತನ್ನ ಮಕ್ಕಳಂತೆ ಪ್ರೀತಿ ಮಾಡುತ್ತಾರೆ. ನಿಮ್ಮನ್ನು ಮಕ್ಕಳಂತೆ ನೋಡಿಕೊಳ್ಳುತ್ತಿದ್ದಾರೆ ಎಂದರು. ಕೊರೋನಾ ವೇಳೆ ನಿಮ್ಮ ಮಧ್ಯೆ ನಿಂತು, ಆತ್ಮವಿಶ್ವಾಸ ತುಂಬಿ, ಎಲ್ಲಾ ಚಟುವಟಿಕೆ ಮಾಡಿ, ಧೈರ್ಯ ತುಂಬಿದ ನಾಯಕನಿದ್ದರೆ ಅದು ರೇಣುಕಾಚಾರ್ಯ. ರೇಣುಕಾಚಾರ್ಯ ಶಾಸಕರಾಗುವ ಮುಂಚಿನ ಅಭಿವೃದ್ಧಿ ಹಾಗೂ ಈಗಿನ ಅಭಿವೃದ್ಧಿ ಆಧರಿಸಿ, ಬಿಜೆಪಿ ಬೆಂಬಲಿಸಿ, ರೇಣುಕಾಚಾರ್ಯರ ಗೆಲ್ಲಿಸಿ ಎಂದು ಜನತೆಗೆ ಕರೆ ನೀಡಿದರು.

ಹೊನ್ನಾಳಿ-ನ್ಯಾಮತಿ(Honnali nyamati) ಅವಳಿ ತಾಲೂಕಿನ ಚಿತ್ರಣ ಬದಲಾಗುತ್ತಿದೆ. ಹಳ್ಳಿ ಹಳ್ಳಿಗೆ ಸೌಲಭ್ಯ ತಲುಪಿದ ಸಾಧನೆ ಹೊನ್ನಾಳಿ ಹುಲಿ ರೇಣುಕಾಚಾರ್ಯರದ್ದು. ಇದೆಲ್ಲಾ ಯಾಕೆ ಮಾಡಲು ಸಾಧ್ಯವಾಯಿತೆಂದರೆ ಅಲ್ಲಿ ಮೋದಿ, ಇಲ್ಲಿ ನಮ್ಮ ಸರ್ಕಾರ. ಡಬಲ್‌ ಇಂಜಿನ್‌ ಸರ್ಕಾರಗಳು ಇದ್ದಿದ್ದರಿಂದ ಇದೆಲ್ಲವೂ ಸಾಧ್ಯವಾಯಿತು. ಯಡಿಯೂರಪ್ಪ ಸಿಎಂ ಆಗಿದ್ದಾಗ ಅತಿವೃಷ್ಟಿಯಿಂದ ಪೂರ್ಣ ಬಿದ್ದ ಮನೆಗೆ 5 ಲಕ್ಷ ರು., ಅಲ್ಪ ಪ್ರಮಾಣದಲ್ಲಿ ಬಿದ್ದ ಮನೆಗಳಿಗೆ 3 ಲಕ್ಷ ರು. ಪರಿಹಾರ ನೀಡಿದೆವು. ಯಡಿಯೂರಪ್ಪ ಸರ್ಕಾರದಲ್ಲಿ ಮಾತ್ರ ಇದಾಗಿದ್ದು ಬಿಟ್ಟರೆ ಬೇರಾವ ರಾಜ್ಯದಲ್ಲೂ ಇದು ಆಗಿಲ್ಲ ಎಂದು ವಿವರಿಸಿದರು.

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ(Govind karjol), ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್‌, ಸಂಸದ ಜಿ.ಎಂ.ಸಿದ್ದೇಶ್ವರ(MP Dr GM Siddeshwar), ಮಾಜಿ ಶಾಸಕ ಡಾ. ಡಿ.ಬಿ.ಗಂಗಪ್ಪ, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್‌, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಚನ್ನಪ್ಪ, ಪುರಸಭೆ ಅಧ್ಯಕ್ಷೆ ಸುಮಾ ಮಂಜುನಾಥ, ಉಪಾಧ್ಯಕ್ಷೆ ರಂಚಿತಾ ಚನ್ನಪ್ಪ ಹಾಗೂ ಸದಸ್ಯರು, ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ.ಸುರೇಶ್‌ ಎಂ.ಪಿ.ರಮೇಶ್‌, ತಾಂಡ ಅಭಿವೃದ್ಧಿ ನಿಗಮದ ನಿರ್ದೇಶಕ ಮಾರುತಿ ನಾಯ್ಕ, ಕೆಎಸ್‌ಡಿಎಲ್‌ ನಿರ್ದೇಶಕ ಶಿವು ಹುಡೇದ್‌, ಮಹೇಂದ್ರಗೌಡ ಹಾಗೂ ಅನೇಕ ಮುಖಂಡರಿದ್ದರು. ಇದೇ ವೇಳೆ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ, ಹಕ್ಕುಪತ್ರ ವಿತರಿಸಲಾಯಿತು.

ಜೇನುಗೂಡಿಗೆ ಕೈ ಹಾಕಿ ಪರಿಶಿಷ್ಟರಿಗೆ ಮೀಸಲಾತಿಯೆಂಬ ಜೇನು

ಪರಿಶಿಷ್ಟಜಾತಿ-ಪಂಗಡಗಳ ಮೀಸಲಾತಿ ಹೆಚ್ಚಿಸಲು ಮುಂದಾದಾಗ ಜೇನುಗೂಡಿಗೆ ಕೈ ಹಾಕಬೇಡಿ ಎಂದು ಕೆಲವರು ಹೇಳಿದ್ದರು. ನನ್ನ ಕೈಗೆ ಜೇನು ಹುಳಗಳಿಂದ ಕಚ್ಚಿಸಿಕೊಂಡರೂ ಚಿಂತೆ ಇಲ್ಲ, ಪರಿಶಿಷ್ಟರಿಗೆ ಜೇನು ತುಪ್ಪ ತಿನ್ನಿಸುವೆನೆಂದು ಹೇಳಿದ್ದೆ. ಅವಕಾಶ ವಂಚಿತ ಸಮುದಾಯಗಳಿಗೆ ಮೀಸಲಾತಿ ಹೆಚ್ಚಿಸಿ, ಸಾಮಾಜಿಕ ನ್ಯಾಯ ಒದಗಿಸಿದ್ದೇವೆ. ನಾವು ಮಾಡಿದ ಕೆಲಸ ಆಧರಿಸಿ, ನಮಗೆ ಮತ ನೀಡಿ, ಆಶೀರ್ವದಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು. ಹಿಂದೆ ಆಳಿದ ಯಾವೊಂದು ಸರ್ಕಾರವೂ ಪರಿಶಿಷ್ಟರ ಮೀಸಲಾತಿ ಹೆಚ್ಚಿಸುವ ಮೂಲಕ ಸಾಮಾಜಿಕ ನ್ಯಾಯ ಕಲ್ಪಿಸುವ ಸಾಹಸ ಮಾಡಲಿಲ್ಲ. ಆದರೆ, ಮೀಸಲಾತಿ ಹೆಚ್ಚಿಸಿ, ಸಾಮಾಜಿಕ ನ್ಯಾಯ ಒದಗಿಸುವ ಕೆಲಸ ಮಾಡಿದ್ದೇವೆ ಎಂದರು.

ಸಾಮಾಜಿಕ ನ್ಯಾಯವೆಂದರೆ ಬಿಎಸ್‌ವೈ:

ಕಾಗಿನೆಲೆ ಅಭಿವೃದ್ಧಿ, ಮಹರ್ಷಿ ವಾಲ್ಮೀಕಿ ಜಯಂತಿ, ಶ್ರೀ ಸಂತ ಸೇವಾಲಾಲ್‌ರ ಜಯಂತಿ ಘೋಷಿಸಿದ್ದು, ಬಂಜಾರ ಅಭಿವೃದ್ಧಿ ನಿಗಮ, ಭೋವಿ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದು ಯಡಿಯೂರಪ್ಪ. ಕೇವಲ ಕೆಲವರ ಭಾಷಣದಿಂದಷ್ಟೇ ಸಾಮಾಜಿಕ ನ್ಯಾಯ ಸಿಗುವುದಿಲ್ಲ. ಸಾಮಾಜಿಕ ನ್ಯಾಯವೆಂದರೆ ಯಡಿಯೂರಪ್ಪನವರು ನೀಡಿದ್ದು. ಸಾಮಾಜಿಕ ನ್ಯಾಯದ ಭಾಷಣ ಮಾಡಿದವರು ಮುಂದೆ ಹೋದರು, ಸುಮ್ಮನಿದ್ದವರು ಹಿಂದುಳಿದರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೆಸರು ಪ್ರಸ್ತಾಪಿಸದೇ ವಾಗ್ದಾಳಿ ನಡೆಸಿದರು.

ರಾಜ್ಯದ ಇನ್ನೂ 25 ಲಕ್ಷ ಮನೆಗೆ ನೀರು: ಸಿಎಂ

ಮೂರೂ ವರ್ಷದ ಹಿಂದೆ ಪ್ರಧಾನಿ ನರೇಂದ್ರ ಮೋದಿ ದೇಶದ ಪ್ರತಿ ಮನೆಗೂ ನೀರು ಕೊಡುತ್ತೇವೆಂದು ಘೋಷಿಸಿದ್ದರು. ಇಂತಹ ಘೋಷಣೆ ಮಾಡಿದ ಮೋದಿ ಅನುದಾನವನ್ನೂ ನೀಡಿ, ರಾಜ್ಯ ಸರ್ಕಾರಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, 12 ಕೋಟಿ ಮನೆಗಳಿಗೆ ನೀರು ತಲುಪಿಸಿ ಮಾತು ಉಳಿಸಿಕೊಂಡರು. ರಾಜ್ಯದಲ್ಲಿ 72 ವರ್ಷದಲ್ಲಿ ಕೇವಲ 25 ಲಕ್ಷ ಮನೆಗಷ್ಟೇ ನೀರು ಇತ್ತು. ಆದರೆ, ಬಿಜೆಪಿ ಸರ್ಕಾರದಲ್ಲಿ 40 ಲಕ್ಷ ಮನೆಗೆ ನೀರು ಕೊಟ್ಟಿದ್ದೇವೆ. ಈ ವರ್ಷ ಇನ್ನೂ 25 ಲಕ್ಷ ಮನೆಗೆ ನೀರು ಕೊಡುತ್ತೇವೆ. 1.10 ಕೋಟಿ ಮನೆಗಳಿಗೆ ನೀರು ಕೊಡುವ ಗುರಿ ಹೊಂದಿದ್ದೇವೆ. ಇದು ನಮ್ಮ ಬದ್ಧತೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

BJP Vijaysankalpa yatre: ಮೋದಿ ಬಡವರ ಬದುಕಿಗೆ ಭದ್ರತೆ ನೀಡಿದ್ದಾರೆ: ಆರಗ ಜ್ಞಾನೇಂದ್ರ

ನಿಮ್ಮ ಶಾಸಕ ರೇಣುಕಾಚಾರ್ಯ ಪ್ರತಿ ಹಳ್ಳಿಗೆ ಹತ್ತಾರು ಸಲ ತಿರುಗಿರಬೇಕು. ಬೆಂಗಳೂರು, ಹೊನ್ನಾಳಿ ಬಿಟ್ಟರೆ ರೇಣುಕಾಚಾರ್ಯ ಕ್ಷೇತ್ರದ ಹಳ್ಳಿಗಳಲ್ಲೇ ಸಿಗುವುದು. ಅದೇ ಆತನ ಜೀವನ, ಬದುಕು. ಜನಪ್ರಿಯ ಶಾಸಕರು ತುಂಬಾ ಇದ್ದರೆ. ಜನೋಪಯೋಗಿ ಶಾಸಕರು ಕಡಿಮೆ ಅಂತಹವರಲ್ಲಿ ರೇಣುಕಾಚಾರ್ಯ ಒಬ್ಬರು.

ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

click me!