ನಮ್ಮ ಕುಟುಂಬದ ಮೇಲೆ ಆಯನೂರು ಮಂಜುನಾಥ್‌ ಸುಳ್ಳು ಆರೋಪ: ಸಂಸದ ರಾಘವೇಂದ್ರ ಕಿಡಿ

By Kannadaprabha NewsFirst Published Sep 13, 2024, 10:55 PM IST
Highlights

ನಮ್ಮ ಕುಟುಂಬ ಆಸ್ಪತ್ರೆಗೆ ಸೇರಿದ ಜಾಗವನ್ನು ಕೆಐಡಿಬಿಯ ಎಲ್ಲಾ ನಿಯಮವಳಿಗಳ ಪ್ರಕಾರವೇ ಪಡೆದುಕೊಂಡಿದೆ. ಕಾಂಗ್ರೆಸ್‌ ವಕ್ತಾರ ಆಯನೂರು ಮಂಜುನಾಥ್‌ ಅವರು ನಮ್ಮ ಕುಟುಂಬದ ಮೇಲೆ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. 

ಶಿವಮೊಗ್ಗ (ಸೆ.13): ನಮ್ಮ ಕುಟುಂಬ ಆಸ್ಪತ್ರೆಗೆ ಸೇರಿದ ಜಾಗವನ್ನು ಕೆಐಡಿಬಿಯ ಎಲ್ಲಾ ನಿಯಮವಳಿಗಳ ಪ್ರಕಾರವೇ ಪಡೆದುಕೊಂಡಿದೆ. ಕಾಂಗ್ರೆಸ್‌ ವಕ್ತಾರ ಆಯನೂರು ಮಂಜುನಾಥ್‌ ಅವರು ನಮ್ಮ ಕುಟುಂಬದ ಮೇಲೆ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ನಮ್ಮ ಸಂಬಂಧಿಕರು ರೈತರಿಂದ ಆ ಜಾಗವನ್ನು ಖರೀದಿಸಿದ್ದು, ಕೂಡ ನಿಯಮಾವಳಿ ಪ್ರಕಾರವೇ ಆಗಿದೆ. ಆದರೆ, ಆಯನೂರು ಮಂಜುನಾಥ್‌ ಅವರು ಬಿಜೆಪಿಯಲ್ಲಿದ್ದಾಗ ಕಾಂಗ್ರೆಸ್‍ನ ಜಿಲ್ಲಾ ಮಂತ್ರಿ ಮಧು ಬಂಗಾರಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಬಗ್ಗೆ ಮಾಡಿದ ಟೀಕೆಗಳನ್ನು ಜಿಲ್ಲೆಯ ಜನತೆ ನೋಡಿದ್ದಾರೆ. 

ಆಗ ಅವರು ಮಂಜುನಾಥ್‌ ಅವರು ಬಳಸಿದ ಶಬ್ದಗಳು ಕೂಡ ಹೇಳಲು ನಾಚಿಕೆಯಾಗುತ್ತದೆ. ಈಗ ಅದೇ ನಾಯಕರು ನಮ್ಮ ಕುಟುಂಬದ ಬಗ್ಗೆ ಸುಳ್ಳು ಟೀಕೆಗಳನ್ನು ಮಾಡುವುದು ಖಂಡನೀಯ ಎಂದು ಹರಿಹಾಯ್ದರು. ಕಾಂಗ್ರೆಸ್‍ಗೆ 136 ಸ್ಥಾನವನ್ನು ಕೊಟ್ಟು ಜನ ಆರ್ಶೀವದಿಸಿದ್ದಾರೆ. ಈಗ ಅದೇ ಮತದಾರ ಕಾಂಗ್ರೆಸ್‍ನ 14 ತಿಂಗಳ ಆಡಳಿತ ನೋಡಿ ಶಾಪ ಹಾಕುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಮೂಡಾ ಹಗರಣ, ವಾಲ್ಮೀಕಿ ನಿಗಮದ ಹಗರಣ ಹೀಗೆ ಅನೇಕ ಹಗರಣಗಳು ಒಂದರ ಹಿಂದೆ ಒಂದರಂತೆ ಬೆಳಕಿಗೆ ಬರುತ್ತಿವೆ. ಪೊಲೀಸ್ ಇಲಾಖೆಯ ವರ್ಗಾವಣೆ ದಂಧೆಗೆ ಬೇಸತ್ತು ಸಬ್‍ ಇನ್ಸ್ ಫೆಕ್ಟರ್ ಒಬ್ಬರು ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡರು. 

Latest Videos

420 ರಾಜಕಾರಣ ಬಿಟ್ಟು ದೇಶದ್ರೋಹಿಗಳನ್ನು ಮಟ್ಟ ಹಾಕಿ: ಬಿ.ವೈ.ವಿಜಯೇಂದ್ರ

ಇದರ ನಡುವೆ ರಾಜ್ಯ ಕಾಂಗ್ರೆಸ್ ವಕ್ತಾರ, ಮಾಜಿ ಸಂಸದ ಆಯನೂರು ಮಂಜು ನಾಥ್, ನಮ್ಮ ಕುಟುಂಬದ ಬಗ್ಗೆ ಸುಳ್ಳು ಆರೋಪ ಮಾಡುತ್ತ ನೂರು ಸುಳ್ಳು ಹೇಳಿ, ಸುಳ್ಳನ್ನು ಸತ್ಯವನ್ನಾಗಿಸಲು ಹೊರಟಿರು ವುದು ವಿಷಾದನೀಯ ಎಂದರು. ನಾಗಮಂಗಲ ಗಲಭೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ನಾವು ಹಿಂದೂಗಳು ಸ್ವತಂತ್ರ್ಯಾವಾಗಿ ಹಬ್ಬ ಆಚರಿಸಲು ಸರ್ಕಾರ ನೂರಾರು ಷರತ್ತುಗಳನ್ನು ಹಾಕು ತ್ತದೆ. ಒಂದು ವರ್ಗವನ್ನು ಓಲೈಕೆ ಮಾಡುವ ಪ್ರಯತ್ನ ಮಾಡುತ್ತ ಬಂದಿದೆ. ಸಣ್ಣಕಿಡಿ ದೊಡ್ಡದಾಗಿ ಹತ್ತುವ ಮೊದಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿ, ಹಬ್ಬ ಆಚರಣೆಗೆ ಅವಕಾಶ ನೀಡಲಿ ಎಂದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಎಸ್‌.ರುದ್ರೇಗೌಡ ಮಾತನಾಡಿ, ಆಯನೂರು ಮಂಜುನಾಥ್ ಆರೋಪಕ್ಕೆ ಸಂಸದರು ಉತ್ತರ ನೀಡಿದ್ದಾರೆ. 2011ರ ಎಂಪಿ ಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆ ಬಗ್ಗೆ ಯಾವುದೇ ಗೊಂದಲ ಇರಲಿಲ್ಲ. ಹೈಕಮಾಂಡ್ ಆಯ್ಕೆಯನ್ನು ಪಕ್ಷ ಗೌರವಿಸಿ ಕೆಲಸ ಮಾಡಿದೆ ಎಂದರು. ಶಾಸಕ ಚನ್ನಬಸಪ್ಪ ಮಾತನಾಡಿ, ಸರ್ಕಾರ ಹಿಂದೂ ಸಮಾಜದ ಮೇಲೆ ಗದಾಪ್ರಹಾರ ಮಾಡುತ್ತ ಬಂದಿದೆ. ಮಸೀದಿಯಿಂದ ಕಲ್ಲುಗಳು ತೋರಾಡಿದ್ದನ್ನು ಪೊಲೀಸರೇ ನೋಡಿದ್ದಾರೆ. ಕೈಯಲ್ಲಿ ತಲವಾರು ಹಿಡಿದು ಬೆದರಿಸಿದರೆ ಹಿಂದೂ ಸಮಾಜ ಹೆದರಲ್ಲ, 

ನಮ್ಮ ಎಲ್ಲಾ ದೇವತೆಗಳ ಕೈಯಲ್ಲೂ ದುಷ್ಟರ ಸಂಹಾರಕ್ಕಾಗಿ ಆಯುಧಗಳು ಇರುವುದನ್ನು ನಾವೆಲ್ಲ ನೋಡಿದ್ದೇವೆ. ಗೃಹ ಸಚಿವರು, ಈ ಪ್ರಕರಣವನ್ನು ಹಗುರವಾಗಿ ತೆಗೆದುಕೊಳ್ಳದೆ ಸೂಕ್ತ ಕ್ರಮ ಕೈಗೊಳ್ಳಲಿ. ಜಿಲ್ಲೆಯ ಎಲ್ಲಾ ಮೆರವಣಿಗೆಗಳು ಶಾಂತಿಯುತವಾಗಿ ನಡೆಯುತ್ತವೆ ಆತಂಕ ಬೇಡ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿಗಳಾದ ಶಿವರಾಜ್, ಬಿ.ಕೆ.ಶ್ರೀನಾಥ್, ಹರಿಕೃಷ್ಣ ಹಾಗೂ ರಾಜ್ಯ ಮಾಧ್ಯಮ ಸದಸ್ಯರಾದ ವಿಜಯೇಂದ್ರ, ಪ್ರಮುಖರಾದ ಅಣ್ಣಪ್ಪ, ಚಂದ್ರಶೇಖರ್, ಶ್ರೀನಾಗ್, ಮಾಲತೇಶ್, ಬಸವರಾಜ್ ಉಪಸ್ಥಿತರಿದ್ದರು.

ನಾಗಮಂಗಲ ಘಟನೆಯಲ್ಲಿ 10-15 ಜನ ಮೃತಪಡಬೇಕಿತ್ತೇ?: ಸಚಿವ ಪರಮೇಶ್ವರ್‌ಗೆ ಜೋಶಿ ಪ್ರಶ್ನೆ

ಮುಡಾ ಹಗರಣಕ್ಕೂ ನಮ್ಮ ಆಸ್ತಿಗೂ ಹೋಲಿಕೆ ಸಲ್ಲದು: ನಾವು ಸರ್ಕಾರದ ಕಾನೂನುಗಳಿಗೆ ಬದ್ಧವಾಗಿ ವ್ಯವಹಾರವನ್ನು ಮಾಡಿದ್ದೇವೆ. ಮೂಡಾ ಹಗರಣಕ್ಕೂ ನಮ್ಮ ಆಸ್ತಿಗೂ ಹೋಲಿಕೆ ಮಾಡುವುದೇ ತಪ್ಪು. ಕಾಂಗ್ರೆಸ್ ತಟ್ಟೆಯಲ್ಲಿ ಬಿದ್ದಿದ್ದನ್ನು ಗಮನ ಬೇರೆಡೆಗೆ ಸೆಳೆಯಲು ಸುಳ್ಳು ಆರೋಪ ಮಾಡು ವುದನ್ನು ಮೊದಲು ನಿಲ್ಲಿಸಲಿ, ಅವರ ವ್ಯಕ್ತಿತ್ವಕ್ಕೆ ಅದು ಶೋಭೆ ತರುವುದಿಲ್ಲ. ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ಧ ವಾಲ್ಮೀಕಿ ನಿಗಮದ ಹಗರಣದ ಬಗ್ಗೆ ರಾಜ್ಯದ ಜನರ ಗಮನ ಸೆಳೆಯಲು ಬೆಂಗಳೂರಿನಿಂದ ಬಳ್ಳಾರಿಯವರೆಗೆ ಪಕ್ಷದ ವತಿಯಿಂದ ಪಾದಯಾತ್ರೆಯನ್ನು ಕೂಡ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

click me!