ಸಚಿವ ಹಾಲಪ್ಪ ಆಚಾರ್‌ ಸಮ್ಮುಖದಲ್ಲಿ 600ಕ್ಕೂ ಹೆಚ್ಚು ಕಾಂಗ್ರೆಸಿಗರು ಬಿಜೆಪಿಗೆ ಸೇರ್ಪಡೆ

By Kannadaprabha NewsFirst Published Apr 10, 2023, 9:52 AM IST
Highlights

ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಸಚಿವ ಹಾಲಪ್ಪ ಆಚಾರ ಸಮ್ಮುಖದಲ್ಲಿ 600ಕ್ಕೂ ಹೆಚ್ಚು ಕಾಂಗ್ರೆಸ್‌ ಕಾರ್ಯಕರ್ತರು ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರ್ಪಡೆಯಾದರು. 

ಕುಕನೂರು (ಏ.10): ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಸಚಿವ ಹಾಲಪ್ಪ ಆಚಾರ ಸಮ್ಮುಖದಲ್ಲಿ 600ಕ್ಕೂ ಹೆಚ್ಚು ಕಾಂಗ್ರೆಸ್‌ ಕಾರ್ಯಕರ್ತರು ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರ್ಪಡೆಯಾದರು. ಯಲಬುರ್ಗಾ ಬಿಜೆಪಿ ಮಂಡಲ ವತಿಯಿಂದ ಆಯೋಜಿಸಲಾಗಿದ್ದ ಪಕ್ಷ ಸೇರ್ಪಡೆ ಹಾಗೂ ಸಂಘಟನಾತ್ಮಕ ಸಭೆಯಲ್ಲಿ ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ, ಚಿಕ್ಕವಂಕಲಕುಂಟಾ ಭಾಗದ 600ಕ್ಕೂ ಹೆಚ್ಚು ಕಾಂಗ್ರೆಸ್‌ ಕಾರ್ಯಕರ್ತರು ಒಂದೇ ವೇದಿಕೆಯಲ್ಲಿ ಬಿಜೆಪಿಗೆ ಸೇರ್ಪಡೆಯಾದರು. 

ಹಿರೇವಂಕಲಕುಂಟಾ, ಚಿಕ್ಕವಂಕಲಕುಂಟಾ ವ್ಯಾಪ್ತಿಯ ಮುಖಂಡರಾದ ವಕೀಲ ಶಂಕ್ರಪ್ಪ ಸುರಪುರ, ಮರೀಯಪ್ಪ ಹುಗ್ಗಿ, ಅಯ್ಯಪ್ಪ ಯಡ್ಡೋಣಿ, ಗಾಳೆಪ್ಪ, ಫಕೀರಪ್ಪ ತಳವಾರ, ಬಾಳಪ್ಪ ಓಜನಹಳ್ಳಿ ಅವರು ಬಿಜೆಪಿ ಸೇರಿದರು. ಇವರ ಜತೆ ಅವರ ಹಿಂಬಾಲಕರು, ಕಾರ್ಯಕರ್ತರು ಸೇರಿ ಸುಮಾರು 600 ಜನ ಬಿಜೆಪಿಗೆ ಸೇರ್ಪಡೆಯಾದರು.

ರಾಜಕಾರಣ ನಿಂತ ನೀರಲ್ಲ, ನಾನೆಂದೂ ಭ್ರಷ್ಟಾಚಾರ ಮಾಡಿಲ್ಲ: ರಘು ಆಚಾರ್‌

ಈ ವೇಳೆ ಮಾತನಾಡಿದ ವಕೀಲ ಶಂಕ್ರಪ್ಪ ಸುರಪೂರ, ಮುಖಂಡರಾದ ಮರೀಯಪ್ಪ ಹುಗ್ಗಿ, ಅಯ್ಯಪ್ಪ ಯಡ್ಡೋಣಿ, ಗಾಳೆಪ್ಪ, ಫಕೀರಪ್ಪ ತಳವಾರ, ಬಾಳಪ್ಪ ಓಜನಹಳ್ಳಿ, ‘ನಮಗೆ ಪಕ್ಷದಲ್ಲಿ ಯಾವುದೇ ದೊಡ್ಡ ಸ್ಥಾನ ಬೇಕಿರಲಿಲ್ಲ. ನಮ್ಮನ್ನು ಹತ್ತಿರದಿಂದ ಕರೆದು ಪ್ರೀತಿಯಿಂದ ಮಾತನಾಡಿಸುವವರು ಬೇಕಿತ್ತು. ಕಾಂಗ್ರೆಸ್‌ ಪಕ್ಷದಲ್ಲಿ ಆ ಪ್ರೀತಿ, ಮಾನವೀಯತೆ ನಮಗೆ ಕಾಣಲಿಲ್ಲ. 30 ವರ್ಷ ಕಾಂಗ್ರೆಸ್‌ ಪಕ್ಷಕ್ಕೆ ದುಡಿದರೂ ಪಕ್ಷ ನಮ್ಮನ್ನು ಗುರುತಿಸಿ ಬೆನ್ನು ತಟ್ಟಿಪ್ರೋತ್ಸಾಹಿಸುವ ಕಾರ್ಯ ಮಾಡಲಿಲ್ಲ. ಸಚಿವ ಹಾಲಪ್ಪ ಆಚಾರ ಅವರ ಸರಳತೆ ಹಾಗೂ ಅವರ ಸಜ್ಜನಿಕೆ ಹಾಗೂ ಎಲ್ಲರನ್ನು ಅಪ್ಪಿಕೊಳ್ಳುವ ಪ್ರೀತಿ ಕಂಡು ಬಿಜೆಪಿಗೆ ಸೇರ್ಪಡೆಯಾಗಿದ್ದೇವೆ’ ಎಂದರು.

ಸಚಿವ ಹಾಲಪ್ಪ ಆಚಾರ ಮಾತನಾಡಿ, ಬಿಜೆಪಿಯಲ್ಲಿ ಕಾರ್ಯಕರ್ತರೇ ಪ್ರಮುಖರು. ಇಲ್ಲಿ ಮೇಲು-ಕೀಳು ಇಲ್ಲ. ಪಕ್ಷದಲ್ಲಿ ಸರ್ವರೂ ಸಮಾನರು. 600ಕ್ಕೂ ಹೆಚ್ಚು ಕಾಂಗ್ರೆಸ್‌ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಯಾಗಿರುವುದು ಪಕ್ಷಕ್ಕೆ ಬಲ ತಂದಿದೆ ಎಂದು ಹೇಳಿದರು.  ಬಿಜೆಪಿ ರಾಜ್ಯದಲ್ಲಿ 150 ಕ್ಕೂ ಅಧಿಕ ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ. ಮತ್ತೆ ರಾಜ್ಯದಲ್ಲಿ ಪೂರ್ಣ ಬಹುಮತದಲ್ಲಿ ಅಧಿಕಾರ ವಹಿಸಲಿದೆ ಎಂದರು ಕಾಂಗ್ರೆಸ್‌ ರಾಷ್ಟ್ರದಲ್ಲಿ ದಿವಾಳಿ ಆಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗು ಡಿಕೆ ಶಿವಕುಮಾರ ತಾವು ತಮ್ಮ ಅಧಿಕಾರಕ್ಕಾಗಿ ಬಡಿದಾಡುತ್ತಿದ್ದಾರೆ. ಅವರವರ ನಡುವೆಯೇ ಗದ್ದಲ ಇದೆ ಎಂದು ವ್ಯಂಗ್ಯವಾಡಿದರು.ಆದರೆ ಬಿಜೆಪಿಯಲ್ಲಿ ಅದ್ಯಾವುದು ಇಲ್ಲ. ಪಕ್ಷದ ಹಿತಕ್ಕಾಗಿ ಎಲ್ಲರೂ ಶ್ರಮಿಸುತ್ತಾರೆ ಎಂದರು.

ಕಾರ್ಯಕರ್ತರೆಂದರೆ ರಾಯರೆಡ್ಡಿಗೆ ದೆವ್ವ ಇದ್ದಂತೆ: ಕಾಂಗ್ರೆಸ್ಸಿನಲ್ಲಿ ಕಾರ್ಯಕರ್ತರೆಂದರೆ ಮಾಜಿ ಸಚಿವ ಬಸವರಾಜ ರಾಯರೆಡ್ಡಿಗೆ ದೆವ್ವ ಇದ್ದಂತೆ. ಕಾರ್ಯಕರ್ತರನ್ನು ಜನಸಾಮಾನ್ಯರನ್ನು ಅವರು ಎಂದಿಗೂ ಹತ್ತಿರ ಸೇರಿಸುವುದಿಲ್ಲ ಎಂದು ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಹೇಳಿದರು.ಬಿಜೆಪಿಯಲ್ಲಿ ಕಾರ್ಯಕರ್ತರೆಂದರೆ ಅವರೆ ದೇವರು.ಸಚಿವ ಹಾಲಪ್ಪ ಆಚಾರ ಅವರು ಎಲ್ಲರನ್ನು ಅಪ್ಪಿಕೊಂಡು ಅವರ ಕುಶಲ ಕ್ಷೇಮ ವಿಚಾರಿಸುತ್ತಾರೆ. ಆದರೆ ರಾಯರೆಡ್ಡಿ ಅವರಿಗೆ ಆ ಕಾಳಜಿ ಇಲ್ಲ. ಹಾಗಾಗಿ ಈ ಹಿಂದೆ ನಾನು ಸಹ ಅವರ ತುಳಿತಕ್ಕೆ ಒಳಗಾಗಿ ಪಕ್ಷ ಬಿಟ್ಟು ಬಿಜೆಪಿ ಸೇರ್ಪಡೆಯಾದೆ ಎಂದರು.

ಸೋಲುತ್ತೇವೆಂದು ದಿಲ್ಲಿ ಬಿಜೆಪಿ ನಾಯಕರು ಪದೇ ಪದೇ ರಾಜ್ಯಕ್ಕೆ: ಡಿ.ಕೆ.ಶಿವಕುಮಾರ್‌

ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!